ಸರಿಗಮಪದಲ್ಲಿಯೇ ಮೊದಲು : ಡೈರೆಕ್ಟ್ ಆಗಿ ಫೈನಲ್ ಮೆಟ್ಟಿಲು ಹತ್ತಿದ ತೇಜಸ್!
'ಸರಿಗಮಪ ಸೀಸನ್ 14' ಕಾರ್ಯಕ್ರಮ ಕೊನೆಯ ಹಂತಕ್ಕೆ ಬರುತ್ತಿದೆ. ಕಳೆದ ವಾರ ಕಾರ್ಯಕ್ರಮದ ಕ್ವಾರ್ಟರ್ ಫೈನಲ್ ಹಂತ ಮುಗಿದಿದ್ದು ಫೈನಲ್ ಗೆ ಇನ್ನೊಂದೆ ಮೆಟ್ಟಿಲು ಬಾಕಿ ಇದೆ. ಮುಂದಿನ ವಾರ ಸೆಮಿ ಫೈನಲ್ ನಡೆಯಲಿದೆ.
ಕಾರ್ಯಕ್ರಮದ ಸ್ಪರ್ಧಿಗಳ ಪೈಕಿ ಚನ್ನಗಿರಿ ಹುಡುಗ ತೇಜಸ್ ಶಾಸ್ತಿ ನೇರವಾಗಿ ಫೈನಲ್ ಹಂತ ತಲುಪಿದ್ದಾನೆ. ಕಾರ್ಯಕ್ರಮದ ಅಷ್ಟು ಸ್ಪರ್ಧಿಗಳ ಪೈಕಿ ಫೈನಲ್ ಹಂತ ತಲುಪಿದ ಮೊದಲ ಮತ್ತು ಏಕೈಕ ಸ್ಪರ್ಧಿ ಇವರಾಗಿದ್ದಾರೆ. ದೊಡ್ಡ ವಿಶೇಷ ಅಂದರೆ ಇಡೀ ಸರಿಗಮಪ ಇತಿಹಾಸದಲ್ಲಿಯೇ ಮೊದಲ ಬಾರಿಗೆ ಈ ರೀತಿ ಒಬ್ಬ ಸ್ಪರ್ಧಿಯನ್ನು ನೇರವಾಗಿ ಕ್ವಾರ್ಟರ್ ಫೈನಲ್ ಹಂತದಿಂದ ಫೈನಲ್ ಗೆ ಕಳುಹಿಸಲಾಗುತ್ತಿದೆ.
ಕಾರ್ಯಕ್ರಮದ ಪ್ರಾರಂಭದಿಂದ ಪ್ರತಿ ಸಂಚಿಕೆಯಲ್ಲಿಯೂ ತನ್ನ ಹಾಡಿನ ಮೂಲಕ ಕೇಳುಗರ ಮೆಚ್ಚಿಗೆ ಪಡೆಯುತ್ತಿದ್ದ ತೇಜಸ್ ತನ್ನ ಪ್ರತಿಭೆಯನ್ನು ಪ್ರತಿ ವಾರ ಪ್ರದರ್ಶಿಸುತ್ತಿದ್ದ. ಇನ್ನು ಕ್ವಾರ್ಟರ್ ಫೈನಲ್ ನಲ್ಲಿ ಮೈ ಹುಷಾರಿರಲಿಲ್ಲದ್ದಿದ್ದರೂ 'ಭಜರಂಗಿ' ಸಿನಿಮಾದ ಹಾಡನ್ನು ಅಮೋಘವಾಗಿ ಹಾಡಿದ ತೇಜಸ್ ಗೋಲ್ಡನ್ ಬಜರ್ ಪಡೆದ.

ಅಂದಹಾಗೆ, ಪ್ರತಿ ಸಂಚಿಕೆಯಲ್ಲಿ ತೇಜಸ್ ಹಾಡು ಕೇಳುತ್ತಿದ್ದ ತೀರ್ಪುಗಾರರಾದ ಹಂಸಲೇಖ, ವಿಜಯ ಪ್ರಕಾಶ್ ಮತ್ತು ಅರ್ಜುನ್ ಜನ್ಯ ಈ ತೀರ್ಮಾನ ಕೈಗೊಂಡಿದ್ದಾರೆ. ತೇಜಸ್ ಅವರ ಈ ಸಾಧನೆ ಕಂಡ ಅವರ ತಂದೆ ತಾಯಿ ಕೂಡ ತುಂಬ ಖುಷಿ ಪಟ್ಟರು.


Click it and Unblock the Notifications











