ಮಜಾಭಾರತಕ್ಕೆ ಬಂದ ಹೊಸ ನಿರೂಪಕಿ: ಭೂಮಿ ಶೆಟ್ಟಿ ಜಾಗಕ್ಕೆ ಆರ್ಜೆ ಎಂಟ್ರಿ
ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ಕಾಮಿಡಿ ಕಾರ್ಯಕ್ರಮ ಮಜಾ ಭಾರತಕ್ಕೆ ಹೊಸ ನಿರೂಪಕಿಯ ಆಗಮನವಾಗಿದೆ. ಇಷ್ಟು ದಿನ ಬಿಗ್ ಬಾಸ್ ಖ್ಯಾತಿಯ ಭೂಮಿ ಶೆಟ್ಟಿ ಹಾಗು ಹರೀಶ್ ರಾಜ್ ನಿರೂಪಣೆ ಮಾಡ್ತಿದ್ರು. ಇದ್ದಕ್ಕಿದ್ದಂತೆ ಭೂಮಿ ಶೆಟ್ಟಿ ಮಜಾಭಾರತದಿಂದ ಹಿಂದೆ ಸರಿದರು.
ಭೂಮಿ ಶೆಟ್ಟಿ ಜಾಗಕ್ಕೆ ಯಾರು ಬರಬಹುದು ಎಂಬ ಕುತೂಹಲ ಕಾಡ್ತಿತ್ತು. ಕೊನೆಗೂ ಮಜಾಭಾರತ ಶೋಗೆ ಹೊಸ ಸಾರಥಿ ಸಿಕ್ಕಿದ್ದಾರೆ. ಹೊಸ ಸಾರಥಿಯ ಪರಿಚಯ ಮಾಡಿಕೊಟ್ಟಿರುವ ಪ್ರೋಮೋವನ್ನು ಕಲರ್ಸ್ ಕನ್ನಡ ಸಾಮಾಜಿಕ ಜಾಲತಾಣದ ಅಧಿಕೃತ ಖಾತೆಯಲ್ಲಿ ಹಂಚಿಕೊಂಡಿದೆ. ಅಷ್ಟಕ್ಕೂ, ಭೂಮಿ ಶೆಟ್ಟಿ ಜಾಗಕ್ಕೆ ಬಂದ ಹೊಸ ನಿರೂಪಕಿ ಯಾರು? ಮುಂದೆ ಓದಿ...

ಮಜಾಭಾರತಕ್ಕೆ ಬಂದ ಆರ್ಜೆ ಸಿಂಧು
ಕಳೆದ ಹತ್ತು ವರ್ಷಗಳಿಂದ ರೇಡಿಯೋ ಜಾಕಿ ಆಗಿ ಕೆಲಸ ಮಾಡ್ತಿರುವ ಆರ್ಜೆ ಸಿಂಧು ಈಗ ಮಜಾಭಾರತಕ್ಕೆ ಹೊಸ ನಿರೂಪಕಿಯಾಗಿ ಎಂಟ್ರಿಯಾಗಿದ್ದಾರೆ. ಜನವರಿ 30 ರಂದು ಪ್ರಸಾರವಾಗಲಿರುವ ಮಜಾಭಾರತ ಶೋನಲ್ಲಿ ಆರ್ಜೆ ಸಿಂಧು ಹೋಸ್ಟ್ ಮಾಡಲಿದ್ದಾರೆ.

