Kaavya Shastry: "ನನ್ನನ್ನು ದುಡಿಸಿಕೊಳ್ಳುತ್ತಿದ್ದ ರೀತಿ ಬಗ್ಗೆ ತಕರಾರಿತ್ತು.. ಅದಕ್ಕೆ ಹೊರ ಬಂದೆ"
ಉದಯ ಟಿವಿಯಲ್ಲಿ 'ರಾಧಿಕಾ' ಧಾರಾವಾಹಿ ಕಳೆದ ಒಂದು ವರ್ಷದಿಂದ ಸೊಗಸಾಗಿ ಮೂಡಿ ಬರುತ್ತಿದೆ. ಧಾರಾವಾಹಿಯಲ್ಲಿ ನಟಿ ಕಾವ್ಯಾ ಶಾಸ್ತ್ರಿ ಅವರು ನಾಯಕಿ ಪಾತ್ರವನ್ನು ನಿಭಾಯಿಸುತ್ತಿದ್ದರು. ಆದರೆ, ಕಳೆದ ತಿಂಗಳು ಇದ್ದಕ್ಕಿದ್ದ ಹಾಗೆ ಧಾರಾವಾಹಿಯನ್ನು ತೊರೆದರು. ಈ ವಿಚಾರ ಕೆಲವರಿಗೆ ಅಚ್ಚರಿ ತಂದಿತ್ತು. ನಂತರ ಆ ಪಾತ್ರವನ್ನು ನಟಿ ತೇಜಸ್ವಿನಿ ಶೇಖರ್ ಅವರು ಮುಂದುವರೆಸಿದ್ದಾರೆ.
ಆದರೆ, ಕಾವ್ಯಾ ಶಾಸ್ತ್ರಿ ಅವರು ಧಾರಾವಾಹಿಯಿಂದ ಹೊರ ನಡೆದಿದ್ದಕ್ಕೆ ಕಾರಣ ಏನು ಎನ್ನುವ ಸಾಕಷ್ಟು ಪ್ರಶ್ನೆಗಳು ಮೂಡಿದ್ದವು. ಇದಕ್ಕೆ ಈಗ ಸ್ವತಃ ಆಕೆಯೇ ಸ್ಪಷ್ಟನೆಯನ್ನೂ ನೀಡಿದ್ದಾರೆ. ಉದಯ ಟಿವಿಯಲ್ಲಿ ಕಳೆದ ವರ್ಷ ರಾಧಿಕಾ ಸೀರಿಯಲ್ ಆರಂಭವಾಯ್ತು. ರಾಧಿಕಾ ಧಾರಾವಾಹಿಯಲ್ಲಿ ನಾಯಕಿ ಪಾತ್ರದಲ್ಲಿ ಕಾವ್ಯಾ ಶಾಸ್ತ್ರಿ ನಟಿಸುತ್ತಿದ್ದವರು, ಸಣ್ಣ ಸುಳಿವೂ ನೀಡದೇ ಸೀರಿಯಲ್ ತಂಡದಿಂದ ಹೊರ ನಡೆದು ಬಿಟ್ಟರು. ಇದರಿಂದ ಅಭಿಮಾನಿಗಳಿಗೆ ಶಾಕ್ ಆಗಿತ್ತು.

ಕಾವ್ಯಾ ಶಾಸ್ತ್ರಿಗಳು ಹಲವು ವರ್ಷಗಳಿಂದ ಕಿರುತೆರೆ ಲೋಕದಲ್ಲಿದ್ದಾರೆ. ಸಾಕಷ್ಟು ಧಾರಾವಾಹಿಗಳಿಗೆ ಬಣ್ಣ ಹಚ್ಚಿದವರು. 'ಶುಭ ವಿವಾಹ', 'ನಂದಿನಿ' ಸೇರಿದಂತೆ ಹಲವು ಧಾರಾವಾಹಿಗಳಲ್ಲಿ ನಟಿಸಿದ್ದಾರೆ. ತಮಿಳಿನ ಧಾರಾವಾಹಿಗಳಲ್ಲೂ ಮಿಂಚಿರುವ ಕಾವ್ಯಾ ಶಾಸ್ತ್ರಿ ಅವರು, ನಟನೆಗಷ್ಟೇ ಮೀಸಲಿರದೇ, ಹಲವು ಕಾರ್ಯಕ್ರಮಗಳನ್ನು ನಡೆಸಿಕೊಟ್ಟಿದ್ದಾರೆ.

