ಮೇನಕಾ ಪಾತ್ರವನ್ನು ಮಿಸ್ ಮಾಡಿಕೊಳ್ಳುತ್ತಿದ್ದ ರಾಧಿಕಾ ಶ್ರವಂತ್ ಈ ಮಲ್ಲಿಕಾ: ಯಾವ ಧಾರಾವಾಹಿ?
ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಧಾರಾವಾಹಿಗಳ ಪೈಕಿ 'ಚುಕ್ಕಿತಾರೆ' ಧಾರಾವಾಹಿಯೂ ಕೂಡಾ ಒಂದು. ವಿಭಿನ್ನ ಕಥಾ ಹಂದರದ ಮೂಲಕ ಕಿರುತೆರೆ ವೀಕ್ಷಕರನ್ನು ರಂಜಿಸಿದ್ದ 'ಚುಕ್ಕಿತಾರೆ' ಧಾರಾವಾಹಿಯಲ್ಲಿ ಮುದ್ದು ಮಕ್ಕಳು ಚುಕ್ಕಿ ಹಾಗೂ ಇಬ್ಬನಿ ಮುಖ್ಯಪಾತ್ರಧಾರಿಗಳು.
ಇದೇ ವರ್ಷ ಮಾರ್ಚ್ ನಲ್ಲಿ ಶುರುವಾಗಿದ್ದ 'ಚುಕ್ಕಿತಾರೆ' ಧಾರಾವಾಹಿಯು ಇತ್ತೀಚೆಗಷ್ಟೇ ಸುಖಾಂತ್ಯ ಕಾಣುವ ಮೂಲಕ ತನ್ನ ಪ್ರಸಾರವನ್ನು ನಿಲ್ಲಿಸಿತ್ತು. 'ಚುಕ್ಕಿತಾರೆ' ಧಾರಾವಾಹಿಯಲ್ಲಿ ಮೇನಕಾ ಆಗಿ ನಟಿಸುತ್ತಿದ್ದ ರಾಧಿಕಾ ಶ್ರವಂತ್ ಈ ಪಯಣದ ಬಗ್ಗೆ ಫಿಲ್ಮಿಬೀಟ್ ಕನ್ನಡ ಜೊತೆಗೆ ಮಾತನಾಡಿದ್ದಾರೆ.

"ಮೇನಕಾ ಪಾತ್ರದ ಬಗ್ಗೆ ಹೇಳಬೇಕು ಅಂದರೆ ನಿಜವಾಗಿಯೂ ನಾನು ಆ ಪಾತ್ರವನ್ನು ತುಂಬಾನೇ ಮಿಸ್ ಮಾಡಿಕೊಳ್ಳುತ್ತಿದ್ದೇನೆ. ಯಾಕೆಂದರೆ 'ಚುಕ್ಕಿತಾರೆ' ಬಗ್ಗೆ ನಾನು ತುಂಬಾನೇ ಎಕ್ಸ್ ಪೆಕ್ಟ್ ಮಾಡಿದ್ದೆ. ನಾಲ್ಕು ವರ್ಷಗಳ ನಂತರ ನಾನು ಚುಕ್ಕಿತಾರೆ ಧಾರಾವಾಹಿಯ ಮೂಲಕ ನಟನೆಗೆ ಮರಳಿದ್ದೆ. ಸೋ ಕಂ ಬ್ಯಾಕ್ ಬಗ್ಗೆ ಸಾಕಷ್ಟು ನಿರೀಕ್ಷೆಯನ್ನು ನಾನು ಇಟ್ಟುಕೊಂಡಿದ್ದೆ. ನಾನು ಕೊನೆಯದಾಗಿ ನಟಿಸಿದ್ದು ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ಮಂಗಳ ಗೌರಿ' ಮದುವೆಯಲ್ಲಿ. ಇದೀಗ ಮತ್ತೆ ಕಲರ್ಸ್ ಕನ್ನಡ ವಾಹಿನಿಯ ಮೂಲಕ ಮರಳಿ ಬಂದಿದ್ದು ಖುಷಿಯಾಗಿತ್ತು" ಎಂದು ಫಿಲ್ಮಿಬೀಟ್ ಕನ್ನಡ ಜೊತೆಗೆ ಹೇಳಿಕೊಂಡಿದ್ದಾರೆ ರಾಧಿಕಾ ಶ್ರವಂತ್.
