ಎಲ್ಲಾ ಧಾರಾವಾಹಿಗಳಲ್ಲಿ ಅದೇ ರಾಗ, ಅದೇ ಹಾಡು: ಪ್ರೇಕ್ಷಕರಿಗೆ ಬೇಸರ ತರದಿರಲಿ
ಶುರುವಿನಿಂದಲೂ ತನ್ನದೇ ಆದ ಸ್ಥಾನವನ್ನು ಕಾಪಾಡಿಕೊಂಡು ಬಂದಿರುವ 'ಶ್ರೀರಸ್ತು ಶುಭಮಸ್ತು' ಧಾರಾವಾಹಿ ಸದ್ಯ ಬಹಳ ಇಂಟರೆಸ್ಟಿಂಗ್ ಆಗಿ ಮೂಡಿ ಬರುತ್ತಿದೆ. ಸದ್ಯ ಧಾರಾವಾಹಿಯಲ್ಲಿ ತುಳಸಿ ಹಾಗೂ ಮಾಧವ್ ನಡುವಿನ ಸ್ನೇಹದ ಬಗ್ಗೆಯೇ ಚರ್ಚೆ ಆಗುತ್ತಿದೆ. ಎಲ್ಲರೂ ಈ ವಯಸ್ಸಿನಲ್ಲಿ ಇಬ್ಬರೂ ಹೀಗಿರಬಹುದೇ ಎಂದು ಪ್ರಶ್ನಿಸುತ್ತಿದ್ದಾರೆ.
ಮಾಧವ್ಗೆ ತುಳಸಿಯ ಮೇಲೆ ಪ್ರೀತಿ ಹುಟ್ಟಿದ್ದು, ಆಕೆಯನ್ನು ಬಾಳ ಸಂಗಾತಿಯನ್ನಾಗಿ ಪಡೆಯುವ ಆಸೆ ಇದೆ. ಜೊತೆಗೆ ಸ್ನೇಹವನ್ನು ಕಳೆದುಕೊಳ್ಳಬಾರದು ಎಂಬ ಕಾರಣಕ್ಕೆ ಸತ್ಯ ಮುಚ್ಚಿಟ್ಟಿದ್ದಾನೆ. ಆದರೆ, ಶಾರ್ವರಿ ಇಬ್ಬರ ಸಂಬಂಧದ ಬಗ್ಗೆ ಅಪಪ್ರಚಾರ ಮಾಡಿದ್ದು, ಈಗ ಇದು ಬಹಳ ದೊಡ್ಡ ವಿಷಯವಾಗಿದೆ. ದತ್ತ ತಾತ ಮಾಧವ್ನನ್ನು ಬಹಳ ಹತ್ತಿರದಿಂದ ಗಮನಿಸಿದ್ದು, ತುಳಸಿಗೆ ಒಳ್ಳೆಯ ಸಂಗಾತಿ ಎಂದು ಭಾವಿಸಿದ್ದಾನೆ.

ದತ್ತ ತಾತ ಈಗಾಗಲೇ ಈ ಬಗ್ಗೆ ಮಾಧವ್ ಬಳಿ ಮಾತನಾಡಿದ್ದು, ತುಳಸಿ ಬಳಿಯೂ ಮಾತನಾಡಲು ಮುಂದಾಗಿದ್ದಾನೆ. ಆದರೆ, ತುಳಸಿ ಮನಸ್ಸಿನಲ್ಲಿ ಮಾಧವ್ ಬಗ್ಗೆ ಎಳ್ಳಷ್ಟೂ ಸ್ನೇಹ ಬಿಟ್ಟು ಬೇರೆ ಯಾವ ಭಾವವೂ ಇಲ್ಲ. ಇನ್ನು ಇದು ಈ ಜೋಡಿಗಳ ಕಥೆಯಾದರೆ, ಇದರಲ್ಲಿ ಸಿರಿ-ಸಮರ್ಥ್, ಸಂಧ್ಯಾ-ಪ್ರಸಾದ್, ಅವಿನಾಶ್-ಪೂರ್ಣಿಮಾ, ದೀಪಿಕಾ-ಅಭಿಲಾಶ್, ಹೀಗೆ ಬೇರೆಯವರ ಕಥೆಯೂ ಇದೆ.

