Actress Radha Bhagavathi: ಕಿರುತೆರೆಯ ರಾಮಾಚಾರಿ ತಂಗಿ ಇದೀಗ ಹಿರಿತೆರೆಯಲ್ಲಿ ಬ್ಯುಸಿ
ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ರಾಮಚಾರಿ' ಧಾರಾವಾಹಿಯಲ್ಲಿ ನಾಯಕಿ ರಾಮಚಾರಿ ತಂಗಿ ಶ್ರುತಿ ಆಗಿ ನಟಿಸುತ್ತಿರುವ ರಾಧಾ ಭಗವತಿ ಅವರು ಸಿಹಿ ಸುದ್ದಿಯೊಂದನ್ನು ನೀಡಿದ್ದಾರೆ. ಹೌದು, ಅದ್ಭುತ ನಟನೆಯ ಮೂಲಕ ಇಷ್ಟು ದಿನಗಳ ಕಾಲ ಕಿರುತೆರೆ ವೀಕ್ಷಕರನ್ನು ರಂಜಿಸುತ್ತಿದ್ದ ರಾಧಾ ಭಗವತಿ ಇದೀಗ ಹಿರಿತೆರೆಯಲ್ಲಿಯೂ ಮತ್ತೊಮ್ಮೆ ಮೋಡಿ ಮಾಡಲಿದ್ದಾರೆ. ಪೋಷಕ ಪಾತ್ರದ ಮೂಲಕ ಕಿರುತೆರೆ ವೀಕ್ಷಕರನ್ನು ರಂಜಿಸುತ್ತಿದ್ದ ರಾಧಾ ಭಗವತಿ ನಾಯಕಿಯಾಗಿ ಭಡ್ತಿ ಪಡೆದಿದ್ದಾಗಿದೆ.
ಈಗಾಗಲೇ ಹಿರಿತೆರೆಗೂ ಕಾಲಿಟ್ಟಿರುವ ರಾಧಾ ಭಗವತಿ ಸದ್ಯ ಸಚಿನ್ ಶೆಟ್ಟಿ ನಿರ್ದೇಶನದ 'ವಸಂತ ಕಾಲದ ಹೂಗಳು' ಸಿನಿಮಾದಲ್ಲಿ ನಾಯಕಿಯಾಗಿ ನಟಿಸಲಿದ್ದಾರೆ. ಅಂದ್ಹಾಗೆ 'ಆ 90 ದಿನಗಳು' ಅನ್ನೋ ಸಿನಿಮಾದಲ್ಲಿ ರಾಧಾ ಅವರು ಮೊದಲ ಬಾರಿ ನಾಯಕಿಯಾಗಿ ನಟಿಸಿದ್ದರು. ಕಳೆದ ವರ್ಷವಷ್ಟೇ ಆ ಸಿನಿಮಾ ರಿಲೀಸ್ ಆಗಿದ್ದು ಅದು ವೀಕ್ಷಕರ ಮೆಚ್ಚುಗೆಯೂ ವ್ಯಕ್ತವಾಗಿತ್ತಂತೆ.

ಎರಡು ಸಿನಿಮಾಗಳಲ್ಲಿ ನಟನೆ
ಅಭಿಜಿತ್ ತೀರ್ಥಹಳ್ಳಿ ನಿರ್ದೇಶನದ 'ಅಪಾಯವಿದೆ ಎಚ್ಚರಿಕೆ' ಸಿನಿಮಾದಲ್ಲಿ ನಟಿಸಲಿರುವ ಈ ನಟಿ ಇದೀಗ 'ವಸಂತ ಕಾಲದ ಹೂಗಳು' ಸಿನಿಮಾದಲ್ಲಿ ನಾಯಕಿಯಾಗಿಯೂ ಆಯ್ಕೆಯಾಗಿದ್ದಾರೆ. ಇದರ ಜೊತೆಗೆ ಎಸ್. ನಾರಾಯಣ್ ನಿರ್ದೇಶನದ 'ಒಂದ್ಸಲ ಮೀಟ್ ಮಾಡೋಣ' ಸಿನಿಮಾದಲ್ಲಿ ನಾಯಕನ ತಂಗಿಯಾಗಿ ನಟಿಸುತ್ತಿದ್ದಾರೆ. ಸದ್ಯ ಒಂದಾದ ಮೇಲೆ ಒಂದರಂತೆ ಅವಕಾಶಗಳನ್ನು ಪಡೆಯುತ್ತಿದ್ದಾರೆ.
