ಕಿರುತೆರೆಯಲ್ಲಿ ರವಿ ಬೆಳಗೆರೆ 'ಹೇಳಿ ಹೋಗು ಕಾರಣ'

ಭಾವನಾ ಬೆಳಗೆರೆ ನಿರ್ಮಿಸುತ್ತಿರುವ ಈ ಧಾರಾವಾಹಿಯ ಚಿತ್ರೀಕರಣ ಈಗಾಗಲೆ ಭರದಿಂದ ಸಾಗುತ್ತಿದೆ. ಈ ಧಾರಾವಾಹಿಯಲ್ಲಿ ಸ್ವತಃ ರವಿ ಬೆಳಗೆರೆ ಅವರು ಪಾತ್ರವೊಂದನ್ನೂ ಪೋಷಿಸುತ್ತಿದ್ದಾರೆ ಎನ್ನುತ್ತವೆ ಮೂಲಗಳು. ಧಾರಾವಾಹಿ ಯಾವ ಟಿವಿ ವಾಹಿನಿಯಲ್ಲಿ ಮೂಡಿಬರಲಿದೆ, ಎಂದಿನಿಂದ ಆರಂಭ ಎಂಬಿತ್ಯಾದಿ ಪ್ರಶ್ನೆಗಳಿಗೆ ಉತ್ತರ ಶೀಘ್ರದಲ್ಲೇ ಸಿಗಲಿದೆ.
2003ರಲ್ಲಿ ಮೊದಲ ಮುದ್ರಣ ಕಂಡ 'ಹೇಳಿ ಹೋಗು ಕಾರಣ' ಕಾದಂಬರಿ ಈಗಾಗಲೆ ಹಲವಾರು ಮರು ಮುದ್ರಣಗಳನ್ನು ಕಂಡಿದೆ. ಈ ಹಿಂದೆಮ್ಮೊ ಇದೇ ಧಾರಾವಾಹಿಯನ್ನು ಸಿನಿಮಾ ಮಾಡಲು ನಿರ್ದೇಶಕ ಗುರುಪ್ರಸಾದ್ ಮುಂದಾಗಿದ್ದರು. ಆದರೆ ಕಾರಣಾಂತರಗಳಿಂದ ಅದು ಸಾಧ್ಯವಾಗಿರಲಿಲ್ಲ. ಈಗ ಧಾರಾವಾಹಿ ರೂಪದಲ್ಲಿ ಕಿರುತೆರೆ ವೀಕ್ಷಕರ ಮುಂದೆ ಬರಲು ಅಣಿಯಾಗುತ್ತಿದೆ.
ಈ ಕಾದಂಬರಿ ಬಗ್ಗೆ ರವಿ ಬೆಳಗೆರೆ ಹೀಗೆನ್ನುತ್ತಾರೆ, "ಕೆಲವು ಲಕ್ಷ ಜನ ಹುಡುಗರು ತಮ್ಮನ್ನು ಈ ಕಾದಂಬರಿಯ ನಾಯಕ ಹಿಮವಂತನೊಂದಿಗೆ ಐಡೆಂಟಿಫೈ ಮಾಡಿಕೊಂಡರು. ಹಾಗೆಯೇ ಅನೇಕ ಹುಡುಗಿಯರು ತಮ್ಮೊಳಗಿನ ಕೊಂಚ ಪ್ರಾರ್ಥನಾ- ಕೊಂಚ ಊರ್ಮಿಳಾರ ವ್ಯಕ್ತಿತ್ವಗಳ ಮಧ್ಯೆ ಜೀಕುತ್ತ ಖುಷಿಪಟ್ಟರು, ನಾಚಿಕೊಂಡರು, ನನ್ನನ್ನು ಸಣ್ಣಗೆ ಗದರಿಕೊಂಡರು...
ಪತ್ರಿಕೆಯಲ್ಲಿ ವಾರ ಧಾರಾವಾಹಿಯಾಗಿ ಪ್ರಕಟಗೊಂಡ ಈ ಕಾದಂಬರಿ, ಪ್ರಕಟವಾಗುತ್ತಿದ್ದಷ್ಟು ದಿನವೂ ಇದು ಮನೆಮನೆಯ ಚರ್ಚೆಯಾಗಿತ್ತು. ಎಲ್ಲೋ ರಸ್ತೆಯಲ್ಲಿ ಹೋಗುತ್ತಿದ್ದವನನ್ನು ನಿಲ್ಲಿಸಿ 'ದಯವಿಟ್ಟು ಹಿಮವಂತನಿಗೆ ಮೋಸ ಮಾಡಬೇಡಿ ಸಾರ್, ಅವನಿಗೆ ಪ್ರಾರ್ಥನಾ ಸಿಗೋ ಹಾಗೆ ಮಾಡಿ' ಅಂತ ಗೋಗರೆದ ಹುಡುಗರು ಎಷ್ಟು ಜನವೋ?" ಎಂದು ಕಾದಂಬರಿಯ ಬೆನ್ನುಡಿಯಲ್ಲಿ ಹೇಳಿದ್ದಾರೆ. (ಒನ್ಇಂಡಿಯಾ ಕನ್ನಡ)


Click it and Unblock the Notifications











