Rakshith Urs: ಕಿರುತೆರೆಯ ಹ್ಯಾಂಡ್ ಸಮ್ ಹುಡುಗನಿಗೆ ಸಣ್ಣ ವಯಸ್ಸಿನಿಂದಲೂ ಇತ್ತು ನಟನಾಗುವ ಕನಸು!
ಸಣ್ಣ ವಯಸ್ಸಿನಿಂದಲೂ ಈತನಿಗೆ ಇದ್ದುದು ಒಂದೇ ಕನಸು.. ಬಣ್ಣದ ಲೋಕದಲ್ಲಿ ತಾನು ಗುರುತಿಸಿಕೊಳ್ಳಬೇಕು. ನಟನಾಗಿ ಮಿಂಚಬೇಕು ಎಂಬುದೇ ಆತನ ಕನಸು. ಅದೇ ಕಾರಣದಿಂದ ಒಂದು ಹಂತದ ವಿದ್ಯಾಭ್ಯಾಸ ಮುಗಿದದ್ದೇ ಆತ ಸೇರಿದ್ದು ಮಂಡ್ಯ ರಮೇಶ್ ಅವರ ನಟನಾ ಸಂಸ್ಥೆ. ನಟನೆಯೆಂದರೆ ಏನು, ರೀತಿ ನೀತಿಗಳೇನು ಎಂದು ಅರಿಯದ ಆತ ಎಲ್ಲವನ್ನು ಒಂದೊಂದಾಗಿಯೇ ತಿಳಿದುಕೊಂಡ. ಮುಂದೆ ನಟನಾ ಕ್ಷೇತ್ರಕ್ಕೆ ಕಾಲಿಟ್ಟು ಇಂದು ಕಿರುತೆರೆಯಲ್ಲಿ ಸಕ್ರಿಯರಾಗಿರುವ ಈ ಹ್ಯಾಂಡ್ ಸಮ್ ಹುಡುಗನ ಹೆಸರು ರಕ್ಷಿತ್ ಅರಸ್ ಗೋಪಾಲ್.
ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ಮುದ್ದು ಮಣಿಗಳು' ಧಾರಾವಾಹಿಯಲ್ಲಿ ನಾಯಕ ಶಿವು ಆಗಿ ಅಭಿನಯಿಸುತ್ತಿರುವ ರಕ್ಷಿತ್ ಅರಸ್ ಗೋಪಾಲ್ ಅವರ ನಟನಾ ಪಯಣ ಶುರುವಾಗಿದ್ದು ನಾಟಕಗಳಿಂದ. ಮಂಡ್ಯ ರಮೇಶ್ ಅವರ ನಟನಾ ಗರಡಿಯಲ್ಲಿ ಪಳಗಿದ ಅವರು ತದ ನಂತರ ಒಂದಷ್ಟು ನಾಟಕಗಳಲ್ಲಿ ಬಣ್ಣ ಹಚ್ಚಿದರು. ಮುಂದೆ ಹುಬ್ಬಳ್ಳಿಗೆ ತೆರಳಿದ ರಕ್ಷಿತ್ ಅರಸ್ ನಟರಾಜ್ ಹೊನ್ನವಳ್ಳಿ ಅವರ ಮಾರ್ಗದರ್ಶನದಲ್ಲಿ ನಟನೆಯ ಬಗ್ಗೆ ಮಗದಷ್ಟು ವಿಚಾರವನ್ನು ಕಲಿತುಕೊಂಡರು. ನಾಟಕಗಳಲ್ಲಿ ನಟಿಸುವುದರ ಜೊತೆಗೆ ಮೈಮ್ ಹಾಗೂ ಯಕ್ಷಗಾನವನ್ನು ಕಲಿತರು.

ಮಹಾದೇವಿ ಮೊದಲ ಸಿನಿಮಾ
ಹುಬ್ಬಳ್ಳಿಯಲ್ಲಿ ಒಂದು ಹಂತದ ಕೋರ್ಸ್ ಮುಗಿದದ್ದೇ ತಾವು ಕಲಿತಂತಹ ವಿದ್ಯೆಯನ್ನು ಮಕ್ಕಳಿಗೆ ಜ್ಞಾನದ ರೂಪದಲ್ಲಿ ಧಾರೆ ಎರೆಯುವ ಕಾರ್ಯ ಮಾಡುತ್ತಿದ್ದರು. ಇದರ ಜೊತೆಗೆ ಅವಕಾಶ ಸಿಕ್ಕಾಗಲೆಲ್ಲಾ ತಪ್ಪದೇ ಆಡಿಶನ್ಗಳಿಗೆ ಹೋಗುತ್ತಿದ್ದ ರಕ್ಷಿತ್ ಅರಸ್ ಗೋಪಾಲ್, ಶ್ರುತಿ ನಾಯ್ಡು ನಿರ್ದೇಶನದ 'ಮಹಾದೇವಿ' ಧಾರಾವಾಹಿಯ ಮೂಲಕ ಸಣ್ಣ ಪರದೆಗೆ ಪಾದಾರ್ಪಣೆ ಮಾಡಿದರು.

