ಶಿರಡಿ ಸಾಯಿಬಾಬಾ ಅವತಾರದಲ್ಲಿ ನೀನಾಸಂ ಅಶ್ವತ್ಥ್

ಸುವರ್ಣ ವಾಹಿನಿಯಲ್ಲಿ 'ರಾಘವೇಂದ್ರ ವೈಭವ' ಧಾರಾವಾಹಿ ಯಶಸ್ವಿಯಾಗಿ ಪ್ರದರ್ಶನ ಕಂಡಿದೆ. ಈ ಹಿನ್ನೆಲೆಯಲ್ಲಿ ವಾಹಿನಿ ಮತ್ತೊಂದು ಭಕ್ತಿ ಪ್ರಧಾನ ಧಾರಾವಾಹಿಯನ್ನು ಪ್ರಸಾರ ಮಾಡುತ್ತಿದೆ. 'ಸಮರ್ಥ ಸದ್ಗುರು' ಹೆಸರಿನ ಶಿರಡಿ ಸಾಯಿಬಾಬಾ ಅವರ ಚರಿತೆ ಪ್ರಸಾರವಾಗುತ್ತಿದೆ.
ಸಾಯಿಗೋಲ್ಡ್ ಪ್ಯಾಲೇಸ್ ನ ಶರವಣನ್ ನಿರ್ಮಿಸಿರುವ ಈ ಧಾರಾವಾಹಿಯನ್ನು ಬುಕ್ಕಾಪಟ್ಟಣ ವಾಸು ನಿರ್ದೇಶಿಸಿದ್ದಾರೆ. ಒಟ್ಟು 300 ಎಪಿಸೋಡುಗಳನ್ನು ನಿರ್ಮಿಸಿ ಮೆಗಾ ಧಾರಾವಾಹಿ ಮಾಡುವ ಬಯಕೆಯನ್ನು ಶರವಣನ್ ಹೊಂದಿದ್ದಾರೆ.
ಸೋಮವಾರದಿಂದ ಶುಕ್ರವಾರದ ತನಕ ಸಂಜೆ 5.30ಕ್ಕೆ ಧಾರಾವಾಹಿ ಪ್ರಸಾರವಾಗಲಿದೆ. ಪ್ರತಿದಿನ ಅರ್ಧಗಂಟೆ ಕಾಲ ಶಿರಡಿ ಸಾಯಿಬಾಬಾ ಅವರ ಜೀವನ, ಪವಾಡ ಹಾಗೂ ಮಹಿಮೆಗಳನ್ನು ವೀಕ್ಷಕರು ನೋಡಬಹುದು. 'ಸಬ್ ಕಾ ಮಾಲಿಕ್ ಏಕ್ ಹೈ' ಎಂದ ಶಿರಡಿ ಸಾಯಿಬಾಬಾ ಅವರು ಜಾತ್ಯಾತೀತ ಗುರು ಎಂಬುದರಲ್ಲಿ ಎರಡು ಮಾತಿಲ್ಲ.
ದೊಡ್ಡಬಿದರಿಕಲ್ಲು, ಕರ್ನಾಟಕದ ಸ್ಥಳಗಳು ಮತ್ತು ಮಹರಾಷ್ಟ್ರದ ಕೆಲವು ಭಾಗಗಳಲ್ಲಿ ಚಿತ್ರೀಕರಣ ನಡೆಸಲಾಗಿದೆ. ಧಾರಾವಾಹಿಯಲ್ಲಿ ಶಿರಡಿ ಸಾಯಿಬಾಬಾ ಪಾತ್ರವನ್ನು ನೀನಾಸಂ ಅಶ್ವತ್ಥ್ ಪೋಷಿಸಿದ್ದಾರೆ. ಉಳಿದ ಪಾತ್ರವರ್ಗದಲ್ಲಿ ಮಾಸ್ಟರ್ ಹಿರಣ್ಣಯ್ಯ, ಶ್ರೀನಿವಾಸಮೂರ್ತಿ, ಗಾಯಕ ರಾಜೇಶ್ ಕೃಷ್ಣನ್ ಮುಂತಾದವರಿದ್ದಾರೆ. (ಏಜೆನ್ಸೀಸ್)


Click it and Unblock the Notifications











