ಯಾರು ಎಷ್ಟೇ ಛೀಮಾರಿ ಹಾಕಿದ್ರೂ, ಟಿ.ಆರ್.ಪಿ ಬಂದಿದ್ದು ರಕ್ಷಿತ್ ಶೆಟ್ಟಿ ಸಂಚಿಕೆಗೆ.!
ಜೀ ಕನ್ನಡ ವಾಹಿನಿಯ 'ವೀಕೆಂಡ್ ವಿತ್ ರಮೇಶ್' ಕಾರ್ಯಕ್ರಮದಲ್ಲಿ ಸಾಧಕರ ಸೀಟ್ ಮೇಲೆ 'ಸಿಂಪಲ್ ಸ್ಟಾರ್' ರಕ್ಷಿತ್ ಶೆಟ್ಟಿ ಕೂತಾಗ ಜನ ಸುಮ್ಮನೆ ಇರಲಿಲ್ಲ. ಸಾಮಾಜಿಕ ಜಾಲತಾಣಗಳಲ್ಲಿ ಜೀ ಕನ್ನಡ ವಾಹಿನಿ ವಿರುದ್ಧ ಜನ ಕಮ್ಮಿ ಬೈಯಲಿಲ್ಲ.
ಸಾಧಕರ ಕುರ್ಚಿ ಏರಲು ರಕ್ಷಿತ್ ಶೆಟ್ಟಿಗೆ ಅರ್ಹತೆ ಇಲ್ಲ ಎಂದು ಕಾಮೆಂಟ್ ಮಾಡಿದವರು ಸಾವಿರಾರು ಮಂದಿ. ಇದರಿಂದ ಸೋಷಿಯಲ್ ಮೀಡಿಯಾದಲ್ಲಿ ದೊಡ್ಡ ವಾಗ್ಯುದ್ಧವೇ ನಡೆದು ಹೋಯ್ತು. ಇಷ್ಟೆಲ್ಲ ಆದರೂ, ಪ್ರಯೋಜನ ಆಗಿದ್ದು ಮಾತ್ರ ಜೀ ಕನ್ನಡ ವಾಹಿನಿಗೆ ಮತ್ತು ರಕ್ಷಿತ್ ಶೆಟ್ಟಿ ಸಂಚಿಕೆಗೆ.!
ನೀವು ನಂಬುತ್ತೀರೋ.. ಬಿಡುತ್ತೀರೋ.. 'ವೀಕೆಂಡ್ ವಿತ್ ರಮೇಶ್-3' ಆವೃತ್ತಿಯಲ್ಲಿ ನಟ ರಕ್ಷಿತ್ ಶೆಟ್ಟಿ ಭಾಗವಹಿಸಿರುವ ಸಂಚಿಕೆ ಅತಿ ಹೆಚ್ಚು ಟಿ.ಆರ್.ಪಿ ಗಳಿಸಿದೆ.! ಇದಕ್ಕೆ ವಿಪರ್ಯಾಸ ಅಂತೀರೋ... ಜನರ ಮೆಂಟಾಲಿಟಿ ಹೀಗೆಯೇ ಎಂದು ಸುಮ್ಮನಾಗುತ್ತೀರೋ... ನಿಮಗೆ ಬಿಟ್ಟಿದ್ದು.! ಮುಂದೆ ಓದಿರಿ....

ನಂಬಿದ್ರೆ ನಂಬಿ.!
'ವೀಕೆಂಡ್ ವಿತ್ ರಮೇಶ್-3' ಆವೃತ್ತಿಯಲ್ಲಿ ನಟ ರಕ್ಷಿತ್ ಶೆಟ್ಟಿ ಪಾಲ್ಗೊಂಡಿದ್ದ ಸಂಚಿಕೆ ಅತಿ ಹೆಚ್ಚು ಟಿ.ಆರ್.ಪಿ ಗಳಿಸಿದ್ಯಂತೆ. ಹಾಗಂತ ಜೀ ಕನ್ನಡ ವಾಹಿನಿಯ ಬಿಸಿನೆಸ್ ಹೆಡ್ ರಾಘವೇಂದ್ರ ಹುಣಸೂರು ತಿಳಿಸಿದ್ದಾರೆ.

ರಾಘವೇಂದ್ರ ಹುಣಸೂರು ಏನಂದರು.?
''ರಕ್ಷಿತ್ ಶೆಟ್ಟಿ ಎಪಿಸೋಡ್ ಗೆ ಬಹಳ ವಿರೋಧ ವ್ಯಕ್ತವಾಯಿತು. ಆದ್ರೆ, ಆ ಎಪಿಸೋಡ್ ಹೆಚ್ಚಿನ ಟಿ.ಆರ್.ಪಿ ಗಳಿಸಿತ್ತು'' ಎನ್ನುತ್ತಾರೆ ರಾಘವೇಂದ್ರ ಹುಣಸೂರು.

