'ನಿಮ್ಮ ತಾಯಿ, ಅಜ್ಜಿಗೆ ಡಾ. ಬ್ರೋ ಗೊತ್ತಾ?' ವೀಕೆಂಡ್ ವಿತ್ ರಮೇಶ್ಗೆ ಕರೆಸದಿರಲು ಕಾರಣ ಬಿಚ್ಚಿಟ್ಟ ರಾಘವೇಂದ್ರ ಹುಣಸೂರು!
ಕನ್ನಡ ಕಿರುತೆರೆಯ ಜನಪ್ರಿಯ ಟಾಕ್ ಶೋ ಎಂದರೆ ಅದು ವೀಕೆಂಡ್ ವಿತ್ ರಮೇಶ್. ವಾರಾಂತ್ಯದಲ್ಲಿ ಪ್ರತೀ ಸಂಚಿಕೆಯಲ್ಲಿಯೂ ಓರ್ವ ಸಾಧಕನನ್ನು ಕರೆಸಿ ಸಾಧಕರ ಖುರ್ಚಿಯ ಮೇಲೆ ಕೂರಿಸಿ ಅವರ ಜೀವನದ ಸಿಹಿ ನೆನಪುಗಳನ್ನು ಮೆಲುಕು ಹಾಕುವಂತೆ ಮಾಡುವ ಒಂದೊಳ್ಳೆ ಕಾರ್ಯಕ್ರಮ. ಕಾರ್ಯಕ್ರಮದ ಶೈಲಿ ಹಾಗೂ ರಮೇಶ್ ಅರವಿಂದ್ ಕಾರ್ಯಕ್ರಮವನ್ನು ನಡೆಸಿಕೊಡುವ ರೀತಿಗೆ ಮೊದಲನೇ ಸಂಚಿಕೆಯಲ್ಲಿಯೇ ಫಿದಾ ಆಗಿದ್ದ ವೀಕ್ಷಕರಿಗೆ ಇಂದಿಗೂ ಸಹ ವೀಕೆಂಡ್ ವಿತ್ ರಮೇಶ್ ಎಂದರೆ ಅಚ್ಚುಮೆಚ್ಚು.
ಈ ಶೋನ ಸಂಚಿಕೆಗಳು ಈಗಲೂ ಪ್ರಸಾರವಾದರೂ ಟಿವಿಯನ್ನೇ ನೋಡಲಾರೆ ಎನ್ನುವವರೂ ಸಹ ಮೊಬೈಲ್ ಪಕ್ಕಕ್ಕಿಟ್ಟು ಈ ಕಾರ್ಯಕ್ರಮವನ್ನು ಸಂಪೂರ್ಣವಾಗಿ ವೀಕ್ಷಿಸಿ ಆನಂದಿಸುತ್ತಾರೆ. ಅಷ್ಟರ ಮಟ್ಟಿಗೆ ವೀಕ್ಷಕರಲ್ಲಿ ಪ್ರಭಾವವನ್ನು ಬೀರಿರುವ ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮದ ಐದನೇ ಆವೃತ್ತಿ ಇದೀಗ ಪುನಃ ಆರಂಭಗೊಳ್ಳುತ್ತಿದೆ. ಈ ಜನಪ್ರಿಯ ಕಾರ್ಯಕ್ರಮ ಪುನಃ ಆರಂಭಗೊಳ್ಳುತ್ತಿದೆ ಎಂಬ ವಿಷಯ ತಿಳಿಯುತ್ತಿದ್ದಂತೆ ಯಾವೆಲ್ಲಾ ಸಾಧಕರು ಈ ಕಾರ್ಯಕ್ರಮಕ್ಕೆ ಆಗಮಿಸಬಹುದು ಎಂಬ ಚರ್ಚೆಗಳು ಆರಂಭಗೊಂಡಿದ್ದವು.

ಮೊಲದ ಅತಿಥಿಯಾಗಿ ರಿಷಬ್ ಶೆಟ್ಟಿ ಆಗಮಿಸಲಿದ್ದಾರಂತೆ ಎಂಬ ಸುದ್ದಿಯೂ ಸಹ ಹರಿದಾಡಿತ್ತು. ಆದರೆ ಈ ಸುದ್ದಿಗಳಿಗೆಲ್ಲಾ ಜೀ ಕನ್ನಡ ವಾಹಿನಿಯು ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮದ ಪ್ರೋಮೊವೊಂದನ್ನು ಬಿಡುಗಡೆ ಮಾಡುವ ಮೂಲಕ ಉತ್ತರವನ್ನು ನೀಡಿದೆ. ಹೌದು, ಮೋಹಕತಾರೆ ರಮ್ಯಾ ಈ ಬಾರಿಯ ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮದ ಅತಿಥಿ ಎಂದು ಜೀ ಕನ್ನಡ ವಾಹಿನಿ ಘೋಷಿಸಿದೆ.
