ATM ಕಾರ್ಡ್ ಗಾಗಿ ಒಳ್ಳೆ ಹುಡುಗ ಪ್ರಥಮ್ ಜೊತೆ ಸೇರಿದ್ರಾ ಹಿರಿಯ ನಟ ಬಿರಾದರ್...!
ವೈಜನಾಥ್ ಬಿರಾದರ್.. ಗಂಧದಗುಡಿಯಲ್ಲಿ ಈ ಹೆಸರು ಕೇಳದವರಿಲ್ಲ. ಆ ವ್ಯಕ್ತಿಯನ್ನ ನೋಡದವರಿಲ್ಲ. ಬಿರಾದಾರ್ ಎಂಬ ಶಾರ್ಟ್ ನೇಮ್ ಹೇಳಿದರೆ ಸಾಕು ಅಮ್ಮ ತಾಯಿ ಅನ್ನೋ ಭಿಕ್ಷುಕ, ಹೋಯ್ ಹಾಕೋ ಒಂದ್ ಪೀಸು ಅನ್ನೋ ಪಕ್ಕ ಕುಡುಕ ನಮ್ಮ ಕಣ್ಣೆದುರಿಗೆ ರಪ್ ಅಂತ ಪಾಸ್ ಆಗದೆ ಇರದು. ಇವರು ರಾಷ್ಟ್ರ ಪ್ರಶಸ್ತಿ ವಿಜೇತ ಕೂಡ ಹೌದು.
ಬಿರಾದರ್ ಇಲ್ಲಿವರೆಗೂ ಸುಮಾರು 500 ಸಿನಿಮಾಗಳಲ್ಲಿ ನಟಿಸಿ, ಪ್ರೇಕ್ಷಕರನ್ನ ನಗಿಸಿದ್ದಾರೆ. ಆದರೆ ಇಷ್ಟು ವರ್ಷಗಳ ಸಿನಿ ಜರ್ನಿಯಲ್ಲಿ ಫಸ್ಟ್ ಟೈಮ್ '90 ಹೊಡಿ ಮನೀಗ್ ನಡಿ' ಸಿನಿಮಾದಲ್ಲಿ ನಟನಾಗಿ ಕಾಣಿಸಿಕೊಂಡಿದ್ದಾರೆ. ಬಿರಾದರ್ ಸಿನಿಮಾಗಳಲ್ಲಿ ಬಿಟ್ಟರೆ ಅಷ್ಟಾಗಿ ಬೇರೆಲ್ಲೂ ಕಾಣಿಸಿಕೊಳ್ಳಲ್ಲ. ಯಾರಿಗೆ ಅವಕಾಶಗಳು ಕುಗ್ಗಿದ್ದರೂ, ಬಿರಾದರ್ ಗೆ ಮಾತ್ರ ಆಫರ್ ಗಳ ಸುರಿಮಳೆ ಸುರಿಯುತ್ತಲೆ ಇದೆ. ಅದಕ್ಕೆ ಉದಾಹರಣೆ 500ನೇ ಸಿನಿಮಾದಲ್ಲಿ ಹೀರೋ ಆಗಿ ನಟಿಸಿರೋದು.

