ಬಾಯ್ಫ್ರೆಂಡ್ ಕಿರುಕುಳ; ಐದು ದಿನಗಳ ಹಿಂದಷ್ಟೇ ನಗುತ್ತಾ ರೀಲ್ಸ್ ಮಾಡಿದ್ದ ಕಿರುತೆರೆ ನಟಿ ಇನ್ನಿಲ್ಲ
ಈ ವರ್ಷ ಉಂಟಾದಷ್ಟು ಕಿರುತೆರೆ ಕಲಾವಿದರ ಸಾವಿನ ಪ್ರಮಾಣವನ್ನು ಹಿಂದಿನ ಯಾವುದೇ ವರ್ಷಗಳಲ್ಲಿಯೂ ಸಹ ನಾವು ಕಂಡಿಲ್ಲ ಎನ್ನಬಹುದು.
ಅದರಲ್ಲಿಯೂ ಹಿಂದಿ ಧಾರಾವಾಹಿ ಕ್ಷೇತ್ರದ ಅನೇಕ ಕಲಾವಿದರು ಈ ವರ್ಷ ಇಹಲೋಕ ತ್ಯಜಿಸಿದ್ದಾರೆ. ಕಳೆದ ಮೂರು ವಾರಗಳ ಹಿಂದಷ್ಟೇ ತಮಿಳು ಧಾರಾವಾಹಿ ನಟಿ ದೀಪಾ ಆತ್ಮಹತ್ಯೆ ಮಾಡಿಕೊಂಡಿದ್ದರು. ಈ ಸಾವಿನ ಸುದ್ದಿ ಮಾಸುವ ಹೊತ್ತಿಗೆ ಇದೀಗ ಮತ್ತೋರ್ವ ಧಾರಾವಾಹಿ ನಟಿ ನೇಣು ಕುಣಿಕೆಗೆ ಕೊರಳೊಡ್ಡಿದ್ದಾರೆ.
ಹೌದು, ಇಂದೋರ್ ಮೂಲದ ಖ್ಯಾತ ಕಿರುತೆರೆ ನಟಿ ವೈಶಾಲಿ ತಕ್ಕರ್ ಖಿನ್ನತೆಯಿಂದ ಹಾಗೂ ಪ್ರಿಯಕರನ ಕಿರುಕುಳದಿಂದ ತನ್ನ ನಿವಾಸದಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇಂದು ( ಅಕ್ಟೋಬರ್ 16 ) ನಟಿ ವೈಶಾಲಿ ತಕ್ಕರ್ ಮೃತದೇಹ ಇಂದೋರ್ ನಗರದಲ್ಲಿರುವ ಆಕೆಯ ನಿವಾಸದಲ್ಲಿ ಪತ್ತೆಯಾಗಿದ್ದು, ಸ್ಥಳದಲ್ಲಿಯೇ ಡೆತ್ ನೋಟ್ ಕೂಡ ದೊರಕಿದೆ.

ಇನ್ನು ಮಾಜಿ ಪ್ರಿಯಕರ ಸಾಕಷ್ಟು ಕಿರುಕುಳ ನೀಡಿದ್ದು, ತಾನು ತೀವ್ರ ಒತ್ತಡಕ್ಕೆ ಸಿಲುಕಿಕೊಂಡಿರುವುದಾಗಿ ಹಾಗೂ ಅದೇ ಕಾರಣಕ್ಕಾಗಿ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದಾಗಿ ನಟಿ ವೈಶಾಲಿ ತಕ್ಕರ್ ಬರೆದುಕೊಂಡಿದ್ದಾರೆ. ಈ ಡೆತ್ ನೋಟ್ ಮೇರೆಗೆ ದೂರು ದಾಖಲಿಸಿಕೊಳ್ಳಲಾಗಿದ್ದು ತನಿಖೆ ಆರಂಭಿಸಿದ್ದೇವೆ ಎಂದು ಎಸಿಪಿ ಎಂ ರೆಹಮಾನ್ ತಿಳಿಸಿದ್ದಾರೆ.
ವ್ರೆಶಾಲಿ ತಕ್ಕರ್ ಸಸುರಲ್ ಸಿಮರ್ ಕಾ ಧಾರಾವಾಹಿಯಲ್ಲಿ ಅಂಜಲಿ ಭರದ್ವಾಜ್ ಪಾತ್ರವನ್ನು ಮಾಡುವ ಮೂಲಕ ಖ್ಯಾತಿಯನ್ನು ಪಡೆದಿದ್ದರು. ಇನ್ನುಳಿದಂತೆ ಸೂಪರ್ ಸಿಸ್ಟರ್ಸ್ ಧಾರಾವಾಹಿಯಲ್ಲಿ ಶಿವಾನಿ ಶರ್ಮಾ, ವಿಷ್ ಯಾ ಅಮೃತ್ ಧಾರಾವಾಹಿಯಲ್ಲಿ ನೇತ್ರಾ ಸಿಂಗ್ ರಾಥೋರ್, ಮನ್ಮೋಹಿನಿ 2 ಧಾರಾವಾಹಿಯಲ್ಲಿ ಅನನ್ಯ ಮಿಶ್ರಾ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ ನಟಿ ವೈಶಾಲಿ ತಕ್ಕರ್. ಹೀಗೆ ಹತ್ತಕ್ಕೂ ಹೆಚ್ಚಿನ ಧಾರಾವಾಹಿಗಳಲ್ಲಿ ನಟಿಸಿ ಖ್ಯಾತಿ ಗಳಿಸಿರುವ ವೈಶಾಲಿ ತಕ್ಕರ್ 5 ದಿನಗಳ ಹಿಂದಷ್ಟೇ ತನ್ನ ಅಧಿಕೃತ ಇನ್ ಸ್ಟಾಗ್ರಾಂ ಖಾತೆಯಲ್ಲಿ ರೀಲ್ಸ್ ಒಂದನ್ನು ಶೇರ್ ಮಾಡಿದ್ದಾರೆ. ನಗು ಮುಖದೊಂದಿಗೆ ರೀಲ್ಸ್ ಮಾಡಿರುವ ವೈಶಾಲಿ ತಕ್ಕರ್ ಇಂದು ಹೆಣವಾಗಿದ್ದಾರೆ. ವೈಶಾಲಿ ಇನ್ ಸ್ಟಾಗ್ರಾಂ ಖಾತೆಗೆ 5 ಲಕ್ಷಕ್ಕೂ ಹೆಚ್ಚಿನ ಅನುಯಾಯಿಗಳಿದ್ದಾರೆ.


Click it and Unblock the Notifications











