ಅತಿಥಿ ಪಾತ್ರದ ಮೂಲಕ ನಟನೆಗೆ ಮರಳಿದ ಸನಾತನಿ
ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ "ಯಜಮಾನಿ" ಧಾರಾವಾಹಿಯಲ್ಲಿ ನಾಯಕಿ ಪುಣ್ಯ ಆಗಿ ಅಭಿನಯಿಸಿದ್ದ ಸನಾತನಿ ಮುಂದೆ ನಿರೂಪಕಿಯಾಗಿ ಮೋಡಿ ಮಾಡಿದರು. ಸಿರಿ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ "ಸಿರಿ ಭೋಜನ" ಕಾರ್ಯಕ್ರಮದ ನಿರೂಪಕಿಯಾಗಿ ಕಾಣಿಸಿಕೊಳ್ಳುವ ಮೂಲಕ ವೀಕ್ಷಕರನ್ನು ರಂಜಿಸಿದ್ದರು.
ಸನಾತನಿ ಈಗ ಮತ್ತೆ ನಟನೆಯ ಮೂಲಕ ಸದ್ದು ಮಾಡಲಿದ್ದಾರೆ. ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ "ಜೇನುಗೂಡು" ಧಾರಾವಾಹಿಯಲ್ಲಿ ಅವನಿ ಪಾತ್ರಕ್ಕೆ ಜೀವ ತುಂಬುವ ಮೂಲಕ ಮತ್ತೆ ಬಣ್ಣದ ಲೋಕದಲ್ಲಿ ಮಿಂಚಲಿದ್ದಾರೆ ಸನಾತನಿ.
ರೇಣುಕಾಶರ್ಮ ಅವರ "ಈಶ್ವರ ಅಲ್ಲಾ ನೀನೇ ಎಲ್ಲಾ" ಧಾರಾವಾಹಿಯ ದೇವಿಯಾಗಿ ಕಿರುತೆರೆಗೆ ಪಾದಾರ್ಪಣೆ ಮಾಡಿದ ಸನಾತನಿ ನಂತರ ಟಿ.ಎಸ್ ರಂಗ ಅವರ "ಮೌನ ಕ್ರಾಂತಿ" ಧಾರಾವಾಹಿಯಲ್ಲಿ ನಾಯಕಿಯಾಗಿ ನಟಿಸಿದ್ದರು.

ದೇವಿಯಾಗಿ ಕಿರುತೆರೆ ಪಯಣ
'ಸಂಗೊಳ್ಳಿ ರಾಯಣ್ಣ' ಧಾರಾವಾಹಿಯಲ್ಲಿ ರಾಯಣ್ಣನ ಸೊಸೆಯ ಪಾತ್ರಕ್ಕೆ ಜೀವ ತುಂಬಿದ ಸನಾತನಿ ಪೌರಾಣಿಕ ಧಾರಾವಾಹಿ 'ಶಿವಲೀಲಾಮೃತ'ದಲ್ಲಿ ಲಕ್ಷ್ಮಿಯಾಗಿ ಕಾಣಿಸಿಕೊಂಡರು. ತದ ನಂತರ ಮಹೇಶ್ ಸಾರಂಗ್ ನಿರ್ದೇಶನದ 'ಇದ್ದರೆ ಇರಬೇಕು ನಿನ್ನಂಗ' ಎನ್ನುವ ಉತ್ತರ ಕರ್ನಾಟಕದ ಭಾಷೆಯ ಧಾರಾವಾಹಿಯಲ್ಲಿ ಬಣ್ಣ ಹಚ್ಚಿದರು.

ಹಿರಿತೆರೆಯಲ್ಲಿಯೂ ಮೋಡಿ
ರಮೇಶ್ ಅರವಿಂದ್ ನಿರ್ದೇಶನದ 'ಕ್ರೇಜಿ ಕುಟುಂಬ' ಸಿನಿಮಾದಲ್ಲಿ ನಾಯಕಿಯಾಗಿ ಅಭಿನಯಿಸುವ ಮೂಲಕ ಹಿರಿತೆರೆಗೆ ಪಾದಾರ್ಪಣೆ ಮಾಡಿದ ಸನಾತನಿ ಮುಂದೆ 'ಮೂರು ಕಾಸಿನ ಕುದುರೆ' ಸಿನಿಮಾದಲ್ಲಿ ಬಣ್ಣ ಹಚ್ಚಿದ ಸನಾತನಿ ನಿರೂಪಕಿಯಾಗಿಯೂ ಬೆಡಗಿ ಗಮನ ಸೆಳೆದಿದ್ದಾರೆ.

ನಿರೂಪಣೆಗೂ ಸೈ ಸನಾತನಿ
'ಒಗ್ಗರಣೆ ಡಬ್ಬಿ' ಕಾರ್ಯಕ್ರಮದ ನಿರೂಪಕಿಯಾಗಿ ಕಿರುತೆರೆಯಲ್ಲಿ ಮೋಡಿ ಮಾಡಿದ ಸನಾತನಿ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ಕಿಚನ್ ದರ್ಬಾರ್' ಕಾರ್ಯಕ್ರಮದ ನಿರೂಪಕಿಯಾಗಿ ಸೈ ಎನಿಸಿಕೊಂಡರು. ನಂತರ ಸಿರಿಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ಸಿರಿ ಭೋಜನ'ದ ನಿರೂಪಕಿಯಾಗಿ ಕಾಣಿಸಿಕೊಂಡಿದ್ದ ಸನಾತನಿ ಸಣ್ಣ ಬ್ರೇಕ್ನ ನಂತರ 'ಜೇನುಗೂಡು' ಧಾರಾವಾಹಿಯ ಅವನಿಯಾಗಿ ಕಿರುತೆರೆಗೆ ಮರಳಲಿದ್ದಾರೆ. ಇದರಲ್ಲಿಯೂ ಅವರು ಉತ್ತರ ಕನ್ನಡ ಸೊಬಗಿನ ಭಾಷೆಯ ಮೂಲಕ ವೀಕ್ಷಕರ ಮನ ಸೆಳೆಯಲಿದ್ದಾರೆ.


Click it and Unblock the Notifications