ಬಿರಾದರ್ಗೆ ATM ಕಾರ್ಡ್ ಬೇಕಂತೆ
ಈಗ ನಾವೇಳೋದಕ್ಕೆ ಹೊರಟ ವಿಚಾರ ಸಿನಿಮಾದ ಬಗ್ಗೆ ಅಲ್ಲ. ಬಿರಾದರ್ ರಿಯಾಲಿಟಿ ಶೋನಲ್ಲಿ ರಿಯಲ್ ಆಗಿ ಎಂಜಾಯ್ ಮಾಡಿರುವ ಪರಿ ಬಗ್ಗೆ. ಸ್ಟಾರ್ ಸುವರ್ಣದಲ್ಲಿ ಗಾನ ಬಜಾನ ಅನ್ನೋ ರಿಯಾಲಿಟಿ ಶೋ ನಡೀತಾ ಇದೆ. ಈ ಕಾರ್ಯಕ್ರಮದಲ್ಲಿ ಹಿರಿಯ ನಟ ಬಿರಾದರ್ ಜೊತೆಗೆ ಒಳ್ಳೆ ಹುಡುಗ ಪ್ರಥಮ್ ಕೂಡ ಬಂದಿದ್ದಾರೆ.
ಈ ಕಾರ್ಯಕ್ರಮದ ನಿರೂಪಣೆಯನ್ನ ನಿರಂಜನ್ ಮಾಡಿದ್ದಾರೆ. ಬಿರಾದರ್ ಹಿರಿಯ ನಟ. ಅದೆಷ್ಟು ಪ್ರಬುದ್ಧತೆಯಿಂದ ಕಾರ್ಯಕ್ರಮವನ್ನು ಫೀಲ್ ಮಾಡ್ತಾರೆ ಗೊತ್ತಾ. ಕಾರ್ಯಕ್ರಮದುದ್ದಕ್ಕೂ ಒಂದಷ್ಟು ನಗು, ಒಂದಷ್ಟು ಮನರಂಜನೆಯಂತು ಸಿಕ್ಕೆ ಸಿಗುತ್ತೆ. ಈ ವೇಳೆ ನಿರಂಜನ್ ಪ್ರಥಮ್ ಕಾಲನ್ನು ಎಳೆದಿದ್ದಾರೆ. ಅಲ್ಲ ಸರ್, ಇಷ್ಟೊಂದು ಸಿನಿಮಾಗಳನ್ನು ಮಾಡಿದ್ದೀರಿ. ಪ್ರಶಸ್ತಿಗಳನ್ನು ಬಾಚಿಕೊಂಡಿದ್ದೀರಿ. ಪ್ರಥಮ್ ಜೊತೆ ಯಾಕೆ ಸಿನಿಮಾ ಮಾಡಿದ್ರಿ ಎಂದಾಗ, ಈ ಸಿನಿಮಾದಲ್ಲಿ ಎಟಿಎಮ್ ಕಾರ್ಡ್ ಸಿಗುತ್ತೆ ಅಂತ ಹೇಳಿದ್ದಾರೆ ಅದಕ್ಕೆ ಮಾಡಿದೆ ಅಂತಾರೆ.

ವಿಲನ್ ಆಗುವ ಬಯಕೆ
ಕಲಾವಿದರು ಅದೆಷ್ಟೇ ಸಿನಿಮಾಗಳನ್ನು ಮಾಡಲಿ, ಅದೆಷ್ಟೇ ಪಾತ್ರಗಳನ್ನು ಮಾಡಲಿ ಇಷ್ಟದ ಪಾತ್ರವೊಂದು ಇರುತ್ತೆ. ಆ ಕನಸಿನ ಪಾತ್ರಕ್ಕಾಗಿ ಅವರ ಮನಸ್ಸು ಹಾತೊರೆಯುತ್ತಿರುತ್ತೆ. ಕೆಲವರಿಗೆ ಅಂತ ಪಾತ್ರಗಳು ಅದಾಗಲೇ ಸಿಕ್ಕಿಬಿಟ್ಟಿರುತ್ತೆ. ಇನ್ನು ಕೆಲವರಿಗೆ ಅದೆಷ್ಟೆ ಟ್ಯಾಲೆಂಟ್ ಇದ್ದರೂ, ಬೇಕಾದ ಪಾತ್ರಗಳು ಸಿಗೋದೆ ಇಲ್ಲ. ಆ ಸಾಲಿನಲ್ಲಿ ಹಿರಿಯ ನಟ ವೈಜನಾಥ್ ಬಿರಾದರ್ ನಿಲ್ಲುತ್ತಾರೆ.
ಅಬ್ಬಾ ಒಮ್ಮೆ ಅವರ ಸಿನಿಮಾ ಜರ್ನಿಯನ್ನು ಹಿಂತಿರುಗಿ ನೋಡಿದರೆ ಅದೆಷ್ಟು ವಿಭಿನ್ನ, ಅದ್ಬುತ ಪಾತ್ರಗಳಲ್ಲಿ ಪ್ರೇಕ್ಷಕರನ್ನು ರಂಜಿಸಿಲ್ಲ. ಆದರೆ, ಅವರಿಗೂ ಇಂತಹದ್ದೇ ಒಂದಿಷ್ಟದ ಪಾತ್ರ ಮಾಡಬೇಕು ಎನ್ನುವ ಬಯಕೆ ಇದೆ. ಅದು ವಿಲನ್ ಆಗಿ ಅಬ್ಬರಿಸಬೇಕೆಂಬುದು. ಇಲ್ಲಿವರೆಗೂ ಕಾಮಿಡಿ ಪಾತ್ರದಲ್ಲಿಯೇ ನಟಿಸಿದ ಬಿರಾದರ್ ವಿಲನ್ ಆದರೆ ಹೇಗಿರಬೇಡ. ನೀವೂ ಊಹೆ ಲೋಕಕ್ಕೆ ಜಾರಿದ್ದೀರಿ ಅಲ್ವಾ.. ನಿಮಗೆಲ್ಲಾ ಅಷ್ಟು ರಿಸ್ಕ್ ಬೇಡ ಅಂತ ನಿರಂಜನ್ ಅವರೇ ತೋರಿಸಿದ್ದಾರೆ.

