ಕಿರುತೆರೆಯಲ್ಲಿ ಮಿಂಚುತ್ತಿರುವ ಬೆಳ್ಳಿತೆರೆ ಕಲಾವಿದರು
ಕಿರುತೆರೆ ಕಲಾವಿದರೆಲ್ಲರಿಗೂ ಬೆಳ್ಳಿತೆರೆಯಲ್ಲಿ ಮಿಂಚುವುದೇ ಬಹುದೊಡ್ಡ ಕನಸಾಗಿರುತ್ತದೆ. ವಿಪರ್ಯಾಸ ಎನ್ನುವಂತೆ ಎಷ್ಟೋ ಕಲಾವಿದರು ಬೆಳ್ಳಿತೆರೆಯಲ್ಲಿ ದಶಕಗಳ ಕಾಲ ಮಿಂಚಿದರೂ ಕಿರುತೆರೆಯೇ ಅವರಿಗೆ ಹೆಚ್ಚಿನ ಖ್ಯಾತಿ ಹಾಗೂ ಜನ ಪ್ರೀತಿ ನೀಡಿರುವ ಹಲವಾರು ಉದಾಹರಣೆಗಳು ನಮ್ಮೆದುರುಗಿದೆ.
ಕನ್ನಡ ಚಿತ್ರರಂಗ ಕಂಡಿರುವ ಬಹಳ ಜನಪ್ರಿಯ ನಟಿ ಅನು ಪ್ರಭಾಕರ್ ಕಳೆದೆರಡು ದಶಕಗಳಿಂದಲೂ ಸ್ಯಾಂಡಲ್ ವುಡ್ ನಲ್ಲಿ ಹಲವಾರು ಸಿನಿಮಾಗಳಲ್ಲಿ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಇವರ 'ಜಮೀನ್ದಾರ್ರು', 'ತವರಿಗೆ ಬಾ ತಂಗಿ', 'ಸ್ನೇಹಲೋಕ', 'ಜಸ್ಟ್ ಮಾತ್ ಮಾತಲ್ಲಿ' ಮುಂತಾದ ಸಿನಿಮಾಗಳು ಜನಮನ ಗೆದ್ದಿವೆ. ಕನ್ನಡವಷ್ಟೇ ಅಲ್ಲದೆ ತಮಿಳು ಚಿತ್ರರಂಗದಲ್ಲಿಯೂ ಸಕ್ರಿಯವಾಗಿದ್ದ ನಟಿ ಅನು ಪ್ರಭಾಕರ್ ಹಲವು ತಮಿಳು ಸಿನಿಮಾಗಳಲ್ಲಿ ನಾಯಕ ನಟಿಯಾಗಿ ಕಾಣಿಸಿಕೊಂಡಿದ್ದಾರೆ. ರಘು ಮುಖರ್ಜಿಯವರನ್ನು ವರಿಸಿ ನಂದನ ಎಂಬ ಮುದ್ದಾದ ಮಗುವಿಗೆ ತಾಯಿಯಾದ ನಂತರ ಸಿನಿಮಾಗಳಿಂದ ದೂರವೇ ಉಳಿದಿರುವ ನಟಿ ಅನು ಪ್ರಭಾಕರ್ ಕಿರುತೆರೆಯಲ್ಲಿ ಹೆಚ್ಚು ಕಾಣಿಸಿಕೊಳ್ಳುತ್ತಿದ್ದಾರೆ.

ಹೌದು, ಇತ್ತೀಚೆಗೆ ಕಿರುತೆರೆಯಲ್ಲಿ ರಿಯಾಲಿಟಿ ಶೋಗಳ ಹಾವಳಿಯ ಹೆಚ್ಚಾಗಿದೆ. 'ನನ್ನಮ್ಮ ಸೂಪರ್ ಸ್ಟಾರ್', 'ಡ್ರಾಮಾ ಜೂನಿಯರ್' ಸೇರಿ ಗಂಟೆ ಹಲವು ರಿಯಾಲಿಟಿ ಶೋಗಳಲ್ಲಿ ನಟಿ ಅನುಪ್ರಭಾಕರ್ ಅವರು ಜಡ್ಜ್ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ. ಇವರ ಈ ರೀತಿಯ ಅಪಿಯರೆನ್ಸ್ ಕಿರುತೆರೆ ವೀಕ್ಷಕರಿಗಂತೂ ಬಹಳ ಸಂತಸ ನೀಡಿದೆ. ಒಂದು ರೀತಿಯಲ್ಲಿ ಬೆಳ್ಳಿತೆರೆಗಿಂತಲೂ ಕಿರುತೆರೆಯಲ್ಲಿ ಹೆಚ್ಚಿನ ಜನ ಪ್ರೀತಿ ಸಿಗುತ್ತಿದೆ ಎಂದರೆ ತಪ್ಪಾಗಲ್ಲ.
