Shashi Raj: ತಂದೆ ನಟನಾಗಬೇಕಿತ್ತು.. ಅಕಸ್ಮಾತ್ ಆಗಿ ಮಗ ನಟಿಸುವಂತಾಗಿದೆ
ಸತ್ಯ ಧಾರಾವಾಹಿಯಲ್ಲಿ ಪ್ರೇಯಸಿಗಾಗಿ ಜೀವನದಲ್ಲಿ ಬಹುದೊಡ್ಡ ತಪ್ಪನ್ನು ಮಾಡಿರುವ ಬಾಲ ಹೆಂಡತಿಗೆ ಸುಳ್ಳಿನ ಅರಮನೆಯನ್ನೇ ಕಟ್ಟಿದ್ದ. ಆದರೆ, ಈಗ ಬದುಕು ಎಂದರೆ ಏನು? ಎಂದು ಅರ್ಥ ಮಾಡಿಕೊಂಡಿದ್ದು, ಜೀವನದ ಪಾಠವನ್ನು ಕಲಿತಿದ್ದಾನೆ.
ಯಾರಿಗೂ ಮೋಸ ಮಾಡದೇ, ಬದುಕುವುದನ್ನು ರೂಢಿಸಿಕೊಂಡಿದ್ದಾನೆ. ಇಷ್ಟು ಬೇಗ ಬದಲಾಗಿರುವ ಬಾಲ ಈಗ ಮೂಟೆ ಹೊರುತ್ತಿದ್ದು, ನಿಜ ಜೀವನದಲ್ಲೂ ಹಾಲು, ಪೇಪರ್ ಮಾರಿದ್ದು ಇದೆಯಂತೆ.

ಈ ಬಗ್ಗೆ ಸ್ವತಃ ಶಶಿ ರಾಜ್ ಅವರೇ ಹೇಳಿಕೊಂಡಿದ್ದಾರೆ. ಹೌದು, ಸತ್ಯ ಧಾರಾವಾಹಿಯಲ್ಲಿ ಬಾಲನ ಪಾತ್ರದಲ್ಲಿ ನಟಿಸುತ್ತಿರುವ ನಟನ ಹೆಸರು ಶಶಿರಾಜ್.
ಅಪ್ಪನ ಅವಕಾಶ ಸಿಕ್ಕಿದ್ದು ಮಗನಿಗೆ
ನಟ ಶಶಿ ರಾಜ್ ಅವರ ತಂದೆಯ ಹೆಸರು ರಾಜ್ ಕುಮಾರ್. ಅಂದಹಾಗೆ ಶಂಕರ್ ನಾಗ್ ಅವರು ಬದುಕಿದ್ದರೆ, ಇವರೂ ಕೂಡ ಒಬ್ಬ ನಟನಾಗಬೇಕಿತ್ತಂತೆ. ಅಕಸ್ಮಾತ್ ಆಗಿ ತಂದೆಗೆ ತಪ್ಪಿದ ನಟನಾಗುವ ಅವಕಾಶ ಈಗ ಮಗನಿಗೆ ಸಿಕ್ಕಿದೆ. ಶಶಿರಾಜ್ ಅವರ ತಂದೆ ಶಂಕರ್ ನಾಗ್ ಅವರ ಜೊತೆಗೆ ಸಿನಿಮಾ ಒಂದರಲ್ಲಿ ನಟಿಸಿದ್ದರಂತೆ. ಆದರೆ, ಮುಂದುವರೆಯಲು ಸಾಧ್ಯವಾಗಲಿಲ್ಲವಂತೆ. ಈಗ ಮಗ ಶಶಿ ರಾಜ್ ಅವರು ರಂಗಭೂಮಿ ಮೂಲಕ ನಟನೆಗೆ ಹಾಯ್ ಹೇಳಿದ್ದು, ಇಲ್ಲೇ ಬದುಕು ಕಟ್ಟಿಕೊಂಡಿದ್ದಾರೆ.
ಶಶಿ ರಾಜ್ ಓದಿದ್ದೊಂದು ಈಗ ಮಾಡುತ್ತಿರುವೊಂದು
ಇನ್ನು ಶಶಿ ರಾಜ್ ಬಿಸಿಎ ಓದಿ, ಎಂಬಿಎ ಅನ್ನು ಅರ್ಧಕ್ಕೆ ನಿಲ್ಲಿಸಿದ್ದು, ನ್ಯೂಟ್ರಿಷನಲ್ ಕೋರ್ಸ್ ಕೂಡ ಮಾಡಿಕೊಂಡಿದ್ದಾರೆ. ಹೇಗೋ ಕಾಲೇಜಿನಲ್ಲಿ ಓದುವಾಗಲೇ ಇನ್ಫೋಸಿಸ್ಗೆ ಸೆಲೆಕ್ಟ್ ಆಗಿದ್ದರು. ಇನ್ಫೋಸಿಸ್ನಲ್ಲಿ ಕೆಲಸ ಮಾಡಿದ್ದ ಶಶಿ ಮೂರುವರೆ ವರ್ಷಗಳ ಬಳಿಕ ಕೆಲಸ ಬಿಟ್ಟರು. ಕೊನೆಗೆ ರಂಗಭೂಮಿಯೇ ತಮಗೆ ಸರಿ ಎಂದು ತೀರ್ಮಾನಿಸಿದ ಶಶಿರಾಜ್, ಒಂದಾದ ಮೇಲೆ ಒಂದು ನಾಟಕಗಳನ್ನು ಮಾಡುತ್ತಾ, ಆಡಿಷನ್ಗಳನ್ನು ಕೊಡುತ್ತಿದ್ದರು.
