ಎನ್ಟಿಆರ್ ಶೋನಲ್ಲಿ ಸಮಂತಾ ಅತಿಥಿ: 25 ಲಕ್ಷ ಗೆದ್ದ ನಟಿ
ದಾಂಪತ್ಯದಲ್ಲಿ ಸಮಸ್ಯೆ ಉಂಟಾಗಿ ಗಂಡನಿಂದ ದೂರವಾಗಿರುವ ಸಮಂತಾ, ಎಂದಿನಂತೆ ತಮ್ಮ ಜೀವನ ಮುಂದುವರಿಸುವ ಉತ್ಸಾಹದಲ್ಲಿದ್ದಾರೆ. ಸಮಂತಾ ಬಾಳು ಹೀಗಾಯಿತಲ್ಲ, ನಾಗಚೈತನ್ಯರಿಂದ ದೂರ ಆಗಬಾರದಿತ್ತು ಎಂದು ಸ್ಯಾಮ್ ಅಭಿಮಾನಿಗಳು ಬೇಸರದಲ್ಲಿ ಮುಳುಗಿದ್ದಾರೆ. ಆದರೆ ಸಿನಿಮಾ, ಫ್ಯಾಷನ್, ಹಾಗೂ ಇತರೆ ತಮ್ಮ ಕೆಲಸಗಳಲ್ಲಿ ತೊಡಗಿಕೊಂಡಿರುವ ಸಮಂತಾ 'ಐ ಯಾಮ್ ಫೈನ್' ಎಂಬ ಸಂದೇಶ ರವಾನಿಸಿದ್ದಾರೆ.
ನಟಿ ಸಮಂತಾ ಟಿವಿ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿ 25 ಲಕ್ಷ ರೂಪಾಯಿ ಹಣ ಗೆದ್ದುಕೊಂಡಿದ್ದಾರೆ ಎಂಬ ಸುದ್ದಿ ಹೊರಬಿದ್ದಿದೆ. ಜೂನಿಯರ್ ಎನ್ಟಿಆರ್ ನಿರೂಪಣೆ ಮಾಡುವ 'ಎವರು ಮೀಲೋ ಕೋಟೇಶ್ವರಡು' ಕಾರ್ಯಕ್ರಮದಲ್ಲಿ ಸಮಂತಾ ಸ್ಪರ್ಧಿಯಾಗಿ ಪಾಲ್ಗೊಂಡು 25 ಲಕ್ಷ ತನ್ನದಾಗಿಸಿಕೊಂಡಿದ್ದಾರೆ.
ಈ ಎಪಿಸೋಡ್ ಇತ್ತೀಚಿಗಷ್ಟೆ ರೆಕಾರ್ಡ್ ಆಗಿದ್ದು, ಯಾವಾಗ ಪ್ರಸಾರ ಮಾಡ್ತಾರೆ ಎನ್ನುವುದು ಸದ್ಯಕ್ಕೆ ಗೌಪ್ಯವಾಗಿದೆ. ನಾಗಚೈತನ್ಯರಿಂದ ದೂರ ಆಗಿರುವ ವಿಚಾರ ಪ್ರಕಟಿಸಿದ ನಂತರ ಸಮಂತಾ ಭಾಗವಹಿಸಿರುವ ಮೊದಲ ಟಿವಿ ಕಾರ್ಯಕ್ರಮ ಇದಾಗಿರುವುದರಿಂದ ಸಹಜವಾಗಿ ಕುತೂಹಲ ಹೆಚ್ಚಿಸಿದೆ.

