'ಏಕಾಂಗಿ' ನನ್ನ ಫಸ್ಟ್ ಲವ್ ಗಿಂತಲೂ ಜಾಸ್ತಿ: ರವಿಚಂದ್ರನ್
ಯಾವುದೇ ಪ್ರಾಜೆಕ್ಟ್ ಮಾಡಬೇಕಾದರೆ ಮೊದಲು ಅದನ್ನು ನಾನು ನಂಬುತ್ತೇನೆ. ಏನಾಗುತ್ತದೋ ಆಗಲಿ ಬಿಡು ಎಂಬ ಜಾಯಮಾನ ನನ್ನದು. ಎಷ್ಟೋ ಸಲ ಹಿಟ್ ಎಂದುಕೊಂಡ ಚಿತ್ರ ಫ್ಲಾಪ್ ಆಗಿರುತ್ತದೆ. 'ಏಕಾಂಗಿ' ಚಿತ್ರಕ್ಕಿಂತಲೂ ಉದಾಹಣೆ ಬೇಕೆ. ಅದನ್ನು ನಾನು ಇಷ್ಟಪಟ್ಟಷ್ಟು ಬೇರಾರು ಪಡಲು ಸಾಧ್ಯವಿಲ್ಲ.
ಆ ಸಿನಿಮಾದಿಂದ ಹೊರಬರಲು ನನಗೆ 12 ವರ್ಷ ಬೇಕಾಯಿತು. ನನ್ನ ಫಸ್ಟ್ ಲವ್ ಗಿಂತಲೂ ಜಾಸ್ತಿ ಅದು. ಆ ನೋವು ನಾನು ಯಾರ ಬಳಿ ಹೇಳಿಕೊಳ್ಳಲಿ. ನನ್ನ ಹೆಂಡತಿ ಹತ್ತಿರ ಹೇಳಿದರೆ ಜಾಡಿಸಿ ಒದೀತಾಳೆ ಅಷ್ಟೆ. ಕೆಲವು ಸಲ ನಾವಾಗಿಯೇ ತಗಲಾಗಿಕೊಳ್ಳುವುದು ಎಂದಿರುತ್ತದೆ. ಯಾರೋ ಇನ್ಸಲ್ಟ್ ಮಾಡಿದರೋ ಎಂದೋ ಇನ್ನೊಂದು ಕಾರಣಕ್ಕೋ ಗೊತ್ತಿಲ್ಲ. ಆಗ ನಮ್ಮ ವ್ಯಕ್ತಿತ್ವವೂ ಬದಲಾಗುತ್ತದೆ.
'ಶಾಂತಿಕ್ರಾಂತಿ' ಫ್ಲಾಪ್ ಆದಾಗ ನಮ್ಮ ತಾಯಿನೇ ಅಂದಿದ್ರು. ನೀನೇ ತಾನೆ ಮಾಡಿದ್ದು ಅನುಭವಿಸು ಎಂದಿದ್ದರು. ಈಗಲೂ ಅದು ನೆನೆಸಿಕೊಂಡರೆ ಎದೆ ಚುರ್ ಚುರ್ ಎನ್ನುತ್ತದೆ. ಆಗ ಮನೆ ಬಿಟ್ಟು ಹೊರಟು ಹೋಗಿದ್ದೆ. ನೀನು ಬಿದ್ದಾಗ ಎದ್ದೇಳುವ ಶಕ್ತಿ ನಿನಗೇ ಬರಬೇಕು. ಈಶ್ವರಿ ಪ್ರೊಡಕ್ಷನ್ಸ್ ನಲ್ಲಿ ಬೆಳೆದ ಕಾರಣಕ್ಕೋ, ನಮ್ಮ ಅಪ್ಪನ ಗರಡಿಯಲ್ಲಿ ಬೆಳೆದ್ದಕ್ಕೋ ಮೊದಲಿಂದಲೂ ನನಗೆ ಯಾರ ಬಳಿಯೂ ಕೈ ಚಾಚುವ ಅಭ್ಯಾಸ ಬರಲಿಲ್ಲ. ತೊಂದರೆಯಲ್ಲಿದ್ದೀನಿ ದುಡ್ದು ಕೊಡಿ ಸಾರ್ ಎಂದು ಯಾರನ್ನೂ ಕೇಳಿಲ್ಲ.

