Anushree Janardhan: ಕಿರುತೆರೆಯ ಈ ಖಳನಾಯಕಿಗೆ ಡ್ಯಾನ್ಸ್ ಮಾಡೋದಂದ್ರೆ ಇಷ್ಟ
ಸ್ವಪ್ನ ಕೃಷ್ಣ ನಿರ್ದೇಶನದಲ್ಲಿ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ಸತ್ಯ' ಧಾರಾವಾಹಿಯಲ್ಲಿ ನಾಯಕ ಕಾರ್ತಿಕ್ ಅಕ್ಕ ಕೀರ್ತನಾ ಆಗಿ ನಟಿಸುತ್ತಿರುವ ಚೆಂದುಳ್ಳಿ ಚೆಲುವೆಯ ಹೆಸರು ಅನು ಜನಾರ್ಧನ್. ಸತ್ಯ ಧಾರಾವಾಹಿಯಲ್ಲಿ ಖಳನಾಯಕಿಯಾಗಿ ನಟಿಸಿ ವೀಕ್ಷಕರ ಮನ ಸೆಳೆದಿರುವ ಅನು ಜನಾರ್ಧನ್ ಅವರ ಬಣ್ಣದ ಪಯಣ ಶುರುವಾಗಿದ್ದು ಪೌರಾಣಿಕ ಧಾರಾವಾಹಿ ಮೂಲಕ.
ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ಮಹಾಕಾಳಿ' ಧಾರಾವಾಹಿಯಲ್ಲಿ ನಟಿಸುವ ಮೂಲಕ ಕಿರುತೆರೆ ಪಯಣ ಶುರು ಮಾಡಿದ ಅನು ಜನಾರ್ಧನ್ ತದ ನಂತರ ನಂತರ 'ಜೈ ಹನುಮಾನ್' ಹಾಗೂ 'ಶ್ರೀವಿಷ್ಣು ದಶಾವತಾರ' ಧಾರಾವಾಹಿಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದ ಅನು ಜನಾರ್ಧನ್ ನಂತರ ಬದಲಾದುದು ಖಳನಾಯಕಿಯಾಗಿ.

'ರಂಗನಾಯಕಿ' ಈಗ ಖಳನಾಯಕಿ
ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ರಂಗನಾಯಕಿ' ಧಾರಾವಾಹಿಯಲ್ಲಿ ಖಳನಾಯಕಿ ವಿಭಾ ಆಗಿ ಅಭಿನಯಿಸಿದ್ದ ಅನುಶ್ರೀಗೆ ಆ ಪಾತ್ರ ತಂದುಕೊಟ್ಟ ಹೆಸರು ಅಷ್ಟಿಷ್ಟಲ್ಲ. ಮೊದಲ ಬಾರಿಗೆ ಆಕೆ ಖಳನಾಯಕಿಯಾಗಿ ನಟಿಸಿದ್ದರೂ ಅತೀ ಕಡಿಮೆ ಅವಧಿಯಲ್ಲಿಯೇ ಸೀರಿಯಲ್ ಪ್ರಿಯರ ಮನ ಸೆಳೆದು ಬಿಟ್ಟರು ಅನುಶ್ರೀ. ತದ ನಂತರ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ಬ್ರಹ್ಮಗಂಟು' ಧಾರಾವಾಹಿಯಲ್ಲಿ ಆರ್ ಜೆ ಆಗಿ ಕಾಣಿಸಿಕೊಂಡಿದ್ದ ಅನುಶ್ರೀ ಅಲ್ಲಿಯೂ ನೆಗೆಟಿವ್ ರೋಲ್ನಲ್ಲಿ ಕಾಣಿಸಿಕೊಂಡಿದ್ದರು.

ನೆಗೆಟಿವ್ ರೋಲ್ನಲ್ಲಿ ಮೋಡಿ
ಸದ್ಯ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ಸತ್ಯ' ಧಾರಾವಾಹಿಯಲ್ಲಿ ಕೀರ್ತನಾ ಆಗಿ ನಟಿಸುತ್ತಿರುವ ಅನುಶ್ರೀ ಖಳನಾಯಕಿಯಾಗಿ ಮೋಡಿ ಮಾಡಿದ ಬೆಡಗಿ. "ಪಾಸಿಟಿವ್ ಪಾತ್ರಗಳಿಗೆ ಜೀವ ತುಂಬುವುದು ಎಂದರೆ ನನಗೆ ಕೊಂಚವೂ ಇಷ್ಟವಿಲ್ಲ. ಯಾಕೆಂದರೆ, ಅದರಲ್ಲಿ ನಟನೆಗೆ ಕೊಂಚವೂ ಅವಕಾಶವಿಲ್ಲ. ಆದರೆ, ನೆಗೆಟಿವ್ ರೋಲ್ ಆದರೆ ಅದರಲ್ಲಿ ಎರಡು ರೀತಿಯಲ್ಲಿಯೂ ನಟಿಸಬಹುದು. ನಟನೆಗೆ ಅವಕಾಶ ಅದರಲ್ಲಿ ಜಾಸ್ತಿಯೇ." ಎಂಬುದು ಅನುಶ್ರೀ ಅವರ ಅಂಬೋಣ.

ನೃತ್ಯಗಾರ್ತಿಯೂ ಹೌದು!
ಮನೋಜ್ಞ ನಟನೆಯ ಹೊರತಾಗಿ ಸ್ಟೈಲಿಶ್ ಲುಕ್ ಮೂಲಕ ಕಿರುತೆರೆ ವೀಕ್ಷಕರ ಮನ ಸೆಳೆದಿರುವ ಅನುಶ್ರೀ ಅವರ ನಟನಾ ಪಯಣ ಶುರುವಾಗಿದ್ದು ನೃತ್ಯದಿಂದ. ನೃತ್ಯದಿಂದ ನಟನೆಯ ಎಂದು ನಿಮಗೆ ಅನ್ನಿಸಿದರೂ ಅದು ಸತ್ಯ. ಸಣ್ಣ ವಯಸ್ಸಿನಿಂದಲೂ ನೃತ್ಯದತ್ತ ವಿಶೇಷ ಒಲವು ಹೊಂದಿದ್ದ ಅನುಶ್ರೀ ಬಯಸಿದ್ದು ಕೂಡಾ ನೃತ್ಯಗಾರ್ತಿಯಾಗಬೇಕೆಂದೇ. ಅನುಶ್ರೀ ನೃತ್ಯ ನೋಡಿದ್ದ ಸ್ನೇಹಿತರು ನೀನು ನಟಿಯಾಗಬಹುದು ಎಂದು ಪ್ರೇರೇಪಿಸಿದರು. ಈ ಮಾತು ಪದೇ ಪದೆ ಕೇಳುತ್ತಿದ್ದ ಕಾರಣ ನಟನೆಗೆ ಬರುವ ನಿರ್ಧಾರ ಮಾಡಿದ ಅನುಶ್ರೀ ಸದ್ಯ ಕಿರುತೆರೆಯಲ್ಲಿ ಬ್ಯುಸಿ. ಮುಂದಿನ ದಿನಗಳಲ್ಲಿ ಹಿರಿತೆರೆಗೆ ಪಾದಾರ್ಪಣೆ ಮಾಡುತ್ತಾರಾ ಎಂದು ಕಾದುನೋಡಬೇಕಾಗಿದೆ.


Click it and Unblock the Notifications