"ಮೇನಕಾ ಪಾತ್ರಕ್ಕಾಗಿ ನಾನು ತಯಾರಿ ಮಾಡಿಕೊಂಡಿದ್ದೆ. ನನ್ನಿಂದಾದ ಪರಿಶ್ರಮವನ್ನು ಕೂಡಾ ಹಾಕಿದ್ದೆ. ಆದರೆ ಕಾರಣಾಂತರಗಳಿಂದ ಚುಕ್ಕಿತಾರೆ ಧಾರಾವಾಹಿಯು ಮುಕ್ತಾಯಗೊಂಡಿದೆ. ತುಂಬಾ ಬೇಜಾರಿದೆ. ಮೇನಕಾ ಪಾತ್ರ ಈವಾಗಷ್ಟೇ ಓಪನ್ ಆಗಿತ್ತು. ಇಷ್ಟು ದಿನಗಳ ಕಾಲ ಪಾಸಿಟಿವ್ ಶೇಡ್ ನಿಂದ ಕೂಡಿತ್ತು. ಮುಂದಿನ ಕಥೆ ನಿಜವಾಗಿಯೂ ಚೆನ್ನಾಗಿತ್ತು. ನಟಿಸುವುದಕ್ಕೆ ಸಾಕಷ್ಟು ಅವಕಾಶವಿತ್ತು. ಆದರೆ ಇದಕ್ಕಿದ್ದಂತೆ ಮುಕ್ತಾಯಗೊಂಡಿದ್ದು ಬೇಸರವಾಯಿತು" ಎಂದು ಸಂದರ್ಶನದ ವೇಳೆ ನಟಿ ರಾಧಿಕಾ ಶ್ರವಂತ್ ಹಂಚಿಕೊಂಡಿದ್ದಾರೆ .

"ಮೇನಕಾ ಪಾತ್ರವನ್ನು ನಾನು ಅದೆಷ್ಟು ಮಿಸ್ ಮಾಡಿಕೊಳ್ಳುತ್ತೇನೆ. ಅದಕ್ಕಿಂತಲೂ ಜಾಸ್ತಿ ನಾನು ಆ ಪಾತ್ರಕ್ಕಾಗಿ ಸಾಕಷ್ಟು ತ್ಯಾಗವನ್ನು ಕೂಡಾ ಮಾಡಿದ್ದೇನೆ. ಯಾಕೆಂದರೆ ಇಷ್ಟು ದಿನ ನಾನು ಒಬ್ಬನೇ ಇದ್ದೆ. ಮದುವೆಯಿಂದ ನಾನು ಒಬ್ಬಳೇ ಇದ್ದೆ. ಶೂಟಿಂಗ್ ಹೋಗ್ತಾ ಬರ್ತಾ ಇದ್ದೆ. ಮೇನಕಾ ಪಾತ್ರ ಮಾಡುವುದಕ್ಕೆ ನಾನು ಸಾಕಷ್ಟು ಕಷ್ಟ ಪಟ್ಟಿದ್ದೇನೆ. ಮಗಳನ್ನು ಬಿಟ್ಟು ಕಂಟಿನ್ಸೂ 15 ದಿನ ಶೂಟಿಂಗ್ ಹೋಗ್ಬೇಕಿತ್ತು. ಅಷ್ಟು ದಿನ ಅವಳನ್ನು ಬಿಟ್ಟು ಹೋಗ್ಬೇಕಾದ್ರೆ ತುಂಬಾ ಕಷ್ಟ ಆಗಿತ್ತು. ಈಗ ನನಗೂ, ಮಗಳಿಗೂ ಇಬ್ರಿಗೂ ಅದು ಅಭ್ಯಾಸ ಆಯ್ತು." ಎಂದು ಹೇಳಿರುವ ರಾಧಿಕಾ ಇದೀಗ ಉದಯ ವಾಹಿನಿಯಲ್ಲಿ ಪ್ರಸಾರವಾಗಲಿರುವ ಹೊಚ್ಚ ಹೊಸ ಧಾರಾವಾಹಿ 'ಚಿಕ್ಕೆಜಮಾನಿ' ಧಾರಾವಾಹಿಯಲ್ಲಿ ಅಭಿನಯಿಸಲಿದ್ದಾರೆ.
