Sagar Biligowda: ಕಿರುತೆರೆ ವೀಕ್ಷಕರಿಗೆ ಅಚ್ಚುಮೆಚ್ಚು ಈ ಅಮೂಲ್ ಬೇಬಿ
ಹೆಣ್ಣಿನ ಶಕ್ತಿಯ ಪ್ರತೀಕವಾಗಿರುವ 'ಸತ್ಯ' ಧಾರಾವಾಹಿ ಯಾರಿಗೆ ತಾನೇ ಗೊತ್ತಿಲ್ಲ? ಸ್ವಪ್ನ ಕೃಷ್ಣ ನಿರ್ದೇಶನದಲ್ಲಿ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ಸತ್ಯ' ಧಾರವಾಹಿ ತನ್ನದೇ ಆದ ವಿಶೇಷ ಪ್ರೇಕ್ಷಕ ವರ್ಗವನ್ನೊಳಗೊಂಡಿದೆ.
ನಾಯಕಿ ಸತ್ಯಳಾಗಿ ಗೌತಮಿ ಜಾಧವ್ ಅದು ಹೇಗೆ ಎಲ್ಲರ ಮನ ಗೆದ್ದಿದ್ದಾರೋ ಅದೇ ರೀತಿ ಸೀರಿಯಲ್ ಪ್ರಿಯರಿಗೆ ಕಥೆಯ ನಾಯಕನೂ ಅಷ್ಟೇ ಇಷ್ಟ. ಹೌದು, ತಮ್ಮ ಮುಗ್ಧ ಅಭಿನಯದಿಂದ ಎಲ್ಲರ ಮನೆಗೆದ್ದಿರುವ ಆ ನಟನ ಹೆಸರು ಸಾಗರ್ ಬಿಳೀಗೌಡ. ಸತ್ಯ ಧಾರವಾಹಿಯಲ್ಲಿ ಅಮೂಲ್ ಬೇಬಿಯಾಗಿ ಮಿಂಚುತ್ತಿರುವ ಇವರು ಕಿರುತೆರೆ ವೀಕ್ಷಕರಿಗೆಲ್ಲರಿಗೂ ಅಚ್ಚುಮೆಚ್ಚು.
ಲಂಡನ್ ನಲ್ಲಿ ಎಂಬಿಎ ಪದವಿ ಪಡೆದಿದ್ದ ಸಾಗರ್ ಪ್ರತಿಷ್ಠಿತ ಕಂಪೆನಿಯೊಂದರಲ್ಲಿ ಉದ್ಯೋಗದಲ್ಲಿದ್ದರು. ನಟನೆಯತ್ತ ವಿಶೇಷ ಆಸಕ್ತಿ ಹೊಂದಿದ್ದ ಸಾಗರ್ ಮುಂದೆ ಟಿ ಎಸ್ ನಾಗಾಭರಣ ಅವರ ನಟನಾ ತರಬೇತಿ ಕೇಂದ್ರಕ್ಕೆ ಸೇರಿದರು.

ಇಂಗ್ಲೀಷ್ ನಾಟಕಗಳಲ್ಲಿ ನಟನೆ
ಮುಂದೆ ನಟನೆಯ ಆಗು ಹೋಗುಗಳನ್ನು ಸಾಗರ್ ಅರಿತುಕೊಂಡರು. ಅಂದ ಹಾಗೇ ಸಾಗರ್ ಅವರು ಅಭಿನಯರಂಗಕ್ಕೆ ಹೊಸಬರೇನಲ್ಲ. ಶಾಲಾ ಕಾಲೇಜುಗಳಲ್ಲಿ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಮುಂದಿದ್ದ ಸಾಗರ್ ನೃತ್ಯ, ಇಂಗ್ಲೀಷ್ ನಾಟಕ ಸೇರಿದಂತೆ ಹಲವು ಕಲಾಪ್ರಕಾರಗಳಲ್ಲಿ ಬಣ್ಣ ಹಚ್ಚಿದ್ದರು.

