Saregamapa: ಹಳ್ಳಿ Vs ನಗರದ ಕಥೆ ಹೇಳಿ ನೆಟ್ಟಿಗರಿಂದ ಭೇಷ್ ಎನಿಸಿಕೊಂಡ 'ಸರಿಗಮಪ'ದ ಪುಟಾಣಿ ದಿಯಾ !
ಮನುಷ್ಯನ ಜೀವನ ಅದೆಷ್ಟು ಬದಲಾಗಿದೆ ಅಲ್ವಾ. ಹಳ್ಳಿಯಲ್ಲಿಯೇ ಹುಟ್ಟಿ ಬೆಳೆದರವರು ಕೂಡ ಈಗ ಪಟ್ಟಣದ ಬದುಕನ್ನೇ ಮೈಗೂಡಿಸಿಕೊಂಡಿದ್ದಾರೆ. ದುಡಿಮೆ ಹಿಂದೆ ಹೋಗುತ್ತಿರುವ ಮನುಷ್ಯ ನೆಮ್ಮದಿಯ ಬದುಕನ್ನು ಕಳೆದುಕೊಳ್ಳುತ್ತಿದ್ದಾನೆ. ವಾರಪೂರ್ತಿ ಕೆಲಸ, ವಾರದ ಕೊನೆಯಲ್ಲಿ ಮಜಾ.ಇದು ಸಿಟಿಯವರ ಬದುಕು. ಆದರೆ, ಹಳ್ಳಿಯಲ್ಲಿ ದಿನವಿಡೀ ದೇಹಕ್ಕೆ ಆರಾಮು, ತಂಪೇ. ಆದರೆ ಈ ಬದುಕು ಯಾರಿಗೂ ಬೇಕಾಗಿಲ್ಲ.
ಇದೆಲ್ಲವನ್ನು ಇಂದು ಸರಿಗಮಪ ಕಾರ್ಯಕ್ರಮದಲ್ಲಿ ದಿಯಾ ಹೇಳಿದ್ದಾಳೆ. ಅವಳ ಮಾತು ಕೇಳುತ್ತಿದ್ದರೆ ಎಲ್ಲರಿಗೂ ಒಂದು ಕ್ಷಣ ಹೌದಲ್ವಾ. ನೆಮ್ಮದಿಯ ಬದುಕು ಇರುವುದು ಎಲ್ಲಿ..? ನಾವೂ ಹುಡುಕುತ್ತಾ ಇರೋದು ಎಲ್ಲಿ..? ಎಂಬ ಪ್ರಶ್ನೆ ಕಾಡದೆ ಇರುವುದಿಲ್ಲ.

ದಿಯಾ ಅಂದ್ರೆ ಅಚ್ಚುಮೆಚ್ಚು
ಜೀ ಕನ್ನಡದ ವೀಕೆಂಡ್ ಪ್ರೋಗ್ರಾಂನಲ್ಲಿ ಸರಿಗಮಪ ಲಿಟಲ್ ಚಾಂಪಿಯನ್ ಸೀಸನ್ 19 ಎಲ್ಲರನ್ನು ಸೆಳೆದಿರುವ ಕಾರ್ಯಕ್ರಮ. ಈ ಪ್ರೋಗ್ರಾಂ ದಿಯಾ ಹೆಗ್ಡೆ ಎಂಬ ಪುಟಾಣಿ ಸಿಂಗರ್ ಇದ್ದಾಳೆ. ದಿಯಾಗೆ ಜಾನಪದ ಶೈಲಿ ಅಂದ್ರೆ ನೀರು ಕುಡಿದಷ್ಟೇ ಸುಲಭ. ಆಕೆಯ ಉತ್ತರ ಕರ್ನಾಟಕದ ಭಾಷೆಗಂತು ಎಲ್ಲರೂ ಮಾರು ಹೋಗಿದ್ದಾರೆ. ಜಡ್ಜಗಳಿಗೂ ದಿಯಾ ಪುಟ್ಟಿ ಎಂದರೆ ತುಂಬಾ ಇಷ್ಟ. ಈಗ ದಿಯಾ ಹೇಳಿರುವ ಮಾತು ಎಲ್ಲರನ್ನೂ ಯೋಚನಾ ಲಹರಿಗೆ ತಿರುಗಿಸಿದೆ.

ದಿಯಾ ಹೇಳಿದ ಕಥೆ ಅದ್ಭುತ
ದಿಯಾ ಬಳಿ ನಿರೂಪಕಿ ಅನುಶ್ರೀ ನಗರ ಮತ್ತು ಹಳ್ಳಿಯ ಬಗ್ಗೆ ನಿನಗಿರುವ ಅಭಿಪ್ರಾಯವೇನು ಎಂದು ಕೇಳಿದ್ದಾರೆ. ಆಗ ದಿಯಾ ಅದಕ್ಕೊಂದು ಕಥೆಯನ್ನೇ ಹೇಳಿದ್ದಾಳೆ. "ಹಳ್ಳಿ ಮತ್ತು ಸಿಟಿ ನಡುವೆ ಇರುವ ವ್ಯತ್ಯಾಸವನ್ನು ಈಗ ನಾನು ಹೇಳಿದ್ರೆ ಸರಿ ಹೋಗಲ್ಲ. ಒಂದು ಕೆಂಪು ಬಸ್ನಲ್ಲಿ ಇಬ್ಬರು ವ್ಯಕ್ತಿಗಳು ಕೂತಿರುತ್ತಾರೆ. ಒಬ್ಬರು ಹಳ್ಳಿಯವರು, ಇನ್ನೊಬ್ಬರು ಸಿಟಿಯವರು. ಹಳ್ಳಿಯವರಿಗೆ ಸಿಟಿಯವರ ಬಗ್ಗೆ ಕುತೂಹಲ, ಸಿಟಿಯವರಿಗೆ ಹಳ್ಳಿಯವರ ಬಗ್ಗೆ ಕುತೂಹಲ" ಎಂದು ಹಳ್ಳಿ ಮತ್ತು ಸಿಟಿ ಕಥೆಯನ್ನು ದಿಯಾ ಹೇಳಿದ್ದಾಳೆ.