ಕಾಪಿಕ್ಯಾಟ್ ಆಗುತ್ತಿವೆ ಧಾರಾವಾಹಿಗಳು
ಪದೇ ಪದೇ 'ಶ್ರೀರಸ್ತು ಶುಭಮಸ್ತು' ಧಾರಾವಾಹಿಯ ಕೆಲ ಸೀಕ್ವೆನ್ಸ್ ಗಳು ಇತರೆ ಧಾರಾವಾಹಿಗಳಲ್ಲೂ ಮೂಡಿ ಬರುತ್ತಿದೆ. ಈ ಹಿಂದೆ ಸಿರಿ ಮೇಲಿನ ಸಿಟ್ಟಿಗೆ ದೀಪಿಕಾ ಒಡವೆ ಅಂಗಡಿಯಲ್ಲಿ ಓಲೆಯನ್ನು ಕದ್ದು, ಸಿರಿ ಬ್ಯಾಗ್ಗೆ ಹಾಕಿರುತ್ತಾಳೆ. ಇದರಿಂದ ಸಿರಿ ಅಂಗಡಿಯಲ್ಲಿ ಅವಮಾನ ಎದುರಿಸಬೇಕಾಗುತ್ತದೆ. ಇದೇ ಸೀಕ್ವೆನ್ಸ್ ಭಾಗ್ಯಲಕ್ಷ್ಮೀ ಧಾರಾವಾಹಿಯಲ್ಲೂ ಪ್ರಸಾರವಾಗುತ್ತದೆ. ಭಾಗ್ಯಳ ಬ್ಯಾಗ್ಗೆ ತಾಂಡವ್ ಬೇಕಂತಲೇ ಒಡವೆ ಕದ್ದು ಹಾಕುತ್ತಾನೆ. ಇದರಿಂದ ಭಾಗ್ಯ ಕೂಡ ತೊಂದರೆಗೆ ಒಳಗಾಗುತ್ತಾಳೆ.
ಅಮೃತಧಾರೆಯಲ್ಲೂ ಅದೇ ಸೀಕ್ವೆನ್ಸ್
ಇದೊಂದೇ ಅಲ್ಲದೇ, ಶ್ರೀರಸ್ತು ಶುಭಮಸ್ತು ಧಾರಾವಾಹಿಯಲ್ಲಿ ತುಳಸಿ ಹಾಗೂ ಮಾಧವ್ ಫೋಟೋ ಜೊತೆಗೆ ಲೇಖನವೊಂದು ಪೇಪರ್ನಲ್ಲಿ ಬಂದು ಎರಡೂ ಕುಟುಂಬದಲ್ಲಿ ಕೋಲಾಹಲವನ್ನು ಎಬ್ಬಿಸಿದೆ. ಇದೇ ಸೀಕ್ವೆನ್ಸ್ ಅಮೃತಧಾರೆ ಧಾರಾವಾಹಿಯಲ್ಲೂ ಪ್ರಸಾರವಾಗುತ್ತದೆ. ಆದರೆ, ಅಮೃತಧಾರೆ ಧಾರಾವಾಹಿಯಲ್ಲಿ ಪಾಸಿಟಿವ್ ಆಗಿ ರಿಫ್ಲೆಕ್ಟ್ ಆಗುತ್ತದೆ.
ಸತ್ಯ ಧಾರಾವಾಹಿಯಲ್ಲೂ ಅದೇ ರಾಗ
ಗೌತಮ್ ದಿವಾನ್ ಹಾಗೂ ಭೂಮಿಕಾ ಮದುವೆ ಇಷ್ಟವಿಲ್ಲದಿದ್ದರೂ ಪೇಪರ್ನಲ್ಲಿ ಸುದ್ದಿ ಬಂದ ಬಳಿಕ ಬೇರೆ ದಾರಿ ಕಾಣದೇ ಕುಟುಂಬಗಳ ಸಂತೋಷಕ್ಕಾಗಿ ಮದುವೆಗೆ ಒಪ್ಪಿಕೊಳ್ಳುತ್ತಾರೆ. ಆದರೆ, ತುಳಸಿ ಹಾಗೂ ಮಾಧವ್ ವಿಚಾರದಲ್ಲಿ ಹಾಗೆ ನಡೆದಿಲ್ಲ. ಇನ್ನು ಮತ್ತೊಂದು ಸೀಕ್ವೆನ್ಸ್ ಕೂಡ ನಡೆದಿದೆ. ಸಂಧ್ಯಾ ತವರು ಮನೆಯಿಂದ ಕದ್ದು ತಂದ ಹಣವನ್ನು ನಂದಿನಿಗೆ ಡಬಲ್ ಮಾಡಿಕೊಡಲು ನೀಡಿದ್ದಾಳೆ. ಅದೇ ರೀತಿ ಸತ್ಯ ಧಾರಾವಾಹಿಯಲ್ಲೂ ನಡೆದಿದೆ.
