ಶ್ವೇತಾ ಕಿರುತೆರೆ ಎಂಟ್ರಿ ಹೇಗಿತ್ತು ಗೊತ್ತಾ?
ಶ್ವೇತಾ ಕಿರುತೆರೆಗೆ ಬಂದದ್ದು ಅಚಾನಕ್ಕಾಗಿ ಆದರೂ ಬೆಳೆದು ಕರ್ನಾಟಕದ ಮನೆಮಗಳಾಗಿ ಗುರುತಿಸಿಕೊಂಡಿದ್ದಾರೆ. ಕಷ್ಟದಲ್ಲಿರುವವರಿಗಾಗಿ ಸದಾ ಮಿಡಿಯುವ, ಬದುಕಿನ ಮೌಲ್ಯಗಳನ್ನು ಅತ್ಯಂತ ಸರಳವಾಗಿ ಅರ್ಥೈಸುವ ಈ ಮುದ್ದುಮೊಗದ ಮಲೆನಾಡ ಚೆಲುವೆ ಶ್ವೇತಾ. ಶಿವಮೊಗ್ಗದಲ್ಲಿ ಆಡುತ್ತಾ ಬೆಳೆದ ಹುಡುಗಿ ಶ್ವೇತಾ, ಮೇರಿ ಇಮ್ಯಾಕುಲೇಟ್ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಾ ಡಿವಿಎಸ್ನಲ್ಲಿ ದ್ವಿತೀಯ ಪಿಯು ಮುಗಿಸಿದರು.
ರಾಜೇಂದ್ರ ಪ್ರಸಾದ್ ಮತ್ತು ಜಯಶ್ರೀ ದಂಪತಿಗಳ ಮುದ್ದುಮಗಳಾದ ಕಾರಣ ಕೇಳಿದ್ದೆಲ್ಲಾ ಸಿಗುತ್ತಿತ್ತಾದರೂ ತಾಯಿ ಶಿಕ್ಷಕಿಯಾದ್ದರಿಂದ ಪ್ರತಿಯೊಂದರ ಮೌಲ್ಯ ವನ್ನೂ ಕಲಿಸಿದರು. ಎಲ್ಲವೂ ಸಿಗಬಹುದು. ಆದರೆ ನಿನಗೆ ಯಾವುದು ಅವಶ್ಯಕ ಎನ್ನುವುದು ನಿನಗೆ ತಿಳಿದಿರಬೇಕು. ಶ್ವೇತಾ ಅಮ್ಮನ ನುಡಿಗಳು, ಹಾಗೆಯೇ ಕಾಲಕಾಲಕ್ಕೆ ತಿದ್ದುತ್ತಾ, ತೀಡುತ್ತಾ ಒಳ್ಳೆಯ ಗುಣಗಳನ್ನು ತಿಳಿಸುತ್ತಾ ಬೆಳೆಸಿದ ರೀತಿ ಶ್ವೇತಾರನ್ನು ಉತ್ತಮ ವ್ಯಕ್ತಿಯಾಗಿ ರೂಪಿಸಿದೆ.
ಶಿವಮೊಗ್ಗದಲ್ಲಿ ಒಂದು ವರ್ಷದ ಬಿಸಿಎ ಓದುವ ವೇಳೆಗೆ ಇದು ನನಗಲ್ಲ ಎಂದು ಅರಿತಾ ಶ್ವೇತಾ, ಆರ್ಕಿಟೆಕ್ಚರ್ನಲ್ಲಿ ಪದವಿ ಪಡೆಯಲು ಪಯಣ ಬೆಳೆಸಿದ್ದು ಬೆಂಗಳೂರಿನತ್ತ. ಬೆಂಗಳೂರಿನ ಆರ್ವಿ ಕಾಲೇಜ್ನಿಂದ ಅರ್ಕಿಟೆಕ್ಟ್ ಆಗಿ ಹೊರಬಂದ ಶ್ವೇತಾ ಅದೇ ಕ್ಷೇತ್ರದಲ್ಲಿ ವೃತ್ತಿ ಬದುಕನ್ನು ಪ್ರಾರಂಭಿಸಿದರು. ಆದರೆ ಅನಿರೀಕ್ಷಿತವಾಗಿ ಇವರಿಗೆ ಒಲಿದದ್ದು ಕಿರುತೆರೆಯ ನಂಟು. ಅಲ್ಲಿಂದ ಶ್ವೇತಾ ಹಿಂತಿರುಗಿ ನೋಡಬೇಕೆಂದರೂ ಬಿಡುತ್ತಿಲ್ಲ ಬಣ್ಣದ ಬದುಕು.

