Seetha Rama Serial: ತಾತನಿಗೆ ಗೊತ್ತಿಲ್ಲದೆ ರಾಮನಿಗೆ ಮದುವೆ ಫಿಕ್ಸ್ ಆಯ್ತಾ..? ಸೀತಾ ಹೇಳಿದ ಆ ಹುಡುಗಿ ಯಾರು?
ರಾಮ ಮತ್ತು ಸೀತೆಯ ನಡುವೆ ಬಂಧ ಬಿಗಿಯಾಗುತ್ತಿದೆ. ಆಫೀಸ್ನಲ್ಲಿ ರಾಮ್ಗೆ ಏನೇ ಸಮಸ್ಯೆ ಬಂದರೂ ಅಲ್ಲಿ ಸೀತಾ ಜೊತೆಗೆ ನಿಲ್ಲುತ್ತಾಳೆ. ಊಟ ತಂದಿಲ್ಲ ಅಂದ್ರೂ, ಸೀತಾಳ ಬಾಕ್ಸ್ನಲ್ಲಿರುವ ಚಪಾತಿಯನ್ನೇ ಹಂಚಿಕೊಳ್ಳುತ್ತಾರೆ. ಅದರಲ್ಲೂ ಸಿಹಿ, ಸ್ಪೆಷಲ್ ಆಗಿ ಚಪಾತಿಯನ್ನು ರೆಡಿ ಮಾಡಿ ಸ್ಪೆಷಲ್ ಫ್ರೆಂಡ್ಗೆ ಕಳುಹಿಸುತ್ತಾಳೆ .
ಇದು ಪ್ರತಿನಿತ್ಯದ ರಾಮ್ ಅಂಡ್ ಸೀತಾ ದಿನಚರಿಯಾದರೆ, ಇಂದು ಬೇರೆಯದ್ದೇ ದಿನ . ಯಾಕಂದ್ರೆ ರಾಮ್ ಈಗ ಸೀತಾಳ ಕೈಗೆ ಸಿಕ್ಕಿಬಿದ್ದಿದ್ದಾನೆ. ಆಫೀಸ್ಗೆ ಸಾಮಾನ್ಯ ಉದ್ಯೋಗಿಯಾಗಿ ಬಂದಾಗಲೇ ಬಾಸ್ ಕ್ಯಾಬಿನ್ ಇದ್ದಿದ್ರೆ ಚೆನ್ನಾಗಿರ್ತಾ ಇತ್ತು ಎಂದಾಗಲೇ ಸೀತಾ, ಎಚ್ಚರಿಕೆ ನೀಡಿದ್ದಳು. ಈಗ ಮತ್ತೊಮ್ಮೆ ಎಂಡಿ ಕ್ಯಾಬಿನ್ಗೆ ಹೋಗಿ ಕೂತಿದ್ದಾನೆ. ಇದು ಸೀತಾಳ ಕೆಂಗಣ್ಣಿಗೆ ಗುರಿಯಾಗಿದೆ.

ಬೋನಸ್ ನೀಡಲು ಮುಂದಾದ ಕಂಪನಿ
ಕಂಪನಿಯಲ್ಲಿ ಏನೋ ಮೋಸ ನಡೆಯುತ್ತಿದೆ ಅನ್ನೋದು ತಾತ -ಮೊಮ್ಮಗನಿಗೆ ಅದಾಗಲೇ ತಿಳಿದು ಬಂದಿದೆ. ಹೀಗಾಗಿಯೇ ಉದ್ಯೋಗಿ ವೇಷದಲ್ಲಿ ಮೊಮ್ಮಗ ಆಫೀಸ್ಗೆ ಬಂದಿದ್ದಾನೆ. ಬೋನಸ್ ವಿಚಾರದಲ್ಲೂ ಅನುಮಾನ ಕಾಡಿ, ಎಲ್ಲರನ್ನು ಕೇಳಿದಾಗ ಸತ್ಯ ಗೊತ್ತಾಗಿದೆ. ಈಗ ಮತ್ತೆ ಬೋನಸ್ ಹಣವನ್ನು ಎಂಪ್ಲಾಯ್ಗೆ ಕೊಡುವುದಕ್ಕೆ ಕಂಪನಿ ನಿರ್ಧಾರ ಮಾಡಿದೆ. ಅದಕ್ಕೆ ರಾಮ್ ಸಹಿಯೂ ಹಾಕಿ ಆಗಿದೆ.
ಎಂಡಿ ಕ್ಯಾಬಿನ್ನಲ್ಲಿ ಕುಳಿತಿದ್ದ ರಾಮ್
ರಾಮ್ ಬೋನಸ್ ಸೇರಿದಂತೆ ಇನ್ನು ಹಲವು ಕಡತಗಳಿಗೆ ಸಹಿ ಹಾಕಬೇಕಾಗಿತ್ತು. ಹೀಗಾಗಿ ನೇರವಾಗಿ ಎಂಡಿ ಕ್ಯಾಬಿನ್ನಲ್ಲಿ ಕುಳಿತಿದ್ದ. ಸೀತಾಗೆ ರಾಮ್ ಕಾಣಿಸದೆ ಇದ್ದಿದ್ದಕ್ಕೆ ಗಾಬರಿಯಾಯ್ತು. ಯಾಕಂದ್ರೆ ಈ ಆಫೀಸ್ಗೆ ರಾಮ್ ಹೊಸಬ ಎಂದು ತಿಳಿದಿದ್ದಾಳೆ. ಹೀಗಾಗಿ ಅವನನ್ನು ಹುಡುಕುತ್ತಾ ಹೊರಟಾಗ, ಬಾಸ್ ಕ್ಯಾಬಿನ್ನಲ್ಲಿ ಕುಳಿತಿದ್ದು ಕಣ್ಣಿಗೆ ಬಿತ್ತು. ಗಾಬರಿಯಿಂದ ಒಳಗೆ ಬಂದ ಸೀತಾ, ಇನ್ನೇನು ಬೈಯಬೇಕು ಅಷ್ಟರಲ್ಲಿ ತಾತ ಬಂದರು.

