ಯುವತಿಗೆ ವಂಚಿಸಿ ಪರಾರಿಯಾದ ಧಾರಾವಾಹಿ ನಟ
ಧಾರಾವಾಹಿಗಳಲ್ಲಿ ಖಳನಟನಾಗಿ ನಟಿಸುತ್ತಿದ್ದ ವ್ಯಕ್ತಿಯೊಬ್ಬ ನಿಜ ಜೀವನದಲ್ಲೂ ಖಳ ಕೃತ್ಯವನ್ನೇ ಮಾಡಿದ್ದಾನೆ.
ಧಾರಾವಾಹಿಗಳಲ್ಲಿ ಖಳನಾಯಕನ ಪಾತ್ರ ಮಾಡುತ್ತಿದ್ದ ನಟನೊಬ್ಬ ಯುವತಿಯೊಂದಿಗೆ ಪ್ರೀತಿಯ ನಾಟಕವಾಡಿ ಕೈಗೊಂದು ಮಗು ನೀಡಿ ಹೇಳದೆ-ಕೇಳದೆ ಓಡಿ ಹೋಗಿದ್ದಾನೆ. ಯುವತಿಗೆ ಮೋಸ ಮಾಡಿರುವ ನಟನಿಗೆ ಈಗಾಗಲೇ ಮದುವೆ ಆಗಿದೆ!
ಚಿಕ್ಕಮಗಳೂರು ಜಿಲ್ಲೆ ತಾಲೂಕಿನ ಕಳಸಾಪುರ ನಿವಾಸಿ ಉಮೇಶ್ ಎಂಬಾತ ಬೆಂಗಳೂರಿನಲ್ಲಿ ನೆಲೆಸಿದ್ದು. ಕನ್ನಡದ ಕೆಲವು ಧಾರಾವಾಹಿಗಳಲ್ಲಿ ವಿಲನ್ ಪಾತ್ರ, ವಿಲನ್ಗೆ ಅಸಿಸ್ಟೆಂಟ್ ಪಾತ್ರಗಳನ್ನು ಮಾಡುತ್ತಿದ್ದ. ಫೇಸ್ಬುಕ್, ವಾಟ್ಸಾಪ್ನಲ್ಲಿ ಸಕ್ರಿಯವಾಗಿದ್ದ ಆಗಿದ್ದ ಉಮೇಶ್, ಹಾಸನ ಜಿಲ್ಲೆ ಚನ್ನರಾಯಪಟ್ಟಣ ಯುವತಿಯೊಬ್ಬರೊಂದಿಗೆ ಸಂಪರ್ಕ ಸಾಧಿಸಿ ಮೋಹಕ ಮಾತುಗಳನ್ನಾಡಿ ಪ್ರೀತಿಯ ಬಲೆಗೆ ಬೀಳಿಸಿದ್ದಾನೆ.

ಉಮೇಶನ ಮಾತು ನಂಬಿ ಆತನ ಬಲೆಗೆ ಬಿದ್ದ ಯುವತಿ ಆತನೊಂದಿಗೆ ಸಲಿಗೆಯಿಂದ ವರ್ತಿಸಿದ್ದಾಳೆ. ಬೆಂಗಳೂರಿನ ಚಿಕ್ಕಬಿದರೆಯಲ್ಲಿ ಮನೆ ಮಾಡಿದ್ದ ಉಮೇಶ ಯುವತಿಯನ್ನು ಆಗಾಗ್ಗೆ ಮನೆಗೆ ಕರೆಸಿಕೊಳ್ಳುತ್ತಿದ್ದ. ಈ ನಡುವೆ ಯುವತಿ ಗರ್ಭಿಣಿ ಆಗಿದ್ದಾಳೆ. ಆಕೆಗೆ ಗರ್ಭಪಾತ ಮಾಡಿಸುವುದಾಗಿ ಹೇಳಿ ಚಿಕ್ಕಮಗಳೂರಿಗೆ ಕರೆದುಕೊಂಡು ಬಂದ ಉಮೇಶ ಆಕೆಯನ್ನು ಲಾಡ್ಜ್ ಒಂದರಲ್ಲಿ ಬಿಟ್ಟು ಪರಾರಿಯಾಗಿದ್ದಾನೆ. ಅಸಹಾಯಕಳಾದ ಯುವತಿ ನಂತರ ಮಗುವಿಗೆ ಜನ್ಮ ನೀಡಿದ್ದಾಳೆ.
