ಸತ್ಯ ಮುಖ ನೋಡಿ ಊಟ ಬಿಟ್ಟ ಕಾರ್ತಿಕ್!
'ಸತ್ಯ' ಧಾರಾವಾಹಿಯಲ್ಲಿ ಈಗ ಕಾರ್ತಿಕ್ ಮನೆಯಲ್ಲಿ ಅಸಮಾಧಾನ ಹೊತ್ತಿ ಉರಿಯುತ್ತಿದೆ. ಇದನ್ನು ಶಮನ ಮಾಡುವುದಕ್ಕೆ ಯಾರು ಬಂದರೂ ಆಗದು. ಸತ್ಯಾನೇ ಆ ಮನೆಯ ಸಂಪ್ರದಾಯಗಳನ್ನು ಅರ್ಥ ಮಾಡಿಕೊಂಡು, ಅದರಂತೆ ಮುಂದೆ ನಡೆಯಬೇಕಷ್ಟೆ.
ಕಾರ್ತಿಕ್ ಮನೆಯಲ್ಲಿ ಹಬ್ಬದ ಅಡುಗೆ ಮಾಡಿದ್ದು, ಎಲ್ಲರೂ ಊಟಕ್ಕೆ ಕುಳಿತಿದ್ದಾರೆ. ಸೀತಾ ಸತ್ಯ ಕಾಲು ಗುಣದ ಬಗ್ಗೆ ಮಾತನಾಡಿ, ನೋವುಂಟು ಮಾಡಿದ್ದಾಳೆ. ಇದೇ ಬೇಸರದಲ್ಲಿ ಸತ್ಯ ಊಟ ಮಾಡುತ್ತಿರುತ್ತಾಳೆ. ಇದನ್ನು ಗಮನಿಸಿದ ರಾಮಚಂದ್ರ ರಾಯರು, ಇಬ್ಬರಿಗೂ ಒಂದೇ ಎಲೆಯಲ್ಲಿ ಊಟ ಬಡಿಸಿರುವುದು ನಿಮ್ಮ ಪಾಡಿಗೆ ನೀವು ತಿನ್ನಲಿ ಎಂದಲ್ಲ ಎನ್ನುತ್ತಾರೆ.
ಒಬ್ಬರಿಗೊಬ್ಬರು ತಿನ್ನಿಸಲು ಹೇಳುತ್ತಾರೆ. ಕಾರ್ತಿಕ್ ಕಿಡಿ ಕಾರುತ್ತಲೇ ಸತ್ಯಗೆ ಊಟ ಮಾಡಿಸುತ್ತಾನೆ. ಆದರೆ ಸತ್ಯ ಊಟ ತಿನ್ನಿಸುವಾಗ ನಾನು ಎಂಜಲು ತಿನ್ನಲ್ಲ ಎಂದು ಹೇಳುತ್ತಾನೆ. ಅಲ್ಲದೇ, ಸಿಟ್ಟು ಮಾಡಿಕೊಂಡು ಊಟವೂ ಬೇಡ. ಏನೂ ಬೇಡ ಎಂದು ಹೇಳಿ ಹೋಗುತ್ತಾನೆ. ಆಗ ಸೀತಾ ಬೇಕಿತ್ತಾ ಎಂದು ಹೇಳುತ್ತಾಳೆ.

ಸತ್ಯಳ ಚಿಂತೆಯಲ್ಲಿ ಜಾನಕಿ!
ಜಾನಕಿ ಮನೆಯಲ್ಲಿ ಮಗಳು ಸತ್ಯಳ ಬಗ್ಗೆ ಯೋಚಿಸುತ್ತಿದ್ದಾಳೆ. ದೇವರ ಎದುರು ನಿಂತು, ಅವಳು ಒಂದು ದಿನವೂ ನಮ್ಮ ಮನೆಯಲ್ಲಿ ಸುಖವಾಗಿರಲಿಲ್ಲ. ಕಷ್ಟದಲ್ಲೇ ಬದುಕಿದ್ದಾಳೆ. ಈಗ ಹೋಗಿರುವ ಮನೆಯಲ್ಲಾದರೂ ಸುಖವಾಗಿರಲಿ. ಸತ್ಯ ಮದುವೆಯೇ ಆಗುವುದಿಲ್ಲ ಎಂದುಕೊಂಡಿದ್ದೆ. ಆದರೆ ಈಗ ಸತ್ಯ ಮದುವೆಯಾಗಿದೆ. ಆ ಮನೆಯಲ್ಲೂ ಸಂಸಾರ ನಡೆಸಲು ಆಗಲ್ಲ. ಬಂದು ಬಿಡುತ್ತೀನಿ ಅಮ್ಮ, ಇಲ್ಲಿರೋಕೆ ಆಗಲ್ಲ ಅಂತ ಫೋನ್ ಮಾಡಿ ಹೇಳಿದಳು. ಹಾಗಾಗದಿರಲಿ ದೇವರೇ, ಅವಳಿಗೆ ಅಲ್ಲಿ ಎಲ್ಲರನ್ನೂ ಎದುರಿಸುವ ಶಕ್ತಿ ಕೊಡು ದೇವರೇ ಎಂದು ಜಾನಕಿ ದೇವರನ್ನು ಬೇಡಿಕೊಳ್ಳುತ್ತಿರುತ್ತಾಳೆ.

