'ಸರಿಗಮಪ' ಸುಹಾನಳಿಗೆ ಬೇಕಿರುವುದು ಪ್ರೋತ್ಸಾಹವೇ ಹೊರತು, ಪ್ರಚಾರವಲ್ಲ!
ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಜನಪ್ರಿಯ 'ಸರಿಗಮಪ ಸೀಸನ್ 13' ಕಾರ್ಯಕ್ರಮ ಗಾಯಕರಿಗೆ ಒಂದು ಒಳ್ಳೆ ವೇದಿಕೆಯಾಗಿರುವುದರಲ್ಲಿ ಎರಡು ಮಾತಿಲ್ಲ.
ಹಾಗ್ನೋಡಿದ್ರೆ, 'ಸರಿಗಮಪ' ಕಾರ್ಯಕ್ರಮದ ಹಿಂದಿನ ಆವೃತ್ತಿಯಲ್ಲಿ ಭಾಗವಹಿಸಿದ ಸ್ಪರ್ಧಿಗಳಿಗೆ ಇಂದು ಒಳ್ಳೆ ಅವಕಾಶಗಳು ಸಿಕ್ಕಿವೆ... ಸಿಗುತ್ತಿವೆ.
ಹಿಂದೆ 'ಸರಿಗಮಪ' ಕಾರ್ಯಕ್ರಮದಲ್ಲಿ ಭಾಗವಹಿಸಿದ ಸ್ಪರ್ಧಿಗಳ ಬಗ್ಗೆ ಬಹಳಷ್ಟು ಚರ್ಚೆಗಳು ನಡೆಯುತ್ತಿತ್ತಾದರೂ, ಅದು ಕೇವಲ ಅವರ ಗಾಯನದ ಬಗ್ಗೆ ನಡೆಯುತ್ತಿದ್ದ ಆರೋಗ್ಯಕರ ಚರ್ಚೆಯಾಗಿತ್ತು. ಬಹುಶಃ ಇದೇ ಮೊದಲ ಬಾರಿಗೆ 'ಸರಿಗಮಪ' ಸ್ಪರ್ಧಿಯೊಬ್ಬರ ಧರ್ಮದ ಬಗ್ಗೆ ಚರ್ಚೆಯಾಗುತ್ತಿದೆ. ಬರೀ ಚರ್ಚೆ ಆಗಿದ್ದರೆ ಪರ್ವಾಗಿಲ್ಲ. ಸಾಮಾಜಿಕ ಜಾಲತಾಣಗಳಲ್ಲಿ ದೊಡ್ಡ ವಿವಾದವೇ ಭುಗಿಲೆದ್ದಿದೆ. ಆ ವಿವಾದದ ಕೇಂದ್ರ ಬಿಂದುವೇ 'ಸರಿಗಮಪ ಸೀಸನ್ 13' ಸ್ಪರ್ಧಿ ಸುಹಾನ ಸೈಯದ್.

ವಿವಾದದ ಕೇಂದ್ರಬಿಂದು ಆಗಿರುವ ಸುಹಾನ ಸೈಯದ್
ಮೂಲತಃ ಸಾಗರದವರಾದ ಸುಹಾನ ಸೈಯದ್ ಎಂಬ ಹುಡುಗಿಯ ಪರಿಚಯ ಒಂದು ವಾರದ ಹಿಂದೆ ಅಷ್ಟಾಗಿ ಯಾರಿಗೂ ಇರಲಿಲ್ಲ. ಆದರೆ ಇಂದು ಆಕೆ ಬಹುತೇಕ ಕನ್ನಡಿಗರಿಗೆ ಮಾತ್ರವಲ್ಲದೆ, ಹೊರ ರಾಜ್ಯದವರಿಗೂ ಪರಿಚಯವಾಗಿ ಹೋಗಿದ್ದಾರೆ! ಅದಕ್ಕೆ ಕಾರಣ ಅವರ ಪ್ರತಿಭೆಗಿಂತಲೂ ಹೆಚ್ಚಾಗಿ, 'ಸರಿಗಮಪ ಸೀಸನ್ 13' ಕಾರ್ಯಕ್ರಮದ 'ಮೆಗಾ ಆಡಿಷನ್'ನಲ್ಲಿ ಆಕೆ ಆಯ್ದುಕೊಂಡಿದ್ದ ಗೀತೆ.

