ಬಹುನಿರೀಕ್ಷಿತ 'ಸೀತಾ ರಾಮ' ಧಾರಾವಾಹಿ ಪ್ರಸಾರ ತಡವಾಗಲು ಕಾರಣ ಇದೇನಾ?
ಅಗ್ನಿಸಾಕ್ಷಿಯ ಸನ್ನಿಧಿ ಅನ್ನು ಮತ್ತೆ ಕಿರುತೆರೆಯಲ್ಲಿ ನೋಡಲು ಅಭಿಮಾನಿಗಳು ಬಯಸಿದ್ದಾರೆ. ವೈಷ್ಣವಿ ಗೌಡ 'ಸೀತಾ ರಾಮ' ಧಾರಾವಾಹಿಯಲ್ಲಿ ನಟಿಸುತ್ತಿದ್ದಾರೆ. ಆದರೆ, ಕಳೆದ ಆರು ತಿಂಗಳ ಹಿಂದೆಯೇ ಪ್ರೋಮೋ ಪ್ರಸಾರವಾಗಿದ್ದರೂ ಕೂಡ ಇನ್ನೂ ಧಾರಾವಾಹಿ ಪ್ರಸಾರದ ದಿನಾಂಕ ತಿಳಿಸಿಲ್ಲ. ಹೀಗಾಗಿ ಅಭಿಮಾನಿಗಳು ಕಾಯುತ್ತಲೇ ಇದ್ದಾರೆ. ಪ್ರೋಮೊ ಧಾರಾವಾಹಿಗೆ ಕಾಯುತ್ತಿದ್ದವರಿಗೆ ಪದೇ ಪದೇ ನಿರಾಸೆ ಆಗ್ತಿದೆ.
ಸುಮಾರು ವರ್ಷಗಳ ಹಿಂದೆ ಮೂಡಿ ಬಂದಿದ್ದ 'ಅಗ್ನಿಸಾ'ಕ್ಷಿ ಧಾರಾವಾಹಿಯಲ್ಲಿ ವೈಷ್ಣವಿ ಗೌಡ ಅವರು ಸನ್ನಿಧಿ ಪಾತ್ರವನ್ನು ನಿರ್ವಹಿಸಿದ್ದರು. ಸದ್ಯ 'ಸೀತಾ ರಾಮ' ಧಾರಾವಾಹಿಯಲ್ಲಿ ಅಭಿನಯಿಸುತ್ತಿದ್ದಾರೆ. ಕಳೆದ ಕೆಲ ತಿಂಗಳ ಹಿಂದೆ ಜೀ ಕನ್ನಡ ವಾಹಿನಿಯ ಸೋಶಿಯಲ್ ಮೀಡಿಯಾದ ಇನ್ ಸ್ಟಾಗ್ರಾಂ ಖಾತೆಯಲ್ಲಿ ಹೊಸ ಧಾರಾವಾಹಿಯ ಪ್ರೋಮೋವನ್ನು ಅಪ್ ಲೋಡ್ ಮಾಡಲಾಗಿತ್ತು. ಇದರಲ್ಲಿ ಮಂಗಳ ಗೌರಿ ಧಾರಾವಾಹಿ ಖ್ಯಾತಿ ಗಗನ್ ಚಿನ್ನಪ್ಪ, ವೈಷ್ಣವಿ ಗೌಡ ಹಾಗೂ ಡ್ರಾಮಾ ಜ್ಯೂನಿಯರ್ಸ್ ಖ್ಯಾತಿಯ ಪುಟಾಣಿ ರಿತೂ ಸಿಂಗ್ ಕಾಣಿಸಿಕೊಂಡಿದ್ದರು.

ಅತೀ ಶೀಘ್ರದಲ್ಲಿ 'ಸೀತಾ ರಾಮ' ಎಂದು ವಾಹಿನಿ ಹೇಳಿತ್ತು. ಆದರೆ, ಆರು ತಿಂಗಳಾದರೂ ಧಾರಾವಾಹಿ ಪ್ರಸಾರವನ್ನು ಕಂಡಿಲ್ಲ. ಇದರಿಂದ ಅಭಿಮಾನಿಗಳು ಬೇಸರಗೊಂಡಿದ್ದಾರೆ. ಅರೇ ಪ್ರೋಮೊ ರಿಲೀಸ್ ಆದಮೇಲೂ ಧಾರಾವಾಹಿ ಇನ್ನು ಯಾಕೆ ಪ್ರಸಾರವಾಗುತ್ತಿಲ್ಲ ಎಂದು ಕೆಲವರು ಗೊಂದಲಕ್ಕೀಡಾಗಿದ್ದಾರೆ.

