Seetharama ; ರಾಮ್-ಶ್ಯಾಮ್ ಮನೆಯಲ್ಲಿ ಮಗುವಿಗಾಗಿ ಕಾದಾಟ: ಸಿಹಿ ಹುಟ್ಟಿನ ರಹಸ್ಯವೇನಿರಬಹುದು..?
ಸೀತಾರಾಮ ಧಾರಾವಾಹಿಯಲ್ಲಿ ಪ್ರಿಯಾಳಿಗೆ ದಿನ ದಿನಕ್ಕೂ ತಾನು ತಾಯಿ ಆಗಬೇಕು ಎಂಬ ಆಸೆ ಹೆಚ್ಚಾಗುತ್ತಿದೆ. ತನ್ನಷ್ಟಕ್ಕೆ ತಾನು ತಾಯಿ ಆಗುತ್ತಿದ್ದೇನೆ ಎಂದು ಕನಸು ಕಾಣುತ್ತಲೇ ಇದ್ದಾಳೆ. ಅಶೋಕ್, ಪ್ರಿಯಾ ನಡವಳಿಕೆಗೆ ಗಾಬರಿಯಾಗಿದ್ದು, ಅವಳನ್ನು ವೈದ್ಯರಿಗೆ ತೋರಿಸುವ ನಿರ್ಧಾರ ಮಾಡಿದ್ದಾರೆ. ಡಾ. ಅನಂತಲಕ್ಷ್ಮೀ ಅವರನ್ನು ಪ್ರಿಯಾ ಮತ್ತು ಅಶೋಕ್ ಭೇಟಿ ಮಾಡುತ್ತಾರೆ.ಪ್ರಿಯಾಳನ್ನು ಪರೀಕ್ಷೆ ಮಾಡಿದ ವೈದ್ಯರು ಸಮಸ್ಯೆ ಇರಬಹುದು ಎಂದು ಊಹಿಸಿದ್ದಾರೆ. ಹಾಗಾಗಿ ಅಶೋಕ್ ಬಳಿ ಬೇರೊಬ್ಬ ವೈದ್ಯರಿಗೆ ಪ್ರಿಯಾಳನ್ನು ತೋರಿಸುವಂತೆ ಸಲಹೆ ನೀಡಿದ್ದಾರೆ.
ಚಾಂದಿನಿಗೆ ಬೈದ ಡಾ.ಅನಂತಲಕ್ಷ್ಮೀ
ವೈದ್ಯರ ಮಾತು ಅಶೋಕ್ ಮನದಲ್ಲಿ ಗೊಂದಲವನ್ನು ಸೃಷ್ಟಿಸಿದ್ದು, ಪ್ರಿಯಾಳಿಗೆ ಯಾವ ರೀತಿಯ ಸಮಸ್ಯೆ ಆಗಿರಬಹುದು ಎಂದು ಆಲೋಚಿಸುತ್ತಿದ್ದಾನೆ. ಇದೇ ಸಂದರ್ಭದಲ್ಲಿ ಚಾಂದಿನಿಯೂ ಕೂಡ ಡಾ. ಅನಂತಲಕ್ಷ್ಮೀ ಅವರನ್ನು ಭೇಟಿ ಮಾಡಿದ್ದಾಳೆ. ಸೀತಾ ಬಗ್ಗೆ ಮಾಹಿತಿಯನ್ನು ಕಲೆ ಹಾಕಲು ಮುಂದಾಗಿದ್ದಾಳೆ. ಸೀತಾ ತನಗೆ ಬಹಳ ಬೇಕಾಗಿರುವಾಕೆ. ಅವಳ ಸಂಪರ್ಕವಿಲ್ಲದೇ ತನಗೆ ಕಷ್ಟವಾಗಿದ್ದು, ಅವಳು ಈಗ ಎಲ್ಲಿರಬಹುದು ಎಂಬ ಮಾಹಿತಿ ನೀಡಿ ಎಂದು ಕೇಳುತ್ತಾಳೆ. ಲೆಟರ್ ತೋರಿಸಿ ವಿಚಾರಿಸಿದಾಗ ವೈದ್ಯರು ಬೈಯುತ್ತಾರೆ. ಡಾಕ್ಟರ್ ಆಗಿ ಹಾಗೆ ನಾನು ಯಾರ ಬಗ್ಗೆಯೂ ಹೇಳುವಂತಿಲ್ಲ. ಇದೆಲ್ಲಾ ಹೇಳಲು ಆಗದ ವ್ಯಕ್ತಿಯೊಬ್ಬರ ವ್ಯೆಯಕ್ತಿಕ ವಿಚಾರ ಎಂದು ಬೈದು ಚಾಂದಿನಿಯನ್ನು ಅಲ್ಲಿಂದ ಕಳಿಸುತ್ತಾಳೆ. ಚಾಂದಿನಿ ಬಂದ ದಾರಿಗೆ ಸುಂಕವಿಲ್ಲ ಎಂದು ತಿಳಿದು ಅಲ್ಲಿಂದ ಹೊರಟಿದ್ದಾಳೆ.

