Seetharama ; ಅಮ್ಮನ ಮಡಿಲು ಸೇರಿದ ಸಿಹಿ : ಸೀತಾಳನ್ನು ಜೈಲಿಗೆ ಕಳುಹಿಸುತ್ತಾಳಾ ಶಾಲಿನಿ..?
ಸೀತಾರಾಮ ಧಾರಾವಾಹಿಯಲ್ಲಿ ಸಿಹಿ ಶಾಲಿನಬಿ ಮನೆಯಲ್ಲಿ ಕ್ಷಣ ಕ್ಷಣವೂ ಕಷ್ಟ ಪಡುತ್ತಿದ್ದಾಳೆ. ಒಂದು ಕಡೆ ಸಮಾಧಾನದಿಂದ ಪ್ರೀತಿ ತೋರುವ ಶ್ಯಾಮ್, ಮತ್ತೊಂದು ಕಡೆ ರೇಗುತ್ತಾ ಸದಾ ಬೈಯುವ ಶಾಲಿನಿ. ಊಟ ಕೂಡ ತನಗಿಷ್ಟವಾಗಿದ್ದನ್ನು ತಿನ್ನುವಂತಿಲ್ಲ. ಎಲ್ಲವೂ ಶಾಲಿನಿ ಹೇಲಿದಂತೆಯೇ ನಡೆಯಬೇಕು. ತನ್ನ ಮನೆಗೆ ಹೋಗಲು ಕೂಡ ಅವಕಾಶವಿಲ್ಲ. ತನ್ನ ಬದುಕಿನಲ್ಲಿ ಏನಾಗುತ್ತಿದೆ ಎಂಬುದೇ ಸಿಹಿಗೆ ಅರ್ಥವಾಗುತ್ತಿಲ್ಲ. ಅಪ್ಪ-ಅಮ್ಮನನ್ನು ಬಿಟ್ಟಿರುವಂತಹ ಕರ್ಮ ಏನು ಎಂಬುದೂ ಅರಿಯದೇ ನಿತ್ಯ ಕಣ್ಣೀರು ಹಾಕುತ್ತಿದ್ದಾಳೆ.
ಮನೆಗೆ ಓಡಿ ಬಂದ ಸಿಹಿ
ಭಾರ್ಗವಿ ಪದೇ ಪದೇ ಚಾಂದಿನಿ ಮತ್ತು ಶಾಲಿನಿಗೆ ಫೋನ್ ಮಾಡಿ ಸಾಕಷ್ಟು ಐಡಿಯಾಗಳನ್ನು ಕೊಡುತ್ತಿದ್ದಾಳೆ. ಇಷ್ಟು ದಿನ ಸಿಹಿಯನ್ನು ರೂಮಿನಲ್ಲಿ ಕೂಡಿ ಹಾಕುತ್ತಿದ್ದ ಶಾಲಿನಿ ಇಂದು ನನ್ನ ಮಗಳು ಹಾಯಾಗಿರಬೇಕು ಎಂದು ರೂಮ್ ಬಾಗಿಲನ್ನು ತೆರೆದಿದ್ದಾಳೆ. ಬಾಗಿಲು ತೆರೆದಿರುವುದಕ್ಕೆ ನೀನು ಸೀತಾ ಮನೆಗೆ ಓಡಿ ಹೋಗುವಂತಿಲ್ಲ ಎಂದು ವಾರ್ನಿಂಗ್ ಕೊಡುವ ರೀತಿಯಲ್ಲಿ ಐಡಿಯಾ ಕೂಡ ಕೊಟ್ಟಿದ್ದಾಳೆ. ಸೀತಮ್ಮ ಬೇಕು ಎಂದು ಸದಾ ಕಣ್ಣೀರು ಹಾಕುವ ಸಿಹಿಗೆ ಈಗ ಲಡ್ಡು ಬಂದು ಬಾಯಿಗೆ ಬಿದ್ದಂತಾಗಿದೆ. ಹಾಗಾಗಿ ಸಿಹಿ ಎಲ್ಲರೂ ಮಲಗಿದ ಬಳಿಕ ಬಾಗಿಲು ತೆರೆದು ತನ್ನ ಪಾಡಿಗೆ ತಾನು ಸೀದಾ ಸೀತಾ ಮನೆಗೆ ಹೋಗಿದ್ದಾಳೆ.

