ದರ್ಶನ್ಗೆ ಮಾದರಿಯಾದ ಸಂಜು ಬಸಯ್ಯ, ಅಶ್ಲೀಲ ಮೆಸೇಜ್ ಕಳಿಸಿದ ಪಿಯುಸಿ ವಿದ್ಯಾರ್ಥಿಗೆ ಕಾಮಿಡಿ ಕಿಲಾಡಿ ಮಾಡಿದ್ದೇನು ?
ಫೇಸ್ ಬುಕ್ .. ಇನ್ಸ್ಟಾಗ್ರಾಮ್ .. ಎಕ್ಸ್ ..ಹೀಗೆ ಮುಂತಾದ ಸಾಮಾಜಿಕ ಜಾಲತಾಣಗಳಲ್ಲಿ ಬಹುತೇಕರು ಕಳೆದು ಹೋಗಿದ್ದಾರೆ. ಇದೇ ಹೊತ್ತಿನಲ್ಲಿ ಇಲ್ಲಿ ವಿಕೃತಿಗಳೂ ಹೆಚ್ಚಿಕೊಂಡಿವೆ. ಇಂಥವುಗಳಿಂದ ಮಾನಸಿಕ ನೆಮ್ಮದಿ ಕಳೆದುಕೊಂಡಿದ್ದು ಮಾತ್ರ ಹೆಣ್ಣುಮಕ್ಕಳು, ಮಹಿಳೆಯರು. ಹೆಸರೇ ಗೊತ್ತಾಗದಂತೆ ಹೆಂಗಳೆಯರಿಗೆ ಅಶ್ಲೀಲವಾದ ಸಂದೇಶಗಳನ್ನು ಕಳಿಸೋದು, ಕಿರುಕುಳ ಕೊಡುವುದನ್ನೇ ವೃತ್ತಿಯನ್ನಾಗಿಸಿ ಸಾಕಷ್ಟು ಸ್ತ್ರೀಯರ ಬಾಳಿಗೆ ಅನೇಕರು ಕಗ್ಗಂಟಾಗಿದ್ದಾರೆ.
ದುರಂತ ಅಂದರೆ ಈಗೀಗ ಇನ್ನೂ ಶಾಲೆಯಲ್ಲಿ ಓದುತ್ತಿರುವ, ಕಾಲೇಜಿನ ಮೆಟ್ಟಿಲನ್ನೇರಿರುವ ವಿದ್ಯಾರ್ಥಿಗಳು ಕೂಡ ಈ ಸೋಶಿಯಲ್ ಮೀಡಿಯಾ ಮೂಲಕ ಅನೇಕ ಮಹಿಳೆಯರ.. ಯುವತಿಯರ.. ಬದುಕಿನಲ್ಲಿ ಖಳನಾಯಕರಾಗುತ್ತಿದ್ದಾರೆ. ಓದಿನ ಕಡೆ ಗಮನ ಕೊಡದೇ ಹೊಲಸು ಸಂದೇಶಗಳನ್ನು ಕಳುಹಿಸುತ್ತಿದ್ದಾರೆ. ಇದಕ್ಕೆ ಸಂಜು ಬಸಯ್ಯ ಅವರ ಪತ್ನಿಗೆ ಬಂದ ಮೆಸೇಜ್ಗಳು ಸದ್ಯದ ಕೈಗನ್ನಡಿ.

ಹೌದು .. ಸಂಜು ಬಸಯ್ಯ .. ಜೀ ಕನ್ನಡ ವಾಹಿನಿಯ ''ಕಾಮಿಡಿ ಕಿಲಾಡಿ''ಗಳು ಕಾರ್ಯಕ್ರಮದ ಮೂಲಕ ಕರುನಾಡಿನ ಮನ ಗೆದ್ದ ನಟ. ಮೂಲತಃ ಬೈಲಹೊಂಗಲದವರಾದ ಸಂಜು ಬಸಯ್ಯ ಕಾಮಿಡಿ ಕಿಲಾಡಿಗಳು ನಂತರ ಜೋಡಿ ನಂಬರ್ 1ನ ಸೀಸನ್ 2ದಲ್ಲಿ ಕೂಡ ಕಾಣಿಸಿಕೊಂಡಿದ್ದರು. ಇನ್ನು ಉತ್ತರ ಕರ್ನಾಟಕದಲ್ಲಿ ನಡೆಯುವ ಜಾತ್ರೆಗಳಲ್ಲಿ ಅನೇಕ ಕಾರ್ಯಕ್ರಮಗಳಲ್ಲಿ ಸಂಜು ಬಸಯ್ಯ ಕಾಣಿಸಿಕೊಳ್ಳುತ್ತಾರೆ. ಯೂಟ್ಯೂಬ್ನಲ್ಲಿ ಕೂಡ ಇವ್ರದ್ದೇ ಹವಾ ಇದೆ.