ನಾಲ್ಕು ವರ್ಷದ ದಾಂಪತ್ಯಕ್ಕೆ ಬಿತ್ತು ಬ್ರೇಕ್
ಎಲ್ಲವೂ ಸರಿಯಾಗಿದ್ದಿದ್ದರೆ ಅಕ್ಟೋಬರ್ 7 ರಂದು ಸಮಂತಾ ಮತ್ತು ನಾಗಚೈತನ್ಯ ಜೋಡಿ ನಾಲ್ಕನೇ ವರ್ಷದ ವಿವಾಹ ವಾರ್ಷಿಕೋತ್ಸವ ಸಂಭ್ರಮಿಸುತ್ತಿದ್ದರು. ಆದರೆ, ಮದುವೆಯಾದ ದಿನ ಬರುವುದಕ್ಕೆ ಐದು ದಿನ ಮುಂಚಿತವಾಗಿ ಪರಸ್ಪರ ಇಬ್ಬರು ದೂರವಾದರು. 2017ರ ಅಕ್ಟೋಬರ್ 7 ರಂದು ನಟಿ ಸಮಂತಾ ಮತ್ತು ನಾಗಚೈತನ್ಯ ಮದುವೆಯಾಗಿದ್ದರು. ಹಿಂದೂ ಮತ್ತು ಕ್ರಿಶ್ಚಿಯನ್ ಸಂಪ್ರದಾಯದಂತೆ ವಿವಾಹವಾಗಿದ್ದರು. ಇದೀಗ, ನಾಲ್ಕು ವರ್ಷ ಪೂರೈಸಲು ಐದು ದಿನ ಬಾಕಿ ಉಳಿದಿರುವಂತೆ ದೂರ ದೂರವಾದರು.
ಬಹಳ ದಿನಗಳಿಂದಲೂ ನಾಗ್ ಮತ್ತು ಸ್ಯಾಮ್ ದಂಪತಿ ದೂರ ಆಗುವ ಬಗ್ಗೆ ಸುದ್ದಿಗಳು ಕೇಳಿ ಬರುತ್ತಿದ್ದವು. ಆದರೆ, ಯಾರೊಬ್ಬರು ಇವರು ದಾಂಪತ್ಯ ಕಲಹದ ಬಗ್ಗೆ ಸುಳಿವು ಸಹ ಕೊಟ್ಟಿರಲಿಲ್ಲ. ಕೊನೆಗೆ ಅಕ್ಟೋಬರ್ 2 ರಂದು ಸಮಂತಾ ಮತ್ತು ನಾಗಚೈತನ್ಯ ಇಬ್ಬರು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕುವ ಮೂಲಕ ಬೇರಾಗುತ್ತಿರುವುದನ್ನು ಸ್ಪಷ್ಟಪಡಿಸಿದರು.

"ಸಾಕಷ್ಟು ಆಲೋಚನೆ ಮಾಡಿದ ನಂತರ ನಾವಿಬ್ಬರು ಪತಿ-ಪತ್ನಿಯಾಗಿ ಬೇರೆಯಾಗಲು ನಿರ್ಧರಿಸಿದ್ದೇವೆ. ದಶಕಗಳ ಕಾಲ ಸ್ನೇಹಿತರಾಗಿ ಇದ್ದಿದ್ದಕ್ಕೆ ನಾವಿಬ್ಬರೂ ಅದೃಷ್ಟ ಮಾಡಿದ್ದೆವು. ಆ ಸ್ನೇಹವೇ ನಮ್ಮ ಸಂಬಂಧದ ಶಕ್ತಿಯಾಗಿತ್ತು. ಯಾವಾಗಲೂ ನಮ್ಮ ನಡುವೆ ವಿಶೇಷ ಬಂಧ ಇರಲಿದೆ ಎಂದು ನಂಬಿದ್ದೇವೆ. ಈ ಕಷ್ಟದ ಸಂದರ್ಭದಲ್ಲಿ ನಮಗೆ ಬೆಂಬಲ ನೀಡಿ ಅಂತ ಅಭಿಮಾನಿಗಳು, ಮಾಧ್ಯಮದವರು ಮತ್ತು ಹಿತೈಷಿಗಳಲ್ಲಿ ಮನವಿ ಮಾಡುತ್ತೇವೆ. ಜೀವನದಲ್ಲಿ ಮುಂದಕ್ಕೆ ಸಾಗಲು ನಮ್ಮ ಖಾಸಗಿತನಕ್ಕೆ ಅವಕಾಶ ಮಾಡಿಕೊಡಿ ಅಂತ ಕೇಳಿಕೊಳ್ಳುತ್ತೇವೆ" ಎಂದು ಇಬ್ಬರೂ ಪೋಸ್ಟ್ ಮಾಡಿದ್ದರು.


Click it and Unblock the Notifications











