'ನಾತಿಚರಾಮಿ' ಧಾರಾವಾಹಿಯಲ್ಲಿ ಶ್ರೀಕಾಂತನಾದ 'ಶ್ರೀಬಾಲಾಜಿ ಫೋಟೋ ಸ್ಟುಡಿಯೋ' ಹೀರೋ
ವಿನೂತನ ಧಾರಾವಾಹಿಗಳ ಮೂಲಕ ವೀಕ್ಷಕರ ಮನ ಸೆಳೆಯುತ್ತಿರುವ ಉದಯ ವಾಹಿನಿಯು ಇದೀಗ ಮಗದೊಂದು ಸಿಹಿ ಸುದ್ದಿ ನೀಡಿದೆ. ಹೌದು, ನಿಮ್ಮ ನೆಚ್ಚಿನ ಉದಯ ವಾಹಿನಿಯಲ್ಲಿ ಇದೀಗ ಹೊಸ ಧಾರಾವಾಹಿಯೊಂದು ಶುರುವಾಗಲಿದೆ. 'ನಾತಿಚರಾಮಿ' ಎನ್ನುವ ಧಾರಾವಾಹಿಯು ಇಂದಿನಿಂದ ಪ್ರಸಾರ ಕಾಣಲಿದ್ದು, ಆ ಧಾರಾವಾಹಿಯಲ್ಲಿ ನಾಯಕಿ ಭಕ್ತಿಯ ಅಣ್ಣ ಶ್ರೀಕಾಂತನಾಗಿ ನಟಿಸುತ್ತಿದ್ದಾರೆ ರಾಜೇಶ್ ಧ್ರುವ.
ಸಂತಸದ ವಿಷಯವೆಂದರೆ ಒಂದು ಸಣ್ಣ ಗ್ಯಾಪ್ನ ನಂತರ ಮತ್ತೆ ಉದಯ ವಾಹಿನಿ ಕಾಣಿಸಿಕೊಳ್ಳುತ್ತಿದ್ದಾರೆ ನಟ ರಾಜೇಶ್ ಧ್ರುವ. ಅಂದ ಹಾಗೇ ಈ ಹಿಂದೆ ಉದಯ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ಅಣ್ಣ ತಂಗಿ' ಧಾರಾವಾಹಿಯಲ್ಲಿ ನಟಿಸಿದ್ದ ಇವರು ಮುಂದೆ ಕಾರಣಾಂತರಗಳಿಂದ ಆ ಪಾತ್ರದಿಂದ ಹೊರಬಂದಿದ್ದರು.

ನಂತರ 'ಶ್ರೀಬಾಲಾಜಿ ಫೋಟೋ ಸ್ಟುಡಿಯೋ' ಸಿನಿಮಾವನ್ನು ನಿರ್ದೇಶಿಸಿದ ರಾಜೇಶ್ ಧ್ರುವ ಅದರಲ್ಲಿ ನಾಯಕನಾಗಿ ಕಾಣಿಸಿಕೊಂಡಿದ್ದರು. ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ಶ್ರೀಗೌರಿ' ಧಾರಾವಾಹಿಯಲ್ಲಿ ಖಳನಾಯಕ ಶರಣ ಆಗಿ ನಟಿಸುವ ಮೂಲಕ ಕಿರುತೆರೆಗೆ ಮರಳಿದ ರಾಜೇಶ್ ಧ್ರುವ ಸದ್ಯ ಆ ಪಾತ್ರದ ಮೂಲಕ ವೀಕ್ಷಕರ ಮನ ಸೆಳೆಯುತ್ತಿದ್ದಾರೆ.
ಇದರ ಜೊತೆಗೆ 'ನಾತಿಚರಾಮಿ' ಧಾರಾವಾಹಿಯಲ್ಲಿ ನಟಿಸುತ್ತಿರುವ ರಾಜೇಶ್ ಧ್ರುವ ಸಂತಸವನ್ನು ವ್ಯಕ್ತಪಡಿಸಿದ್ದಾರೆ. "ನಾತಿಚರಾಮಿ ಧಾರಾವಾಹಿ ನನಗೆ ತೀರಾ ಹತ್ತಿರವಾದಂತಹ ಧಾರಾವಾಹಿ. ಯಾಕೆಂದರೆ ಇದರ ಪ್ರೊಡಕ್ಷನ್ ಹೌಸ್ ನನ್ನ ಪ್ರೀತಿಯ ಗುರುಗಳಾದ ಗಣಪತಿ ಭಟ್ ಅವರದ್ದು. ಗಣಪತಿ ಭಟ್ ಅವರು ಈ ಹಿಂದೆ ಅಶ್ವಿನಿ ನಕ್ಷತ್ರ, ಸರಯೂ ಹಾಗೂ ಸದ್ಯ ಉದಯ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ರಾಧಿಕಾ ಧಾರಾವಾಹಿಯನ್ನು ನಿರ್ಮಾಣ ಮಾಡುತ್ತಿದ್ದಾರೆ. ರಚಿತಾ ರಾಮ್ ಅವರನ್ನು ಕಿರುತೆರೆಯಿಂದ ಪರಿಚಯ ಮಾಡಿಸಿದ್ದೆ ಇವರ ಅರಸಿ ಸೀರಿಯಲ್ ನಿಂದ" ಎಂದು ಫಿಲ್ಮಿಬೀಟ್ ಕನ್ನಡ ಜೊತೆಗೆ ಮಾತನಾಡಿದ ರಾಜೇಶ್ ಧ್ರುವ ಹೇಳಿಕೊಂಡಿದ್ದಾರೆ.