ಸೀತಾ ಮಾತಿಂದ ರಾಮ್ ಕೆಲಸ ಉಳಿಯುತ್ತಾ?
ತಾತ ಮೊದಲೇ ಮೊಮ್ಮಗನ ಪರ. ಮೊಮ್ಮಗನನ್ನು ಆಟ ಆಡಿಸುವುದು ಎಂದರೆ ಬಲು ಇಷ್ಟ. ಅದಕ್ಕೆ ಈಗ ಸೀತಾಳ ಮುಂದೆ ಕೆಲಸದಿಂದ ತೆಗೆದು ಹಾಕುವ ನಾಟಕವಾಡುತ್ತಿದ್ದಾರೆ. ಎಷ್ಟು ಧೈರ್ಯ ನಿನಗೆ. ಮೊದಲು ಇವನನ್ನು ಕೆಲಸದಿಂದ ತೆಗೆದು ಬಿಸಾಕು ಎಂದಿದ್ದಾರೆ. ಇದನ್ನು ಕೇಳಿದ ಸೀತಾಗೆ ಗಾಬರಿಯಾಗಿದೆ. ರಾಮ್ ಬೆಂಬಲಕ್ಕೆ ನಿಂತಿದ್ದಾಳೆ. "ಸರ್ ಹಾರ್ಡ್ ವರ್ಕರ್ ಸರ್. ಪಾಪ ತುಂಬಾ ಕಷ್ಟ ಇದೆ. ಬಾಸ್ ಚೇರ್ ಮೇಲೆ ಕೂತ್ಕೊಬೇಕು ಅನ್ನೋದು ಎಲ್ಲರ ಆಸೆ ಅಲ್ವಾ ಸರ್, ಅದಕ್ಕೆ ತಪ್ಪು ಮಾಡಿದ್ದಾರೆ. ಕ್ಷಮೆ ಇರಲಿ ಸರ್" ಎಂದು ಕೇಳಿದ್ದಾಳೆ.
ರಾಮ್ಗೆ ಮದುವೆ ಫಿಕ್ಸ್ ಆಗಿದೆಯಂತೆ!
ತಾತನ ಮುಂದೆಯೇ ರಾಮ್ನನ್ನು ವಹಿಸಿಕೊಂಡು ಮಾತನಾಡಿದ ಸೀತಾ, "ಪಾಪ ಸರ್ ತುಂಬಾ ಸಾಲ ಇದೆ. ಸ್ವಂತ ದುಡ್ಡಲ್ಲಿ ಶಿಕ್ಷಣ ಪಡೆದುಕೊಂಡಿದ್ದಾರೆ. ಅದರ ಸಾಲ ಇದೆ. ಈಗತಾನೆ ಮದುವೆ ಬೇರೆ ಫಿಕ್ಸ್ ಆಗಿ ಬಿಟ್ಟಿದೆ. ನೀವೂ ಹೀಗೆ ದಿಢೀರನೇ ಕೆಲಸದಿಂದ ತೆಗೆದುಬಿಟ್ಟರೆ ಬೀದಿಗೆ ಬಿದ್ದು ಬಿಡ್ತಾರೆ ಸರ್. ತಂಬಾ ಚೆನ್ನಾಗಿ ಕೆಲಸ ಮಾಡ್ತಾರೆ. ಮತ್ತೊಂದು ಕೆಲಸ ಸಿಗುವ ತನಕ ಉಪವಾಸ ಇರಬೇಕಾಗುತ್ತದೆ. ಕೆಲಸದಿಂದ ಮಾತ್ರ ತೆಗೆಯಬೇಡಿ ಸರ್" ಎಂದು ಗೋಗರೆಯುವಾಗ, ರಾಮ್ ಶಾಕ್ ಆಗಿದ್ದಾನೆ. ತಾತ ಎಲ್ಲವನ್ನು ಕೇಳಿಸಿಕೊಳ್ಳುತ್ತಿದ್ದಾರೆ. ಇನ್ನು ಗೆಳೆಯ ಮನದಲ್ಲಿಯೇ ಎಲ್ಲಾ ನೆನೆದು ನಗುತ್ತಿದ್ದಾನೆ.


Click it and Unblock the Notifications