ಪ್ರೇಕ್ಷಕರ ಅಭಿಪ್ರಾಯವೇನು..?
ಹಣ ಪೀಕಲು ನಂದಿನಿ ಸಂಧ್ಯಾ ತಲೆ ಕೆಡಿಸಿ ಮೊದಲು ಮೂರು ಲಕ್ಷ ಹಣ ಪಡೆದು ಐವತ್ತು ಸಾವಿರ ಲಾಭ ಮಾಡಿಕೊಟ್ಟಿದ್ದಾಳೆ. ಎರಡನೇ ಬಾರಿಗೆ ಆರೂವರೆ ಲಕ್ಷವನ್ನು ಸಂಧ್ಯಾ, ನಂದಿನಿಯನ್ನು ನಂಬಿ ಕೊಟ್ಟಿದ್ದಾಳೆ. ಇದೇ ರೀತಿ 'ಸತ್ಯ' ಧಾರಾವಾಹಿಯಲ್ಲಿ ದುಡ್ಡು ಹೊಡೆಯಲು ಜಗನ್ನಾಥ ದಿವ್ಯಾ ಬಳಿ ಯಾವುದೋ ಚಿಟ್ ಫಂಡ್ ಹೆಸರೇಳಿ ಹಣ ಡಬಲ್ ಮಾಡಿಕೊಡುತ್ತೀನಿ ಎಂದು ಪಡೆದುಕೊಂಡಿರುವ ಜಗನ್ನಾಥ ಸದ್ಯ ಮೊದಲ ಬಾರಿಗೆ ಒಂದು ಲಕ್ಷವನ್ನು ಎರಡು ಲಕ್ಷ ಮಾಡಿಕೊಟ್ಟಿದ್ದಾನೆ. ನಂತರ, ಮೂರು ಲಕ್ಷವನ್ನು ಆರು ಲಕ್ಷ ಮಾಡಿಕೊಟ್ಟಿದ್ದಾನೆ. ಈ ಬಾರಿ ದಿವ್ಯಾ ಎಷ್ಟು ಇನ್ವೆಸ್ಟ್ ಮಾಡುತ್ತಾಳೋ ಗೊತ್ತಿಲ್ಲ.
ಕಥೆಗಳು ಅಲ್ಲೇ ಗಿರಿಕಿ ಹೊಡೀತಿವೆ
ಒಟ್ನಲ್ಲಿ ಶ್ರೀರಸ್ತು ಶುಭಮಸ್ತು ಧಾರಾವಾಹಿಯ ಕೆಲ ಸ್ವೀಕ್ವೆನ್ಸ್ ಗಳು ಬೇರೆ ಧಾರಾವಾಹಿಗಳಲ್ಲೂ ಮೂಡಿ ಬರುತ್ತಿದೆ. ಇದರ ಬದಲು ಬೇರೆ ಬೇರೆ ರೀತಿಯಲ್ಲಿ ಸನ್ನಿವೇಶಗಳನ್ನು ಹೆಣೆದರೆ ಚೆನ್ನಾಗಿರುತ್ತದೆ. ಎಲ್ಲಾ ಧಾರಾವಾಹಿಗಳನ್ನು ಕಾದು ವೀಕ್ಷಿಸುವವರಿಗೆ ಇದು ಕಿರಿಕಿರಿ ತರುತ್ತದೆ. ಪದೇ ಪದೇ ಅದೇ ಸನ್ನಿವೇಶಗಳ ಸುತ್ತಾ ಸುತ್ತುವುದು ಇಷ್ಟವಾಗುತ್ತಿಲ್ಲ. ಹೊಸ ಬಗೆಯಲ್ಲಿ ಕತೆ ಹೇಳಿದ್ದರೆ ಧಾರಾವಾಹಿಗಳ ತೂಕವೂ ಹೆಚ್ಚಾಗುತ್ತದೆ ಎಂಬುದು ಪ್ರೇಕ್ಷಕರ ಅಭಿಪ್ರಾಯ.


Click it and Unblock the Notifications