ಸೀತಾ ಹೆಸರಿಗೆ ಆಸ್ತಿ ಸೇರುತ್ತಾ..?
ಇತ್ತ ಭಾರ್ಗವಿ ಮನೆಯಲ್ಲಿ ಇಲ್ಲವಾದರೂ ಕೂಡ ಆಸ್ತಿಯನ್ನೆಲ್ಲಾ ತನ್ನ ಪಾಲಾಗಿಸಿಕೊಳ್ಳಬೇಕು ಎಂದು ಸಾಕಷ್ಟು ಪ್ಲಾನ್ ಗಳನ್ನು ಮಾಡಿದ್ದಾಳೆ. ಅವೆಲ್ಲವನ್ನೂ ವಿಶ್ವ ಜಾರಿಗೆ ತರುತ್ತಿದ್ದು, ಸದ್ಯ ಸೂರಿಗೆ ಮರೆಯುವ ಖಾಯಿಲೆ ಹೆಚ್ಚಾಗಿದೆ ಎಂದು ಬಿಂಬಿಸಿದ್ದಾನೆ. ಸೂರಿನೇ ಲಾಯರ್ ಅನ್ನು ಕರೆಸಿರುವಂತೆ ನಾಟಕ ಮಾಡಿದ್ದಾನೆ. ಲಾಯರ್ ಕೂಡ ಮನೆಗೆ ಆಗಮಿಸಿದ್ದು, ರಾಮ್ ಆಸ್ತಿಯಲ್ಲಿ ಸೀತಾಳಿಗೂ ಹಕ್ಕಿದೆ ಎಂದು ಅಗ್ರಿಮೆಂಟ್ ಮಾಡಿ ತಂದಿದ್ದಾರೆ. ಸೀತಾಳಿಗೆ ಇಷ್ಟವಿಲ್ಲದಿದ್ದರೂ ಮನೆಯವರ ಒತ್ತಾಯಕ್ಕೆ ಸೀತಾ ಅದಕ್ಕೆ ಸಹಿ ಹಾಕಲು ಮುಂದಾಗಿದ್ದಾಳೆ.
