ಪ್ರೇಮಕ್ಕೆ ಯಾವ ಮಿತಿ ಇಲ್ಲ; ನಿತಿನ್ ಶಿವಾಂಶ್ ಜೊತೆ ಸರಿಗಮಪ ಗಾಯಕಿ ಸುಹಾನಾ ಸೈಯದ್ ಲವ್
ಸರಿಗಮಪ ಕನ್ನಡ ಸೀಸನ್ 13ರ ಸ್ಪರ್ಧಿ ಸುಹಾನಾ ಸೈಯದ್ ತಮ್ಮ ಪ್ರೀತಿ ವಿಚಾರ ಬಹಿರಂಗಪಡಿಸಿದ್ದಾರೆ. ಈ ಹಿಂದೆ ಆಕೆ ಹಿಂದೂ ಭಕ್ತಿ ಗೀತೆಗಳನ್ನು ಹಾಡಿ ವಿವಾದದ ಕೇಂದ್ರ ಬಿಂದು ಆಗಿದ್ದರು. ಶಿವಮೊಗ್ಗ ಮೂಲದ ಸುಹಾನಾ ಸೈಯದ್ ತಮ್ಮ ಗಾಯನದಿಂದ ಮೋಡಿ ಮಾಡಿದ್ದರು.
ಅಂದಹಾಗೆ ಸರಿಗಮಪ ಕನ್ನಡ ಸೀಸನ್ 13ರ ಮೆಗಾ ಆಡಿಷನ್ ವೇಳೆ 'ಶ್ರೀಕಾರನೇ' ಹಾಡನ್ನು ಹಾಡಿ ಸುಹಾನಾ ಕೆಲ ಸಂಘಟನೆಗಳ ವಿರೋಧ ಎದುರಿಸುವಂತಾಗಿತ್ತು. ಅದರ ಬೆನ್ನಲ್ಲೇ ಮತ್ತೊಂದು ಭಕ್ತಿಗೀತೆ ಹಾಡಿ ಎಲ್ಲರಿಗೂ ಉತ್ತರ ಕೊಟ್ಟಿದ್ದರು. ಇದೀಗ ಹಿಂದೂ ಯುವಕನನ್ನು ಪ್ರೀತಿ ಮಾಡುತ್ತಿರುವ ಬಗ್ಗೆ ಸುಹಾನಾ ಮಾಹಿತಿ ಹಂಚಿಕೊಂಡಿದ್ದಾರೆ. ಫೋಟೊ ಸಮೇತ ಈ ಬಗ್ಗೆ ಇನ್ಸ್ಟಾಗ್ರಾಮ್ನಲ್ಲಿ ಪೋಸ್ಟ್ ಮಾಡಿದ್ದಾರೆ.

"ಪ್ರತಿ ಜೀವಿಯ ಅನ್ವೇಷಣೆ ಪ್ರೇಮಕ್ಕಾಗಿಯೇ ಪ್ರತಿ ಜೀವಿಯ ನಿರೀಕ್ಷೆ ಪ್ರೇಮಕ್ಕಾಗಿಯೇ, ಪ್ರೇಮಕ್ಕೆ ಕಾರಣ ಇಲ್ಲ. ಈ ಪ್ರೇಮ ಅನಂತ ದೂರದ ಸುಧೀರ್ಘ ಪ್ರಯಾಣ... ಪ್ರೇಮಕ್ಕೆ ಯಾವ ಮಿತಿ ಇಲ್ಲ, ಎಂಬುದಕ್ಕೆ ನಾವೇ ಸಾಕ್ಷಿ.. ಹೃದಯಗಳ ಭಾಷೆ ಎಲ್ಲವನ್ನೂ ಮೀರಿದ್ದು.. ಪ್ರತಿ ಸವಾಲು, ಪ್ರತಿ ಸಂಶಯ ಮತ್ತು ಪ್ರತಿ ಭಯದ ಮೌನದಲ್ಲಿಯೂ ನಮ್ಮನ್ನು ಹಿಡಿದಿಟ್ಟಿದ್ದು ಪ್ರೀತಿ.. ಇಂದು, ನಮ್ಮ ಗುಟ್ಟನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇವೆ.. ನಿಮ್ಮ ಆಶೀರ್ವಾದವಿರಲಿ" ಎಂದು ಸುಹಾನಾ ಸೈಯದ್ ಬರೆದುಕೊಂಡಿದ್ದಾರೆ.
