ಸುವರ್ಣ ಶೋನಲ್ಲಿ 'ಮಲ್ಲ' ರವಿಚಂದ್ರನ್, ಪ್ರಿಯಾಂಕಾ
ಕ್ರೇಜಿಸ್ಟಾರ್ ರವಿಚಂದ್ರನ್ ಕಿರುತೆರೆಯಲ್ಲಿ ಕಾಣಿಸಿಕೊಂಡಿದ್ದೇ ಅಪರೂಪ. ಅದರಲ್ಲೂ ಸೀರಿಯಲ್ ಗೆ ಸಂಬಂಧಿಸಿದ ಕಾರ್ಯಕ್ರಮಗಳಲ್ಲಿ ಅವರನ್ನು ನೋಡಿದ್ದೇ ವಿರಳ. ಅಂಥ ರವಿಚಂದ್ರನ್ ಕನ್ನಡ ಕಿರುತೆರೆಯ ಅತಿದೊಡ್ಡ ರಿಯಾಲಿಟಿ ಶೋ-ಸುವರ್ಣ ಸೂಪರ್ ಜೋಡಿಗೆ ಬಂದಿದ್ದರು! ಇದೇ ಜುಲೈ 27 ಹಾಗೂ 28ರ ಶನಿವಾರ ಭಾನುವಾರದಂದು ರಾತ್ರಿ 8 ಗಂಟೆಗೆ ಈ ಕಾರ್ಯಕ್ರಮ ಪ್ರಸಾರವಾಗಲಿದೆ.
ಹೌದು, ಅದೂ ರವಿಚಂದ್ರನ್ ಅವರು ನಟಿ ಪ್ರಿಯಾಂಕಾ ಜೊತೆಗೂಡಿ ಬಂದಿದ್ದರು. ಜೋಡಿಯಾಗಿ ವೇದಿಕೆ ಏರಿದ್ದರು. ಮಲ್ಲ ಚಿತ್ರದಲ್ಲಿ ಈ ಜೋಡಿ ಮಾಡಿದ ಮೋಡಿ ಇಂದಿಗೂ ಎಲ್ಲರ ಮನಸ್ಸಲ್ಲಿ ಅಚ್ಚಳಿಯದಂತೆ ಉಳಿದಿದೆ. ಅದೇ ಸಖತ್ ಜೋಡಿ ಈಗ ಸೂಪರ್ ಜೋಡಿ ವೇದಿಕೆಯಲ್ಲಿ ಮತ್ತೆ ಒಂದಾಗಿದೆ!

ಈ ನಡುವೆ ರವಿಚಂದ್ರನ್ ಆ ಹಾಡುಗಳ ಬಗ್ಗೆ, ಅದರ ಮೇಕಿಂಗ್ ಬಗ್ಗೆ ಸೂಪರ್ ಜೋಡಿಯ ಜಡ್ಜ್ ಗಳಾದ ಸಿಹಿಕಹಿ ಚಂದ್ರು ಹಾಗೂ ಸಿಹಿಕಹಿ ಗೀತಾ ಜೊತೆ ಅನುಭವ ಹಂಚಿಕೊಂಡರು. ಈ ಮಧ್ಯೆ ಸುವರ್ಣ ಸೂಪರ್ ಜೋಡಿಯ ಹೆಣ್ಣುಮಕ್ಕಳು ಬೇರೆ ಬೇರೆ ರೀತಿಯಲ್ಲಿ ಪ್ರಪೋಸ್ ಮಾಡಿದರು.
'ಆಕಾಶ ದೀಪ' ಖ್ಯಾತಿಯ ನಾಯಕಿ ದಿವ್ಯಾ ಶ್ರೀಧರನ್(ದೀಪಾ) 'ರಾಮಾಚಾರಿ'ಯ ಹಾಡಿಗೆ ಪರ್ಫಾರ್ಮೆನ್ಸ್ ಮಾಡುವಾಗ ಮೈಮರೆತ ಕ್ಷಣಗಳನ್ನು ರವಿಚಂದ್ರನ್ ನೋಡಿ, ಅಚ್ಚರಿಗೊಂಡರು. ಅದೇ ರೀತಿ 'ಅಮೃತವರ್ಷಿಣಿ'ಯ ಅಮೃತಾ ರವಿಚಂದ್ರನ್ ಅವರ ಮೇಲೆ ಕವನದ ಸಾಲುಗಳನ್ನು ಹೇಳಿ ಅವರನ್ನು ಇಂಪ್ರೆಸ್ ಮಾಡಿದರು.
ಈ ಸಂದರ್ಭದಲ್ಲಿ ರವಿಚಂದ್ರನ್ ಅವರು ತಮ್ಮ ವೃತ್ತಿಜೀವನದ ಬಗ್ಗೆ, ಮಂಜಿನ ಹನಿ ಸಿನಿಮಾ ಬಗ್ಗೆ, ತಮ್ಮ ಮುಂದಿನ ಚಿತ್ರ ಕ್ರೇಜಿಸ್ಟಾರ್ ಬಗ್ಗೆ ಒಂದಷ್ಟು ಕೌತುಕ ಸಂಗತಿಯನ್ನು ಬಿಚ್ಚಿಟ್ಟರು. ಕೊನೆಯಲ್ಲಿ ರವಿಚಂದ್ರನ್-ಪ್ರಿಯಾಂಕಾ ಸ್ಟೆಪ್ಸ್!
ಸಮಾರಂಭದ ಕೊನೆಯಲ್ಲಿ ಸುವರ್ಣ ವಾಹಿನಿಯ ಸೂಪರ್ ಜೋಡಿಗಳ ಜೊತೆ ರವಿಚಂದ್ರನ್ ಹಾಗೂ ಪ್ರಿಯಾಂಕಾ ಕ್ರೇಜಿಸ್ಟಾರ್ ಚಿತ್ರಕ್ಕೆ ಹೆಜ್ಜೆ ಹಾಕುವ ಮೂಲಕ ಸಮಾರಂಭಕ್ಕೆ ಇನ್ನಷ್ಟು ಕಳೆ ತಂದುಕೊಟ್ಟರು. ಒಟ್ಟಾರೆ ಇಡೀ ಎರಡು ಸಂಚಿಕೆ ರವಿಚಂದ್ರನ್ ಅವರ ಸಾಧನೆಗೆ ಮೀಸಲಾಗಿತ್ತು. ಸ್ವತಃ ರವಿಚಂದ್ರನ್ ಅವರೇ 'ಸುವರ್ಣ ಸೂಪರ್ ಜೋಡಿ'ಯನ್ನು ತುಂಬಾ ಇಷ್ಟಪಟ್ಟು ಮೆಚ್ಚುಗೆಯ ಮಾತುಗಳನ್ನಾಡಿದರು. (ಒನ್ಇಂಡಿಯಾ ಕನ್ನಡ)


Click it and Unblock the Notifications











