ಜೂ.ಎನ್ಟಿಆರ್ 'ದೇವರ' ಸಿನಿಮಾದಲ್ಲಿ ನಟಿಸಿದ ಕನ್ನಡದ ಈ ನಟಿ ಯಾರು? ಈಕೆಯ ಹಿನ್ನೆಲೆಯೇನು?
ಚೈತ್ರಾ ರೈ ಬಗ್ಗೆ ನಿಮಗೆ ಗೊತ್ತಾ ಎಂದು ಕೇಳಿದರೆ ಯಾರೀಕೆ ಎಂದೆನಿಸುವುದು ಸಹಜ. ಯಾಕೆಂದರೆ ಕನ್ನಡ ಕಿರುತೆರೆಯಲ್ಲಿ ಈಕೆ ಕಾಣಿಸಿಕೊಂಡಿದ್ದು ದಶಕಗಳ ಹಿಂದೆ. ಹೌದು, ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ರಾಧಾ ರಮಣ' ಧಾರಾವಾಹಿಯಲ್ಲಿ ನಾಯಕಿ ರಾಧಿಕಾಳ ಅಕ್ಕ ವಿಶಾಖಾ ಆಗಿ ನಟಿಸಿದ್ದರು ಚೈತ್ರಾ ರೈ. ತದ ನಂತರ ಪರಭಾಷೆಯ ಕಿರುತೆರೆಗೆ ಕಾಲಿಟ್ಟ ಈಕೆ ಅಲ್ಲೂ ನಟನಾ ಕಂಪನ್ನು ಪಸರಿಸುತ್ತಿದ್ದಾರೆ.
ಇದರ ಹೊರತಾಗಿ ಆಕೆ ತೆಲುಗು ಸಿನಿಮಾವೊಂದರಲ್ಲಿ ಬಣ್ಣ ಹಚ್ಚಿದ್ದಾರೆ. ಜ್ಯೂನಿಯರ್ ಎನ್.ಟಿ.ಆರ್ ನಾಯಕನಾಗಿ ನಟಿಸಿರುವ, ಇತ್ತೀಚೆಗಷ್ಟೇ ತೆರೆ ಕಂಡ 'ದೇವರ' ಸಿನಿಮಾದಲ್ಲಿ ಅಭಿನಯಿಸಿದ್ದಾರೆ ಚೈತ್ರಾ ರೈ. ಅಂದ ಹಾಗೇ 'ದೇವರ' ಸಿನಿಮಾದಲ್ಲಿನ ಪಾತ್ರದ ಫೋಟೋವನ್ನು ಈಕೆ ಇನ್ ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ಆದರೆ ಇದರ ಹೊರತಾಗಿ ಬೇರೆ ಯಾವ ಮಾಹಿತಿಯನ್ನು ನೀಡಿಲ್ಲ.

ಸದ್ಯ ತೆಲುಗಿನ 'ರಾಧಕು ನಿವೆರಾ ಪ್ರಾಣಂ' ಎನ್ನುವ ತೆಲುಗು ಧಾರಾವಾಹಿಯಲ್ಲಿ ನಟಿಸುತ್ತಿರುವ ಚೈತ್ರಾ ರೈ ಬಣ್ಣದ ಲೋಕದ ನಂಟು ಬೆಳೆಸಿಕೊಂಡದ್ದು ಆಕಸ್ಮಿಕವಾಗಿ. ಹೌದು, ಹೊಟೇಲ್ ಮ್ಯಾನೇಜ್ಮೆಂಟ್ ಕೋರ್ಸ್ ಕಲಿಯುತ್ತಿದ್ದ ಚೈತ್ರಾ ಅವರಿಗೆ ಇದ್ದಕ್ಕಿದ್ದಂತೆ ಬಣ್ಣದ ಲೋಕದಿಂದ ಅವಕಾಶ ಬಂದಿತು. ಬಂದ ಅವಕಾಶವನ್ನು ಬೇಡ ಎನ್ನದ ಈಕೆ ಓದಿಗೆ ಬಾಯ್ ಹೇಳಿ ನಟನೆಗೆ ಹಾಯ್ ಹೇಳಿದ್ದರು.
'ಕುಸುಮಾಂಜಲಿ', 'ಗೆಜ್ಜೆಪೂಜೆ', 'ನಾಗಮಣಿ', 'ಪೌರ್ಣಮಿ','ಯುಗಾದಿ', 'ಬೊಂಬೆಯಾಟವಯ್ಯಾ', 'ಬಣ್ಣದ ಬುಗುರಿ' ಧಾರಾವಾಹಿಗಳಲ್ಲಿ ಅಭಿನಯಿಸಿರುವ ಚೈತ್ರಾ ರೈ ಅವರಿಗೆ ಬ್ರೇಕ್ ನೀಡಿದ್ದು ಮಾತ್ರ 'ರಾಧಾ ಕಲ್ಯಾಣ' ಧಾರಾವಾಹಿ. ನೆಗೆಟಿವ್ ಛಾಯೆಯಿರುವ ವಿಶಾಖಾ ಪಾತ್ರಕ್ಕೆ ಅತ್ಯದ್ಭುತವಾಗಿ ಜೀವ ತುಂಬಿದ ಈಕೆ ಮತ್ತೆ ಕನ್ನಡ ಕಿರುತೆರೆಯಲ್ಲಿ ನಟಿಸಿದ್ದಿಲ್ಲ.
ನಂತರ ಪರಭಾಷೆಯ ಕಿರುತೆರೆಗೆ ಈಕೆ ಕಾಲಿಟ್ಟಿದ್ದರೂ, ಕನ್ನಡಿಗರ ಪಾಲಿಗೆ ಈಕೆ ಈಗಲೂ ವಿಶಾಖಾಳೇ! ರಾಧಾ ಕಲ್ಯಾಣ ಮುಗಿದು ದಶಕಗಳಾದರೂ ಇಂದಿಗೂ ಕನ್ನಡಿಗರು ಆಕೆಯನ್ನು ವಿಶಾಖಾ ಎಂದೇ ಗುರುತಿಸುತ್ತಾರೆ. ನಾನು ಕಳೆದ ಎಂಟು ಹತ್ತು ವರ್ಷಗಳಿಂದ ಕನ್ನಡ ಕಿರುತೆರೆಯಿಂದ ದೂರವಿದ್ದೇನೆ. ಆದರೂ ನನ್ನನ್ನು ಕಂಡಾಗ ವೀಕ್ಷಕರು ವಿಶಾಖಾ ಆಗಿ ಗುರುತಿಸುತ್ತಾರೆ. ಈಗಲೂ ರಾಧಾ ಕಲ್ಯಾಣ ಧಾರಾವಾಹಿಯ ಪಾತ್ರದ ಮೂಲಕ ಕರೆಯುವಾಗ ಖುಷಿಯಾಗುತ್ತದೆ ಎಂದು ಈ ಹಿಂದೆ ಹೇಳಿಕೊಂಡಿದ್ದರು ಚೈತ್ರಾ ರೈ.

