Sathya Serial: ಲಕ್ಷ್ಮಣನ ಮಗನನ್ನು ಮನೆಗೆ ಕರೆದುಕೊಂಡು ಬಂದ ರಾಯರು
ಸತ್ಯ ಧಾರಾವಾಹಿಯಲ್ಲಿ ಬೀಗರ ಮನೆಯಲ್ಲಿ ಸೀತಾ ಗೌರಿ-ಗಣೇಶ ಹಬ್ಬವನ್ನು ಅದ್ಧೂರಿಯಾಗಿ ಆಚರಿಸಿದ್ದಾಗಿದೆ. ಈಗ ವಾಪಸ್ ತಮ್ಮ ಮನೆಗೆ ಬಂದಿದ್ದಾರೆ. ಪದೇ ಪದೆ ಸೀತಾ ತಾನು ಬೀಗರ ಮನೆಯಲ್ಲಿ ಇದ್ದಾಗ ಜಾನಕಿ ಹಾಗೂ ಗಿರಿಜಮ್ಮ ಹೇಗೆ ನಡೆದುಕೊಂಡರು, ಹಣದಿಂದ ಬಡತನವಿದ್ದರೂ, ಗುಣದಿಂದ ಶ್ರೀಮಂತರು ಎಂದು ಹೊಗಳುತ್ತಿರುತ್ತಾಳೆ.
ಈಗ ಸೀತಾ ಸತ್ಯಳನ್ನು ಒಪ್ಪಿಕೊಂಡಿರುವುದು ಒಂದುಕಡೆ ದಿವ್ಯಾಳಿಗೆ ಹೊಟ್ಟೆ ಉರಿಯುತ್ತಿದ್ದರೆ, ಮತ್ತೊಂದು ಕಡೆ ಕೀರ್ತನಾಳಿಗೆ ತಡೆದುಕೊಳ್ಳಲು ಸಾಧ್ಯವಾಗುತ್ತಿಲ್ಲ.

ಕೀರ್ತನಾ ಆದಷ್ಟು ಬೇಗನೇ ದಿವ್ಯಾಳನ್ನು ತನ್ನ ಮನೆಗೆ ಕರೆಸಿಕೊಳ್ಳಬೇಕು ಎಂದು ಯೋಚಿಸಿದ್ದಾಳೆ. ಸೀತಾ ಕೂಡ ಸತ್ಯ ಪರ ಇರುವುದಕ್ಕೆ ಅವರ ಮನಸ್ಸನ್ನು ತನ್ನಕಡೆಗೆ ಸೆಳೆದುಕೊಳ್ಳುವುದಕ್ಕೆ ಪ್ರಯತ್ನ ಪಡುತ್ತಿದ್ದಾಳೆ. ಹೀಗಾಗಿ ಅಮ್ಮನ ಬಳಿ ಹೋಗಿ ಸ್ವಲ್ಪ ಮಾತನಾಡಬೇಕಿತ್ತು ಎಂದು ಕೇಳುತ್ತಾಳೆ.
ಕೀರ್ತನಾ ಮಾತನ್ನು ಕೇಳಲು ಒಪ್ಪದ ಸೀತಾ
ಸೀತಾ ಏನು ವಿಷಯ ಎಂದಿದ್ದಕ್ಕೆ ಸತ್ಯ ಬಗ್ಗೆ ಒಂದು ವಿಚಾರ ಹೇಳಬೇಕಿತ್ತು. ಬಹಳ ಮುಖ್ಯವಾದ ವಿಷಯ ಎನ್ನುತ್ತಾಳೆ. ಆದರೆ ಸೀತಾ, ಕೀರ್ತನಾ ಮಾತಿಗೆ ಸೊಪ್ಪು ಹಾಕುವುದಿಲ್ಲ. ಏನೂ ಬೇಡ ಎಂದು ಹೇಳಿ ಕಳಿಸುತ್ತಾಳೆ. ಯಾಕೆಂದರೆ, ಸೀತಾಳಿಗೆ ಗೊತ್ತು ಕೀರ್ತನಾ ಸತ್ಯ ಬಗ್ಗೆ ಇಲ್ಲಸಲ್ಲದ ವಿಚಾರವನ್ನು ಹೇಳುತ್ತಾಳೆ ಎಂದು. ಹಾಗಾಗಿ ಕೀರ್ತನಾ ಮಾತುಗಳನ್ನು ಕೇಳಲು ಸೀತಾ ಒಪ್ಪುವುದಿಲ್ಲ.
ತಮ್ಮನ ಬಗ್ಗೆ ಸತ್ಯ ತಿಳಿದ ರಾಯರು
ರಾಯರಿಗೆ ಎದೆ ನೋವು ಕಾಣಿಸಿಕೊಂಡಾಗ ಪಾರ್ಕ್ನಲ್ಲಿ ಬಾಲಕನೊಬ್ಬ ರಕ್ಷಿಸಿರುತ್ತಾನೆ. ಆ ಹುಡುಗನ ಮೇಲೆ ಅಪಾರವಾದ ಗೌರವವನ್ನು ಇಟ್ಟುಕೊಂಡಿದ್ದ ರಾಯರು, ಪ್ರತೀ ದಿನವೂ ಪಾರ್ಕ್ಗೆ ಬರುತ್ತಾರೆ. ಅಲ್ಲಿ ಹುಡುಗನನ್ನು ನಿತ್ಯ ಭೇಟಿ ಮಾಡಿ ಸ್ವಲ್ಪ ಹೊತ್ತು ಕಾಲ ಕಳೆದು ಹೋಗುವುದು ಸಾಮಾನ್ಯವಾಗಿರುತ್ತದೆ. ಹೀಗಿರುವಾಗ ರಾಯರ ಕಣ್ಣಿಗೆ ಲಕ್ಷ್ಮಣ ಮತ್ತು ಪದ್ಮ ಇಬ್ಬರು ಪಾರ್ಕ್ನಲ್ಲಿ ಮಾತನಾಡುತ್ತಿರುವುದು ಗೊತ್ತಾಗುತ್ತದೆ. ಅಲ್ಲದೇ, ಪದ್ಮ ನನಗೂ ಸಮಾಜದಲ್ಲಿ ಸ್ಥಾನ ಬೇಕು. ನಿಮ್ಮ ಹೆಂಡತಿಯಾಗಿದ್ದರೂ ಕದ್ದುಮುಚ್ಚಿ ಯಾಕೆ ಬದುಕಬೇಕು ಎಂದು ಪ್ರಶ್ನಿಸುತ್ತಿರುತ್ತಾಳೆ. ಲಕ್ಷ್ಮಣ, ಪದ್ಮಾಳ ಕೈಗೆ ಕಂತೆ ಕಂತೆ ಹಣ ಕೊಡುವುದನ್ನು ರಾಯರು ನೋಡುತ್ತಾರೆ.