ಸತ್ಯ ಕಂಡರೆ ಕೆಂಡ ಕಾರುತ್ತಿರುವ ಕಾರ್ತಿಕ್!
ಕಾರ್ತಿಕ್ಗೆ ಸತ್ಯನ ಮೇಲೆ ಇದ್ದ ಪ್ರೀತಿ ಈಗ ಕಣ್ಮರೆಯಾಗಿದೆ. ಸತ್ಯಳನ್ನು ಮದುವೆಯಾಗಿರುದೇ ದೊಡ್ಡ ತಲೆ ನೋವಾಗಿದೆ. ಅದರ ಜೊತೆಗೆ ಫಸ್ಟ್ ನೈಟ್ ಬೇರೆ ಸಿದ್ಧ ಮಾಡಿದ್ದಾರಲ್ಲ ಎಂದು ತಲೆ ಕೆಡಿಸಿಕೊಂಡಿದ್ದಾನೆ. ನನಗೆ ಈ ಮದುವೆ ಇಷ್ಟವಿಲ್ಲ ಎಂಬುದು ಗೊತ್ತಿದ್ದರೂ ಕೂಡ ಅದ್ಯಾಕೆ ಈ ಫಸ್ಟ್ ನೈಟ್ ಅರೇಂಜ್ ಮಾಡಿದ್ದಾರೆ. ಎಲ್ಲರಿಗೂ ತಲೆ ಕೆಟ್ಟಿದ್ಯಾ. ಇವರ ಜೊತೆಗೆ ಮಂಜ ಕೂಡ ಸೇರಿಕೊಂಡಿದ್ದಾನೆ. ನನಗೆ ಸಪೋರ್ಟ್ ಮಾಡುವುದು ಬಿಟ್ಟು. ಚಿಕ್ಕಪ್ಪನ ಮಾತು ಕೇಳುತ್ತಿದ್ದಾನಲ್ಲ ಎಂದು ಬೇಸರ ಮಾಡಿಕೊಳ್ಳುತ್ತಾನೆ. ಅದೇನೇ ಆದರೂ, ನಾನು ಈ ರೂಮಿನಲ್ಲಿ ಸತ್ಯ ಜೊತೆಗೆ ಮಲಗುವುದಿಲ್ಲ ಎಂದು ಒಬ್ಬೊಬ್ಬನೇ ಮಾತನಾಡುತ್ತಿರುತ್ತಾನೆ.

ಮಂಜನ ಕಪಾಳಕ್ಕೆ ಭಾರಿಸಿದ ಕಾರ್ತಿಕ್!
ಅಷ್ಟೊತ್ತಿಗೆ ಮಂಜು ಬರುತ್ತಾನೆ. ಆಗ ಮಂಜನಿಗೆ ಕಪಾಳಕ್ಕೆ ಹೊಡೆಯುತ್ತಾನೆ. ನನ್ನ ಸ್ನೇಹಿತ ಎಂದು ಇರುವುದು ನೀನೊಬ್ಬ. ನನ್ನ ಕಷ್ಟಗಳನ್ನು ಹೇಳಿಕೊಳ್ಳೋಣ ಎಂದರೆ, ನೀನು ಅವರಿಗೆಲ್ಲಾ ಸಪೋರ್ಟ್ ಮಾಡುತ್ತೀಯಾ ಎಂದು ಹೇಳುತ್ತಾನೆ. ಮಂಜ ಪಾಪ, ಇಲ್ಲಿ ನೀನು ಹೊಡೆಯುತ್ತೀಯಾ, ಅಲ್ಲಿ ಚಿಕ್ಕಪ್ಪ ಭಾರಿಸುತ್ತಾರೆ ಎಂದು ಹೇಳಿ ಬೇಸರ ಮಾಡಿಕೊಳ್ಳುತ್ತಾನೆ.

ಮನಬಿಚ್ಚಿ ಮಾತನಾಡಿದ ಸತ್ಯ!
ಊರ್ಮಿಳಾ ಬಳಿ ಸತ್ಯ ಮನಬಿಚ್ಚಿ ಮಾತನಾಡಿದ್ದಾಳೆ. ಸೀತಾ ಅವರದ್ದೇನು ತಪ್ಪಿಲ್ಲ. ನಾನೇ ಸಂಪ್ರದಾಯಗಳನ್ನು ಕಲಿಯಬೇಕಿತ್ತು. ನನ್ನಮ್ಮ ಯಾವಾಗಲೂ ಬೈಯುತ್ತಿದ್ದಳು. ನಾನೇ ಅವಳ ಮಾತನ್ನು ಕೇಳಲಿಲ್ಲ. ತಪ್ಪು ಮಾಡಿಬಿಟ್ಟೆ. ನನಗೀಗ ಅಮ್ಮ ಬೇಕು ಅನಿಸುತ್ತಿದೆ ಎನ್ನುತ್ತಾಳೆ. ಆಗ ಊರ್ಮಿಳಾ ನನ್ನನ್ನೇ ನಿನ್ನ ಅಮ್ಮ ಎಂದು ತಿಳಿದುಕೋ. ನಿನಗೆ ಏನೇ ಹೇಳಿಕೊಳ್ಳಬೇಕು ಎಂದರೂ ನಿನ್ನ ಜೊತೆಗೆ ನಾನಿದ್ದೇನೆ ಎಂದು ಹೇಳುತ್ತಾಳೆ. ಅಲ್ಲದೇ, ಮನೆಗೋಸ್ಕರ ಗಂಡು ಮಗುವಿನಂತೆ ದುಡಿದ ನೀನು ಈ ಮನೆ ಸೊಸೆಯಾಗಿರುವುದು ನಮ್ಮ ಭಾಗ್ಯ. ಅದು ಸೀತಕ್ಕನಿಗೆ ಇಂದಲ್ಲ ನಾಳೆ ಗೊತ್ತಾಗೇ, ಗೊತ್ತಾಗುತ್ತದೆ ಎಂದು ಹೇಳಿ ಸಮಾಧಾನ ಮಾಡುತ್ತಾಳೆ.


Click it and Unblock the Notifications











