ವಿಚ್ಛೇದನ ಘೋಷಿಸಿದ ರಾಧಾ ರಮಣ ಖ್ಯಾತಿಯ ಅನುಷಾ ಹೆಗಡೆ ; 5 ವರ್ಷಕ್ಕೆ ಮುರಿದು ಬಿತ್ತು 5 ಗಂಟೆ ನಡೆದಿದ್ದ ಮದುವೆ
ಮದುವೆ ಒಂದು ಸಾಂಸ್ಥಿಕ ವ್ಯವಸ್ಥೆ ಎನ್ನುವ ಮಾತು ಹಿಂದೆ ಪ್ರಚಲಿತದಲ್ಲಿತ್ತು. ಆದರೆ ಈಗ ಬದಲಾದ ಸಾಮಾಜಿಕ.. ಆರ್ಥಿಕ.. ಶೈಕ್ಷಣಿಕ.. ವಿಚಾರಗಳು ಮದುವೆಯ ಪರಿಕಲ್ಪನೆ ಮತ್ತು ರೂಪುರೇಷೆಯನ್ನು ಬದಲಿಸಿವೆ. ಮದುವೆ ಈಗ ವ್ಯವಸ್ಥೆಯಾಗಿ ಉಳಿದಿಲ್ಲ. ಎರಡು ಮನಸುಗಳ ಬೆಸುಗೆಯಾಗದ ಮದುವೆ ಈಗ ಕೇವಲ ತೋರಿಕೆಯ ಸಂಪ್ರದಾಯವಾಗಿದೆ. ತೋರ್ಪಡಿಕೆಯ ಆಚರಣೆಯಾಗಿದೆ. ಬದಲಾದ ಈ ಕಾಲದಲ್ಲಿ ಹಲವರು ಸ್ವಾವಲಂಬಿಯಾಗುತ್ತಿದ್ದಾರೆ.
ಇವತ್ತು.. ಯಾರು.. ಯಾರ ಅಧೀನದಲ್ಲಿರಲು ಇಷ್ಟ ಪಡುವುದಿಲ್ಲ. ಹೆಣ್ಣಿಗಾಗಲಿ.. ಗಂಡಿಗಾಗಲಿ.. ಯಾರು ಯಾರಿಗೂ ಅನಿವಾರ್ಯವಲ್ಲ ಎಂಬ ಮನೋಭಾವ ಹೆಚ್ಚಾಗಿದೆ. ಮದುವೆ ಎಂಬ ವ್ಯವಸ್ಥೆ ನಶಿಸಿ ಹೋಗಲು ಇವೆಲ್ಲವೂ ಕಾರಣ ಎನ್ನುವ ಅಭಿಪ್ರಾಯ ಆಗಾಗ ವ್ಯಕ್ತವಾಗುತ್ತಲೆ ಇರುತ್ತದೆ.ಇದಕ್ಕೆ ಪೂರಕವಾಗಿ ಈಗೀಗ ವಿಚ್ಛೇದನದ ಪ್ರಕರಣಗಳು ಹೆಚ್ಚಾಗುತ್ತಲೇ ಇವೆ.