ನೊಂದುಕೊಂಡಿರುವ ರಾಯರು
ಲಕ್ಷ್ಮಣ ಮತ್ತೊಂದು ಮದುವೆಯಾಗಿದ್ದು, ಮನೆಯಲ್ಲಿ ಈ ವಿಚಾರವನ್ನು ಮುಚ್ಚಿಟ್ಟಿರುವುದು ಗೊತ್ತಾಗುತ್ತದೆ. ಅಷ್ಟೇ ಅಲ್ಲದೇ, ಒಂದು ದಿನವೂ ತನ್ನಿಂದ ಏನನ್ನೂ ಮುಚ್ಚಿಡದೇ, ತಾನು ಹೇಳಿದಂತೆ ನಡೆದುಕೊಳ್ಳುತ್ತಿದ್ದ ಲಕ್ಷ್ಮಣ ಜೀವನದಲ್ಲಿ ಇಷ್ಟು ದೊಡ್ಡ ತಪ್ಪನ್ನು ಮಾಡಿರುವುದಕ್ಕೆ ರಾಯರು ಬಹಳ ನೊಂದುಕೊಳ್ಳುತ್ತಾರೆ. ನನ್ನ ತಮ್ಮನೇ ನನಗೆ ಮೋಸ ಮಾಡಿದ. ಮನೆಯಲ್ಲಿರುವ ಮುದ್ದಾದ ಹೆಂಡತಿಗೆ ವಂಚಿಸಿದ್ದಾನೆ. ಇದಕ್ಕೆ ಇತ್ತೀಚೆಗೆ ಲಕ್ಷ್ಮಣ ಪದೇ ಪದೇ ಹಣ ತೆಗೆದುಕೊಂಡು ಹೋಗುತ್ತಿದ್ದದ್ದು ಎಂಬುದು ಸ್ಪಷ್ಟವಾಗುತ್ತದೆ. ಇದೇ ಬೇಸರದಲ್ಲಿ ರಾಯರು ಪಾರ್ಕ್ನಲ್ಲಿ ಕುಳಿತಿರುತ್ತಾರೆ.
ಮನೆಗೆ ಬಂದ ಲಕ್ಷ್ಮಣನ ಮಗ
ಆಗ ಆ ಬಾಲಕ ಬಂದು ಮಾತನಾಡಿಸುತ್ತಾನೆ. ರಾಯರು ತಮ್ಮ ನೋವನ್ನೆಲ್ಲಾ ಆ ಹುಡುಗನ ಬಳಿ ಹೇಳಿಕೊಂಡು ಅಳುತ್ತಾರೆ. ನಂತರ ಆ ಹುಡುಗನನ್ನು ನನಗೋಸ್ಕರ ಇವತ್ತು ನಮ್ಮ ಮನೆಗೆ ಬರುತ್ತೀಯಾ ಎಂದು ಕೇಳಿ ಕರೆದುಕೊಂಡು ಹೋಗುತ್ತಾರೆ. ಆದರೆ, ರಾಯರಿಗೆ ಅವನೇ ಲಕ್ಷ್ಮಣನ ಮಗ ಎಂಬುದು ಗೊತ್ತಿರುವುದಿಲ್ಲ. ಮನೆಗೆ ಕರೆದುಕೊಂಡು ಬಂದ ತಕ್ಷಣ ಎಲ್ಲರೂ ಖುಷಿಯಿಂದ ಮಾತನಾಡಿಸುತ್ತಾರೆ.
ಲಕ್ಷ್ಮಣ- ಮಗ ಮುಖಾಮುಖಿ?
ಸತ್ಯ ಆ ಹುಡುಗನನ್ನು ನೋಡಿ ಶಾಕ್ ಆಗುತ್ತಾಳೆ. ಯಾಕೆಂದರೆ, ಸತ್ಯಳಿಗೆ ಆ ಹುಡುಗ ಲಚ್ಚಿ ಮತ್ತು ಆತನೇ ಲಕ್ಷ್ಮಣನ ಎರಡನೇ ಹೆಂಡತಿಯ ಮಗ ಎಂಬ ಸತ್ಯ ಗೊತ್ತಿರುತ್ತದೆ. ಲಕ್ಷ್ಮಣ ಕೂಡ ಮನೆಯಲ್ಲೇ ಇದ್ದು, ಲಕ್ಷ್ಮಣ ಹಾಗೂ ಹುಡುಗ ಎದುರಾದರೆ ಏನಾಗಬಹುದು ಎಂಬ ಕುತೂಹಲ ಮೂಡಿದೆ.


Click it and Unblock the Notifications











