Bigg Boss Kannada 11 ; ಫೀಲ್ಡು ನಂದೇ, ಶೀಲ್ಡು ನಂದೇ, ಬಿಗ್ ಬಾಸ್ ಮನೆಗೆ ಬಂದ ಸತ್ಯ ಅಲಿಯಾಸ್ ಗೌತಮಿ ಜಾಧವ್..!
ಕರುನಾಡಿನೆಲ್ಲೆಡೆ ಸತ್ಯ ಎಂದೇ ಜನಪ್ರಿಯರಾದವರು ಗೌತಮಿ ಜಾಧವ್. ಈ ಧಾರಾವಾಹಿಯಲ್ಲಿ ಡೆರ್ ಡೆವಿಲ್ ನಾಯಕಿಯ ಪಾತ್ರವನ್ನು ನಿರ್ವಹಿಸಿ ಎಲ್ಲರ ಹೃದಯವನ್ನು ಗೆದ್ದಿದ್ದ ಗೌತಮಿ ಈಗ ಬಿಗ್ ಬಾಸ್ ಮೂಲಕ ಮತ್ತೊಮ್ಮೆ ನಿಮ್ಮೆಲ್ಲರ ಹೃದಯ ಗೆಲ್ಲುವ ಪ್ರಯತ್ನಕ್ಕೆ ಮುಂದಾಗಿದ್ದಾರೆ.
ಹೌದು, ಬಿಗ್ ಬಾಸ್ ಕಾರ್ಯಕ್ರಮ ಶುರುವಾಗುತ್ತಿದೆ ಎಂಬ ಸುದ್ದಿ ಹೊರ ಬಂದ ಕ್ಷಣದಿಂದ ಇಲ್ಲಿಯವರೆಗೆ ಈ ಬಾರಿ ಯಾರೆಲ್ಲ ಮನೆಯಲ್ಲಿ ಇರಲಿದ್ದಾರೆ ಎನ್ನುವ ಕುತೂಹಲ ಮನೆ ಮಾಡಿತ್ತು. ಅಂತೆ-ಕಂತೆಯ ಸಂತೆಯಲ್ಲಿ ಕೆಲವರ ಹೆಸರು ಕೂಡ ಕೇಳಿ ಬಂದಿತ್ತು. ಹೀಗಾಗಿಯೇ ಚಿಂತೆ ಮಾಡಬೇಡಿ ಈ ಬಾರಿ ಒಂದು ದಿನದ ಮೊದಲೇ ಯಾರೆಲ್ಲ ಇರಲಿದ್ದಾರೆ ಎನ್ನುವ ಪ್ರಶ್ನೆಗೆ ನಾವೇ 'ರಾಜಾ ರಾಣಿ ಗ್ರ್ಯಾಂಡ್' ಫಿನಾಲೆ ವೇದಿಕೆಯಲ್ಲಿ ಉತ್ತರ ಕೊಡ್ತೀವಿ ಎಂದು ಸುದೀಪ್ ಮತ್ತು ಅವರ ಬಿಗ್ ಬಾಸ್ ಸಂಗಡಿಗರು ಹೇಳಿದ್ದರು. ಕಲರ್ಸ್ ಕನ್ನಡ ವಾಹಿನಿ ಬಹಿರಂಗ ಪಡಿಸಿತ್ತು. ಗೌತಮಿ ಜಾಧವ್ ಅವರನ್ನು 4ನೇ ಸ್ಫರ್ಧಿಯಾಗಿ ಬಿಗ್ ಬಾಸ್ ಮನೆಗೆ ಹೋಗಿದ್ದಾರೆ.

ಇನ್ನೂ ಈ ಬಾರಿ ಸ್ವರ್ಗ ಮತ್ತು ನರಕ ಎಂದು ಎರಡು ವಿಂಗಡಣೆಯನ್ನು ಮಾಡಲಾಗಿದೆ. ಸ್ಫರ್ಧಿಗಳು ಯಾವ ತಂಡಕ್ಕೆ ಸೇರಬೇಕು ಎಂದು ನೀವೇ ನಿರ್ಧಾರವನ್ನು ಮಾಡಿ ಎಂದು ಬಿಗ್ ಬಾಸ್ ಸಮಸ್ತ ಪ್ರೇಕ್ಷಕರಲ್ಲಿ ಮನವಿಯನ್ನು ಮಾಡಿಕೊಂಡಿದೆ. ಈ ಹಿನ್ನೆಲೆ ಗೌತಮಿ ಜಾಧವ್ ಅವರನ್ನು ಪ್ರೇಕ್ಷಕರು ಯಾವ ತಂಡಕ್ಕೆ ಕಳುಹಿಸುತ್ತಾರೆ ಎನ್ನುವ ಕುತೂಹಲ ಈಗ ಮನೆ ಮಾಡಿದೆ. ಸತ್ಯ ಧಾರಾವಾಹಿಯಲ್ಲಿ ಟಾಮ್ ಬಾಯ್ ಆಗಿ ಕಾಣಿಸಿಕೊಂಡಿದ್ದ ಗೌತಮಿ ಜಾಧವ್ ಬಿಗ್ ಬಾಸ್ ಮನೆಯಲ್ಲಿಯೂ ಆ ಖದರ್ ಮತ್ತು ಪವರ್ ಪ್ರದರ್ಶನವನ್ನು ಮಾಡ್ತಾರಾ, ಟಾಸ್ಕ್ಗಳಲ್ಲಿ ಎದುರಾಳಿಗಳಿಗೆ ಸವಾಲು ಎಸೆಯುತ್ತಾರಾ ಅನ್ನುವ ಪ್ರಶ್ನೆ ಕೂಡ ಈಗ ಬಿಗ್ ಬಾಸ್ ಪ್ರೇಮಿಗಳನ್ನು ಕಾಡುತ್ತಿದೆ.