'ಪ್ರೇಮಲೋಕ' ಎಂದಾಕ್ಷಣ ಎಲ್ಲರ ಮನದಲ್ಲೂ ಮೂಡುವ ಮೊದಲ ಹೆಸರು ಕ್ರೇಜಿ ಸ್ಟಾರ್ ನಟ ರವಿಚಂದ್ರನ್. ಸ್ಯಾಂಡಲ್ವುಡ್ ಕಂಡ ರೊಮ್ಯಾಂಟಿಕ್ ಹೀರೋಗಳಲ್ಲಿ ನಟ ಕ್ರೇಜಿ ಸ್ಟಾರ್ ರವಿಚಂದ್ರನ್ ಕೂಡ ಒಬ್ಬರು. 'ಪ್ರೇಮಲೋಕ', 'ರಣಧೀರ', 'ಕ್ರೇಜಿಸ್ಟಾರ್', 'ಸಿಪಾಯಿ', 'ರಾಮಾಚಾರಿ', 'ಶಾಂತಿ ಕ್ರಾಂತಿ', 'ಮಲ್ಲಾ', 'ಅಂಜದಗಂಡು', 'ಪುಟ್ನಂಜ', 'ಓ ನನ್ನ ನಲ್ಲ' ಹೀಗೆ ರವಿಚಂದ್ರನ್ ಅವರ ಸಿನಿಮಾಗಳ ಪಟ್ಟಿ ಬಹಳ ದೊಡ್ಡದಿದೆ.
ರೊಮ್ಯಾಂಟಿಕ್ ಸ್ಟಾರ್ ಆಗಿ ಪಡ್ಡೆ ಹುಡುಗರ ಫೇವರಿಟ್ ನಟನಾಗಿರುವ ರವಿಚಂದ್ರನ್ ಅವರು ಇತ್ತೀಚೆಗೆ ಕಿರುತೆರೆಯಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಡ್ಯಾನ್ಸಿಂಗ್ ಸ್ಟಾರ್ ಸೀಸನ್ ಎರಡರಲ್ಲಿ ತೀರ್ಪುಗಾರರಾಗಿ ಕಾಣಿಸಿಕೊಂಡ ನಟ ರವಿಚಂದ್ರನ್ ಕಿರುತೆರೆ ಪ್ರೇಕ್ಷಕರಿಗೂ ಬಹಳ ಹತ್ತಿರವಾಗಿದ್ದಾರೆ. ಜೊತೆಗೆ 'ಡ್ರಾಮಾ ಜ್ಯೂನಿಯರ್ಸ್'ನ ತೀರ್ಪುಗಾರರಾಗಿಯೂ ಇವರು ಮಿಂಚಿದ್ದಾರೆ.