"ಗಣಪತಿ ಭಟ್ ಅವರು ನನಗೆ ಗುರುಗಳು. ಅವರ ನನ್ನನ್ನು ಕರೆದು ನೀನು ಈ ಪಾತ್ರವನ್ನು ಮಾಡ್ಬೇಕು ಅಂತ ಹೇಳಿದಾಗ ಇಲ್ಲ ಅಂತ ಹೇಳುವ ಮಾತೇ ಇರ್ಲಿಲ್ಲ ನನ್ನ ಹತ್ತಿರ. ಅದು ಯಾವುದೇ ಪಾತ್ರ ಆಗಿದ್ರೂ ನಾನು ಮಾಡ್ತಿದ್ದೆ. ಆಮೇಲೆ ಅವರಿಗೂ ಗೊತ್ತು, ರಾಜೇಶ್ ಏನು ಪಾತ್ರ ಮಾಡಬಲ್ಲ ಮತ್ತು ಯಾವ ಒಂದು ಇಮೋಶನ್ಸ್ ಅನ್ನು ಅವನು ಚೆನ್ನಾಗಿ ಮಾಡಬಹುದು, ಯಾವ ಪಾತ್ರ ಕೊಟ್ರೆ ಅವನು ಚೆನ್ನಾಗಿ ಮಾಡ್ತಾನೆ ಎಂಬುದರ ಬಗ್ಗೆ ಅವರಿಗೆ ಕ್ಲಾರಿಟಿ ಇದೆ" ಎಂದು ಫಿಲ್ಮಿಬೀಟ್ ಕನ್ನಡ ಜೊತೆಗೆ ಮಾತನಾಡಿದ ರಾಜೇಶ್ ಧ್ರುವ ಹೇಳಿದ್ದಾರೆ.
"ಅಂದ ಹಾಗೇ ಗಣಪತಿ ಭಟ್ ಅವರು ಮಾಡುವ ಎಲ್ಲ ಸೀರಿಯಲ್ಗಳಿಗೂ ನನ್ನ ಕನ್ಸಿಡರ್ ಮಾಡುವುದಿಲ್ಲ. ನನ್ನ ನಟನಾ ಸಾಮರ್ಥ್ಯ ಏನು ಎನ್ನುವುದು ಅವರಿಗೆ ಚೆನ್ನಾಗಿ ಗೊತ್ತು. ಉದಯ ಧಾರಾವಾಹಿಯಲ್ಲಿ ನಾನು ಈ ಮೊದಲು ಅಣ್ಣ ತಂಗಿ ಧಾರಾವಾಹಿಯಲ್ಲಿ ನಟಿಸಿದ್ದೆ. ಕಾರಣಾಂತರಗಳಿಂದ ಹೊರಬಂದೆ. ಇದೀಗ ನಾತಿಚರಾಮಿ ಧಾರಾವಾಹಿಯ ಮೂಲಕ ಮತ್ತೆ ಉದಯ ವಾಹಿನಿಯಲ್ಲಿ ಕಾಣಿಸಿಕೊಳ್ಳುತ್ತಿರುವುದಕ್ಕೆ ಖುಷಿಯಿದೆ" ಎಂದು ಹೇಳಿಕೊಂಡಿದ್ದಾರೆ ರಾಜೇಶ್ ಧ್ರುವ.
"ಉದಯ ವಾಹಿನಿಗೆ ನಾನು ಇದು ನಾಲ್ಕನೇ ಧಾರಾವಾಹಿ ಮಾಡ್ತಾ ಇರೋದು. ನಂದಿನಿ, ಸರಯೂ, ಅಣ್ಣ ತಂಗಿ ಇದೀಗ ನಾತಿಚರಾಮಿ. ನಾತಿಚರಾಮಿ ಎನ್ನುವ ಹೆಸರನ್ನು ಅಷ್ಟೊಂದು ನಿರರ್ಗಳವಾಗಿ ಹೇಳುವುದಕ್ಕೆ ಸಾಧ್ಯವಾಗುವುದಿಲ್ಲ. ಜೊತೆಗೆ ಎಷ್ಟೋ ಜನಕ್ಕೆ ಅದರ ಅರ್ಥ ಏನೆಂಬುದು ಕೂಡಾ ಗೊತ್ತಿಲ್ಲ. ನಾತಿಚರಾಮಿ ಅಂದ್ರೆ ಮದುವೆಗೆ ಬಳಸುವಂತಹ ಪ್ರಸಿದ್ಧ ಪದ. ಇದು ಭಕ್ತಿ ಎನ್ನುವ ಹುಡುಗಿ ಮತ್ತು ಬನಶಂಕರಮ್ಮ ತಾಯಿಯ ನಡುವೆ ನಡೆಯುವ ಕಥೆಯಿದು" ಎಂದು ಹೇಳಿಕೊಂಡಿದ್ದಾರೆ ರಾಜೇಶ್ ಧ್ರುವ.