ಸತ್ಯಜಿತ್ ಮಾತು ಕೇಳಿದ ಸಾಧನಾ
ಆದರೆ, ಇಷ್ಟು ಬೇಗ ಸೀತಾಳ ಹೆಸರಿಗೆ ಆಸ್ತಿಯನ್ನು ವರ್ಗಾಯಿಸುತ್ತಿರುವುದರಲ್ಲಿ ಭಾರ್ಗವಿಯ ಕುತಂತ್ರವಿದೆ ಎಂದು ಅರಿತಿರುವ ಸತ್ಯಜಿತ್ ಸಾಧನಾಳಿಗೆ ಕೆಲಸವನ್ನು ಕೊಟ್ಟಿದ್ದಾನೆ. ಆಸ್ತಿ ಪೇಪರ್ ಗಳಿಗೆ ಸೀತಾ ಸಹಿ ಹಾಕದಂತೆ ಕಾಪಾಡು ಎಂದು ಕೇಳಿದ್ದಾನೆ. ಪತಿ ಮಾತನ್ನು ಕೇಳಿದ ಸಾಧನಾ ಬೇಕಂತಲೇ ಸೀತಾ ಸಹಿ ಹಾಕಿದ ಹಾಳೆಗಳ ಮೇಲೆ ಕಾಫಿ ಚೆಲ್ಲಿದ್ದಾಳೆ. ಇದರಿಂದ ಮನೆಯವರಿಗೆಲ್ಲಾ ಬೇಸರವಾಗಿದೆ. ಹನಿಮೂನ್ ಮುಗಿದ ಬಳಿಕ ಮತ್ತೊಂದು ಅಗ್ರಿಮೆಂಟ್ ಮಾಡಿಸಿದರೆ ಆಯ್ತು ಎಂದು ಸುಮ್ಮನಾಗಿದ್ದು, ಸೂರಿ ತಾತ ರಾಮ್ ಬಳಿ ಮೊಮ್ಮಗ ಬರಲೇಬೇಕು ಎಂದು ಹೇಳಿದ್ದಾನೆ. ಈ ಮಾತನ್ನು ಕೇಳಿದ ಸೀತಾಳಿಗೆ ಕೋಪ ಬಂದಿದೆ. ಯಾಕೆ ಯಾರಿಗೂ ತನ್ನ ಮನಸ್ಥಿತಿ ಅರ್ಥವಾಗುತ್ತಿಲ್ಲ ಎಂದು ಬೇಸರ ಮಾಡಿಕೊಂಡಿದ್ದಾಳೆ.

ಮಗುವಿಗಾಗಿ ಮಿಡಿದ ಮೇಘಶ್ಯಾಮ್
ಇನ್ನು ಬೋರ್ಡಿಂಗ್ ಸ್ಕೂಲ್ ಗೆ ಸಿಹಿ ಕೊಂಚ ಕೊಂಚವೇ ಅಡ್ಜಸ್ಟ್ ಆಗುತ್ತಿದ್ದಾಳೆ. ಅವಳಿಗೆ ರಾಮ್ ನಂತೆಯೇ ಡಾ.ಮೇಘಶ್ಯಾಮ್ ಸ್ನೇಹಿತರಾಗಿ ಸಿಕ್ಕಿರುವುದು ಖುಷಿ ಕೊಟ್ಟಿದೆ. ಇನ್ನು ಮೇಘಶ್ಯಾಮ್ ಗೂ ಮಕ್ಕಳೆಂದರೆ ಇಷ್ಟ. ಹೀಗಾಗಿ ಇಬ್ಬರೂ ಒಬ್ಬರನ್ನೊಬ್ಬರು ಹಚ್ಚಿಕೊಂಡಿದ್ದಾರೆ. ಮನೆಗೆ ಹೋಗಿ ಮೇಘಶ್ಯಾಮ್ ಹೆಂಡತಿ ಬಳಿ ತಮಗೊಂದು ಮಗು ಬೇಕು ಎಂದು ಕೇಳಿದ್ದಕ್ಕೆ ಶಾಲಿನಿ ಜಗಳ ಮಾಡಿದ್ದಾಳೆ. ಇದ್ದ ಮಗುವನ್ನಾದರೂ ಉಳಿಸಿಕೊಳ್ಳಬೇಕಿತ್ತು ಎಂದು ಮೇಘಶ್ಯಾಮ್ ಕೊರಗಿದ್ದು, ಈಗ ಸಿಹಿ ಹುಟ್ಟಿನ ಬಗ್ಗೆ ಮತ್ತಷ್ಟು ಅನುಮಾನಗಳು ಸೃಷ್ಟಿಯಾಗಿವೆ.


Click it and Unblock the Notifications