ವೀಕ್ಷಕರ ಮನಗೆದ್ದ ಶ್ವೇತಾ
ಸಾಮಾಜಿಕ ಜಾಲತಾಣದಲ್ಲಿ ಹಾಕಿದ್ದ ಶ್ವೇತಾರ ಒಂದು ಸಿಂಪಲ್ ಫೋಟೊ ಅಚಾನಕ್ಕಾಗಿ ಕನ್ನಡ ಕಿರುತೆರೆಯ ಉತ್ತುಂಗದಲ್ಲಿರುವ ನಿರ್ದೇಶಕಿ-ನಿರ್ಮಾಪಕಿ ಶೃತಿ ನಾಯ್ಡುರ ಕಣ್ಣಿಗೆ ಬಿತ್ತು. ಅಷ್ಟು ಹೊತ್ತಿಗಾಗಲೇ ಶ್ರೀರಸ್ತು ಶುಭಮಸ್ತು ಧಾರಾವಾಹಿಯ ನಾಯಕಿಗಾಗಿ 3೦೦೦ ಜನರನ್ನು ಆಡಿಷನ್ ಮಾಡಿ ಕೈಬಿಡಲಾಗಿತ್ತು. ಆದರೆ ಈ ಭಾವಚಿತ್ರ ಮೂಡಿಸಿದ ಭರವಸೆ ಆ ಯಾವ ಆಡಿಷನ್ ಕೂಡ ನೀಡಿರಲಿಲ್ಲ. ಶ್ವೇತಾರನ್ನು ಸಂಪರ್ಕಿಸಿದ ಶೃತಿ ನಾಯ್ಡು ಅಂದು ಒಲ್ಲೆ ಎಂದಿದ್ದ ಶ್ವೇತಾರ ಮನವೊಲಿಸಿ, ನಾನಿದ್ದೇನೆ ಎಂಬ ಭರವಸೆ ನೀಡಿ ತಮ್ಮ ಧಾರಾವಾಹಿಗೆ ನಾಯಕಿಯನ್ನಾಗಿ ಆಯ್ಕೆ ಮಾಡಿಕೊಂಡರು. ಸುಮಾರು 7೦೦ ಕಂತುಗಳಲ್ಲಿ ಬಂದ ಧಾರಾವಾಹಿಯಲ್ಲಿನ ಶ್ವೇತಾ ನೈಜ ನಟನೆ ಕಿರುತೆರೆ ವೀಕ್ಷಕರ ಮನಗೆದ್ದು ಬಿಟ್ಟರು.

ಜನಪ್ರಿಯ ನಟಿ ಪ್ರಶಸ್ತಿಗೆ ಗೆದ್ದುಕೊಂಡ ಶ್ವೇತಾ
ನನ್ನನ್ನು ಅರ್ಥ ಮಾಡಿಕೊಂಡು ಸದಾ ಬೆನ್ನೆಲುಬಾಗಿ ಸದಾ ಒಬ್ಬ ಮಹಿಳಾ ನಿರ್ಮಾಪಕಿ-ನಿರ್ದೇಶಕಿ ನನ್ನ ಪಕ್ಕದಲ್ಲೇ ಇದ್ದಾರೆ ಎಂಬ ನಂಬಿಕೆಯೇ ನನ್ನ ಈ ಯಶಸ್ಸಿಗೆ ಕಾರಣ. ಎರಡು ವರ್ಷ ಒಂದು ಸೀರಿಯಲ್ ನಾಯಕಿಯಾಗಿ ಕೆಲಸ ಮಾಡುವುದು ಸುಲಭವಲ್ಲ. ಖಾಸಗಿ ಜೀವನ, ಒಂದಷ್ಟು ಖಾಸಗಿ ಕೆಲಸಗಳಿಗೂ ಸಮಯ ಸಿಗದಷ್ಟು ನಿರಂತರವಾಗಿ ಕೆಲಸ ಮಾಡಬೇಕು. ಆದರೆ ಆ ಕಷ್ಟವನ್ನು ಮರೆಸಿದ್ದು 'ಶ್ರೀರಸ್ತು ಶುಭಮಸ್ತು' ತಂಡದ ಆತ್ಮೀಯತೆ ಮತ್ತು ಕಾರ್ಯ ವೈಖರಿ. ಒಂದು ಕುಟುಂಬದಂತೆಯೇ ಇತ್ತು ಸೆಟ್ನ ವಾತಾವರಣ. ಶ್ರೀರಸ್ತು ಶುಭಮಸ್ತು ಆದ ನಂತರ ನನ್ನನ್ನು ಜನ ಗುರುತಿಸಲು ಪ್ರಾರಂಭಿಸಿದರು. ನನ್ನ ಸೊಸೆ ನಿನ್ನ ಹಾಗೇ ಇರಬೇಕಮ್ಮ ಅಂದೋರು