ಸಿಡಿಮಿಡಿಗೊಂಡಿದ್ದರು ವೀಕ್ಷಕರು.!
''ಸಾಧಕರ ಸೀಟ್ ಮೇಲೆ ಕೂರಲು ರಕ್ಷಿತ್ ಶೆಟ್ಟಿ ಒಳ್ಳೆಯ ಆಯ್ಕೆ ಅಲ್ಲ. ರಕ್ಷಿತ್ ಶೆಟ್ಟಿ ರವರನ್ನು ಸಾಧಕರನ್ನಾಗಿ ನೀವು ತೋರಿಸಿದರೆ, ಅನಿವಾರ್ಯವಾಗಿ ನಾವು ಬೇರೆ ವಾಹಿನಿ ನೋಡಬೇಕಾಗುತ್ತದೆ'' ಎಂದು ವೀಕ್ಷಕರು ಸಾಮಾಜಿಕ ಜಾಲತಾಣಗಳಲ್ಲಿ ಎಚ್ಚರಿಕೆ ನೀಡಿದ್ದರು.

ಅಸಮಾಧಾನದ ಹೊಗೆ
'ವೀಕೆಂಡ್ ವಿತ್ ರಮೇಶ್' ಕಾರ್ಯಕ್ರಮದಲ್ಲಿ ರಕ್ಷಿತ್ ಶೆಟ್ಟಿ ಭಾಗವಹಿಸಿದಾಗ ಅಸಮಾಧಾನಗೊಂಡ ವೀಕ್ಷಕರು ಫೇಸ್ ಬುಕ್ ನಲ್ಲಿ ಮಾಡಿದ ಕಾಮೆಂಟ್ ಗಳಿವು.

ಸಂಚಿಕೆಯಲ್ಲಿ ಸ್ಪಷ್ಟನೆ
''ದೊಡ್ಡ ಸಾಧನೆ ಮಾಡಿದವರನ್ನು ಕರೆದು ಸನ್ಮಾನ ಮಾಡುವುದು ಎಷ್ಟು ಮುಖ್ಯವೋ, ಅದೇ ರೀತಿ ಈಗ 'ಏನಾದರೂ ಸಾಧನೆ ಮಾಡುತ್ತೇನೆ' ಎಂದು ಹೊರಟವರಿಗೆ ಬೆನ್ನು ತಟ್ಟುವುದು ಅಷ್ಟೇ ಮುಖ್ಯ. ಎಲ್ಲ ಗೆದ್ದವರಿಗೆ ಕಂಗ್ರಾಟ್ಸ್ ಹೇಳುವುದಕ್ಕಿಂತ, ಎಲ್ಲವನ್ನ ಗೆಲ್ಲುತ್ತೇನೆ ಎನ್ನುವವರಿಗೆ 'ಆಲ್ ದಿ ಬೆಸ್ಟ್' ಹೇಳಬೇಕು'' ಎಂಬ ಸಂದೇಶವನ್ನು ಹೊತ್ತು ರಕ್ಷಿತ್ ಶೆಟ್ಟಿ ಭಾಗವಹಿಸಿದ ಸಂಚಿಕೆಯ ಆರಂಭದಲ್ಲಿ, ''ರಕ್ಷಿತ್ ಶೆಟ್ಟಿ ಮೊದಲ ಹಂತ ಗೆದ್ದಿದ್ದಾರೆ. ಅವರ ಬೆನ್ನು ತಟ್ಟಬೇಕು'' ಎಂದು ರಮೇಶ್ ಅರವಿಂದ್ ಸ್ಪಷ್ಟನೆ ನೀಡಿದರು.

ಏನು ಬಂತು ಪ್ರಯೋಜನ.?
ಫೇಸ್ ಬುಕ್ ನಲ್ಲಿ ಯಾರು ಎಷ್ಟೇ ಕಿಡಿಕಾರಿದ್ರೂ ಏನಾಯ್ತು.? ಅತಿ ಹೆಚ್ಚು ಟಿ.ಆರ್.ಪಿ ಬಂದಿದ್ದು ರಕ್ಷಿತ್ ಶೆಟ್ಟಿ ಕಾರ್ಯಕ್ರಮಕ್ಕೆ. ಅನಿವಾರ್ಯವಾಗಿ ಬೇರೆ ಚಾನೆಲ್ ನೋಡುತ್ತೇವೆ ಎಂದು ಕೆಲವರು ಹೇಳಿದ್ದರೂ, ಹಲವರು ನೋಡಿದ್ದು ರಕ್ಷಿತ್ ಶೆಟ್ಟಿ ಸಂಚಿಕೆಯನ್ನೇ.! ಇದಕ್ಕೆ ಏನ್ ಹೇಳ್ತೀರಾ.?


Click it and Unblock the Notifications