ಇಂಥಾ ಸಂಜು ಬಸಯ್ಯ ಅವರ ಪತ್ನಿ ಪಲ್ಲವಿ ಬಳ್ಳಾರಿ ಅವರಿಗೆ ವಿಜಯನಗರ ಮೂಲದ ಪಿಯುಸಿ ವಿದ್ಯಾರ್ಥಿ ಇನ್ಸ್ಟಾಗ್ರಾಮ್ ನಲ್ಲಿ ಇತ್ತೀಚೆಗೆ ಕಾಡಲು ಶುರು ಮಾಡಿದ್ದ. ಇನ್ಸ್ಟಾ ಮೂಲಕ ಅಶ್ಲೀಲ ಸಂದೇಶ ಕಳುಹಿಸುತ್ತಿದ್ದ. ಅಶ್ಲೀಲ ಫೋಟೊವನ್ನು ಕೂಡ ಹಂಚಿಕೊಳ್ಳುತ್ತಿದ್ದ.
ಆದರೆ.. ಇದರಿಂದ 'ದರ್ಶನ್' ಅವರಂತೆಯೇ ಸಂಜು ಬಸಯ್ಯ ತಾಳ್ಮೆ ಕಳೆದುಕೊಂಡಿಲ್ಲ. ಕಾನೂನು ತಮ್ಮ ಕೈಗೆ ತೆಗೆದುಕೊಂಡಿಲ್ಲ. ಬದಲಿಗೆ ಬೈಲಹೊಂಗಲ ಪೊಲೀಸ್ ಠಾಣೆಗೆ ಸಂಜು ಬಸಯ್ಯ ದೂರು ನೀಡಿದ್ದರು. ಸಂಜು ಬಸಯ್ಯ ನೀಡಿದ ದೂರನ್ನು ದಾಖಲಿಸಿಕೊಂಡ ಪೊಲೀಸರು ವಿದ್ಯಾರ್ಥಿಯನ್ನು ಕರೆಸಿ ಬುದ್ದಿ ಹೇಳಿದ್ದಾರೆ.
ಸಂಜು ಬಸಯ್ಯ ಕೂಡ ತಮ್ಮ ಪತ್ನಿಗೆ ಅಶ್ಲೀಲ ಮೆಸೇಜ್ ಕಳುಹಿಸುತ್ತಿದ್ದ ವಿದ್ಯಾರ್ಥಿಗೆ ಬುದ್ದಿವಾದವನ್ನು ಹೇಳಿದ್ದು ವಿದ್ಯಾರ್ಥಿಯ ಭವಿಷ್ಯವನ್ನು ಗಮನದಲ್ಲಿಟ್ಟುಕೊಂಡು ದೂರು ವಾಪಸು ಪಡೆದಿದ್ದಾರೆ. ನಿನ್ನ ನಡವಳಿಕೆಯಿಂದ ನಿಮ್ಮ ಅಪ್ಪ ಅಮ್ಮನಿಗೆ ನಾಚಿಕೆ ಆಗುತ್ತದೆ. ಸಾಮಾಜಿಕ ಜಾಲತಾಣವೇ ಜೀವನವಲ್ಲ. ಮುಂದಿನ ದಿನಗಳಲ್ಲಿ ಇಂತಹ ಕೃತ್ಯವನ್ನು ಮಾಡಬೇಡ ಎಂದು ಬುದ್ಧಿವಾದವನ್ನು ಕೂಡ ವಿದ್ಯಾರ್ಥಿಗೆ ಹೇಳಿ ಕಳುಹಿಸಿದ್ದಾರೆ.