ನಿರೂಪಣೆಗೈ ಸೈ ಎನ್ನುವ ಕಾವ್ಯಾ ಶಾಸ್ತ್ರಿ
'ಪುಟಾಣಿ ಪಂಟ್ರು' ಹಾಗೂ 'ಸ್ಟಾರ್ ಸಿಂಗರ್' ಸೇರಿದಂತೆ ಕೆಲ ಶೋಗಳನ್ನು ಹೋಸ್ಟ್ ಮಾಡಿದ್ದಾರೆ. ಜೊತೆಗೆ ಐಫಾ ಹಾಗೂ ಮಿರ್ಚಿ ಪ್ರಶಸ್ತಿ ಸಮಾರಂಭಗಳಿಗೆ ನಿರೂಪಣೆ ಮಾಡಿದ್ದಾರೆ. ಇತ್ತೀಚೆಗೆ 'ಮಂಗಳ' ಎಂಬ ಒಟಿಟಿಯ ವೆಬ್ ಸೀರೀಸ್ ಒಂದರಲ್ಲೂ ಕಾವ್ಯಾ ಶಾಸ್ತ್ರಿ ಬಣ್ಣ ಹಚ್ಚಿದ್ದರು. ನಿರೂಪಕಿಯಾಗಿ ಕನ್ನಡಿಗರಿಗೆ ಚಿರಪರಿಚಿತರಾಗಿರುವ ಕಾವ್ಯಾ ಶಾಸ್ತ್ರಿ, ಧಾರಾವಾಹಿಗಳಲ್ಲಿ ನಟಿಸಿದ ಪಾತ್ರಗಳ ಮೂಲಕವೂ ಹೆಸರು ಮಾಡಿದ್ದಾರೆ. ಇನ್ನು 'ಯುಗ', 'ಚೆಲುವೆಯೇ ನಿನ್ನ ನೋಡಲು' ಚಿತ್ರಗಳಲ್ಲೂ ಕಾವ್ಯಾ ಶಾಸ್ತ್ರಿ ನಟನೆಯನ್ನು ಮಾಡಿದ್ದಾರೆ. ಅಷ್ಟೇ ಅಲ್ಲದೇ, ಬಿಗ್ ಬಾಸ್ ಸೀಸನ್ 4ರಲ್ಲಿ ಸ್ಪರ್ಧಿಸಿದ್ದರು.
ಕಾವ್ಯಾ ಅವರ ನಡೆಯಿಂದ ಮೂಡಿದ ಪ್ರಶ್ನೆಗಳು
ಅದೆಕೋ ಬಹಳ ದೊಡ್ಡ ಗ್ಯಾಪ್ ಪಡೆದ ಮೇಲೆ ಕಾವ್ಯಾ ಶಾಸ್ತ್ರಿ ಅವರು ಪುನಃ 'ರಾಧಿಕಾ' ಧಾರಾವಾಹಿ ಮೂಲಕ ಕಮ್ ಬ್ಯಾಕ್ ಮಾಡಿದರು. ಧಾರಾವಾಹಿಯಲ್ಲಿ ಇಡೀ ಮನೆಯ ಜವಾಬ್ದಾರಿಯನ್ನು ನಿಭಾಯಿಸುವ ನಾಯಕಿಯ ಪಾತ್ರಕ್ಕೆ ಜೀವ ತುಂಬಿದ್ದರು. ಧಾರಾವಾಹಿಯೂ ಅದ್ಭುತವಾಗಿ ಮೂಡಿ ಬರುತ್ತಿದೆ. ಆದರೆ. ಕಳೆದ ತಿಂಗಳು ಧಾರಾವಾಹಿಯಿಂದ ಹೊರ ನಡೆದಿದ್ದರು. ಇದರಿಂದ ಅಭಿಮಾನಿಗಳು ಹಾಗೂ ಪ್ರೇಕ್ಷಕರು ಕಾವ್ಯಾ ಅವರನ್ನು ನೋಡದೇ ಬೇಸರಗೊಂಡಿದ್ದರು. ಧಾರಾವಾಹಿಯಿಂದ ಕಾವ್ಯಾ ಅವರು ಹಿಂದೆ ಸರಿದಿದ್ದಕ್ಕೆ ಸಾಕಷ್ಟು ಪ್ರಶ್ನೆಗಳು ಎದ್ದಿದ್ದವು. ಹೀಗಾಗಿ ಇದಕ್ಕೆ ಈಗ ಕಾವ್ಯಾ ಅವರೇ ಉತ್ತರ ನೀಡಿದ್ದಾರೆ.