ನಟಿ ಲಕ್ಷ್ಮಿ ಕನ್ನಡ ಭಾಷೆ ಅಲ್ಲದೆ ತೆಲುಗು, ತಮಿಳು ಪ್ರೇಕ್ಷಕರಿಗೂ ಚಿರಪರಿಚಿತ. ವರನಟ ಡಾಕ್ಟರ್ ರಾಜಕುಮಾರ್ ವಿಷ್ಣುವರ್ಧನ್, ಅಂಬರೀಶ್ ಟೈಗರ್ ಪ್ರಭಾಕರ್, ಅನಂತ್ ನಾಗ್ ಸೇರಿದಂತೆ ಕನ್ನಡದ ಎಲ್ಲಾ ಪ್ರಮುಖ ನಟರೊಂದಿಗೆ ನಟಿಸಿರುವ ಖ್ಯಾತಿ ಹಿರಿಯ ಕಲಾವಿದೆ ನಟಿ ಲಕ್ಷ್ಮಿ ಅವರದ್ದು. 'ನಾ ನಿನ್ನ ಬಿಡಲಾರೆ', 'ರುದ್ರ', 'ಅವಳ ಹೆಜ್ಜೆ', 'ನಾ ನಿನ್ನ ಮರೆಯಲಾರೆ', 'ಜೂಲಿ', 'ಬಾಂಬೆ ದಾದಾ', 'ಒಲವು ಗೆಲುವು', 'ಸಿರಾಯಿ', 'ಗಾಳಿಮಾತು', 'ಚಂದದ ಗೊಂಬೆ', 'ಬೆಂಕಿಯ ಬಲೆ', 'ಸೌಭಾಗ್ಯ ಲಕ್ಷ್ಮಿ' ಹೀಗೆ ಇವರ ಕನ್ನಡ ಸಿನಿಮಾ ಲಿಸ್ಟ್ ಬಹಳ ದೊಡ್ಡದಿದೆ. ಅಷ್ಟೇ ಅಲ್ಲದೆ ತಮಿಳು ಮಲಯಾಳಂ ತೆಲುಗು ಹೀಗೆ ನಾನಾ ಭಾಷೆಗಳಲ್ಲಿ ನಟಿಸಿರುವ ಈ ಬಹುಭಾಷಾ ತಾರೆ ಇತ್ತೀಚೆಗಂತೂ ಕಿರುತೆರೆ ಪ್ರೇಕ್ಷಕರಿಗೆ ಬಹಳ ಹತ್ತಿರ. ಹೌದು ಡ್ರಾಮಾ ಜೂನಿಯರ್ಸ್ ರಿಯಾಲಿಟಿ ಶೋ ಮೂಲಕ ಕಿರುತೆರೆಯಲ್ಲಿ ಪಾಪ್ಯುಲರಿಟಿ ಗಳಿಸಿದರು ನಟಿ ಲಕ್ಷ್ಮಿ.
ಕಥೆಯಲ್ಲ ಜೀವನ ಎಂಬ ರಿಯಾಲಿಟಿ ಶೋ ಮೂಲಕ ಸಾಮಾನ್ಯ ಜನರಿಗೆ ಬಹಳ ಹತ್ತಿರವಾಗಿದ್ದರು. ಸಾಮಾನ್ಯ ಜನರ ಮನೆಮನ ಕಥೆಗಳನ್ನು ಕೇಳಿ ಅವರಿಗೆ ಸಾಂತ್ವನ ಹೇಳುವ ಈ ಕಾರ್ಯಕ್ರಮದ ರೂವಾರಿಯಾಗಿದ್ದ ನಟಿ ಲಕ್ಷ್ಮಿಗೆ ಕಿರುತೆರೆಯಲ್ಲಿ ಬಹಳಷ್ಟು ಪಾಪ್ಯುಲಾರಿಟಿ ಸಿಕ್ಕಿತ್ತು. ಅದಾದ ಮೇಲೆ 'ಡ್ರಾಮಾ ಜೂನಿಯರ್ಸ್', 'ನೀನಾ ನಾನಾ' ಹೀಗೆ ನಾನಾ ರಿಯಾಲಿಟಿ ಶೋ ಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವ ಈ ನಟಿ ಇಂದು ಕಿರುತರೆ ಪ್ರೇಕ್ಷಕರ ಫೇವರೆಟ್ ಹಿರಿಯ ಕಲಾವಿದರಲ್ಲಿ ಒಬ್ಬರು. ಕನ್ನಡ ಭಾಷೆ ಅಲ್ಲದೆ ತಮಿಳಿನ ವಿಜಯ್ ಟಿವಿ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ಕದೈ ಅಲ್ಲ ನಿಜಂ' ಎಂಬ ರಿಯಾಲಿಟಿ ಶೋ ಕೂಡ ಇವರಿಗೆ ಬಹಳಷ್ಟು ಹೆಸರು ತಂದುಕೊಟ್ಟಿದೆ.


Click it and Unblock the Notifications