ಅದರಲ್ಲಿಯೂ ಬಣ್ಣದ ಲೋಕದಲ್ಲಿಯಂತೂ ಡಿವೋರ್ಸ್ ಎನ್ನುವುದು ಮಾಮೂಲಿಯಾಗಿದೆ. ಇದಕ್ಕೆ ಕೈಗನ್ನಡಿ ಎಂಬಂತೆ ಹಲವಾರು ಜನ ಇಲ್ಲಿಯವರೆಗೆ ವಿಚ್ಛೇದನ ಪಡೆದಿದ್ದಾರೆ. ಈ ವರ್ಷ ಕೂಡ ಈ ವಿಚ್ಚೇದನದ ಕಾರ್ಯಕ್ರಮ ಬಣ್ಣದ ಪ್ರಪಂಚದಲ್ಲಿ ಮುಂದುವರೆದಿದೆ. ವರ್ಷಾರಂಭದಲ್ಲಿಯೇ ಹಿಂದಿ ಕಿರುತೆರೆಯ ಚೆಲುವೆ ಮಹಿ ವಿಜ್ ಅವರ 15 ವರ್ಷದ ದಾಂಪತ್ಯ ಜೀವನ ಮುರಿದು ಬಿದ್ದಿದೆ. ಮಲಯಾಳಂನ ನಟ ಮನು ವರ್ಮಾ ಅವರ 25 ವರ್ಷದ ಸಾಂಸಾರಿಕ ಜೀವನ ಕೂಡ ಮುಕ್ತಾಯವಾಗಿದೆ. ಪಂಜಾಬಿ ನಟಿ ಮ್ಯಾಂಡಿ ಟಾಖರ್ ಅವರ ಸಾಂಸಾರಿಕ ಬದುಕು ಕೂಡ ಕೇವಲ ಎರಡೇ ವರ್ಷಕ್ಕೆ ಮುರಿದು ಬಿದ್ದಿದೆ. ಈ ಸಾಲಿಗೆ ಅನುಷಾ ಹೆಗಡೆ ಸೇರಿಕೊಂಡಿದ್ದಾರೆ.
ಹೌದು, ಅನುಷಾ ಹೆಗಡೆ.. ''ರಾಧಾ ರಮಣ'' ಧಾರಾವಾಹಿ ಮೂಲಕ ಕರುನಾಡಿನೆಲ್ಲೆಡೆ ಮನೆ ಮಾತಾದ ಚೆಲುವೆ. ಕೇವಲ ಕನ್ನಡ ಮಾತ್ರವಲ್ಲ ತೆಲುಗಿನಲ್ಲಿ ಕೂಡ ಬೇಡಿಕೆ ಹೊಂದಿರುವ ಅನುಷಾ ''ಸೂರ್ಯಕಾಂತಂ''.. ''ನಿನ್ನೆ ಪೆಳ್ಳಾಡತಾ''.. ಧಾರಾವಾಹಿಯಲ್ಲಿ ಕೂಡ ಹಿಂದೆ ಕಾಣಿಸಿಕೊಂಡಿದ್ದಾರೆ. ಸದ್ಯ ''ಅನುಪಲ್ಲವಿ'' ಧಾರಾವಾಹಿಯಲ್ಲಿ ಅನುಷಾ ಅಭಿನಯಿಸುತ್ತಿದ್ದಾರೆ.
ಇಂಥಾ ಅನುಷಾ ಹೆಗಡೆಗೆ ತೆಲುಗಿನ ''ನಿನ್ನೆ ಪೆಳ್ಳಾಡತಾ'' ಧಾರಾವಾಹಿ ಮಾಡುವ ಸಮಯದಲ್ಲಿ ತಮ್ಮ ಜೊತೆ ಅಭಿನಯಿಸುತ್ತಿದ್ದ ಪ್ರತಾಪ್ ಸಿಂಗ್ ಅವರ ಮೇಲೆ ಪ್ರೇಮಾಂಕುರವಾಗಿತ್ತು. ಆ ನಂತರ ನಮ್ಮದು ಲವ್ ಮ್ಯಾರೇಜ್ ಅಲ್ಲ. ಅರೆಂಜ್ ಮ್ಯಾರೇಜ್ ಎಂದು ಅನುಷಾ ಹೇಳಿದ್ದರಾದರೂ ಸದ್ಯ ಇವರ 5 ವರ್ಷಗಳ ದಾಂಪತ್ಯ ಜೀವನ ಅಧಿಕೃತವಾಗಿ ಅಂತ್ಯವಾಗಿದೆ.