ಶಶಿ ಅವರ ಕಿರುತೆರೆ ಪಯಣ
'ಶಾಂತಂ ಪಾಪಂ' ಸರಣಿ ಮೂಲಕ ಕಿರುತೆರೆಯ ಪಯಣ ಆರಂಭಿಸಿದ ಶಶಿ, 'ಪ್ರೇಮಲೋಕ' ಧಾರಾವಾಹಿಯಲ್ಲಿ ನಟಿಸಿದ್ದಾರೆ. ಬಳಿಕ 'ಸತ್ಯ' ಧಾರಾವಾಹಿಯ ಕಾರ್ತಿಕ್ ಪಾತ್ರಕ್ಕಾಗಿ ಆಡಿಷನ್ ಕೊಟ್ಟಾಗ ಬಾಲ ಆಗಿ ಸೆಲೆಕ್ಟ್ ಆದರು. ಸೀರಿಯಲ್ನಲ್ಲಿ ನಟನೆ ಶುರು ಮಾಡಿದ ಮೇಲೆ ಇವರ ಮನೆಯಲ್ಲಿ ಮಗನನ್ನು ಸ್ಕ್ರೀನ್ ಮೇಲೆ ನೋಡಿ ಪಟ್ಟ ಖುಷಿ ಅಷ್ಟಿಷ್ಟಲ್ಲ. ಮೊದಲ ಧಾರಾವಾಹಿಯಲ್ಲಿ ದೊಡ್ಡ ಬ್ರೇಕ್ ಪಡೆದಿರುವ ಶಶಿ, 'ಸತ್ಯ' ಧಾರಾವಾಹಿ ಜೊತೆಗೆ ಸಿರಿ ಕನ್ನಡ ವಾಹಿನಿಯಲ್ಲಿ ಮೂಡಿ ಬರುತ್ತಿರುವ 'ಅಮರ ಮಧುರ ಪ್ರೇಮ' ಧಾರಾವಾಹಿಯಲ್ಲೂ ಕಾಣಿಸಿಕೊಂಡಿದ್ದಾರೆ. ಸದ್ಯ ರಂಗಭೂಮಿ, ಜಿಮ್, ಯೋಗ ಹಾಗೂ ಧಾರಾವಾಹಿಗಳಲ್ಲಿ ಬ್ಯುಸಿಯಾಗಿ ಬಿಟ್ಟಿದ್ದಾರೆ.
ಮಗ ಆಕ್ಟರ್ ಆಗಿರುವುದಕ್ಕೆ ಖುಷಿ ಇದೆ
ಶಶಿರಾಜ್ ಮೂಲತಃ ಬೆಂಗಳೂರಿನವರೇ ಆಗಿದ್ದು, ಓದಿದ್ದು, ಬೆಳೆದಿದ್ದೆಲ್ಲಾ ಬೆಂಗಳೂರಿನಲ್ಲೇ. ಮನೆಯಲ್ಲಿ ತಂದೆ, ತಾಯಿ ಹಾಗೂ ತಂಗಿ ಇದ್ದಾರೆ. ಸಹೋದರಿ ಧನುಶ್ರೀನ ಶಶಿ ಓದಿಸುತ್ತಿದ್ದಾರಂತೆ. ಧನುಶ್ರೀ ಎಂಜಿನಿಯರಿಂಗ್ ಮುಗಿಸಿ ಸದ್ಯ ಎಂಬಿಎ ವ್ಯಾಸಂಗ ಮಾಡುತ್ತಿದ್ದಾರೆ. ಮಗ ಆಕ್ಟರ್ ಆಗಿರುವುದಕ್ಕೆ ಮನೆಯಲ್ಲಿ ಎಲ್ಲರಿಗೂ ಖುಷಿ ಇದೆ ಎಂದು ಹೇಳಿದ್ದಾರೆ. ಇತ್ತೀಚೆಗೆ ಶಶಿರಾಜ್ಗೆ ಸಿನಿಮಾ ಹಾಗೂ ಬೇರೆ ಧಾರಾವಾಹಿಗಳಲ್ಲಿ ನಟಿಸುವ ಅವಕಾಶಗಳು ಒದಗಿ ಬರುತ್ತಿವೆಯಂತೆ. ಶಶಿರಾಜ್ ಉತ್ತಮವಾದ ಪಾತ್ರ ಹಾಗೂ ಕಥೆಗಳಿಗೆ ಎದುರು ನೋಡುತ್ತಿದ್ದು, ಸತ್ಯ ಧಾರಾವಾಹಿ ತಮಗೆ ದೊಡ್ಡ ಬ್ರೇಕ್ ಅನ್ನು ತಂದು ಕೊಟ್ಟಿದೆ. ಟೀಂ ಕೂಡ ಬಹಳ ಒಳ್ಳೆಯದು ಎಂದು ಹೇಳಿದ್ದಾರೆ.


Click it and Unblock the Notifications