ಇದೀಗ ತನ್ನ ಐದು ತಿಂಗಳ ಮಗು ಜೊತೆ ಉಮೇಶ್ ಮನೆಗೆ ಬಂದಿರುವ ಯುವತಿ ನ್ಯಾಯಕ್ಕಾಗಿ ಉಮೇಶ್ ಮನೆ ಮುಂದೆ ಏಕಾಂಗಿಯಾಗಿ ಧರಣಿ ಕೂತಿದ್ದಾಳೆ. ಉಮೇಶನೊಂದಿಗೆ ಮದುವೆ ಮಾಡಿಸಿ ಎಂದು ಒತ್ತಾಯಿಸಿದ್ದಾಳೆ.
''ಗರ್ಭಪಾತ ಮಾಡಿಸಲು ವೈದ್ಯರು 30 ಸಾವಿರ ಹಣ ಕೇಳಿದ್ದಾರೆ ಎಂದು ಉಮೇಶ್ ಹೇಳಿದ್ದ ಹಾಗಾಗಿ ನಾನು ಅವನಿಗೆ ಹಣ ನೀಡಿದ್ದೆ. ನನಗೆ ಮನೆಯಲ್ಲಿ ಹುಡುಗನ ನೋಡುತ್ತಿದ್ದಾರೆ ಎಂದು ಹೇಳಿದರೂ ಏನೂ ಮಾಡಲಿಲ್ಲ. ಮಗು ಹುಟ್ಟುವ ಮುಂಚೆ ತೆಗೆಸು ಎಂದು ಕೇಳಿಕೊಂಡರು ಏನೂ ಮಾಡಲಿಲ್ಲ. ಇಂದು ಮಗು ಇಟ್ಟುಕೊಂಡು ನಾನು ಎಲ್ಲಿಗೆ ಹೋಗಲಿ. ಮಗು ಆದಮೇಲೆ ಸಹ ನನ್ನ ಮಗುವನ್ನು ಮಹಿಳೆಯೊಬ್ಬಳ ಜೊತೆ ಸೇರಿ ಬೇರೆಯವರಿಗೆ ಮಾರಾಟ ಮಾಡಲು ಯತ್ನಿಸಿದ್ದ'' ಎಂದು ಮಾಧ್ಯಮಗಳ ಮುಂದೆ ಕಣ್ಣೀರಿಟ್ಟಿದ್ದಾಳೆ ಯುವತಿ.

''ನನಗೆ ಮಾತ್ರವಲ್ಲ ಹಲವು ಯುವತಿಯರಿಗೆ ಉಮೇಶ ಮೋಸ ಮಾಡಿದ್ದಾನೆ. ನಾನೊಬ್ಬ ಅನಾಥ ಯಾರೂ ಇಲ್ಲ ಎಂದು ಹೇಳಿಕೊಂಡು ಯುವತಿಯರ ಸಂಪರ್ಕ ಸಾಧಿಸುವ ಉಮೇಶ ಆ ನಂತರ ಅವರಿಗೆ ಮೋಸ ಮಾಡುತ್ತಾನೆ. ಅವನ ನಿಜ ಬಣ್ಣ ಎಲ್ಲರಿಗೂ ಗೊತ್ತಾಬೇಕು ಎಂದು ನಾನು ಪ್ರತಿಭಟನೆ ಮಾಡುತ್ತಿದ್ದೇನೆ'' ಎಂದಿದ್ದಾಳೆ ಯುವತಿ.