ಧಾರಾವಾಹಿ ರೀ-ಶೂಟ್
'ಸೀತಾ ರಾಮ' ಧಾರಾವಾಹಿ ಇನ್ನೂ ಪ್ರಸಾರವಾಗದಿರುವುದಕ್ಕೆ ಏನು ಕಾರಣ ಎಂದು ಅಭಿಮಾನಿಗಳೂ ತಲೆ ಕೆಡಿಸಿಕೊಂಡಿದ್ದಾರೆ. ಧಾರಾವಾಹಿಯನ್ನು ರೀ-ಶೂಟ್ ಮಾಡಲಾಗುತ್ತಿದೆ. ಹಾಗಾಗಿಯೇ ಧಾರಾವಾಹಿಯ ಪ್ರಸಾರ ತಡವಾಗುತ್ತಿದೆ ಎಂದು ಹೇಳಲಾಗುತ್ತಿದೆ. ಪ್ರೋಮೋಗಳನ್ನು ಕೂಡ ಹೊಚ್ಚ ಹೊಸದಾಗಿ ಶೂಟ್ ಮಾಡಲಾಗುತ್ತಿದ್ದು, ಮುಂದಿನ ತಿಂಗಳು ಧಾರಾವಾಹಿ ಪ್ರಸಾರವಾಗಲಿದೆ ಎಂದು ಮೂಲಗಳು ಹೇಳುತ್ತಿವೆ. ಜುಲೈ ತಿಂಗಳಿನಲ್ಲಿ ಧಾರಾವಾಹಿ ಪ್ರಸಾರ ಆರಂಭಿಸುವ ನಿರೀಕ್ಷೆ ಇದೆ.
ಸ್ವಪ್ನಕೃಷ್ಣ ನಿರ್ದೇಶನದ ಧಾರಾವಾಹಿ
'ಸತ್ಯ' ಧಾರಾವಾಹಿಯ ನಿರ್ದೇಶಕಿ ಸ್ವಪ್ನಕೃಷ್ಣ ಅವರೇ 'ಸೀತಾ ರಾಮ' ಧಾರಾವಾಹಿ ನಿರ್ದೇಶನದ ಹೊಣೆಯನ್ನು ಹೊತ್ತಿದ್ದಾರೆ. ಆದರೆ, ಪ್ರಮೋ ನೋಡಿದ ದಿನದಿಂದ ವೀಕ್ಷಕರು ಧಾರಾವಾಹಿಯನ್ನು ನೋಡಲು ಕಾಯುತ್ತಿದ್ದಾರೆ. ಬಿಗ್ ಬಾಸ್ ಸೀಸನ್ -8 ರಲ್ಲಿ ಭಾಗವಹಿಸಿದ್ದ ವೈಷ್ಣವಿ ಗೌಡ ಅವರು ಕೆಲ ಚಿತ್ರಗಳಿಗೂ ಬಣ್ಣ ಹಚ್ಚಿದ್ದಾರೆ. ವೈಷ್ಣವಿ ಗೌಡ ಅವರು ಸೋಶಿಯಲ್ ಮೀಡಿಯಾದಲ್ಲಿ ಸಕತ್ ಆಕ್ಟೀವ್ ಆಗಿರುತ್ತಾರೆ. ವಿವಿಧ ರೀತಿಯಲ್ಲಿ ಡ್ರೆಸ್ ಮಾಡಿಕೊಂಡು ರೀಲ್ಸ್ ಮಾಡುತ್ತಿರುತ್ತಾರೆ. ಭರತನಾಟ್ಯ, ಕಥಕ್ ಡ್ಯಾನ್ಸ್ ಅನ್ನು ಮಾಡುತ್ತಿರುತ್ತಾರೆ. ತಮ್ಮದೇ ಯೂಟ್ಯೂಬ್ ಚಾನೆಲ್ನಲ್ಲೂ ಆಕ್ಟೀವ್ ಆಗಿರುತ್ತಾರೆ.
ಧಾರಾವಾಹಿ ನಟ-ನಟಿಯರು
ವೈಷ್ಣವಿ ಗೌಡ ಅವರ ನಟನೆಯ 'ಸೀತಾ ರಾಮ' ಧಾರಾವಾಹಿ ಜೀ ಕನ್ನಡದಲ್ಲಿ ಮೂಡಿ ಬರಲಿದೆ. ಇದರಲ್ಲಿ ಡ್ರಾಮಾ ಜೂನಿಯರ್ಸ್ ಖ್ಯಾತಿಯ ರಿತೂ ಸಿಂಗ್ ಕೂಡ ಅಭಿನಯಿಸಿದ್ದಾರೆ. ವೈಷ್ಣವಿ ಗೌಡ ಜೋಡಿಯಾಗಿ ನಟ ಗಗನ್ ಚಿನ್ನಪ್ಪ ಅವರು ಕಾಣಿಸಿಕೊಂಡಿದ್ದಾರೆ. ಇದು ಸೀತಾ ಹಾಗೂ ರಾಮನ ಪ್ರೇಮ ಕಥೆಯಾಗಿದೆ. ಆದರೆ, ಈಗ ಇದನ್ನು ರೀ-ಶೂಟ್ ಮಾಡುತ್ತಿರುವುದರಿಂದ ಪಾತ್ರಗಳು, ಕಥೆ ಬದಲಾಗುತ್ತಾ? ಅಥವಾ ಧಾರಾವಾಹಿಯ ಕಥೆಗೇ ಏನಾದರೂ ಟ್ವಿಸ್ಟ್ ಸಿಗುತ್ತಾ ಎನ್ನುವುದನ್ನು ನೋಡಬೇಕಿದೆ.
ಪ್ರೋಮೋ ನೋಡಿದ ಪ್ರೇಕ್ಷಕರು ಧಾರಾವಾಹಿಯನ್ನು ಬೇಗ ಪ್ರಸಾರ ಆರಂಭಿಸುವಂತೆ ಒತ್ತಾಯಿಸಿದ್ದಾರೆ. ಕೆಲವರಂತೂ ಪ್ರೈಮ್ ಟೈಂಗೆ ಧಾರಾವಾಹಿ ಪ್ರಸಾರವಾಗಲಿ ಎಂದು ಕೇಳುತ್ತಿದ್ದಾರೆ. ಹೊಸ ರೂಪದಲ್ಲಿ ಶೀಘ್ರದಲ್ಲೇ ಸೀತಾರಾಮರ ಕಥೆ ಶುರುವಾಗಲಿದೆ.


Click it and Unblock the Notifications