ಸುಹಾನ ಸೈಯದ್ ಹಾಡಿದ್ದು ಭಕ್ತಿಗೀತೆ.!
'ಸರಿಗಮಪ ಸೀಸನ್ 13' ಕಾರ್ಯಕ್ರಮದ 'ಮೆಗಾ ಆಡಿಷನ್'ನಲ್ಲಿ 'ಶ್ರೀಕಾರನೇ' ಎಂಬ ಭಕ್ತಿಗೀತೆಯನ್ನು ಸುಹಾನ ಭಕ್ತಿಯಿಂದ ಹಾಡಿದಳು. ಸುಹಾನ ದನಿ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸುವಾಗ ಮುಸ್ಲಿಂ ಮಹಿಳೆಯೊಬ್ಬರು ಹಿಂದೂ ಭಕ್ತಿಗೀತೆಯನ್ನು ಅಯ್ಕೆ ಮಾಡಿಕೊಂಡಿದ್ದಕ್ಕೆ ತೀರ್ಪುಗಾರರು ಹಾಗೂ ನಿರೂಪಕಿ ಆಶ್ಚರ್ಯ ವ್ಯಕ್ತಪಡಿಸಿದರು.

ದಿನಬೆಳಗಾಗುವುದರೊಳಗೆ ಚರ್ಚೆಗೆ ಗ್ರಾಸವಾದ ಸುಹಾನ
'ಸರಿಗಮಪ ಸೀಸನ್ 13' ಕಾರ್ಯಕ್ರಮದಲ್ಲಿ 'ಶ್ರೀಕಾರನೇ' ಹಾಡು ಹಾಡಿದ ಕೂಡಲೆ ಸಾಮಾಜಿಕ ಜಾಲತಾಣಗಳಲ್ಲಿ ದಿನಬೆಳಗಾಗುವುದರೊಳಗೆ ಸುಹಾನ ಸಾಕಷ್ಟು ಸುದ್ದಿಯಾಗಿಬಿಟ್ಟಿದ್ದಳು. ಆಕೆಯ ದನಿಗಿಂತ ಆಕೆಯ ಧರ್ಮದ ಕುರಿತ ಸ್ಟೇಟಸ್ ಗಳೇ ಹೆಚ್ಚಾಗಿದ್ದವು.

ಸುಹಾನ ವಿರುದ್ಧ ಸಮರ
ಕನ್ನಡ ಮತ್ತು ಬೇರೆ ಭಾಷೆಯ ಸುದ್ದಿವಾಹಿನಿಗಳಂತೂ ಆಕೆಯ ಬಗ್ಗೆ ಸಾಕಷ್ಟು ಸುದ್ದಿ ಪ್ರಸಾರ ಮಾಡಿದವು. 'ಮುಸ್ಲಿಂ ಹುಡುಗಿಯರು ಸುಹಾನಳಂತೆ ಧೈರ್ಯವಾಗಿ ಮುಂದೆ ಬರಬೇಕು' ಎಂಬುದು ಬಹುತೇಕರ ಅಭಿಪ್ರಾಯವಾಗಿತ್ತು. ಆದರೆ ಕೆಲವು ಮುಸ್ಲಿಂ ಮೂಲಭೂತವಾದಿಗಳು ಸುಹಾನಾಳ ವಿರುದ್ಧ ಸಮರ ಸಾರಿದರು.

ಸುಹನಾಗೆ ಬೆದರಿಕೆ
'ಪರಪುರುಷರ ಮುಂದೆ ಹಾಡುವುದು ತಪ್ಪು' ಎಂಬುದು ಕೆಲವರ ವಾದ. ಜೊತೆಗೆ ಮುಸ್ಲಿಂ ಸಂಘಟನೆಗಳಿಂದ ಆಕೆಗೆ ಬೆದರಿಕೆಗಳೂ ಬಂದವು. ಆಗ ನಾಡಿನ ಕೆಲವು ಸಾಹಿತಿಗಳು, ರಾಜಕಾರಣಿಗಳು ತಾವು ಸುಹಾನಳ ಬೆಂಬಲಕ್ಕೆ ತಾವು ನಿಂತಿರುವುದಾಗಿ ಹೇಳಿದರು.