ಕಂಠದಾನ ಕಲಾವಿದೆ ಹೌದು
ಮುದ್ದಾದ ನಟನೆಯ ಮೂಲಕ ಕಿರುತೆರೆ ಜೊತೆಗೆ ಹಿರಿತೆರೆಯಲ್ಲಿಯೂ ನಟನಾ ಕಂಪನ್ನು ಪಸರಿಸುತ್ತಿರುವ ಈಕೆ ಹಿನ್ನಲೆ ಗಾಯಕಿಯೂ ಹೌದು. ಈಗಾಗಲೇ ಎರಡು ಸಿನಿಮಾಗಳಲ್ಲಿ ಹಾಡಿರುವ ಈಕೆ ಕಂಠದಾನಕ್ಕೂ ಸೈ. 'ಮದುಮಗಳು' ಧಾರಾವಾಹಿಯಲ್ಲಿನ ನಾಯಕಿಯ ಪಾತ್ರಕ್ಕೆ ಕಂಠದಾನ ಮಾಡುತ್ತಿರುವ ರಾಧಾ ಅವರಿಗೆ ಕಲೆ ಎಂಬುದು ರಕ್ತಗತವಾಗಿಯೇ ಒಲಿದು ಬಂದಿದೆ.
ಮನೆಯಲ್ಲಿ ಕಲೆಯ ವಾತಾವರಣ
ರಾಧಾ ಭಗವತಿ ತಾತ ಕೂಡ ರಂಗಭೂಮಿ ಕಲಾವಿದರಾಗಿದ್ದರಂತೆ. ಇದರ ಜೊತೆಗೆ ಸವರು ಹರಿಕಥೆ ದಾಸರೂ ಕೂಡಾ ಆಗಿದ್ದರಂತೆ. ಇನ್ನು ಈಕೆಯ ಅಮ್ಮನು ಅಷ್ಟೇ.. ಜಾನಪದ ಗೀತೆಗಳಿಗೆ ದನಿಯಾಗಿದ್ದರಂತೆ. ಮನೆಯಲ್ಲಿ ಕಲೆಯ ವಾತಾವರಣವಿದ್ದ ಕಾರಣದಿಂದಲೋ ಏನೋ ರಾಧಾ ಭಗವತಿ ಅವರಿಗೆ ನಟನೆಯತ್ತ ಎಳೆ ವಯಸ್ಸಿನಲ್ಲಿಯೇ ಆಸಕ್ತಿ ಮೂಡಿದೆ.

ಪಾತ್ರಗಳ ಆಯ್ಕೆಯಲ್ಲಿ ಚ್ಯೂಸಿ
ಇನ್ನು ಒಂದಾದ ಮೇಲೆ ಒಂದರಂತೆ ಸಿನಿಮಾಗಳಲ್ಲಿ ನಟಿಸುವ ಅವಕಾಶಗಳನ್ನು ಪಡೆಯುತ್ತಿರುವ ರಾಧಾ ಅವರಿಗೆ ಗ್ಲಾಮರಸ್ ಆಗಿರುವಂತಹ ಪಾತ್ರಗಳಲ್ಲಿ ನಟಿಸುವುದು ಸುತರಾಂ ಇಷ್ಟವಿಲ್ಲವಂತೆ. ಹಾಗಾಗಿ ಬಂದ ಪಾತ್ರಗಳೆಲ್ಲವನ್ನು ಒಪ್ಪಿಕೊಳ್ಳದ ಈಕೆ ಪಾತ್ರದ ವಿಚಾರದಲ್ಲಿ ಸಿಕ್ಕಾಪಟ್ಟೆ ಚ್ಯೂಸಿಯಂತೆ.
