ವಿಚ್ಛೇದನಕ್ಕೆ ಸಹಿ ಹಾಕಲು 1 ದಿನ ಕೇಳಿದ ಸತ್ಯ, ವಾರವಾದರೂ ಮುಗಿಯದ ಕಥೆ, ವ್ಯಥೆ!
ಸತ್ಯ ಧಾರಾವಾಹಿ ಮೊದಲಿನಿಂದಲೂ ಚೆನ್ನಾಗಿಯೇ ಮೂಡಿ ಬರುತ್ತಿತ್ತು. ಆದರೆ ಸತ್ಯ ಮದುವೆ ಕಾರ್ತಿಕ್ ಜೊತೆ ನಡೆದಾಗಿನಿಂದ ಸೀರಿಯಲ್ ಯಾಕೋ ಕುಂಟುತ್ತಾ ಸಾಗಿದೆ. ಇದು ಪ್ರೇಕ್ಷಕರನ್ನು ಕೂಡ ಬೇಸರಗೊಳ್ಳುವಂತೆ ಮಾಡಿದೆ.
ಎಲ್ಲ ಧಾರಾವಾಹಿಗಳಲ್ಲೂ ಮದುವೆಯ ಸಂಭ್ರಮಗಳನ್ನೂ ವಾರಾನುಗಟ್ಟಲೆ ತೋರಿಸುವುದು ಸಹಜವೇ. ಆದರೆ ಮದುವೆಯ ಬಳಿಕವೂ ಸತ್ಯ ಧಾರಾವಾಹಿ ತೀರಾ ಸ್ಲೋ ಆಗಿಬಿಟ್ಟಿದೆ. ಪ್ರತಿಯೊಂದು ಸೀನ್ ಕೂಡ ಡ್ರ್ಯಾಗ್ ಮಾಡಲಾಗುತ್ತಿದೆ.
ಸೀರಿಯಲ್ ನಲ್ಲಿ ಒಂದು ದಿನ ಕಳೆಯುವುದಕ್ಕೆ ಹತ್ತು ಎಪಿಸೋಡ್ ತೆಗೆದುಕೊಳ್ಳುತ್ತಿದೆ. ಇದು ಪ್ರೇಕ್ಷಕರಿಗೆ ಬೋರ್ ಆಗುವಂತೆ ಮಾಡುತ್ತಿದೆ. ದಿವ್ಯಾ ಬಾಲನ ಕೈಯಲ್ಲಿ ಸಿಕ್ಕಿ ಹಾಕಿಕೊಂಡಿದ್ದಾಳೆ. ಸತ್ಯ ಡಿವೋರ್ಸ್ ಪೇಪರ್ಸ್ ಗಳನ್ನು ಕೈಯಲ್ಲಿ ಹಿಡಿದಿದ್ದಾಳೆ.

ಸತ್ಯ ಮನೆ ಉಳಿಸಿದ ಕಾರ್ತಿಕ್!
ಸತ್ಯ ದಿವ್ಯ ಮದುವೆಗಾಗಿ ಮನೆ ಹಾಗೂ ಗ್ಯಾರೇಜ್ ಪತ್ರವನ್ನು ಅಡವಿಟ್ಟು ಸಾಲ ಪಡೆದಿದ್ದಳು. ಆದರೆ, ಬಡ್ಡಿ ಕಟ್ಟಿಲ್ಲ ಎಂಬ ಕಾರಣಕ್ಕೆ ಫೈನಾನ್ಸರ್ ಬಂದು ಮನೆಯಲ್ಲಿ ಗಲಾಟೆ ಮಾಡಿದ್ದರು. ಈ ವೇಳೆ ಕಾರ್ತಿಕ್ ಮಧ್ಯೆ ಬಂದು ಸಮಸ್ಯೆ ಬಗೆ ಹರಿಸಿದ್ದ. ಇದೀಗ ಮನೆ ಹಾಗೂ ಗ್ಯಾರೇಜ್ ಪತ್ರವನ್ನು ಫೈನಾನ್ಸರ್ ವಾಪಸ್ ಕೊಟ್ಟಿದ್ದಾನೆ. ಇದು ಈಗ ಜಾನಕಿ ಕೈ ಸೇರಿದೆ. ಮನೆ ಹಾಗೂ ಗ್ಯಾರೇಜ್ ಪತ್ರ ನೋಡಿ ಜಾನಕಿ ಮತ್ತು ಗಿರಿಜಮ್ಮ ಖುಷಿ ಪಟ್ಟಿದ್ದಾರೆ. ಅಳಿಯಂದಿರು ನಮ್ಮ ಪಾಲಿನ ದೇವರು. ಅವರು ಇಲ್ಲದಿದ್ದರೆ, ನಾವು ಬೀದಿಗೆ ಬೀಳಬೇಕಿತ್ತು ಎಂದು ಕಾರ್ತಿಕ್ ನನ್ನು ಕೊಂಡಾಡುತ್ತಾರೆ.