ಮಣಿರತ್ನಂ ಚಿತ್ರದಲ್ಲಿ ನಟನೆ
ತಮ್ಮ ಅದ್ಭುತ ಮಾತುಗಾರಿಕೆಯಿಂದ ಜನರ ಮನಸ್ಸು ಗೆದ್ದಿರುವ ಆರ್ಜೆ ಸಿಂಧು ಸಿನಿಮಾದಲ್ಲೂ ನಟಿಸಿದ್ದಾರೆ. ಮಣಿರತ್ನಂ ನಿರ್ದೇಶಿಸಿದ್ದ ಚೆಕ್ಕ ಚಿವಂತ ವಾನಂ ಚಿತ್ರದಲ್ಲಿ ಪ್ರಮುಖ ಪಾತ್ರವೊಂದನ್ನು ಮಾಡಿದ್ದಾರೆ. ಈ ಚಿತ್ರದಲ್ಲಿ ಪ್ರಕಾಶ್ ರಾಜ್, ಅದಿತಿ ರಾವ್ ಹೈದರಿ, ಅರವಿಂದ್ ಸ್ವಾಮಿ, ಸಿಂಬು, ಜ್ಯೋತಿಕಾ ನಟಿಸಿದ್ದರು.

ಭೂಮಿ ಶೆಟ್ಟಿ ಮಜಾಭಾರತ ಬಿಟ್ಟಿದ್ದು ಏಕೆ?
ಬಿಗ್ ಬಾಸ್ ಬಳಿಕ ಮಜಾಭಾರತ ಕಾರ್ಯಕ್ರಮಕ್ಕೆ ನಿರೂಪಕಿ ಆಗಿ ಆಯ್ಕೆಯಾಗಿದ್ದ ಭೂಮಿ ಶೆಟ್ಟಿ ಇದ್ದಕ್ಕಿದ್ದಂತೆ ಶೋನಿಂದ ಹೊರನಡೆದಿದ್ದಾರೆ. ಕಾಮಿಡಿ ಶೋ ಬಿಟ್ಟು ಹೋದ ನಟಿ ಈಗ ತೆಲುಗಿನ ಧಾರಾವಾಹಿಯಲ್ಲಿ ನಟಿಸುತ್ತಿದ್ದಾರೆ ಎನ್ನಲಾಗಿದೆ. ತೆಲುಗಿನ 'ಅತ್ತರಿಂಟ್ಲೋ ಅಕ್ಕ ಚೆಲ್ಲೆಲ್ಲು' ಧಾರಾವಾಹಿಯಲ್ಲಿ ನಟಿ ಚೈತ್ರಾ ರೈ ಪಾತ್ರದ ಬಿಟ್ಟುಹೋದ ಪಾತ್ರದಲ್ಲಿ ಭೂಮಿ ಶೆಟ್ಟಿ ನಟಿಸಲಿದ್ದಾರೆ ಎನ್ನಲಾಗುತ್ತಿದೆ.

ಕಿನ್ನರಿಯಲ್ಲಿ ನಟಿಸಿದ್ದ ಭೂಮಿ
ಅಂದ್ಹಾಗೆ, ಭೂಮಿ ಶೆಟ್ಟಿ ಅವರಿಗೆ ಕಿರುತೆರೆ ಲೋಕ ಹೊಸದೇನಲ್ಲ. ಈ ಮೊದಲು ಕನ್ನಡದ 'ಕಿನ್ನರಿ' ಧಾರಾವಾಹಿಯಲ್ಲಿ ನಟಿಸಿದ್ದರು. ನಂತರ ತೆಲುಗಿನಲ್ಲಿ 'ನಿನ್ನೆ ಪೆಳ್ಳಡತಾ' ಧಾರಾವಾಹಿಯ ಪ್ರಮುಖ ಪಾತ್ರದಲ್ಲಿ ಅಭಿನಯಿಸಿದ್ದರು. ಈ ನಡುವೆ ಬಿಗ್ ಬಾಸ್ ಅವಕಾಶ ಸಿಕ್ತು. ಆಗ ಧಾರಾವಾಹಿಯಿಂದ ಹೊರ ಬಂದಿದ್ದರು. ಇದೀಗ ಮತ್ತೆ ಕಿರುತೆರೆ ಕಡೆ ಮುಖ ಮಾಡಿದ್ದಾರೆ.


Click it and Unblock the Notifications