ಕನ್ನಡ ಕಿರುತೆರೆಯಲ್ಲಿ ಹೊಸ ಅಲೆಯನ್ನು ಸೃಷ್ಟಿಸಿದ ಕೆಲವು ನಿರ್ದೇಶಕರು ಇವರೇ ನೋಡಿ
ಕನ್ನಡ ಸಿನಿರಂಗದಲ್ಲಿ ಇರುವ ಜನಪ್ರಿಯ ನಿರ್ದೇಶಕರುಗಳ ಹೆಸರುಗಳು ಸಿನಿ ಪ್ರಿಯರಿಗೆ ತಿಳಿದೇ ಇದೆ. ಅದೇ ರೀತಿ ಕನ್ನಡ ಕಿರುತೆರೆಯಲ್ಲಿಯೂ ಕೆಲವು ನಿರ್ದೇಶಕರುಗಳಿದ್ದು, ತಮ್ಮ ನಿರ್ದೇಶನದ ಸಾಮರ್ಥ್ಯದಿಂದ ಗುರುತಿಸಿಕೊಂಡಿದ್ದಾರೆ.
ಕಿರುತೆರೆಯಲ್ಲಿ ನಟ-ನಟಿಯರಿಗಷ್ಟೇ ಅಲ್ಲ, ನಿರ್ದೇಶಕರೂ ಕೂಡ ಸ್ಟಾರ್ ಪಟ್ಟಕ್ಕೇರಿದ್ದಾರೆ. ಕೆಲವು ನಿರ್ದೇಶಕರಂತೂ ಕನ್ನಡ ಕಿರುತೆರೆಯ ದಿಕ್ಕನ್ನೇ ಬದಲಿಸಿದ್ದರು. ಹಾಗಿದ್ರೆ, ಕನ್ನಡ ಕಿರುತೆರೆಯಲ್ಲಿ ಹೊಸ ಅಲೆಯನ್ನು ಸೃಷ್ಟಿಸಿದ ನಿರ್ದೇಶಕರು ಯಾರು? ಅನ್ನೋದನ್ನು ನೋಡೋಣ.

ಎಸ್ ನಾರಾಯಣ್
ಚಲನ ಚಿತ್ರವಾಗಲಿ ಅಥವಾ ಧಾರಾವಾಹಿಯಾಗಲಿ.. ಒಂದು ಬಲವಾದ ಕಥೆಯನ್ನು ಹೇಳುವ ಮೂಲಕ ವೀಕ್ಷಕರ ಗಮನವನ್ನು ಹೇಗೆ ಸೆಳೆಯಬಹುದೆಂದು ಎಸ್. ನಾರಾಯಣ್ ಅವರಿಗೆ ತಿಳಿದಿದೆ. 'ಸುಮತಿ', 'ಭಾಗೀರಥಿ' ಮತ್ತು 'ಅಂಬಿಕಾ' ಮುಂತಾದ ಜನಪ್ರಿಯ ಧಾರಾವಾಹಿಗಳೊಂದಿಗೆ ಕನ್ನಡ ಟಿವಿಯಲ್ಲಿ ಅತ್ಯಂತ ಯಶಸ್ವಿ ನಿರ್ದೇಶಕರಲ್ಲಿ ಒಬ್ಬರಾಗಿ ಎಸ್ ನಾರಾಯಣ್ ಹೊರಹೊಮ್ಮಿದ್ದರು. ಸಿನಿಮಾದಲ್ಲಿ ಗೆದ್ದಂತೆ ಕಿರುತೆರೆಯಲ್ಲೂ ಜನ ಮನ್ನಣೆ ಗಳಿಸಿದ್ದಾರೆ.
ರವಿಕಿರಣ್
ಕನ್ನಡ ಕಿರುತೆರೆಗೆ ಖ್ಯಾತ ನಿರ್ದೇಶಕ ಮತ್ತು ನಟರಾಗಿರುವ ರವಿಕಿರಣ್ ಅವರ ಕೊಡುಗೆ ಗಮನಾರ್ಹವಾಗಿದೆ. ಸ್ವಲ್ಪ ಸಮಯದವರೆಗೆ ಜನಮನದಿಂದ ದೂರವಿದ್ದರೂ, ಧಾರಾವಾಹಿಗಳಾದ ಬದುಕು, ಶಕ್ತಿ ಮತ್ತು ಹಲವು ಕಾರ್ಯಕ್ರಮಗಳಿಂದ ಜನಪ್ರಿಯರಾಗಿದ್ದರು. ಬೇರೆ ಕಾರ್ಯಕ್ರಮಗಳ TRPನ್ನು ಹಿಂದಿಕ್ಕಿ ಹೊಸ ಭಾಷ್ಯ ಬರೆದಿದ್ದರು.
ಟಿಎನ್ ಸೀತಾರಾಮ್
ಟಿ ಎನ್ ಸೀತಾರಾಮ್ ಕನ್ನಡ ಕಿರುತೆರೆಯ ಸ್ಟಾರ್ ನಿರ್ದೇಶಕ. ಪ್ರೀತಿಯಿಂದ 'CSP' ಎಂದೇ ಕರೆಯುತ್ತಾರೆ. ಟಿಎನ್ಎಸ್ ನಿರ್ದೇಶನದಲ್ಲಿ ಮೂಡಿ ಬಂದ 'ಮಾಯಾಮೃಗ', 'ಮನ್ವಂತರ', 'ಮಗಳು ಜಾನಕಿ', 'ಮುಕ್ತ ಮುಕ್ತ'ದಂತಹ ಧಾರಾವಾಹಿಗಳು ವೀಕ್ಷಕರ ಮನಗೆದ್ದಿವೆ. ಮಧ್ಯಮ ವರ್ಗದ ಜೀವನವನ್ನು ಹೆಚ್ಚಾಗಿ ಪ್ರತಿಬಿಂಬಿಸುವ ಈ ಕಥೆಗಳು ಭಾವಪೂರ್ಣ ಶೀರ್ಷಿಕೆ ಗೀತೆಗಳನ್ನೂ ಹೊಂದಿರುವುದು ಇವರ ಧಾರಾವಾಹಿಗಳಲ್ಲಿನ ವಿಶೇಷತೆ. ಅಲ್ಲದೆ ಸಾಂಪ್ರದಾಯಿಕ ನ್ಯಾಯಾಲಯದ ದೃಶ್ಯಗಳು ಸೀತಾರಾಮ್ ಅವರ ಧಾರಾವಾಹಿಗಳಲ್ಲಿ ಸರ್ವೇ ಸಾಮಾನ್ಯವಾಗಿ ಕಂಡುಬರುವ ಮತ್ತೊಂದು ವಿಶೇಷತೆ.
ಸಿಹಿ ಕಹಿ ಚಂದ್ರು
'ಪಾಪ ಪಾಂಡು' ಮತ್ತು 'ಸಿಲ್ಲಿ ಲಲ್ಲಿ' ಕನ್ನಡ ಕಿರುತೆರೆಯ ನಿತ್ಯ ನೂತನ ಧಾರಾವಾಹಿಗಳಾಗಿದ್ದವು. ಸತತ ಯಶಸ್ಸಿನಿಂದಾಗಿ ಇವುಗಳು ಸೀಸನ್ 2 ನೊಂದಿಗೆ ಇತ್ತೀಚೆಗೆ ಪ್ರಸಾರ ಕಂಡಿದ್ದವು. ಸಿಹಿ ಕಹಿ ಚಂದ್ರು ನಿರ್ದೇಶನದಲ್ಲಿ ಈ ಎರಡು ಕಾಮಿಡಿ ಧಾರಾವಾಹಿಗಳು ಮನಗೆದ್ದಿದ್ದವು.