ಸತ್ಯ ಮುಂದೆ ಡಿವೋರ್ಸ್ ಸವಾಲು!
ಸತ್ಯ ಕೈಯಲ್ಲಿ ಡಿವೋರ್ಸ್ ಪೇಪರ್ಸ್ ಕೊಟ್ಟ ಸೀತಾ, ಸಹಿ ಹಾಕಲು ಹೇಳಿದ್ದಾಳೆ. ಮಗನ ಬದುಕು ಚೆನ್ನಾಗಿರಬೇಕು ಎಂಬ ಕಾರಣಕ್ಕೆ ಈ ಕೆಲಸವನ್ನು ಮಾಡಿದ್ದಾಳೆ. ಆದರೆ ಸತ್ಯಗೆ ಇಲ್ಲೇ ಬದುಕಿ ತೋರಿಸುವ ನಿರ್ಧಾರ ಅವಳದ್ದಾಗಿದೆ. ಈ ನಡುವೆಯೇ ಡಿವೋರ್ಸ್ ಪೇಪರ್ಸ್ ಗೆ ಸಹಿ ಹಾಕು ಎಂದು ಸೀತಾ ಹೇಳಿರುವುದು ಸತ್ಯ ಕೈ ಕಟ್ಟಿ ಹಾಕಿದಂತಾಗಿದೆ. ಒಂದು ದಿನ ಸಮಯ ತೆಗೆದುಕೊಂಡಿರುವ ಸತ್ಯ, ಊಟ-ನಿದ್ದೆ ಬಿಟ್ಟು ಯೋಚಿಸುತ್ತಿದ್ದಾಳೆ. ಸಹಿ ಹಾಕಬೇಕಾ..? ಇಲ್ಲವಾ ಎಂಬ ಚಿಂತೆಯಲ್ಲಿ ಮುಳುಗಿದ್ದಾಳೆ. ಇದನ್ನು ಗಮನಿಸಿದ ಕಾರ್ತಿಕ್ ಸತ್ಯ ಜೊತೆಗೆ ಸಮಧಾನವಾಗಿ ಮಾತನಾಡುತ್ತಿದ್ದಾನೆ.

ಬಾಲನ ಕೈ ಹಿಡಿದ ದಿವ್ಯಾ ಬಾಳು ಬರೀ ಗೋಳು!
ದಿವ್ಯಾ ಕೋಟಿ ಕೋಟಿ ಹಣದ ಆಸೆಗೆ ಬಾಲನನ್ನು ಮದುವೆಯಾಗಿ ಬಂದಿದ್ದಾಳೆ. ಆದರೆ, ಬಾಲ ದಿವ್ಯಾಳನ್ನು ನಂಬಿಸಲು ಕ್ಷಣಕ್ಕೊಂದು ಸುಳ್ಳು ಹೇಳುತ್ತಿದ್ದಾನೆ. ದಿವ್ಯಾ ಒಂದು ಕ್ಷಣ ಅನುಮಾನ ಪಟ್ಟರೆ, ಮತ್ತೊಂದು ಕ್ಷಣ ಆತನ ಮಾತು ಕೇಳಿಕೊಂಡು ಕಷ್ಟ ಅನುಭವಿಸುತ್ತಿದ್ದಾಳೆ. ಬಿಟ್ಟು ಬಂದ ಬದುಕನ್ನು ನೆನಪಿಸಿಕೊಂಡು ಹಳ್ಳಿಯಲ್ಲಿ ಅಡ್ಜಸ್ಟ್ ಆಗಲು ಮುಂದಾಗಿದ್ದಾಳೆ.

ಸತ್ಯ ಸಹಿಹಾಕಲು 1 ದಿನ ಕೇಳಿದ್ದು, 1 ವಾರ ಆಯ್ತು!
ಇದೇ ಕಥೆಯೇ ಕಳೆದ 10-15 ದಿನಗಳಿಂದ ಎಳೆಯುತ್ತಲೇ ಇದೆ. ಸುಖಾ-ಸುಮ್ಮನೆ ಧಾರಾವಾಹಿಯನ್ನು ಎಳೆಯುತ್ತಿದ್ದು, ಪ್ರೇಕ್ಷಕರಿಗೆ ನೋಡಲು ಬೇಸರವಾಗುತ್ತಿದೆ. ಮೊದಲಿನಿಂದಲೂ ಟಾಪ್ ಸ್ಥಾನದಲ್ಲೇ ಈರುವ ಸತ್ಯ ಧಾರಾವಾಹಿಯ ಕಥೆಯನ್ನು ಯಾಕಿಷ್ಟು ರಬ್ಬರ್ ನಂತೆ ಎಳೆಯುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ. ಹೀಗೆ ಸತ್ಯ ಸೀರಿಯಲ್ ಮುಂದುವರೆದರೆ, ಪ್ರೇಕ್ಷಕರು ಧಾರಾವಾಹಿಯನ್ನು ಹಿಂದಕ್ಕಿಡುವುದು ಗ್ಯಾರೆಂಟಿ. ಅಷ್ಟರೊಳಗೆ ನಿರ್ದೇಶಕರು ಧಾರಾವಾಹಿಯ ಕತೆಯನ್ನು ಸ್ವಲ್ಪ ಫಾರ್ವರ್ಡ್ ಮಾಡುವುದು ಒಳ್ಳೆಯದು ಎಂಬುದು ಪ್ರೇಕ್ಷಕರ ಅಭಿಪ್ರಾಯವಾಗಿದೆ. ಸೀರಿಯಲ್ ಕಥೆ ಚೆನ್ನಾಗಿದ್ದಷ್ಟು ಪ್ರೇಕ್ಷಕರು ಕೂಡ ನೋಡಲು ಬಯಸುತ್ತಾರೆ.


Click it and Unblock the Notifications











