'ಸೀತಾರಾಮ' ಧಾರಾವಾಹಿ ನಟನ ಕಥೆ ಕೇಳಿ; ರೀಲ್ನಲ್ಲಿ ಲವ್, ಅದೇ ರಿಯಲ್ ಲೈಫ್ನಲ್ಲಿ ಬ್ರೇಕ್ ಅಪ್ ಅಂತೆ
ಜೀ ಕನ್ನಡ ಪ್ರಸಾರವಾಗುತ್ತಿರುವ 'ಸೀತಾರಾಮ' ಧಾರಾವಾಹಿ ಇದೀಗ ಕಿರುತೆರೆಯಲ್ಲಿ ವೀಕ್ಷಕರ ಮನ ಗೆದ್ದಿದೆ. ಸಖತ್ ಸೌಂಡ್ ಮಾಡುತ್ತಿರುವ ಈ ಧಾರಾವಾಹಿಯಲ್ಲಿ ಸೀತಾ ಹಾಗೂ ರಾಮ ಇದೀಗ ತಮ್ಮ ಪ್ರೇಮ ನಿವೇದನೆ ಮಾಡಿಕೊಂಡಿದ್ದಾರೆ. ಇದರಿಂದ ವೀಕ್ಷಕರಂತೂ ಫುಲ್ ಖುಷಿಯಾಗಿದ್ದು, ಧಾರಾವಾಹಿಗೆ ಮೆಚ್ಚುಗೆ ವ್ಯಕ್ತವಾಗುತ್ತಿದೆ.
ಇದೇ ಸಂದರ್ಭದಲ್ಲಿ ನಟ ಗಗನ್ ಚಿನ್ನಪ್ಪ ತಮ್ಮ ರೀಲ್ ಹಾಗೂ ರಿಯಲ್ ಲೈಫ್ ಬಗ್ಗೆ ಒಂದಷ್ಟು ಮಾಹಿತಿ ಹೊರ ಹಾಕಿದ್ದಾರೆ. ನಟ ಗಗನ್ ಚಿನ್ನಪ್ಪ 'ಸೀತಾರಾಮ' ಧಾರಾವಾಹಿಯಲ್ಲಿ ಅಂದರೆ ರೀಲ್ ಲೈಫ್ನಲ್ಲಿ ಸೀತಾ ಅವರನ್ನು ಪ್ರೀತಿಸುತ್ತಿರುವ ರಾಮನಾಗಿ ತೆರೆಯ ಮೇಲೆ ಮೋಡಿ ಮಾಡುತ್ತಿದ್ದಾರೆ. ಲವರ್ ಬಾಯ್ ಆಗಿ ನಟಿಸುತ್ತಾ, ಸೀರಿಯಲ್ ವೀಕ್ಷಕರ, ಅದರಲ್ಲೂ ಹೆಣ್ಣು ಮಕ್ಕಳ ಮನ ಕದ್ದಿದ್ದಾರೆ. ಆದರೆ, ಈ ಚಾಕಲೇಟ್ ಹೀರೊ ರಿಯಲ್ ಲೈಫ್ನಲ್ಲಿ ಇತ್ತೀಚೆಗಷ್ಟೇ ತಮ್ಮ ಗರ್ಲ್ ಫ್ರೆಂಡ್ನೊಂದಿಗೆ ಬ್ರೇಕ್ ಅಪ್ ಮಾಡ್ಕೊಂಡಿದ್ದಾರಂತೆ.

'ಸೀತಾರಾಮ' ಧಾರಾವಾಹಿಗೂ ಮೊದಲು, 'ಮಂಗಳ ಗೌರಿಮದುವೆ' ಧಾರಾವಾಹಿಯಲ್ಲಿ ನಾಯಕನಾಗಿ ನಟಿಸುತ್ತಿದ್ದ ಗಗನ್ ಚಿನ್ನಪ್ಪ ಒಂದು ರಿಲೇಶನ್ಶಿಪ್ನಲ್ಲಿರುವುದು ಅವರ ಅಭಿಮಾನಿಗಳಿಗೆ ತಿಳಿದಿತ್ತು. ಮಾತ್ರವಲ್ಲದೇ ಆ ಸಮಯದಲ್ಲಿ ತಾವು ರಿಲೇಶನ್ಶಿಪ್ನಲ್ಲಿ ಇರುವ ವಿಚಾರವನ್ನು ಸ್ವತಃ ಗಗನ್ ಚಿನ್ನಪ್ಪ ಅವರೇ ಬಹಿರಂಗಗೊಳಿಸಿದ್ದರು. ಆದರೆ, ಈಗ ಅವರೇ ಅದರ ಬಗ್ಗೆ ಮಾತನಾಡಿದ್ದು ಅವರ ಲವ್ ಸ್ಟೋರಿ ಈಗ ಬ್ರೇಕ್ ಆಗಿದೆಯಂತೆ.
"ನಾನೀಗ ಸಿಂಗಲ್.. ರೆಡಿ ಟು ಮಿಂಗಲ್" ಎಂದು ಹೇಳಿಕೆ ಕೊಟ್ಟಿರುವ ನಟ ಗಗನ್ ಚಿನ್ನಪ್ಪ, ಸದ್ಯಕ್ಕೆ ಸಿಂಗಲ್ ಆಗಿರುವುದನ್ನು ಕ್ಲಿಯರ್ ಮಾಡಿದ್ದಾರೆ. ಹೌದು, ಖಾಸಗಿ ವಾಹಿನಿಯೊಂದಕ್ಕೆ ನೀಡಿರುವ ಸಂದರ್ಶನವೊಂದರಲ್ಲಿ ಗಗನ್ ಚಿನ್ನಪ್ಪ ಅವರು ತಮ್ಮ ಬ್ರೇಕ್ ಅಪ್ ವಿಚಾರವನ್ನು ಹೊರ ಹಾಕಿದ್ದಾರೆ.