ಬಾಲಿವುಡ್ ಸಿನಿಮಾಗೂ ಬಿರಾದರ್ ವಿಲನ್
'ಗಾನ ಬಜಾನ' ರಿಯಾಲಿಟಿ ಶೋನಲ್ಲಿ ಬಿರಾದರ್ ಬಗ್ಗೆ ಗೊತ್ತಿರದ ಹಲವು ಸಂಗತಿಗಳು ತೆರೆದುಕೊಳ್ಳುತ್ತವೆ. ಅವರ ಆಸೆಯನ್ನು ಗಾನ ಬಜಾನ್ ಶೋ ನೆರವೇರಿಸಿದೆ. ಬಿರಾದರ್ ಅವರನ್ನ ಹಾಲಿವುಡ್, ಬಾಲಿವುಡ್ ರೇಂಜಿಗೆ ವಿಲನ್ ಮಾಡಿಬಿಟ್ಟಿದ್ದಾರೆ ನಿರೂಪಕ ನಿರಂಜನ್. ವಿಲನ್ ಆದರೆ ಹೇಗೆಲ್ಲಾ ಕಾಣ್ತಾರೆ ಅಂತ ಫೋಟೊಶಾಪ್ ಮಾಡಿ ತೋರಿಸಿದ್ದಾರೆ.

ಯಶ್ ಅವತಾರವೆತ್ತಿದೆ
ಇವೆಲ್ಲವನ್ನೂ ಕಂಡು ಮನಸ್ಸಲ್ಲೇ ಖುಷಿ ಪಟ್ಟ ಬಿರಾದರ್ಗೆ ಮತ್ತೊಂದು ಸರ್ಪ್ರೈಸ್ ಕೊಟ್ಟಿರೋ ಟೀಂ 'ಕೆಜಿಎಫ್' ಸಿನಿಮಾದಲ್ಲಿ ಯಶ್ ಪಾತ್ರಕ್ಕೂ ಬಿರಾದರ್ ಮುಖವನ್ನೇ ಜೋಡಿಸಿದ್ದಾರೆ. ಈ ಫೋಟೊ ನೋಡಿ ಬಿರಾದರ್ ಫುಲ್ ಖುಷಿಯಾಗಿದ್ದಾರೆ. ಈ ಅವಕಾಶ 30 ವರ್ಷಗಳ ಹಿಂದೆ ಬರಬೇಕಿತ್ತು ಅನ್ನೋ ಬೇಸರ ಹೊರ ಹಾಕಿದ್ದಾರೆ.


Click it and Unblock the Notifications