ಕಾರಣ ಕೊಟ್ಟ ನಟಿ
ಕಾವ್ಯಾ ಶಾಸ್ತ್ರಿ ಅವರು ಇನ್ ಸ್ಟಾಗ್ರಾಂ ಪೇಜ್ನಲ್ಲಿ ಅಭಿಮಾನಿಗಳ ಪ್ರಶ್ನೆಗಳಿಗೆ ಉತ್ತರ ನೀಡಿದ್ದಾರೆ. "ಚಾನೆಲ್, ನನ್ನ ಹಾಗೂ ಪ್ರೊಡಕ್ಷನ್ ಹೌಸ್ ಎಲ್ಲರೂ ಸೇರಿ ತೆಗೆದುಕೊಂಡ ನಿರ್ಧಾರ. ನನಗೂ ಎಲ್ಲೋ ಒಂದು ಕಡೆ ನನ್ನನ್ನು ಪ್ರೊಡಕ್ಷನ್ ಹೌಸ್ ದುಡಿಸಿಕೊಳ್ಳುತ್ತಿದ್ದ ರೀತಿ ಬಗ್ಗೆ ಅಥವಾ ಆರ್ಟಿಸ್ಟ್ಗಳ ಮತ್ತು ಪ್ರೊಡಕ್ಷನ್ ಹೌಸ್ ಹಾಗೂ ಚಾನೆಲ್ ನಡುವೆ ಸಾಮರಸ್ಯದ ಬಗ್ಗೆ ಒಂದಷ್ಟು ತಕರಾರುಗಳಿದ್ದವು. ಇದೆಲ್ಲವೂ ಸೇರಿ ನನ್ನ ಪಾತ್ರ ಮುಗಿದಿದೆ."
20 ವರ್ಷದಿಂದ ನನ್ನನ್ನು ನೋಡುತ್ತಿದ್ದೀರಾ
"ರಾಧಿಕಾ ಪಾತ್ರವನ್ನು ನನಗಿಂತಲೂ ಇನ್ಯಾರೋ ಇನ್ನೂ ಸಮರ್ಥವಾಗಿ ನಿಭಾಯಿಸಬಲ್ಲರು ಎಂಬ ಅನಿಸಿಕೆ ನಮ್ಮೆಲ್ಲರಲ್ಲೂ ಮೂಡಿತು. ಹಾಗಾಗಿ ನಾನು ಧಾರಾವಾಯಿಂದ ಹೊರ ನಡೆಯಬೇಕಾಯ್ತು. ಇರಲಿ 20 ವರ್ಷದಿಂದ ನನ್ನನ್ನು ನೋಡುತ್ತಲೇ ಇದ್ದೀರಾ. ಇನ್ನೊಂದು ಪಾತ್ರದಲ್ಲಿ ನನ್ನನ್ನು ನೋಡುತ್ತೀರಾ ಎಂದು ವಿಡಿಯೋದಲ್ಲಿ ಹೇಳಿದ್ದಾರೆ.


Click it and Unblock the Notifications