"ಚಿಕ್ಕೆಜಮಾನಿ ಧಾರಾವಾಹಿಯು ಸಂಪೂರ್ಣ ಫ್ಯಾಮಿಲಿ ಒರಿಯಂಟೆಡ್ ಸಬ್ಜೆಕ್ಟ್. ಎಲ್ಲಾ ಪಾತ್ರಗಳಿಗೂ ತುಂಬಾನೇ ಪ್ರಾಮುಖ್ಯತೆ ಇದೆ. ನಾನು ಈ ಪ್ರಾಜೆಕ್ಟ್ ಅನ್ನು ಒಪ್ಪಿಕೊಂಡಿದ್ದೇ ಚೈತನ್ಯ ಸರ್ ಪ್ರೊಡಕ್ಷನ್ ಅಂತ. ನಾನು ಅವರ ಬಗ್ಗೆ ತುಂಬಾ ಕೇಳಿದ್ದೆ. ಎಲ್ಲನೂ ಒಳ್ಳೆದು ಆಗ್ಲಿ ಅಂತ ನಾನು ಈ ಪ್ರಾಜೆಕ್ಟ್ ಒಪ್ಪಿಕೊಂಡೆ. ತುಂಬಾ ಸ್ಟ್ರಾಂಗ್ ಆಗಿರುವ, ನಟನೆಗೆ ಅವಕಾಶ ಇರುವ ಪಾತ್ರ ಸಿಗಲಿ ಎಂದು ಬಯಸುತ್ತೇನೆ" ಎಂದು ರಾಧಿಕಾ ಶ್ರವಂತ್ ಅಭಿಪ್ರಾಯ ಪಟ್ಟಿದ್ದಾರೆ.
"ಚಿಕ್ಕೆಜಮಾನಿ ಧಾರಾವಾಹಿಯಲ್ಲಿ ಮಲ್ಲಿಕಾ ಎನ್ನುವ ಪಾತ್ರವನ್ನು ನಾನು ನಿರ್ವಹಿಸಲಿದ್ದೇನೆ. ಅದು ಪ್ರಮುಖ ಪಾತ್ರ ಹೌದು. ಪಾತ್ರದ ಬಗ್ಗೆ ಹೇಳಬೇಕು ಅಂದರೆ, ನನ್ನ ಗಂಡ ಈ ಮನೆಯಲ್ಲಿ ಅವನ ಸ್ಥಾನವನ್ನು ಗಟ್ಟಿ ಮಾಡ್ಬೇಕು. ಅವನು ನಮ್ಮ ಮಾವನ ಆಸ್ತಿ, ಮಾವನ ಬ್ಯುಸಿನೆಸ್ ಅನ್ನ ವಹಿಸಿಕೊಳ್ಳಬೇಕು ಎನ್ನುವುದೇ ನನ್ನ ಮೂಲ ಉದ್ದೇಶ" ಎಂದು ಮಲ್ಲಿಕಾ ಪಾತ್ರದ ಬಗ್ಗೆಯೂ ಹೇಳಿಕೊಂಡಿದ್ದಾರೆ ನಟಿ ರಾಧಿಕಾ ಶ್ರವಂತ್. ಒಟ್ಟಿನಲ್ಲಿ ಮಗದೊಂದು ಉತ್ತಮ ಧಾರಾವಾಹಿಯ ಜೊತೆಗೆ ಒಳ್ಳೆಯ ಪಾತ್ರದ ಮೂಲಕ ಕಿರುತೆರೆಗೆ ಮರಳಲಿದ್ದಾರೆ ರಾಧಿಕಾ ಶ್ರವಂತ್.


Click it and Unblock the Notifications