ಅಂದ್ಹಾಗೇ ಸತ್ಯ ಇತ್ತೀಚೆಗಷ್ಟೇ ಮುಕ್ತಾಯವಾಗಿದೆ. ಇನ್ನೂ.. ಸತ್ಯ ಧಾರಾವಾಹಿಕ್ಕಿಂತ ಮೊದಲು ಗೌತಮಿ ಜಾಧವ್ ಹಲವು ಪ್ರಯತ್ನ ಮಾಡಿದ್ದರು. ನಾಗಪಂಚಮಿ ಧಾರಾವಾಹಿಯಲ್ಲಿ ಕೂಡ ಅಭಿನಯಿಸಿದ್ದರು. ಕೇವಲ ಕಿರುತೆರೆ ಮಾತ್ರವಲ್ಲ ಬೆಳ್ಳಿತೆರೆಯಲ್ಲಿ ಕೂಡ ಅದೃಷ್ಟ ಪರೀಕ್ಷೆಯನ್ನು ಮಾಡಿಕೊಂಡಿದ್ದ ಗೌತಮಿ ಜಾಧವ್ ಆದ್ಯಾ, ಲೂಟಿ ಮತ್ತು ಕಿನಾರೆ ಚಿತ್ರಗಳಲ್ಲಿ ಕೂಡ ಕಾಣಿಸಿಕೊಂಡಿದ್ದರು. ತಮಿಳು ಚಿತ್ರರಂಗವನ್ನು ಕೂಡ ಒಂದು ಸುತ್ತು ಸುತ್ತು ಹಾಕಿಕೊಂಡು ಬಂದರು. ಆದರೆ, ಇವರಿಗೆ ಬೇಕಿರುವ ಸಿಕ್ಕಿದ್ದು ಮಾತ್ರ ಸತ್ಯ ಧಾರಾವಾಹಿಯಲ್ಲಿ.
ಉಳಿದಂತೆ ಗೌತಮಿ ಜಾಧವ್ ಕನ್ನಡ ಚಿತ್ರರಂಗದ ಹಿರಿಯ ಪತ್ರಕರ್ತರಾದ ಗಣೇಶ್ ಕಾಸರಗೋಡು ಅವರ ಸೊಸೆ. ಕಿನಾರೆ ಚಿತ್ರದಲ್ಲಿ ಅಭಿನಯಿಸುವಾಗ ಗಣೇಶ್ ಕಾಸರಗೋಡು ಅವರ ಮಗ ಮತ್ತು ಚಿತ್ರರಂಗದಲ್ಲಿ ಛಾಯಾಗ್ರಾಹಕರಾಗಿ ಗುರುತಿಸಿಕೊಂಡಿರುವ ಅಭಿಷೇಕ್ ಕಾಸರಗೋಡು ಅವರ ಜೊತೆ ಪ್ರೀತಿಯಲ್ಲಿ ಬಿದ್ದ ಗೌತಮಿ ಜಾಧವ್ ಡಿಸೆಂಬರ್ 31-2019ರಂದು ಅಭಿಷೇಕ್ ಜೊತೆ ಸಪ್ತಪದಿಯನ್ನು ತುಳಿದರು. ಇನ್ನೂ ಗೌತಮಿ ಜಾಧವ್ ಅಭಿನಯದ ಪಪ್ಪೆಟ್ಸ್ ಎಂಬ ಕಿರುಚಿತ್ರವನ್ನು ಇವರ ಪತಿ ಅಭಿಷೇಕ್ ಅವರೇ ನಿರ್ದೇಶಿಸಿರುವುದು ವಿಶೇಷ. ಮಿಕ್ಕಂತೆ ರೀಲ್ ಲೈಫ್ನಲ್ಲಿ ರಗಡ್ ಪಾತ್ರವನ್ನು ನಿರ್ವಹಿಸಿ ಸೈ ಎನಿಸಿಕೊಂಡ ಗೌತಮಿ ಜಾಧವ್ ತೆರೆಯಾಚೆ ಪ್ರಾಣಿಪ್ರಿಯೆ. ಅದರಲ್ಲಿಯೂ ಶ್ವಾನಗಳೆಂದರೆ ಇವರಿಗೆ ಪಂಚ ಪ್ರಾಣ. ಇದಕ್ಕೆ ಕೈಗನ್ನಡಿ ಎಂಬಂತೆ ಗೌತಮಿ ಜಾಧವ್ ನಾಲ್ಕು ಶ್ವಾನಗಳನ್ನು ಅಕ್ಕರೆಯಿಂದ ಸಾಕಿದ್ದಾರೆ. ಪ್ರಿನ್ಸಿ, ಕ್ವೀನ್, ಹ್ಯಾಪಿ, ಕಾಫಿ ಎಂದು ಹೆಸರನ್ನಿಟ್ಟಿದ್ದಾರೆ.


Click it and Unblock the Notifications











