Kavya Ramesh:ಕಿರುತೆರೆ ನಂತರ ಹಿರಿತೆರೆಯಲ್ಲಿ ಅದೃಷ್ಟ ಪರೀಕ್ಷೆಗಿಳಿದ ಕಾವ್ಯ ರಮೇಶ್!
ಕಿರುತೆರೆಯ ಮೂಲಕ ಬಣ್ಣದ ಕ್ಷೇತ್ರಕ್ಕೆ ಕಾಲಿಟ್ಟ ನಟ ನಟಿಯರು ಮುಂದೆ ಹಿರಿತೆರೆಯಲ್ಲಿ ಅದೃಷ್ಟ ಪರೀಕ್ಷೆಗೆ ಮುಂದಾಗುವುದು ತೀರಾ ಮಾಮೂಲಿ ಸಂಗತಿ. ಕಾವ್ಯಾ ರಮೇಶ್ ಕೂಡಾ ಅಷ್ಟೇ. ಪೋಷಕ ಪಾತ್ರದ ಮೂಲಕ ಕಿರುತೆರೆಗೆ ಪಾದಾರ್ಪಣೆ ಮಾಡಿದ ಕಾವ್ಯಾ ರಮೇಶ್ ಮುದ್ದಾದ ನಟನೆಯ ಮೂಲಕ ಮನಸೆಳೆದ ಬೆಡಗಿ. ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ಸೀತಾ ವಲ್ಲಭ' ಧಾರಾವಾಹಿಯಲ್ಲಿ ನಾಯಕ ಆರ್ಯನ ತಂಗಿ ಅದಿತಿಯಾಗಿ ನಟಿಸಿದ್ದ ಕಾವ್ಯಾ ರಮೇಶ್ ಎರಡು ವರ್ಷಗಳ ಕಾಲ ವೀಕ್ಷಕರನ್ನು ರಂಜಿಸಿದ್ದರು.
ಸಣ್ಣ ವಯಸ್ಸಿನಿಂದಲೂ ತಾನೊಬ್ಬ ನಟಿಯಾಗಬೇಕು. ಬಣ್ಣದ ಲೋಕದಲ್ಲಿ ಬದುಕು ರೂಪಿಸಿಕೊಳ್ಳಬೇಕು ಎಂಬ ಕನಸು ಕಂಡಿದ್ದ ಕಾವ್ಯಾ ರಮೇಶ್ ಇದೀಗ ಬಾಲ್ಯದ ಕನಸು ನನಸು ಮಾಡಿಕೊಂಡಿರುವ ಸಂತಸದಲ್ಲಿದ್ದಾರೆ. ಶಾಲಾ ಕಾಲೇಜು ದಿನಗಳಿಂದಲೂ ಅಷ್ಟೇ, ಯಾವುದೇ ಸಾಂಸ್ಕೃತಿಕ ಕಾರ್ಯಕ್ರಮಗಳಿರಲಿ, ಅಲ್ಲಿ ಕಾವ್ಯಾ ರಮೇಶ್ ಹಾಜರ್.

'ಸೀತಾವಲ್ಲಭ' ಅದಿತಿ ಈ ಕಾವ್ಯಾ
ವಿದ್ಯಾಭ್ಯಾಸದ ಬಳಿಕ ಪೂರ್ಣ ಪ್ರಮಾಣದ ನಟಿಯಾಗಬೇಕು ಎಂಬ ಹಂಬಲ ಹೊಂದಿದ್ದ ಕಾವ್ಯಾ ರಮೇಶ್ ಆಡಿಶನ್ಗಳಲ್ಲಿ ಭಾಗವಹಿಸುವ ನಿರ್ಧಾರ ಮಾಡಿದರು. ಅದೃಷ್ಟ ಎಂಬಂತೆ ಮೊದಲ ಆಡಿಶನ್ನಲ್ಲಿಯೇ ಪಾಸ್ ಆದ ಆಕೆ ಅದಿತಿಯಾಗಿ ಬದಲಾದರು. 'ಸೀತಾವಲ್ಲಭ' ಧಾರಾವಾಹಿಯ ಮೂಲಕ ಕರ್ನಾಟಕದಾದ್ಯಂತ ಅದಿತಿಯಾಗಿಯೇ ಪರಿಚಿತಗೊಂಡ ಕಾವ್ಯಾ ರಮೇಶ್ ಅವರ ನಟನೆಯನ್ನು ವೀಕ್ಷಕರು ಮೆಚ್ಚಿಕೊಂಡರು. ಸೀರಿಯಲ್ ವೀಕ್ಷಕರು ಇಂದಿಗೂ ಕಾವ್ಯಾ ಅವರನ್ನು ಗುರುತಿಸುವಾಗ 'ಸೀತಾವಲ್ಲಭ'ದ ಅದಿತಿ ಎಂದೇ ಗುರುತಿಸುತ್ತಾರೆ.