ಟ್ರಾಫಿಕ್ ಕಿರಿಕಿರಿಯಲ್ಲೇ ಸಿಟಿ ಜೀವನ
ದಿಯಾ ಹೇಳುವ ಕಥೆಯಲ್ಲಿ ಹಳ್ಳಿಯ ವ್ಯಕ್ತಿ, ಕೇಳುತ್ತಾನೆ. ನಿಮ್ಮ ಸಿಟಿಯಾಗ ಏನು ಕೆಲಸ ಮಾಡ್ತೀರ್ರಿ ಎಂದು. "ನಮ್ಮ ಸಿಟಿ ಲೈಫು ತುಂಬಾ ಬ್ಯುಸಿ. ಬೆಳಗ್ಗೆ 6 ಗಂಟೆಗೆ ಅಲರಾಂ ಇಟ್ಟು 7 ಗಂಟೆಗೆ ಎದ್ದು, 8 ಗಂಟೆಗೆ ರೆಡಿಯಾಗಿ, ತಿಂಡಿ ತಿಂದು ಪಟ್ ಅಂತ ಹೊರಟು 9 ಗಂಟೆಗೆ ಬಸವೇಶ್ವರನಗರದಿಂದ ಬನ್ನೇರುಘಟ್ಟ ತಲುಪುವುದರೊಳಗೆ ಪಿಯ್ ಪಿಯ್ ಅನ್ನೋ ಸೌಂಡ್ನಲ್ಲಿ ಆಫೀಸ್ ಲಾಗಿನ್ ಆಗಿ ಸಂಜೆ ತನಕ ಲ್ಯಾಪ್ಟಾಪ್ ಮುಖ ನೋಡುತ್ತಾ ಕುಳಿತುಕೊಳ್ಳಬೇಕು. ಸಂಬಳ ಬಂದ ಒಂದೇ ಗಂಟೆಯಲ್ಲಿ ಖಾಲಿ. ಇಷ್ಟೆಲ್ಲಾ ಆದ್ರೂ ಏನೇ ಆದ್ರೂ ನಮ್ಮ ಸಿಟಿ ಸೂಪರ್" ಎಂದನಂತೆ.

ಹಳ್ಳಿ ಜೀವನ ಸೂಪರ್
ಈಗ ಹಳ್ಳಿ ಜೀವನ ಹೇಗಿರುತ್ತೆ ಎಂಬ ಕುತೂಹಲ. ಹಳ್ಳಿ ವ್ಯಕ್ತಿ ಹೇಳಿದ, "ಮುಂಜಾನೆ ಎದ್ದು, ಬಾಗಿಲು ತೆರೆದು, ಸ್ನಾನ ಮಾಡಿ, ರೊಟ್ಟಿ ಬಡಿದು, ಬುತ್ತಿ ಕಟ್ಟಿಕೊಂಡು, ಹೊಲಕ್ಕೆ ಹೋಗಿ ದುಡಿದು, ಸೂರ್ಯ ನೆತ್ತಿ ಮೇಲೆ ಬಂದಾಗ ತಿಂದು, ಮಧ್ಯಾಹ್ನ ಬೇವಿನ ಮರದ ಕೆಳಗೆ ಸೊಂಪಾದ ನಿದ್ದೆ ಮಾಡಿ, ಸಂಜೆ ದನ ಹೊಡ್ಕೊಂಡು ಮನೆಗೆ ಬಂದು, ಚಹಾ ಕುಡಿದು, ರಾತ್ರಿ ಊಟ ಮಾಡಿ, ಅಣ್ಣಾವ್ರ ಸಾಂಗ್ ಕೇಳಿ ಮಲಗಿದ್ರೆ ಆಹಾ ನಿದ್ದೆ" ಎಂದ ಹಳ್ಳಿಯವ.
ರಿಯಾಲಿಟಿ ತಿಳಿಸಿದ ದಿಯಾ ಕಥೆ
ಇಂದಿನ ಬದುಕು ಹಣ, ದುಡಿಮೆ ಹಿಂದೆ ಓಡುತ್ತಾ ಇದೆ. ನೆಮ್ಮದಿಯ ಬದುಕು ಕಳೆದುಕೊಂಡವರಿಗೆ ದಿಯಾ ಹೇಳಿದ ಕಥೆ ತುಂಬಾ ಹತ್ತಿರ ಎನಿಸಿದೆ. ಅದಕ್ಕೆಂದೆ ಎಲ್ಲರೂ ಆ ಕಥೆಗೆ ಕಮೆಂಟ್ ಹಾಕುತ್ತಿದ್ದಾರೆ. ಏನು ಮಾತು ಹೇಳಿದೆ ಪುಟ್ಟಿ ನೀನು ಅಂತ ಹೊಗಳುತ್ತಿದ್ದಾರೆ.


Click it and Unblock the Notifications