ಕಿರುತೆರೆ ಪ್ರೇಕ್ಷಕರು ಗಗನ ಚಿನ್ನಪ್ಪ ಹಾಗೂ ವೈಷ್ಣವಿ ಗೌಡ ಅವರ ಜೋಡಿಯನ್ನು ಮೆಚ್ಚುತ್ತಿರುವ ಸಂದರ್ಭದಲ್ಲಿ, ನಟ ಗಗನ್ ಚಿನ್ನಪ್ಪ ಅವರು ಈ ರೀತಿ ಹೇಳಿಕೆ ಕೊಟ್ಟಿರುವುದು ಪ್ರೇಕ್ಷಕರಿಗಂತೂ ಒಂದು ಕ್ಷಣಕ್ಕೆ ಶಾಕ್ ನೀಡಿರದೆ ಇರದು. ಒಟ್ಟಿನಲ್ಲಿ ಎಷ್ಟೋ ಜನರ ಮನ ಗೆದ್ದಿರುವ ನಟ ಗಗನ್ ಚಿನ್ನಪ್ಪ ಅವರು ಇದೀಗ ಸಿಂಗಲ್ ಎನ್ನುವುದು ಖಚಿತ.
ಇನ್ಸ್ಪೆಕ್ಟರ್ ರಾಜೀವನಾಗಿ ಕಿರುತೆರೆಗೆ ಕಾಲಿಟ್ಟ ಗಗನ್ ಚಿನ್ನಪ್ಪ ಮೊದಲ ಧಾರಾವಾಹಿಯಲ್ಲಿಯೇ ನಾಯಕನಾಗಿ ನಟಿಸಿದ ಅದೃಷ್ಟವಂತ. ತದ ನಂತರ ಸ್ಟಾರ್ ಮಾ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ಕೃಷ್ಣ ಮುಕುಂದ ಮುರಾರಿ' ಧಾರಾವಾಹಿಯಲ್ಲಿ ಮುರಾರಿ ಪಾತ್ರದಲ್ಲಿ ನಟಿಸುವ ಸುವರ್ಣಾವಕಾಶ ಪಡೆದುಕೊಂಡರು. ಆಶ್ಚರ್ಯಕರ ಸಂಗತಿಯೆಂದರೆ ಅಲ್ಲಿಯೂ ಅವರು ನಟಿಸಿದ್ದು ಪೊಲೀಸ್ ಅಧಿಕಾರಿಯ ಪಾತ್ರದಲ್ಲಿ.
ಆಟೋಮೊಬೈಲ್ ಇಂಡಸ್ಟ್ರಿಯಲ್ಲಿ ಮಾರ್ಕೆಟಿಂಗ್ ಹೆಡ್ ಆಗಿದ್ದ ಗಗನ್ ಚಿನ್ನಪ್ಪ ಮೂರು ವರ್ಷ ಜರ್ಮನಿ ಮತ್ತು ಓಮನ್ನಲ್ಲಿ ಕೆಲಸ ಮಾಡಿದ್ದರು. ಮುಂದೆ ಭಾರತಕ್ಕೆ ಮರಳಿದ ಅವರು ಐಟಿ ಕಂಪೆನಿಯೊಂದರಲ್ಲಿ ಕೆಲಸ ಪಡೆದುಕೊಂಡರು. ಮೊದಲಿನಿಂದಲೂ ನಟಿಯಾಗಬೇಕು ಎಂಬ ಕನಸು ಕಂಡಿದ್ದ ಗಗನ್ ಬಿಡುವಿನ ವೇಳೆ ಆಡಿಶನ್ಗಳಿಗೂ ಹೋಗುತ್ತಿದ್ದರು. 'ಮಂಗಳ ಗೌರಿ ಮದುವೆ'ಯ ರಾಜೀವನಾಗಿ ನಟಿಸಿ, ಸೈ ಎನಿಸಿಕೊಂಡಿದ್ದ ಗಗನ್ ಅವರಿಗೆ 'ಸೀತಾರಾಮ' ಮೂರನೇ ಧಾರಾವಾಹಿ. ಒಟ್ಟಿನಲ್ಲಿ ತಮ್ಮ ನಟನೆಯ ಮೂಲಕ ಕಿರುತೆರೆ ವೀಕ್ಷಕರ ಮನ ಸೆಳೆಯುತ್ತಿರುವ ಗಗನ್ ಚಿನ್ನಪ್ಪ ಮುಂದೊಂದು ದಿನ ಬೆಳ್ಳಿತೆರೆಯಲ್ಲಿ ಮಿಂಚಿದರೆ ಆಶ್ವರ್ಯವೇನೂ ಇಲ್ಲ.


Click it and Unblock the Notifications