ಸಿನಿಮಾಗಳಲ್ಲಿ ಬ್ಯುಸಿ ಕಾವ್ಯಾ ರಮೇಶ್
'ಸೀತಾವಲ್ಲಭ' ಧಾರಾವಾಹಿಯ ನಂತರ ಕಿರುತೆರೆಯಲ್ಲಿ ಕಾಣಿಸಿಕೊಳ್ಳದ ಕಾವ್ಯಾ ರಮೇಶ್ 'ಚೌಕಾಬಾರ' ಸಿನಿಮಾದಲ್ಲಿ ಎರಡನೇ ನಾಯಕಿಯಾಗಿ ಕಾಣಿಸಿಕೊಳ್ಳುವ ಮೂಲಕ ಹಿರಿತೆರೆಗೆ ಕಾಲಿಟ್ಟರು. ಸದ್ಯ ಹಿರಿತೆರೆಯಲ್ಲಿ ಬ್ಯುಸಿಯಾಗಿರುವ ಕಾವ್ಯಾ ರಮೇಶ್ ಅವರು ಒಂದಾದ ಮೇಲೆ ಒಂದರಂತೆ ಸಿನಿಮಾಗಳಲ್ಲಿ ನಟಿಸುವ ಅವಕಾಶ ಪಡೆದುಕೊಂಡಿದ್ದಾರೆ.

ಕೈಯಲ್ಲಿವೆ ಎರಡು ಸಿನಿಮಾಗಳು
'ಗುಳ್ಟು' ಸಿನಿಮಾ ಖ್ಯಾತಿಯ ನವೀನ್ ಶಂಕರ್ ಅಭಿನಯದ 'ಮೂಲತಃ ನಮ್ಮವರೇ' ಸಿನಿಮಾದಲ್ಲಿಯೂ ಕೂಡಾ ಎರಡನೇ ನಾಯಕಿಯಾಗಿ ನಟಿಸುವ ಅವಕಾಶವನ್ನು ಪಡೆದುಕೊಂಡಿದ್ದಾರೆ.ಅಲ್ಲದೆ ಕಾವ್ಯ ರಮೇಶ್ 'ನೋಟದ ಪುಟಗಳು' ಎನ್ನುವ ಸಿನಿಮಾದಲ್ಲಿಯೂ ಕೂಡ ಬಣ್ಣ ಹಚ್ಚಿದ್ದಾರೆ.

ತೆಲುಗು ಸಿನಿಮಾದಲ್ಲೂ ಬ್ಯೂಸಿ
'ನಚ್ಚಿನಾವುಡು' ತೆಲುಗು ಸಿನಿಮಾದಲ್ಲಿ ನಟಿಸುವ ಮೂಲಕ ಪರಭಾಷೆಯ ಸಿನಿಮಾರಂಗಕ್ಕೆ ಕಾಲಿಟ್ಟ ಕಾವ್ಯಾ ರಮೇಶ್ ಮುಂದೆ 'ಆರ್.ಸಿ.ಎಂ ಪುರಂ' ಎನ್ನುವ ತೆಲುಗು ಸಿನಿಮಾದಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದಾರೆ. ಕಿರುತೆರೆಯ ಮೂಲಕ ನಟನೆಗೆ ಕಾಲಿಟ್ಟು ಸದ್ಯ ಚಂದನವನದಲ್ಲಿ ಬ್ಯುಸಿಯಾಗಿರುವ ಕಾವ್ಯಾ ರಮೇಶ್ ಮತ್ತೊಮ್ಮೆ ಕಿರುತೆರೆಗೆ ಮರಳುತ್ತಾರಾ ಎಂದು ಕಾದು ನೋಡಬೇಕಾಗಿದೆ.


Click it and Unblock the Notifications