ಕೇವಲ ಕಾರ್ಯಕ್ರಮದ ಮೊದಲ ಅತಿಥಿ ಯಾರು ಎಂಬುದರ ಬಗ್ಗೆ ಮಾತ್ರವಲ್ಲದೇ ಈ ಸೀಸನ್ ಪೂರ್ತಿ ಯಾರೆಲ್ಲಾ ಸಾಧಕರು ರಮೇಶ್ ಎದುರು ಸಾಧಕರ ಖುರ್ಚಿಯಲ್ಲಿ ಕುಳಿತು ತಮ್ಮ ಹಳೆಯ ದಿನಗಳ ಬಗ್ಗೆ ಮಾತನಾಡುತ್ತಾರೆ ಎಂಬುದರ ಬಗ್ಗೆಯೂ ಸಹ ಸಾಮಾಜಿಕ ಜಾಲತಾಣದಲ್ಲಿ ಜೋರಾದ ಚರ್ಚೆ ನಡೆದಿತ್ತು. ಈ ಚರ್ಚೆಯಲ್ಲಿ ಯುಟ್ಯೂಬ್ ಸೆನ್ಸೇಷನ್, ಕನ್ನಡಿಗರ ನೆಚ್ಚಿನ ಯುಟ್ಯೂಬರ್ ಡಾ ಬ್ರೋ ಅವರ ಹೆಸರೂ ಸಹ ಕೇಳಿಬಂದಿತ್ತು.

ಹೌದು, ಡಾ ಬ್ರೋ ಎಂದೇ ಖ್ಯಾತಿಯನ್ನು ಪಡೆದಿರುವ ಕನ್ನಡದ ಟ್ರಾವೆಲರ್ ಯುಟ್ಯೂಬರ್ ಗಗನ್ ಅವರನ್ನು ಸಹ ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮಕ್ಕೆ ಅತಿಥಿಯನ್ನಾಗಿ ಕರೆಸಲಾಗುತ್ತದೆ ಎಂಬ ಸುದ್ದಿ ದೊಡ್ಡ ಮಟ್ಟದಲ್ಲಿ ಹರಿದಾಡಿತ್ತು. ಅಲ್ಲದೇ ಡಾ ಬ್ರೋ ಅವರನ್ನು ಈ ಕಾರ್ಯಕ್ರಮಕ್ಕೆ ಕರೆಸಬೇಕು ಎಂಬ ಬೇಡಿಕೆಯೂ ಸಹ ಹೆಚ್ಚಿತ್ತು. ಈ ವಿಷಯವನ್ನು ಕೆಎಫ್ಐ ಇನ್ಸೈಡರ್ ಎಂಬ ಯುಟ್ಯೂಬ್ ಚಾನೆಲ್ ನಡೆಸಿದ ಸಂದರ್ಶನದಲ್ಲಿ ನಿರೂಪಕ ಜೀ ಎಂಟರ್ಟೈನ್ಮೆಂಟ್ ಹೆಡ್ ರಾಘವೇಂದ್ರ ಹುಣಸೂರು ಅವರ ಬಳಿ ಕೂಡ ಕೇಳಿದರು. ಇದಕ್ಕೆ ರಾಘವೇಂದ್ರ ಹುಣಸೂರು ನೀಡಿರುವ ಉತ್ತರ ಸದ್ಯ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.
ಡಾ ಬ್ರೋ ಅವರನ್ನು ವೀಕೆಂಡ್ ವಿತ್ ರಮೇಶ್ಗೆ ಕರೆಸಬೇಕು ಎಂದು ಟ್ರೋಲ್ ಆಗ್ತಿದೆ ಹಾಗೂ ಬೇಡಿಕೆ ಇದೆ, ಏಕೆಂದರೆ ಈವತ್ತು ಒಂದೊಂದು ಏರಿಯಾಗಳಿಗೆ ಹೋಗಲು ಜನ ಹೆದರುವಾಗ ಅಪಾಯವಿರುವ ಹಲವು ದೇಶಗಳಿಗೆ ಹೋಗಿ ಅದನ್ನು ಕರ್ನಾಟಕದ ಜನತೆಗೆ ತೋರಿಸುತ್ತಿದ್ದಾರೆ, ಇದರ ಬಗ್ಗೆ ನೀವು ಏನು ಹೇಳ್ತೀರ ಎಂದು ಪ್ರಶ್ನೆಯನ್ನು ಕೇಳಿದಾಗ ಉತ್ತರಿಸಿದ ರಾಘವೇಂದ್ರ ಹುಣಸೂರು "ನಿಮ್ಮ ತಾಯಿಗೆ ಡಾ ಬ್ರೋ ಗೊತ್ತಾ, ನಿಮ್ಮ ಅಜ್ಜಿಗೆ ಡಾ ಬ್ರೋ ಗೊತ್ತಾ" ಎಂದು ಪ್ರಶ್ನಿಸಿದರು. ಈ ಪ್ರಶ್ನೆಗೆ ಆ ನಿರೂಪಕ ಗೊತ್ತಿಲ್ಲ ಸರ್ ಎಂದು ಮರುಉತ್ತರ ನೀಡಿದರು.