ಈ ಹೊತ್ತಿಗೂ ಕೇಳ್ತಾರೆ ಮ್ಯೂಸಿಕ್ ಹೆಂಗ್ ರೀ ಮಾಡ್ತೀರಾ ನೀವು ಎಂದು. ಮ್ಯೂಸಿಕ್ ಯಾರಪ್ಪನ ಸ್ವತ್ತು ಎಂದು ಕೇಳ್ತೀನಿ. ಯಾರು ಮಾಡಬಾರದು. ಯಾಕ್ ಮಾಡಬಾರದು. ಸ್ವರ ಹೇಳಕ್ಕೆ ಬರಲ್ಲ. ಆದರೆ ತನನನ ಹೇಳಕ್ಕೆ ಬರಲ್ಲವೇನು ಎಂದು ಹೇಳುತ್ತೇನೆ.
ಇಂದಿನ ರೈಟರ್ಸ್ ಬಂದು ಏನ್ ಸಾರ್ ಕಥೆ ಎನ್ನುತ್ತಾರೆ. ಕೇಳ್ಬಿಟ್ಟು ಹೌದಾ ಬರೆದುಕೊಂಡು ಬರ್ತೀನಿ ಎಂದು ಹೋಗ್ತಾರೆ. ಅರೆ ನನ್ನ ಮಗುಗೆ ನೀವು ಕೊಡೋ ಬೆಲೆ ಅಷ್ಟೆನಾ. ಈ ಹೊತ್ತು ಜೊತೆಯಲ್ಲಿ ಕುಳಿತು ಬರೆಯುವವರು ಯಾರೂ ಸಿಗಲ್ಲ. ನನ್ನ ಫೀಲಿಂಗನ್ನು ಅರ್ಥ ಮಾಡಿಕೊಳ್ಳುವ ರೈಟರ್ಸ್ ಇಲ್ಲ. ನನಗೆ ಬೇಕು ಎಂದದ್ದು ಅವನು ಕೊಡಲಿಲ್ಲ ಎಂದರೆ ಅವನ್ಯಾಕೆ ನನಗೆ ಬೇಕು ಎಂದರು.
ನನ್ನ ಸಕ್ಸಸನ್ನು ನಾನು ಎಂಜಾಯ್ ಮಾಡುವುದಕ್ಕಿಂತಲೂ ಬೇರೆಯವರು ಎಂಜಾಯ್ ಮಾಡಿ ಫೋನ್ ಮಾಡ್ತಾರಲ್ಲಾ ನಿಜಕ್ಕೂ ಅದು ಸಾಕು ನನಗೆ. ಆ ಸಂಪಾದನೆ ಮುಂದೆ ಬೇರೆ ಯಾವ ಸಂಪಾದನೆಯೂ ಬೇಕಾಗಿಲ್ಲ ಎಂದರು.
ರವಿಚಂದ್ರನ್ ಅವರನ್ನು ಅರ್ಥ ಮಾಡಿಕೊಂಡವರೇ ಇಲ್ಲ ಯಾರೂ. ಐ ಯಾಮ್ ಹ್ಯಾಪಿ ವಿತ್ ಮೈ ಸೆಲ್ಫ್. ನೋ ಬಡಿ ಕ್ಯಾನ್ ಅಂಡರ್ ಸ್ಟುಡ್ ಮೀ ಎಕ್ಸೆಪ್ಟ್ ಮೈ ಫಾದರ್, ನಮ್ಮ ಫಾದರ್ ನೋಡೋ ರವಿಚಂದ್ರನ್ ಬೇರೆ ಈವಾಗಿನ ರವಿಚಂದ್ರನ್ ಬೇರೆ. ಒಬ್ಬನೇ ಒಬ್ಬ ರವಿಚಂದ್ರನ್ ನ್ನು ಈ ಪ್ರಪಂಚದಲ್ಲಿ ಅರ್ಥ ಮಾಡಿಕೊಂಡವನು ಇಲ್ಲ. ನನ್ನ ಕುಟುಂಬದವರೂ ನನ್ನನ್ನು ಅರ್ಥ ಮಾಡಿಕೊಂಡಿಲ್ಲ.