"ಶ್ರೀಕಾಂತ್ ಒಬ್ಬ ಕ್ಯಾಬ್ ಡ್ರೈವರ್. ತನ್ನ ತಂಗಿಯನ್ನು ಸೆಕ್ಯೂರ್ ಮಾಡುವಂತಹ ಒಂದು ಪ್ರಮುಖ ಕ್ಯಾರೆಕ್ಟರ್ ಅದು. ಇದು ನಾಯಕ ಮತ್ತೆ ನಾಯಕಿಗೆ ತುಂಬಾ ಕನೆಕ್ಟ್ ಆಗಿರುವಂತಹ ಕ್ಯಾರೆಕ್ಟರ್. ಒಂದರ್ಥದಲ್ಲಿ ಶ್ರೀಕಾಂತ್ ಇಲ್ಲಿ ಪರಿಪೂರ್ಣ ನಾಯಕ ನಟ ಅಲ್ಲದಿದ್ರೂ ನಾಯಕ ನಟನಷ್ಟೇ ಒಂದು ವ್ಯಾಲ್ಯೂ ಇರುವಂತಹ ಪಾತ್ರವಿದು. ನಾನು ಸೀರಿಯಲ್ ಒಪ್ಪಿಕೊಳ್ಳುವ ಮೊದಲು ನನ್ನ ಕ್ಯಾರೆಕ್ಟರ್ನ ವ್ಯಾಲ್ಯೂ ಏನು? ಎಷ್ಟು ದಿನ ಇರುತ್ತೆ? ಎಲ್ಲಿ ತನಕ ಇರುತ್ತೆ ಅಂತ ಕೇಳುತ್ತೇನೆ. ಅದಕ್ಕೆ ತುಂಬಾ ಒಳ್ಳೆಯ ವ್ಯಾಲ್ಯೂ ಇದ್ರೆ ಮಾತ್ರ ನಾನು ಕ್ಯಾರೆಕ್ಟರ್ನ ಪ್ಲೇ ಮಾಡೋದಕ್ಕೆ ಒಪ್ಪಿಕೊಳ್ತೇನೆ" ಎಂದು ರಾಜೇಶ್ ಧ್ರುವ ಹೇಳಿಕೊಂಡಿದ್ದಾರೆ.
"ಸ್ವಮೇಕ್ ಧಾರಾವಾಹಿಯ ನಾತಿಚರಾಮಿಯ ಕಥೆಯನ್ನು ಸುಮೇಧ್ ಅವರು ತುಂಬಾ ಚೆನ್ನಾಗಿ ಬರೆದಿದ್ದಾರೆ. ನಿರ್ದೇಶಕರಾದ ರಾಮ್ ವೈದ್ಯ, ಛಾಯಾಗ್ರಾಹಕರಾದ ಕಾಂತರಾಜು, ಎಡಿಟರ್ ಮುತ್ತುರಾಜ್ ಎಲ್ಲರೂ ತುಂಬಾ ಸೊಗಸಾಗಿ ಕೆಲಸ ಮಾಡಿದ್ದಾರೆ. ಇದರ ಹಾಡಿನಿಂದ ಹಿಡಿದು ಎಲ್ಲವನ್ನು ಕೂಡಾ ತುಂಬಾ ಅದ್ಭುತವಾಗಿ ಮಾಡಿದ್ದಾರೆ. ಇನ್ನು 6.30 ಸ್ಲಾಟ್ ಆದ ಕಾರಣ ತುಂಬಾ ಜನಕ್ಕೆ ಕನೆಕ್ಟ್ ಆಗಲಿದೆ. ನನಗಂತೂ ಈ ಧಾರಾವಾಹಿಯ ಭಾಗವಾಗುತ್ತಿರುವುದಕ್ಕೆ ಖುಷಿಯಿದೆ" ಎಂದು ಫಿಲ್ಮಿಬೀಟ್ ಕನ್ನಡಗೆ ತಮ್ಮ ಸಂತಸವನ್ನು ರಾಜೇಶ್ ಧ್ರುವ ವ್ಯಕ್ತಪಡಿಸಿದ್ದಾರೆ.


Click it and Unblock the Notifications