ರಂಗಭೂಮಿ ಕಲಾವಿದ ನಿತಿನ್ ಶಿವಾಂಶ್ ಅವರನ್ನು ಬಾಳಸಂಗಾತಿಯಾಗಿ ಸುಹಾನಾ ಸೈಯದ್ ಆರಿಸಿಕೊಂಡಿದ್ದಾರೆ. ಜೋಡಿಗೆ ನೆಟ್ಟಿಗರು ಶುಭಾಶಯ ಕೋರುತ್ತಿದ್ದಾರೆ. "ಎರಡು ಆತ್ಮಗಳು, ಎರಡು ನಂಬಿಕೆಗಳು, ಒಂದು ಪ್ರೀತಿ. ನಾವು ನಮ್ಮ ನಂಬಿಕೆಗಳನ್ನು ಪರಸ್ಪರ ಸೇರುವಂತೆ ಬದಲಾಯಿಸಬೇಕಾಗಿಲ್ಲ - ನಾವು ಗೌರವ, ತಿಳುವಳಿಕೆ ಮತ್ತು ಪ್ರೀತಿಯನ್ನು ನಮ್ಮ ಸಾಮಾನ್ಯ ನೆಲೆಯಾಗಿ ಆರಿಸಿಕೊಂಡಿದ್ದೇವೆ" ಎಂದು ಸುಹಾನಾ ಪೋಸ್ಟ್ ಮಾಡಿದ್ದಾರೆ.
ನಟಿ ಅನು ಪ್ರಭಾಕರ್ ಸೇರಿದಂತೆ ಕೆಲ ಸೆಲೆಬ್ರೆಟಿಗಳು ಕೂಡ ನಿತಿನ್ ಹಾಗೂ ಸುಹಾನಾ ಜೋಡಿಗೆ ಶುಭ ಕೋರಿದ್ದಾರೆ. 'ಸರಿಗಮಪ ಸೀಸನ್ 13' ಶೋ ಆಡಿಷನ್ನಲ್ಲಿ 'ಗಜ' ಚಿತ್ರದ ಚಿತ್ರದ 'ಶ್ರೀಕಾರನೇ' ಹಾಡನ್ನು ಸುಹಾನಾ ಹಾಡಿದ್ದರು. ಮರು ವಾರ 'ಮುಕುಂದ ಮುರಾರಿ' ಚಿತ್ರದ 'ನೀನೆ ರಾಮ ನೀನೇ ಶಾಮ ನೀನೆ ಅಲ್ಲಾ ನೀನೇ ಏಸು' ಹಾಡನ್ನು ಹಾಡಿದ್ದ ಸುಹಾನಾ ವೀಕ್ಷಕರ ಮನಗೆದ್ದಿದ್ದರು.
ವಿವಾದ ಶುರುವಾಗಿ ಟೀಕೆಗಳು ಹೆಚ್ಚಾದಾಗ "ನನ್ನನ್ನ ಒಬ್ಬ ಗಾಯಕಿಯಾಗಿ ನೋಡಿ, ಒಬ್ಬ ಭಾರತೀಯಳಾಗಿ ನೋಡಿ, ಅದಕ್ಕಿಂತ ಹೆಚ್ಚಾಗಿ ಒಬ್ಬ ಮನುಷ್ಯಳಾಗಿ ನೋಡಿ. ನನಗೆ ಅಷ್ಟೇ ಸಾಕು, ಬೇರೇನೂ ಬೇಡ" ಎಂದು ಸುಹಾನ ಸೈಯದ್ ಮನವಿ ಮಾಡಿದ್ದರು.
"ನಾನು ಪ್ರೂವ್ ಮಾಡೋಕೆ ಮುಂದಾಗಿರುವುದು ಬೇರೆ. ಆದ್ರೆ, ಇಲ್ಲಿ ಆಗ್ತಿರುವುದೇ ಬೇರೆ. ಹಾಡುವುದು ನನ್ನ ಕೆಲಸ. ನನ್ನ ಕೊನೆಯುಸಿರು ಇರೋವರೆಗೂ ನಾನು ಹಾಡುತ್ತೇನೆ. ನಿಮ್ಮ ಆಲೋಚನೆಗಳಿಗೆ, ಸುಹಾನಳ ಆಲೋಚನೆ ಎಂದು ಬಣ್ಣ ಬಳಿದು ಮನಸ್ಸಿಗೆ ಬಂದ ಹಾಗೆ ಮಾತನಾಡಬೇಡಿ" ಎಂದು ಆಕೆ ಬೇಸರ ಹೊರಹಾಕಿದ್ದರು. "ನನ್ನ ಈ ಹೆಜ್ಜೆಯಿಂದ ನನ್ನ ಕುಟುಂಬ, ಸಂಬಂಧಿಕರಿಂದ ಮೆಚ್ಚುಗೆ ಸಿಕ್ಕಿದೆ. ಅದರ ಜೊತೆಗೆ ಕೆಲವು ವಿವಾದಗಳು ಕೂಡ ಸುತ್ತಿಕೊಂಡಿದೆ. ಅದಕ್ಕೆ ಬೇಸರವಾಗಿದೆ. ಯಾಕಂದ್ರೆ, ನಾನು ಅಲ್ಲದನ್ನ ಜನ ನನ್ನದು ಭಾವನೆ ಎಂದು ಹೇಳುತ್ತಿರುವುದು ಹಿಂಸೆ ಎನಿಸುತ್ತೆ" ಎಂದು ಸುಹಾನ ಸೈಯದ್ ನೋವು ತೋಡಿಕೊಂಡಿದ್ದರು.


Click it and Unblock the Notifications