ಸೀತಾಳನ್ನು ಜೈಲಿಗೆ ಹಾಕಲು ಪ್ಲಾನ್
ಅಲ್ಲಿ ಸೀತಮ್ಮ ಮತ್ತು ರಾಮ್ ನನ್ನು ನೋಡಿ ಖುಷಿ ಪಟ್ಟಿದ್ದಾಳೆ. ನನಗೆ ಆ ಮನೆಗೆ ಹೋಗಲು ಇಷ್ಟವಿಲ್ಲ. ನನ್ನನ್ನು ಅಲ್ಲಿಗೆ ಕಳಿಸಬೇಡಿ. ಊಟ ಮಾಡುವುದಕ್ಕೂ ಸ್ವಾತಂತ್ರ್ಯವಿಲ್ಲ. ಅವರು ಹೇಳಿದ್ದನ್ನೇ ತಿನ್ನಬೇಕು. ಆಡಲು ಜೊತೆಗೆ ಯಾರೂ ಇಲ್ಲ. ಶಾಲಿನಿ ಆಂಟಿ ಸದಾ ಬೈಯ್ಯುತ್ತಾರೆ. ಅವರು ಕೊಡುವ ಬಟ್ಟೆ ನನಗೆ ಇಷ್ಟವಿಲ್ಲ. ಸೀತಮ್ಮನ ಚಿತ್ರ ಬಿಡಿಸಿದ ಹಾಳೆಯನ್ನು ಹರಿದು ಹಾಕುತ್ತಾರೆ. ಯಾವಾಗಲೂ ಸೀತಮ್ಮನನ್ನು ಬೈಯುತ್ತಿರುತ್ತಾರೆ. ನನಗೆ ಆ ಮನೆ ಖಂಡಿತವಾಗಿಯೂ ಬೇಡ ಎಂದು ಕೇಳಿಕೊಂಡಿದ್ದಾಳೆ. ಆದರೆ, ರೂಮ್ ಬಾಗಿಲು ತೆಗೆದಿದ್ದು, ಸೀತಾಳನ್ನು ಜೈಲಿಗೆ ಕಳಿಸಲು ಎಂಬುದು ಯಾರಿಗೂ ಅರ್ಥವಾಗಿಲ್ಲ.
ಶ್ಯಾಮ್ ಮನೆಯಲ್ಲಿ ಭಾರ್ಗವಿಯದ್ದೇ ಆಟ
ಭಾರ್ಗವಿ ತನ್ನ ಮನೆಯಲ್ಲಿಯೇ ಇದ್ದುಕೊಂಡು ಶ್ಯಾಮ್ ಮನೆಯಲ್ಲಿ ಏನೆಲ್ಲಾ ಆಗಬೇಕು ಎಂದು ನಿರ್ಧಾರ ಮಾಡುತ್ತಿದ್ದಾಳೆ. ಸಿಹಿ ನಿಮ್ಮ ಕಣ್ಣು ತಪ್ಪಿಸಿ ಸೀತಾಳನ್ನು ನೋಡುವಂತೆ ಮಾಡಿ ಸೀತಾ ಜೊತೆಗೆ ಸಿಹಿ ಇರುವಾಗ ಪೊಲೀಸರಿಗೆ ದೂರು ನೀಡಿ. ಆಗ ಪೊಲೀಸರು ಬಂದು ಸೀತಾಳನ್ನು ಅರೆಸ್ಟ್ ಮಾಡುತ್ತಾರೆ. ಸೀತಾ ಜೈಲಿಗೆ ಹೋದರೆ, ಸಿಹಿ ಶಾಶ್ವತವಾಗಿ ನಿಮ್ಮ ಮನೆಯಲ್ಲಿ ಉಳಿಯುತ್ತಾಳೆ ಎಂದು ಐಡಿಯಾ ಕೊಟ್ಟಿದ್ದೇ ಭಾರ್ಗವಿ, ಭಾರ್ಗವಿ ಮಾತು ಕೇಳಿದ ಶಾಲಿನಿ ಚಾಚೂ ತಪ್ಪದೆ ಮಾಡಿದ್ದಾಳೆ. ಈಗ ಸಿಹಿ ಮನೆಯಲ್ಲಿ ಕಾಣುತ್ತಿಲ್ಲ ಎಂದು ನಾಟಕ ಶುರು ಮಾಡಿದ್ದಾಳೆ.
ಮಗಳಿಗಾಗಿ ಜೈಲಿಗೆ ಹೋಗುತ್ತಾಳಾ ಸೀತಾ
ಮಗಳು ಮನೆಯಲ್ಲಿಲ್ಲ ಎಂದು ಶ್ಯಾಮ್ ಗಾಬರಿಯಾಗಿದ್ದರೆ, ಶಾಲಿನಿ ಸೀತಾಳೇ ಸಿಹಿಯನ್ನು ಎತ್ತುಕೊಂಡು ಹೋಗಿದ್ದಾಳೆ ಎಂದು ಚಾಡಿ ಹೇಳಿದ್ದಾಳೆ. ಶ್ಯಾಮ್ ಸೀತಾ ಮನೆಗೆ ಪೊಲೀಸರನ್ನು ಕರೆ ತಂದಿದ್ದು, ಈಗ ಸಿಹಿ ಸೀತಾ ಜೊತೆಗಿರುವುದನ್ನು ಪೊಲೀಸರು ಕೂಡ ಕಣ್ಣಾರೆ ಕಂಡಿದ್ದಾರೆ. ಈಗ ಸೀತಾ ಭಾರ್ಗವಿ ಪ್ಲಾನ್ ನಂತೆ ಜೈಲಿಗೆ ಹೋಗುತ್ತಾಳಾ..? ಹಾಗೇನಾದರೂ ಆದರೆ, ಸಿಹಿ ಶಾಶ್ವತಾವಾಗಿ ತನ್ನ ಸೀತಮ್ಮನನ್ನು ಕಳೆದುಕೊಳ್ಳುತ್ತಾಳಾ, ಇಲ್ಲ ಸಿಹಿ ನಡೆದ ಸತ್ಯ ಘಟನೆಗಳನ್ನು ಹೇಳಿ ತನ್ನ ತಾಯಿಯನ್ನು ಉಳಿಸಿಕೊಳ್ಳುತ್ತಾಳಾ ಎಂಬ ಕುತೂಹಲ ಮೂಡಿದೆ.


Click it and Unblock the Notifications