ಈ ಕುರಿತು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿರುವ ಅನುಷಾ ಎಲ್ಲರಿಗೆ ಗೊತ್ತಿರುವಂತೆ 2023ರಿಂದಲೇ ನನ್ನ ಬದುಕಿನಲ್ಲಿ ಏರಿಳಿತಗಳು ಆರಂಭವಾಗಿದ್ದವು. 2025ರಲ್ಲಿ ನಾವು ಔಪಚಾರಿಕವಾಗಿ ಮತ್ತು ಕಾನೂನುಬದ್ಧವಾಗಿ ಬೇರ್ಪಟ್ಟಿದ್ದೇವೆ ಎಂದು ಹೇಳಿದ್ದಾರೆ. ನನ್ನ ಬದುಕಿನ ಈ ಅಧ್ಯಾಯ ಪರಸ್ಪರ ಗೌರವ ಮತ್ತು ತಿಳುವಳಿಕೆಯೊಂದಿಗೆ ಮುಕ್ತಾಯಗೊಂಡಿದೆ ಎಂದು ಹೇಳಿರುವ ಅನುಷಾ ಹೆಗಡೆ ನಾನು ಈಗ ನನ್ನ ವೃತ್ತಿ, ನನ್ನ ಕುಟುಂಬ ಮತ್ತು ವೈಯಕ್ತಿಕ ಬೆಳವಣಿಗೆಯ ಮೇಲೆ ಗಮನ ಹರಿಸುವ ಪ್ರಯತ್ನ ಮಾಡುವುದಾಗಿ ಹೇಳಿದ್ದಾರೆ. ಈ ಬಗ್ಗೆ ಹೆಚ್ಚಿನ ಚರ್ಚೆ ಅಥವಾ ಪ್ರಶ್ನೆಗಳನ್ನು ಮಾಡಬೇಡಿ ಎಂದು ಮನವಿಯನ್ನು ಕೂಡ ಮಾಡಿಕೊಂಡಿದ್ದಾರೆ.

ಅಂದ್ಹಾಗೇ ಫೆಬ್ರವರಿ 12-2020ರಂದು ಹೈದರಾಬಾದ್ನ ತಾರಮತಿ ಬಾರಾದಾರಿ ಅರಮನೆಯಲ್ಲಿ ಅನುಷಾ ಹೆಗಡೆ ಮತ್ತು ಪ್ರತಾಪ್ ಸಿಂಗ್ ಅವರ ಮದುವೆ ಅದ್ಧೂರಿಯಾಗಿ ನಡೆದಿತ್ತು. ಸತತ 5 ಗಂಟೆಗಳ ಕಾಲ ಮದುವೆ ಶಾಸ್ತ್ರ ನಡೆದಿತ್ತು. ಈ ಮದುವೆ ಹಲವರ ಹುಬ್ಬೇರಿಸಿತ್ತು.
ಹಿಂದೂ ಸಂಪ್ರದಾಯದಂತೆ ನಡೆದ ಈ ಮದುವೆ ಸಮಾರಂಭಕ್ಕೆ ಹಲವರು ಆಗಮಿಸಿದ್ದರು. ಹೊಸ ಬದುಕಿಗೆ ಇಬ್ಬರು ಮುನ್ನುಡಿ ಬರೆದಿದ್ದರು. ಆದರೆ ಮದುವೆಯಾದ 3 ವರ್ಷದಲ್ಲಿಯೇ 2023ರಲ್ಲಿ ಇವರ ದಾಂಪತ್ಯದಲ್ಲಿ ಬಿರುಕು ಮೂಡಿದೆ ಎನ್ನುವ ಮಾತು ಕೇಳಿ ಬರಲು ಶುರುವಾಗಿತ್ತು. ಈ ಅಂತೆ ಕಂತೆಗಳಿಗೆ ಈಗ ಅನುಷಾ ಬ್ರೇಕ್ ಹಾಕಿದ್ದಾರೆ. ತಮ್ಮ ಪತಿಯಿಂದ ದೂರವಾಗಿ ವಿಚ್ಛೇದನ ಪಡೆದ ಸುದ್ದಿಯನ್ನು ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.


Click it and Unblock the Notifications