ಖಂಡಿತ ತಪ್ಪಲ್ಲ
ಮುಸ್ಲಿಂ ಹುಡುಗಿಯೊಬ್ಬಳು ಹಿಂದೂ ದೇವರ ಬಗ್ಗೆ ಹಾಡಿದರೆ ಖಂಡಿತಾ ತಪ್ಪಲ್ಲ. ಸಂಗೀತ ಹಿಂದೂ-ಮುಸ್ಲಿಂ-ಕ್ರಿಶ್ಚಿಯನ್ ಇವೆಲ್ಲವನ್ನೂ ಮೀರಿ ನಿಂತಿರುವಂಥದ್ದು. ಆದರೆ ಹಿಂದೂ ದೇವರ ಬಗ್ಗೆ ಹಾಡಿದರು ಎಂದ ಮಾತ್ರಕ್ಕೆ ಸುಹಾನಗೆ ಇಷ್ಟೆಲ್ಲಾ ಪ್ರಚಾರ ನೀಡುವ ಅವಶ್ಯಕತೆ ಇದೆಯಾ? ಅಂದು ಕಾರ್ಯಕ್ರಮದಲ್ಲಿ ಆಕೆ ಹಾಡು ಮುಗಿಸಿದ ಮೇಲೆ, ತೀರ್ಪುಗಾರರು ಸುಹಾನ ಗಾಯನದ ಬಗ್ಗೆ ತಮ್ಮ ಅಭಿಪ್ರಾಯವನ್ನು ಹೇಳಿ ಸುಮ್ಮನಾಗಬೇಕಿತ್ತು. ಅವರು ಅಷ್ಟೆಲ್ಲ ಆಶ್ಚರ್ಯಪಡುವ ಅವಶ್ಯಕತೆಯೇ ಇರಲಿಲ್ಲ. ಅವರು ಆಶ್ಚರ್ಯಪಟ್ಟ ಪರಿಣಾಮ ಆಕೆಗೆ ಅವಶ್ಯಕತೆಗೂ ಮೀರಿ ಪ್ರಚಾರ ಮತ್ತು ಪ್ರಾಮುಖ್ಯತೆ ಸಿಕ್ಕಿತು.

ಈಕೆಗೆ ಮಾತ್ರ ಪ್ರಚಾರ ಕೊಟ್ಟಾಗ...
ಅಸಲಿಗೆ ಆಕೆ ಆ ಕಾರ್ಯಕ್ರಮದ 'ಮೆಗಾ ಆಡಿಷನ್'ನಲ್ಲಿ ಆಯ್ಕೆಯಾಗಿದ್ದಾರೆ ಅಷ್ಟೆ. ಕಾರ್ಯಕ್ರಮವನ್ನು ಇನ್ನು ಗೆದ್ದಿಲ್ಲ. ಅದೇ ಕಾರ್ಯಕ್ರಮದಲ್ಲಿ ಆಕೆಗಿಂತಲೂ ಉತ್ತಮವಾಗಿ ಹಾಡುವ ಸ್ಪರ್ದಿಗಳಿರಬಹುದು. ಕೇವಲ ಈಕೆಗೆ ಮಾತ್ರ ಪ್ರಚಾರ ಕೊಟ್ಟಾಗ ಇನ್ನುಳಿದ ಸ್ಪರ್ಧಿಗಳ ಮನಸ್ಸಿನಲ್ಲಿ ಯಾವ ರೀತಿ ಭಾವನೆ ಮೂಡಬಹುದು?

ಪ್ರೋತ್ಸಾಹ ಅವಶ್ಯಕ
ಸುಹಾನ ಮುಸ್ಲಿಂ ಹುಡುಗಿಯಾಗಿ ಹಿಂದೂ ದೇವರ ಹಾಡು ಹಾಡಿದ್ದು ಕೇಳಿ ಸಂತೋಷಪಡಬೇಕೆ ಹೊರತೂ, ಅದನ್ನೇ ಸಾಧನೆ ಎಂದು ಭ್ರಮಿಸುವುದು ತಪ್ಪು. ಆಕೆ ಸಾಧಿಸಬೇಕಾಗಿರುವುದು ಸಾಕಷ್ಟಿದೆ. ಈಗ ಸುಹಾನಗೆ ಅವಶ್ಯಕತೆ ಇರುವುದು ಪ್ರಚಾರವಲ್ಲ, ಪ್ರೋತ್ಸಾಹ. ಆಕೆ ಉತ್ತಮ ಗಾಯಕಿಯಾಗಿ ನಮ್ಮ ರಾಜ್ಯಕ್ಕೆ-ದೇಶಕ್ಕೆ ಕೀರ್ತಿ ತರಲಿ ಎಂದು ಹಾರೈಸೋಣ. ಆಕೆಯ ಪ್ರತಿಭೆಯನ್ನು ಪ್ರೋತ್ಸಾಹಿಸೋಣ


Click it and Unblock the Notifications