ವೈಶಾಲಿ ಕಾಸರವಳ್ಳಿ
ಕೆಲವೇ ಕೆಲವು ಕನ್ನಡ ನಿರ್ದೇಶಕಿಯರಲ್ಲಿ ವೈಶಾಲಿ ಕಾಸರವಳ್ಳಿ ಕೂಡ ಒಬ್ಬರು. 'ಮುತ್ತಿನ ತೋರಣ' ಮತ್ತು 'ಮೂಡಲ ಮನೆ'ಯಂತಹ ಅಪರೂಪದ ಧಾರಾವಾಹಿಗಳನ್ನು ವೈಶಾಲಿ ಕಾಸರವಳ್ಳಿ ನೀಡಿದ್ದರು. ಸಾಂಪ್ರದಾಯಿಕ ವೇಷಭೂಷಣ, ಪ್ರಾಚೀನ ಸ್ಥಳಗಳನ್ನು ಹೆಚ್ಚಾಗಿ ಒಳಗೊಂಡಿರುವುದು ಧಾರಾವಾಹಿಯ ಸುಂದರತೆಯನ್ನು ದುಪ್ಪಟ್ಟುಗೊಳಿಸಿದೆ. ಹಾಗೆಯೇ ಪಾತ್ರಗಳಲ್ಲಿ ಕಂಡು ಬರುವ ಉತ್ತರ ಕರ್ನಾಟಕದ ಅಧಿಕೃತ ಉಚ್ಚಾರಣೆಯಿಂದಾಗಿ ವೀಕ್ಷಕರ ಗಮನವನ್ನು ಇವರು ಮತ್ತಷ್ಟು ಸೆಳೆದಿದ್ದಾರೆ.
ಕೆ ಎಸ್ ರಾಮ್ ಜಿ
ರಾಮ್ಜಿ ಕನ್ನಡ ಕಿರುತೆರೆಯ ಇತ್ತೀಚಿನ ನಿರ್ದೇಶಕರಲ್ಲಿ ಒಬ್ಬರು. ಅವರು ತಮ್ಮ ಮೆಗಾ ಧಾರಾವಾಹಿ 'ಪುಟ್ಟ ಗೌರಿ ಮದುವೆ' ಮೂಲಕ ಖ್ಯಾತಿಯನ್ನು ಗಳಿಸಿದರು. ನಂತರ ಅದೇ ಧಾರಾವಾಹಿಯನ್ನು 'ಮಂಗಳಗೌರಿ ಮದುವೆ' ಎಂದು ಮರುನಾಮಕರಣಗೊಂಡು ಪ್ರಸಾರವಾಯಿತು. ಇದರೊಂದಿಗೆ 'ರಂಗನಾಯಕಿ', 'ನಾಗಿಣಿ 2' ಸೇರಿದಂತೆ ಹಲವು ಯಶಸ್ವಿ ಧಾರಾವಾಹಿಗಳ ನಿರ್ದೇಶಕರಾಗಿದ್ದಾರೆ ಕೆ ಎಸ್ ರಾಮ್ ಜಿ. ಪ್ರಸ್ತುತ ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ 'ಗೀತಾ' ಮತ್ತು ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ರಾಣಿ' ಧಾರಾವಾಹಿಯನ್ನು ನಿರ್ದೇಶಿಸುತ್ತಿದ್ದಾರೆ.


Click it and Unblock the Notifications