ತೆಲುಗಿನ 'ಅಕ್ಕ ಚೆಲ್ಲುಲು' ಧಾರಾವಾಹಿಯಲ್ಲಂತೂ ಈಕೆ ದ್ವಿಪಾತ್ರದಲ್ಲಿ ಅಭಿನಯಿಸಿ ಸೈ ಎನಿಸಿಕೊಂಡಿದ್ದರು. ತಮ್ಮ ನಟನೆಯ ಮೂಲಕ ಮೋಡಿ ಮಾಡಿದ್ದ ಈಕೆ ತದ ನಂತರ ಕಾರಣಾಂತರಗಳಿಂದ ಧಾರಾವಾಹಿಯಿಂದ ಹೊರಬಂದಿದ್ದರು. ಇದೀಗ ಮತ್ತೆ ತೆಲುಗು ಕಿರುತೆರೆಯಲ್ಲಿ ಸಕ್ರಿಯವಾಗಿರುವ ಈಕೆ ಅಚಾನಕ್ ಆಗಿ ದೊರೆತಿರುವ ಅವಕಾಶದಿಂದ ನಟನಾ ಕ್ಷೇತ್ರಕ್ಕೆ ಕಾಲಿಟ್ಟಿದ್ದರೂ, ಒಂದೊಂದಾಗಿ ನಟನೆಯ ರೀತಿ ನೀತಿಗಳನ್ನು ತಿಳಿದುಕೊಂಡರು.
ನಟನೆ ಎಂಬುದು ಇಂದು, ನಾಳೆ ಕಲಿತು ಬರುವಂತಹ ವಿದ್ಯೆಯಲ್ಲ. ಅದು ನಿರಂತರ ಕಲಿಯುವಂತಹದ್ದು. ನಟನಾ ಕ್ಷೇತ್ರದಲ್ಲಿ ನಾವು ಎಷ್ಟು ಕಲಿತರೂ ಸಾಕಾಗುವುದಿಲ್ಲ. ಯಾಕೆಂದರೆ, ಈ ಕ್ಷೇತ್ರದಲ್ಲಿ ಪ್ರತಿ ದಿನವೂ ಹೊಸತನ್ನು ಕಲಿಯುವುದಕ್ಕೆ ಅವಕಾಶಗಳಿರುತ್ತದೆ ಎಂದು ಸ್ವತಃ ಚೈತ್ರಾ ರೈ ಅವರೇ ಈ ಹಿಂದೆ ಹೇಳಿಕೊಂಡಿದ್ದರು. ಒಟ್ಟಿನಲ್ಲಿ ತೆಲುಗು ಕಿರುತೆರೆಯ ನಂತರ ಹಿರಿತೆರೆಯಲ್ಲಿ ಮಿಂಚುತ್ತಿರುವ ಚೈತ್ರಾ ರೈ ಕನ್ನಡ ಕಿರುತೆರೆಗೋ, ಹಿರಿತೆರೆಗೂ ಮರಳುತ್ತಾರಾ ಅನ್ನೋದು ಗೊತ್ತಾಗಿದೆ.


Click it and Unblock the Notifications