ಪಿಯುಸಿ ವಿದ್ಯಾರ್ಥಿನಿಯಾಗಿ ತೆರೆ ಮೇಲೆ ಮೋಡಿ
ಅಂದ ಹಾಗೇ ರಾಧಾ ಭಗವತಿ ಅವರು ವಸಂತ ಕಾಲದ ಹೂಗಳು ಸಿನಿಮಾದಲ್ಲಿ ಪಿಯುಸಿ ವಿದ್ಯಾರ್ಥಿನಿಯಾಗಿ ಕಾಣಿಸಿಕೊಳ್ಳಲಿದ್ದಾರೆಯಂತೆ. ಟಿನೇಜ್ ಪ್ರೇಮಕಥೆಯನ್ನೊಳಗೊಂಡ ಈ ಸಿನಿಮಾದಲ್ಲಿ ಆಕೆ ಸುಮಾ ಎನ್ನುವ ಹೆಸರಿನ ಪಾತ್ರಕ್ಕೆ ಜೀವ ತುಂಬಲಿದ್ದಾರೆಯಂತೆ. ಇನ್ನು ಎಲ್ಲದಕ್ಕಿಂತಲೂ ಮುಖ್ಯವಾಗಿ ಸಿನಿಮಾದ ಹೆಸರು ವಸಂತ ಕಾಲದ ಹೂಗಳು ಆಕೆಗೆ ತುಂಬಾ ಹತ್ತಿರವಾದುದು ಎಂದೆನಿಸಿತಂತೆ.
ಕಾಲೇಜು ದಿನಗಳ ನೆನಪಾಗಲಿದೆ
ಸಿನಿಮಾ ಕಥೆಯನ್ನು ಕೇಳಿದ ಬಳಿಕ ಮೂರು ನಾಲ್ಕು ದಿನವಂತೂ ರಾಧಾ ಭಗವತಿ ಅವರು ಆ ಕತೆಯ ಗುಂಗಿನಲ್ಲಿಯೇ ಇದ್ದರಂತೆ. ಇನ್ನು ಸಿನಿಮಾವನ್ನು ನೋಡುವ ಪ್ರತಿಯೊಬ್ಬರಿಗೂ ತಮ್ಮ ಕಾಲೇಜು ದಿನಗಳು ನೆನಪಾಗಲಿದೆ ಎಂಬುದು ರಾಧಾ ಭಗವತಿ ಅವರ ಅಂಬೋಣ.
ತುಂಬಾ ಖುಷಿಯಿದೆ
ಇದರ ಜೊತೆಗೆ ರಾಧಾ ಭಗವತಿ ಅವರಿಗೆ ಈ ಸಿನಿಮಾದಲ್ಲಿ ನಟನೆಗೆ ಸಾಕಷ್ಟು ಅವಕಾಶಗಳು ದೊರೆತಿದೆಯಂತೆ. ಆದಷ್ಟು ಬೇಗ ವಸಂತ ಮಾಸದ ಹೂಗಳು ಸಿನಿಮಾದ ಮೂಲಕ ಮತ್ತೆ ಸಿನಿಪ್ರಿಯರನ್ನು ರಂಜಿಸಲಿರುವ ರಾಧಾ ಭಗವತಿ ವೀಕ್ಷಕರ ಪ್ರತಿಕ್ರಿಯೆಗೆ ಕಾಯುತ್ತಿದ್ದಾರೆಯಂತೆ.


Click it and Unblock the Notifications