ಹೀಗೆ ಪ್ರಶ್ನೆಯ ಮೂಲಕ ತನ್ನ ಮಾತನ್ನು ಆರಂಭಿಸಿದ ರಾಘವೇಂದ್ರ ಹುಣಸೂರು "ಟಿವಿ ಮಾಧ್ಯಮ ತುಂಬಾ ವಿಭಿನ್ನ. ನಾವೇನು ಟ್ರೆಂಡಿಂಗ್ ಹಾಗೂ ಟ್ರೋಲಿಂಗ್ ಅಂತ ಕರೆಯುತ್ತೇವೋ ಅದು ತುಂಬಾ ಚಿಕ್ಕ ಪ್ರಪಂಚ. ಟಿವಿ ಅನ್ನೋದು ಗ್ರಾಮೀಣ ಪ್ರದೇಶಗಳಿಗೆ ಒಂದು ದೊಡ್ಡ ಸಾಗರ. ಆ ಮೌಲ್ಯ ವ್ಯವಸ್ಥೆಯಲ್ಲಿ ಅವರಿಂದ ಏನಾದರೂ ಕಲಿಯೋಕೆ ಇದ್ದರೆ ಖಂಡಿತವಾಗಿಯೂ ಅವರನ್ನು ಆಹ್ವಾನಿಸುತ್ತೇವೆ. ಅವರನ್ನು ಆಯ್ಕೆ ಮಾಡದಿರಲು ಬೇರೆ ಏನೂ ಉದ್ದೇಶವಿಲ್ಲ" ಎಂದರು.
ಈ ಮೂಲಕ ಯುಟ್ಯೂಬ್ನಲ್ಲಿ ಡಾ ಬ್ರೋ ಸಾಧನೆ ಮಾಡಿದ್ದಾರೆ ಹಾಗೂ ಅದು ಯುವ ಜನತೆಗೆ ಗೊತ್ತೇ ಹೊರತು ಟಿವಿಯಿಂದ ಮಾತ್ರ ಮನರಂಜನೆ ಪಡೆಯುವವರಿಗೆ ಅವರು ಯಾರೆಂಬ ಪರಿಚಯ ಇಲ್ಲ, ಹೀಗಾಗಿ ಅವರನ್ನು ವೀಕೆಂಡ್ ವಿತ್ ರಮೇಶ್ಗೆ ಆಯ್ಕೆ ಮಾಡಿಲ್ಲ ಎಂದು ಪರೋಕ್ಷವಾಗಿ ತಿಳಿಸಿದರು. ರಾಘವೇಂದ್ರ ಹುಣಸೂರು ತಮ್ಮ ಕಾರ್ಯಕ್ರಮಕ್ಕೆ ವೀಕ್ಷಕರು ಹೇಗೆ ಸ್ಪಂದಿಸುತ್ತಾರೆ ಎಂಬ ಅನುಭವವನ್ನು ಹೊಂದಿದ್ದು ಅದರ ಮೇಲೆ ಈ ಮಾತುಗಳನ್ನು ಹೇಳಿದ್ದು, ಕೆಲವರು ಈ ಹೇಳಿಕೆಯನ್ನು ಅರ್ಥ ಮಾಡಿಕೊಳ್ಳದೇ ಡಾ ಬ್ರೋ ಸಹ ಒಬ್ಬ ಸಾಧಕ ಅವರ ಬಗ್ಗೆ ಈ ರೀತಿ ಹೇಳಿಕೆಗಳನ್ನು ನೀಡಬಾರದು ಎಂದು ರಾಘವೇಂದ್ರ ಹುಣಸೂರು ಅವರ ವಿರುದ್ಧ ಕಿಡಿಕಾರಿದ್ದಾರೆ.


Click it and Unblock the Notifications