ಇನ್ನು ಇದೇ ವಿಚಾರಕ್ಕೆ ಸಂಬಂಧಿಸಿದಂತೆ ವಿದ್ಯಾರ್ಥಿಯನ್ನು ಪಕ್ಕ ನಿಲ್ಲಿಸಿಕೊಂಡು ವಿಡಿಯೋ ಕೂಡ ಮಾಡಿರುವ ಸಂಜು ಬಸಯ್ಯ, ನಾವು ತಲೆ ಕೆಡಿಸಿಕೊಳ್ಳುವುದಿಲ್ಲ ಎಂದು ಅಂದುಕೊಂಡು ಕೆಟ್ಟ ಕೆಟ್ಟ ಕಾಮೆಂಟ್ಗಳನ್ನು ಮಾಡಲು ಶುರು ಮಾಡಿದರೆ, ವ್ಯೆಯಕ್ತಿಕವಾಗಿ ಅಶ್ಲೀಲವಾಗಿ ನಿಂದಿಸಿದರೆ ಮುಂದಿನ ದಿನಗಳಲ್ಲಿ ಸುಮ್ಮನೆ ಇರುವುದಿಲ್ಲ, ಅವರ ವಿರುದ್ಧ ಮುಲಾಜಿಲ್ಲದೇ ಕ್ರಮ ಕೈಗೊಳ್ಳುವುದಾಗಿ ಹೇಳಿದ್ದಾರೆ. ನಿಮ್ಮ ಅಕ್ಕ ತಂಗಿಯರು ನಮ್ಮ ಅಕ್ಕ ತಂಗಿಯರು ಎಲ್ಲಾ ಒಂದೇ ಮುಂಬರುವ ದಿನಗಳಲ್ಲಿ ಕಾಮೆಂಟ್ಗಳನ್ನು ಮಾಡುವಾಗ, ಮೆಸೇಜ್ ಮಾಡುವಾಗ ಸ್ವಲ್ಪ ಎಚ್ಚರಿಕೆಯಿಂದ ಮಾಡಿ ಎಂದು ಕೂಡ ಹೇಳಿದ್ದಾರೆ.
ಪಲ್ಲವಿ ಅವರಿಗೆ ಅಶ್ಲೀಲ ಮೆಸೇಜ್ ಮಾಡಿದ ವಿದ್ಯಾರ್ಥಿ ಕೂಡ ತನ್ನ ತಪ್ಪನ್ನು ಒಪ್ಪಿಕೊಂಡಿದ್ದು, ನಾನು ತುಂಬಾ ದಿನದಿಂದ ಇನ್ಸ್ಟಾಗ್ರಾಂ ಉಪಯೋಗಿಸುತ್ತಿದ್ದೆ, ಪಲ್ಲು ಸಂಜು ಅವರ ಅಫಿಷಿಯಲ್ ಖಾತೆಗೆ ಕೆಟ್ಟ ಕಾಮೆಂಟ್ ಹಾಗೂ ಅಶ್ಲೀಲ ವಿಡಿಯೋ ಕಳುಹಿಸಿದ್ದೆ ಎಂದು ಹೇಳಿದ್ದಾನೆ. ಈ ಹಿನ್ನೆಲೆ ಸಂಜು ಬಸಯ್ಯ ಅವರು ಬೈಲಹೊಂಗಲ ಠಾಣೆಯಲ್ಲಿ ನನ್ನ ವಿರುದ್ದ ಪ್ರಕರಣ ದಾಖಲಿಸಿದ್ದರು. ಪೊಲೀಸರು ನನ್ನನ್ನ ಕರೆಸಿ, ಶಿಕ್ಷೆ ಕೊಟ್ಟಿದ್ದಾರೆ ಎಂದು ಹೇಳಿರುವ ವಿದ್ಯಾರ್ಥಿ ನನಗೆ ನನ್ನ ತಪ್ಪಿನ ಅರಿವಾಗಿದೆ ಎಂದು ಹೇಳಿದ್ದಾನೆ. ನಾನು ಮಾಡಿದಂತೆ ಇನ್ಯಾರೂ ಈ ರೀತಿಯ ತಪ್ಪು ಮಾಡಬೇಡಿ. ಎಲ್ಲರಲ್ಲೂ ಕ್ಷಮೆ ಕೇಳ್ತೀನಿ ಎಂದು ಹೇಳಿದ್ದಾನೆ.


Click it and Unblock the Notifications