ಎಷ್ಟೋ ಜನ. ಪಾತ್ರವೇ ನಾವು ಎಂದು ಜನ ಪರಿಗಣಿಸುವುದಕ್ಕಿಂತ ಬೇರೆ ಖುಷಿ ಯಾವುದಿದೆ ಎನ್ನುತ್ತಲೇ ತಮ್ಮ ಮೊದಲ ಸಕ್ಸಸ್ ಸ್ಟೋರಿ ಬಿಚ್ಚಿಟ್ಟರು ಶ್ವೇತಾ. ಒಮ್ಮೆ ನನ್ನ ಕೈಲಿ ಇದು ಸಾಧ್ಯವೇ ಎಂದಿದ್ದ ಶ್ವೇತಾ ಅದೇ ಪಾತ್ರದ ಅಭಿನಯದಿಂದಾಗಿ ಜ಼ೀ ಕನ್ನಡ ವಾಹಿನಿಯ ಅತ್ಯಂತ ಜನಪ್ರಿಯ ನಟಿ ಪ್ರಶಸ್ತಿಗೆ ಪಾತ್ರರಾದರು. ಇದು ಅವರ ಶ್ರದ್ಧೆಗೆ ಹಿಡಿದ ಕೈಗನ್ನಡಿ.
ಡಾನ್ಸಿಂಗ್ ಸ್ಟಾರ್ನಲ್ಲಿ ಮಿಂಚಿದ ನಟಿ
ಪ್ರತಿಷ್ಠಿತ ರಿಯಾಲಿಟಿ ಶೋನಿಂದ ಅಹ್ವಾನ ಬಂದಾಗಲು ರಿಯಾಲಿಟಿ ಶೋಗಳಿಂದ ದೂರ ಉಳಿಯಬೇಕು ಎಂದು ನಿರ್ಧರಿಸಿದ್ದವರು ಶ್ವೇತಾ. ಧಾರಾವಾಹಿಯಿಂದಾಗಿ ನನಗೊಂದು ಇಮೇಜ್ ಬಂದಿದೆ. ಅದನ್ನು ಹಾಗೇ ಉಳಿಸಿಕೊಳ್ಳಲು ಇಷ್ಟಪಡುತ್ತೇನೆ. ರಿಯಾಲಿಟಿ ಶೋಗಳಲ್ಲಿನ ನಮ್ಮ ನಡುವಳಿಕೆ ಎಷ್ಟೇ ಸರಿ ಇದ್ದರೂ ಜನರು ಅವರ ಗ್ರಹಿಕೆಯಲ್ಲಿ ನಮ್ಮನ್ನು ತೂಗುತ್ತಾರೆ ಎಂಬ ಭಾವನೆ ನನ್ನದು ಎನ್ನುತ್ತಾರೆ ಶ್ವೇತಾ. ಹಾಗಾದರೆ ಡ್ಯಾನ್ಸಿಂಗ್ ಸ್ಟಾರ್ ಒಪ್ಪಿದ್ದು ಹೇಗೆ ಎನ್ನುವ ಪ್ರಶ್ನೆಗೆ "ಕಲಿಯುವುದಕ್ಕೆ ಸಿಗುತ್ತದೆ ಎಂದರೆ ನಾನು ಆ ಅವಕಾಶವನ್ನು ಕಳೆದುಕೊಳ್ಳಲು ಇಷ್ಟಪಡುವುದಿಲ್ಲ, ಹಾಗಾಗಿ ಡ್ಯಾನ್ಸಿಂಗ್ ಸ್ಟಾರ್ ಒಪ್ಪಿಕೊಂಡೆ. ನನಗೊಬ್ಬರು ಕೊರಿಯೋಗ್ರಾಫರ್ ಗುರುವಾಗಿ ಸಿಕ್ತಾರೆ, ಹಲವು ಬಗೆಯ ನೃತ್ಯ, ಪರಿಣಿತಿ ಅಲ್ಲದಿದ್ದರೂ ಅದರ ಬಗ್ಗೆ ಜ್ಞಾನ ಮತ್ತು ಆ ಮಜಲಿನ ನಾಲ್ಕು ಹೆಜ್ಜೆ ಕಲಿತರೆ ಅದಕ್ಕಿಂತ ದೊಡ್ಡದೇನಿದೆ. ಮಯೂರಿಯವರಂತಹ ನಾಟ್ಯ ಪ್ರವೀಣರು ಮತ್ತು ರವಿಚಂದ್ರನ್ರಂತಹ ಕಲಾವಿದರ ಪೋಷಣೆ ಕೂಡ ಸಿಗುವುದರಿಂದ ಈ ಅವಕಾಶವನ್ನು ಸದುಪಯೋಗ ಪಡಿಸಿಕೊಳ್ಳಲು ಶೋ ಮಾಡಿದೆ." ಎನ್ನುತ್ತಾರೆ ಶ್ವೇತಾ.