ನಂದು ಆಗಿ ಮೋಡಿ ಮಾಡಿದ ನಟ
'ಬೈ 2 ಬೆಂಗಳೂರು' ಧಾರಾವಾಹಿಯ ಮೂಲಕ ಕಿರುತೆರೆಗೆ ಕಾಲಿಟ್ಟ ಸಾಗರ್ ನಂತರ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ಕಿನ್ನರಿ' ಧಾರಾವಾಹಿಯಲ್ಲಿ ಕಾಣಿಸಿಕೊಂಡರು. ಅದರಲ್ಲಿ ನಾಯಕ ನಕುಲ್ಗೆ ಸ್ನೇಹಿತನಾಗಿದ್ದ ನಂದು ಎಂಬ ಪಾತ್ರವನ್ನು ಸಾಗರ್ ನಿಭಾಯಿಸುತ್ತಿದ್ದರು. ಪೋಷಕ ಪಾತ್ರಗಳಲ್ಲಿ ಸಾಗರ್ ಅಭಿನಯಿಸಿದ್ದರೂ ಕೂಡ ನಾಯಕನ ಪಾತ್ರಕ್ಕೆ ಇದ್ದಷ್ಟೇ ಪ್ರಾಮುಖ್ಯತೆ ಆ ಪಾತ್ರಕ್ಕೆ ಇದ್ದುದು ವಿಶೇಷ.

ಧಾರಾವಾಹಿಯಿಂದ ಹೊರ ಬಂದ ನಟ
ಉದಯ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ಮನಸಾರೆ' ಧಾರಾವಾಹಿಯಲ್ಲಿ ನಾಯಕನಾಗಿ ನಟಿಸುವ ಸುವರ್ಣಾವಕಾಶವನ್ನು ಪಡೆದುಕೊಂಡಿದ್ದ ಸಾಗರ್ ಅದರಲ್ಲಿ ನಾಯಕ ಯುವರಾಜನಾಗಿ ನಟಿಸಿದರು. ಮುಂದೆ ಕಾರಣಾಂತರಗಳಿಂದ ಧಾರಾವಾಹಿಯಿಂದ ಹೊರಬಂದ ಸಾಗರ್ ನಂತರ ಬದಲಾಗಿದ್ದು ಅಮೂಲ್ ಬೇಬಿಯಾಗಿ.

ಸಿರಿ ರಾಜು ಜೊತೆ ಸಾಗರ್ ಮದುವೆ
'ಸತ್ಯ' ಧಾರಾವಾಹಿಯಲ್ಲಿ ನಾಯಕ ಕಾರ್ತಿಕ್ ಆಲಿಯಾಸ್ ಅಮೂಲ್ ಬೇಬಿಯಾಗಿ ಸಾಗರ್ ನಟಿಸುತ್ತಿದ್ದಾರೆ. ಕಾರ್ತಿಕ್ ಆಗಿ ಸಾಗರ್ ಅಭಿನಯಕ್ಕೆ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಕಳೆದ ವರ್ಷ ಸಿರಿ ರಾಜು ಜೊತೆ ಸಾಗರ್ ಎಂಗೇಜ್ಮೆಂಟ್ ನಡೆದಿತ್ತು. ಇತ್ತೀಚೆಗೆ ಜೋಡಿ ಹಸೆಮಣೆ ಏರಿತ್ತು. ಕಿರುತೆರೆಯ ಆಪ್ತರು ಕೂಡ ಮದುವೆ ಸಮಾರಂಭಕ್ಕೆ ಸಾಕ್ಷಿಯಾಗಿ ನವ ಜೋಡಿಗೆ ಶುಭ ಹಾರೈಸಿದ್ದರು. ಸದ್ಯ ಕಿರುತೆರೆ ಅಂಗಳದಲ್ಲಿ ಬ್ಯುಸಿಯಾಗಿರುವ ಸಾಗರ್ ಮುಂದಿನ ದಿನಗಳಲ್ಲಿ ಹಿರಿತೆರೆಯಲ್ಲಿಯೂ ನಾಯಕರಾಗಿ ಮಿಂಚಿದರೆ ಆಶ್ಚರ್ಯವಿಲ್ಲ.


Click it and Unblock the Notifications