ಜನಪ್ರಿಯತೆ ನೀಡಿದ್ದು ಧೀರಜ್ ಪಾತ್ರ
ಕಲರ್ಸ್ ಸೂಪರ್ ವಾಹಿನಿಯಲ್ಲಿ ರಘುಚರಣ್ ನಿರ್ದೇಶನದಲ್ಲಿ ಪ್ರಸಾರವಾಗುತ್ತಿದ್ದ 'ಮಾಂಗಲ್ಯಂ ತಂತು ನಾನೇನಾ' ಧಾರಾವಾಹಿಯಲ್ಲಿ ನಾಯಕ ತೇಜಸ್ವಿ ಅಣ್ಣ ಧೀರಜ್ ಆಗಿ ರಕ್ಷಿತ್ ಗೋಪಾಲ್ ಅರಸ್ ಕಾಣಿಸಿಕೊಂಡಿದ್ದರು. "ನನ್ನನ್ನು ಕಿರುತೆರೆಯಲ್ಲಿ ಗುರುತಿಸುವಂತೆ ಮಾಡಿದ್ದು ಧೀರಜ್ ಪಾತ್ರ. ಎರಡು ಶೇಡ್ಗಳು ಕೂಡಾ ಒಂದೇ ಪಾತ್ರದಲ್ಲಿ ಇದ್ದ ಕಾರಣ ಪಾತ್ರ ತುಂಬಾ ಚಾಲೆಂಜಿಂಗ್ ಆಗಿತ್ತು. ಏಕಕಾಲಕ್ಕೆ ಅವೆರಡನ್ನು ನಿಭಾಯಿಸಿಕೊಂಡು ಸಾಗುವುದು ನಿಜಕ್ಕೂ ಕಷ್ಟವೇ ಆಗಿತ್ತು. ಆದ್ರೀಗ ಪಟ್ಟ ಪ್ರಯತ್ನಕ್ಕೆ ಫಲ ಸಿಕ್ಕಿದೆ. ಧಾರಾವಾಹಿ ಮುಗಿದು ವರ್ಷಗಳಾದರೂ ಜನ ಇಂದಿಗೂ ಅದೇ ಪಾತ್ರದ ಮೂಲಕ ಗುರುತಿಸುತ್ತಾರೆ." ಎಂದು ಹೇಳುತ್ತಾರೆ ರಕ್ಷಿತ್ ಅರಸ್ ಗೋಪಾಲ್.

ಧಾರಾವಾಹಿಯಲ್ಲಿ ನಾಯಕನಾಗಿ ಬಡ್ತಿ
ಸ್ಟಾರ್ ಸುವರ್ಣದಲ್ಲಿ ಪ್ರಸಾರವಾಗುತ್ತಿದ್ದ 'ಯಜಮಾನಿ' ಧಾರಾವಾಹಿಯಲ್ಲಿ ನಾಯಕನ ತಮ್ಮನಾಗಿ ನಟಿಸಿದ್ದರು ರಕ್ಷಿತ್. ಪೋಷಕ ಪಾತ್ರಗಳ ಮೂಲಕ ಕಿರುತೆರೆಯಲ್ಲಿ ಗುರುತಿಸಿಕೊಂಡಿದ್ದ ರಕ್ಷಿತ್ ಅದೇ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ಮತ್ತೆ ವಸಂತ' ಧಾರಾವಾಹಿಯಲ್ಲಿ ನಾಯಕ ವಸಂತ ಆಗಿ ಅಭಿನಯಿಸುವ ಮೂಲಕ ನಾಯಕನಾಗಿ ಭಡ್ತಿ ಪಡೆದರು. ಹೌದು, 'ಮತ್ತೆ ವಸಂತ'ದಲ್ಲಿ ವಸಂತ ಆಗಿ ಅಭಿನಯಿಸುತ್ತಿದ್ದ ವಿವೇಕ್ ಸಿಂಹ ಧಾರಾವಾಹಿಯಿಂದ ಹೊರಬಂದಾಗ ಆ ಜಾಗಕ್ಕೆ ಕಾಲಿಟ್ಟ ರಕ್ಷಿತ್ ಅರಸ್ ಮನೋಜ್ಞ ನಟನೆಯ ಮೂಲಕ ವೀಕ್ಷಕರ ಮನ ಸೆಳೆಯುವಲ್ಲಿ ಯಶಸ್ವಿಯಾದರು.

'ಮುದ್ದು ಮಣಿಗಳು' ರಕ್ಷಿತ್ಗೆ ವಿಶೇಷ
"ನಾನು ಇಲ್ಲಿಯ ತನಕ ನಟಿಸಿರುವ ಎರಡು ಮೂರು ಧಾರಾವಾಹಿಗಳಲ್ಲಿ ಆರಂಭದಿಂದ ಯಾವುದರಲ್ಲಿಯೂ ನಟಿಸಲಿಲ್ಲ. ಎಲ್ಲವೂ ಅಷ್ಟೇ, ಧಾರಾವಾಹಿ ಶುರುವಾಗಿ ಅರ್ಧದಲ್ಲಿ ನಾನು ತಂಡಕ್ಕೆ ಸೇರುತ್ತಿದ್ದೆ. 'ಮುದ್ದು ಮಣಿಗಳು' ಧಾರಾವಾಹಿ ಹಾಗಲ್ಲ. ಅದರಲ್ಲಿ ನಾನು ಆರಂಭದಲ್ಲಿಯೇ ನಾಯಕನಾಗಿ ನಟಿಸುವ ಅವಕಾಶ ಪಡೆದುಕೊಂಡೆ. ಅದೇ ಕಾರಣಕ್ಕೆ ಆ ಧಾರಾವಾಹಿ ನನ್ನ ಪಾಲಿಗೆ ತುಂಬಾ ಸ್ಪೆಷಲ್" ಎಂದು ಸಂತಸದಿಂದ ಹೇಳುತ್ತಾರೆ ರಕ್ಷಿತ್ ಅರಸ್ ಗೋಪಾಲ್.


Click it and Unblock the Notifications