ಪ್ರತಿಭಟನಾ ನಿರತ ಮಹಿಳೆಯೊಂದಿಗೆ ವಾಗ್ವಾದ ನಡೆಸಿದ ಉಮೇಶನ ಮೊದಲ ಹೆಂಡತಿ. ''ಅವನಿಗೂ ನಮಗೂ ಸಂಬಂಧವೇ ಇಲ್ಲ. ಅವನು ನಿನಗೆ ಮೋಸ ಮಾಡಿದ್ದರೆ ಹೋಗಿ ಅವನನ್ನೇ ಕೇಳು'' ಎಂದು ದಬಾಯಿಸಿದ್ದಾರೆ. ಉಮೇಶನ ಮೊಬೈಲ್ ಸ್ವಿಚ್ ಆಫ್ ಆಗಿದೆ. ಅವನನ್ನು ಇಲ್ಲಿಗೆ ಕರೆಸಿ ಎಂದು ಯುವತಿ ರಂಪ ಮಾಡಿದ್ದು, ಯುವತಿಗೆ ಪೊಲೀಸರು ಸಮಾಧಾನಪಡಿಸಿದ್ದಾರೆ. ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ಧಾರಾವಾಹಿ, ಸಿನಿಮಾ ನಟ-ನಟಿಯರ ಬಗ್ಗೆ ಆಗಾಗ್ಗೆ ಇಂಥಹಾ ಪ್ರಕರಣಗಳು ಕೇಳಿಬರುತ್ತಲೇ ಇರುತ್ತವೆ. ಚೆನ್ನೈನ ಟಿವಿ ನಟನೊಬ್ಬ ಪ್ರೇಯಸಿಯನ್ನು ಹತ್ಯೆ ಮಾಡಿದ್ದು ಕೆಲವು ದಿನಗಳ ಹಿಂದೆ ವರದಿ ಆಗಿತ್ತು. ಕುಡಿದು ಅನುಚಿತವಾಗಿ ವರ್ತಿಸಿದ ಆರೋಪದ ಮೇಲೆ ಟಿವಿ ನಟ ಪ್ರಾಚೀನ್ ಚೌಹಾನ್ ಅನ್ನು ಪೊಲೀಸರು ಇದೇ ತಿಂಗಳ ಆರಂಭದಲ್ಲಿ ಬಂಧಿಸಿದ್ದರು.
ಹಿಂದಿ ಧಾರಾವಾಹಿಯ ಪ್ರಖ್ಯಾತ ನಟ ಪರ್ಲ್ ವಿ ಪುರಿ ವಿರುದ್ಧ ಅಪ್ರಾಪ್ತ ಯುವತಿಯ ಮೇಲೆ ಅತ್ಯಾಚಾರ ಮಾಡಿರುವ ಆರೋಪ ಇದೆ. ಪ್ರಕರಣದಲ್ಲಿ ಅವರಿಗೆ ಜಾಮೀನು ದೊರೆತಿದೆ. ಹಿಂದಿಯ ಮತ್ತೊಬ್ಬ ನಟ ಕರಣ್ ಮೆಹ್ರಾ ವಿರುದ್ಧ ಅವರ ಪತ್ನಿಯೇ ಆರೋಪ ಮಾಡಿದ್ದರು. ಕರಣ್, ನಟಿಯೊಂದಿಗೆ ಅನೈತಿಕ ಸಂಬಂಧ ಹೊಂದಿದ್ದಾರೆ. ನನ್ನ ಮೇಲೆ ದೈಹಿಕ ಹಲ್ಲೆ ಮಾಡಿದ್ದಾರೆ ಎಂದು ಅವರು ಸುದ್ದಿಗೋಷ್ಠಿಯಲ್ಲಿ ಹೇಳಿದ್ದರು.


Click it and Unblock the Notifications