ಬೇಕಿದ್ದರೆ ಹತ್ತು ವರ್ಷಗಳ ಬಳಿಕ ಇದೇ ವೇದಿಕೆ ಮೇಲೆ ಬಿಗ್ ಬಾಸ್ ನಡೆಸು ಆಗ ನಾನೂ ಬರ್ತೀನಿ. ಇದೇ ಪ್ರಶ್ನೆ ನನ್ನನ್ನು ಕೇಳು, ನೀನೇ ಉತ್ತರ ಕೊಡ್ತೀಯ ಎಂದರು. ಐ ಯ್ಯಾಮ್ ಹ್ಯಾಪಿ ವಿತ್ ಮೈ ಸೆಲ್ಫ್, ನಾನು ಒಬ್ಬನೇ ಕೂತಾಗ ಸಾವಿರ ಮಾಡ್ತೀನಿ. ಜೀವನದಲ್ಲಿ ಮತ್ತೆ ಹಿಂದೆ ಹೋಗಿ ಮಾಡಲೇಬೇಕಾದಂತಹ ಒಂದು ಒಳ್ಳೆಯ ಕೆಲಸ ಎಂದು ಕೇಳಿದಾಗ, ನಾನು ಮತ್ತೆ ಕಾಲೇಜಿಗೆ ಹೋಗಬೇಕು ಎಂದಿದ್ದೇನೆ. ಆ ಹೊತ್ತು ಎಕ್ಸ್ ಪ್ರೆಸ್ ಮಾಡಕ್ಕೆ ಆಗದ ಲವ್ವನ್ನು ಮತ್ತೆ ಹೇಳಬೇಕೆಂದಿದ್ದೇನೆ.

ಮತ್ತೆ ವಾಪಸ್ ಹೋಗಿ ಒಂದನ್ನು ಅಳಿಸಿ, ಸರಿಪಡಿಸಬೇಕು ಎಂಬಂತಹ ಕ್ಷಣ. ನಮ್ಮಪ್ಪ ಸತ್ತಿದ್ದನ್ನು ಅಳಿಸಿ ಅವರನ್ನು ವಾಪಸ್ ಕರೆದುಕೊಂಡು ಬಂದರೆ ಸಾಕು ನನಗೆ. ಅವರ ಸಾವನ್ನು ನನಗೆ ಮರೆಯಲು ಆಗುತ್ತಿಲ್ಲ ಎಂದು ಭಾವುಕರಾದರು.
ಈ ಮೂವತ್ತು ವರ್ಷಗಳಲ್ಲಿ, ಇನ್ನೂ ನಾನು ಏನೂ ಮಾಡಿಲ್ಲ ಎಂಬ ಅಸಂತೃಪ್ತಿ ನನ್ನನ್ನು ಕಾಡುತ್ತಿದೆ. ನಾನು ಮಾಡಿದ ಪ್ರಯೋಗಗಳಲ್ಲಿ ಸೋತಿದ್ದೀನಿ. ಹೊಸದನ್ನು ಕೊಡಲು ಪ್ರಯತ್ನಿಸುತ್ತಿದ್ದೇನೆ. ನನಗೆ ದುಡ್ಡಿ ಬೇಕಾಗಿರುವುದು ಕೇವಲ ಸಿನಿಮಾ ಮಾಡಲು ಅಷ್ಟೇ.
ಮಾಣಿಕ್ಯ ಹಾಗೂ ದೃಶ್ಯ ಚಿತ್ರಗಳಲ್ಲಿ ಎಲ್ಲೂ ರವಿಚಂದ್ರನ್ ಕಾಣಿಸಲ್ಲ. ಪ್ರೇಕ್ಷಕರಿಗೆ ಆ ಪಾತ್ರಗಳು ಮಾತ್ರ ಕಾಣಿಸುತ್ತವೆ ಎಂದು ರವಿ ಇತ್ತೀಚೆಗಿನ ತಮ್ಮ ಚಿತ್ರಗಳ ಬಗ್ಗೆ ಹೇಳಿದರು. ಕಾರ್ಯಕ್ರಮದ ಕೊನೆಗೆ ಮಾತನಾಡುತ್ತಾ, "ಬಹುಶಃ ಇಷ್ಟು ಎಮೋಷನಲ್ ಆಗಿ ರವಿ ಸಾರ್ ಅವರು ಎಲ್ಲೂ ಮಾತನಾಡಿಲ್ಲ. ಇದೇ ಮೊದಲ ಸಲ ಇರಬೇಕು" ಎಂದು ಸುದೀಪ್ ಅಭಿಪ್ರಾಯಪಟ್ಟರು.


Click it and Unblock the Notifications