'ರಾಧಾ ರಮಣ' ಧಾರಾವಾಹಿಯಿಂದ ಹೆಸರು ಬಂತು
ಇನ್ನೇನು ತೆರೆಯ ಮೇಲೆ ಬಂದು ಪ್ರೇಕ್ಷಕರನ್ನು ರಂಜಿಸಲು ಸಿದ್ಧವಾಗಿರುವ ನೀಲಾ ಪ್ರೊಡಕ್ಷನ್ಸ್ ನಿರ್ಮಾಣದ, ಶಿವು ನಿರ್ದೇಶನದ ಧಾರಾವಾಹಿ 'ರಾಧಾ ರಮಣ'. ಇದರಲ್ಲಿ ಶ್ವೇತಾ ನಾಯಕಿಯ ಪಾತ್ರವಹಿಸುತ್ತಿದ್ದಾರೆ. ಶಿಕ್ಷಕಿಯ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ ಶ್ವೇತಾ. ನನಗೆ ತುಂಬಾ ಹತ್ತಿರವಾದ ಪಾತ್ರ, ಯಾಕೆ ಅಂದ್ರೆ ನನ್ನ ಅಮ್ಮ ಕೂಡ ಟೀಚರ್, ಹಾಗಾಗಿ ಅದೇನೋ ಒಂಥರಾ ಖುಷಿ ಅಂತಾರೆ ಶ್ವೇತಾ.

ಶ್ವೇತಾ ಯಶಸ್ಸಿನ ಸೀಕ್ರೆಟ್ ಏನು?
ಆರ್ಜೆ ಪ್ರದೀಪ ಎಂದರೆ ಸಾಕು ಬೆಂಗಳೂರಿನ ಎಫ್ಎಂ ರೇಡಿಯೋ ಕೇಳುಗರ ಕಿವಿ ಚುರುಕಾಗುತ್ತದೆ. ಹೌದು, ಆರ್ಜೆ ಪ್ರದೀಪ ಶ್ವೇತಾರ ಜೀವನ ಸಂಗಾತಿ. ಜೀವದ ಗೆಳೆಯ ಜೀವನ ಸಂಗಾತಿಯಾದದ್ದೇ ಒಂದು ವಿಶೇಷ. ಮೊದಲ ಬಾರಿಗೆ ವಧುಪರೀಕ್ಷೆಗೆ ಶ್ವೇತಾರನ್ನು ತಮ್ಮ ಕಾರಲ್ಲೇ ಕರೆದೊಯ್ದಿದ್ದ ಗೆಳೆಯ ಪ್ರದೀಪ, ಮುಂದೊಂದು ದಿನ ಶ್ವೇತಾ ತಂದೆ, ತಾಯಿ ಮತ್ತು ತಮ್ಮನನ್ನು ಭೇಟಿಯಾಗಿ ನಾವು ಐದು ವರ್ಷದಿಂದ ಒಳ್ಳೆಯ ಸ್ನೇಹಿತರು. ಅವಳನ್ನು ಚೆನ್ನಾಗಿ ನೋಡಿಕೊಳ್ಳಬಲ್ಲೆ, ಮದುವೆ ಮಾಡಿಕೊಡಿ ಎಂದು ಹೇಳುತ್ತಲೇ ಎಲ್ಲರನ್ನೂ ಒಪ್ಪಿಸಿಯಾಗಿತ್ತು. ಖುದ್ದು ಶ್ವೇತಾರಿಗೆ ಇದೊಂದು ಧಿಡೀರ್ ಸುದ್ದಿಯಾದದ್ದೂ ಹೌದು. ಆದರೆ ಇಂದು ಆ ಸಂಗಾತಿಯ ಸಂಪ್ರೀತಿ ಪ್ರತಿಯೊಂದು ಹೆಜ್ಜೆಯಲ್ಲೂ ಇರುವುದು ಶ್ವೇತಾರ ಯಶಸ್ಸಿನ ಗುಟ್ಟು.


Click it and Unblock the Notifications











