"ಮಹಿಳೆಯರಿಗೆ ಮನೆಹಾಳ ಬುದ್ಧಿ ಕಲಿಸೋದು ಧಾರಾವಾಹಿಗಳು"- ಹಾವೇರಿ ಎಸ್ಪಿ ಯಶೋಧಾ
ಮನರಂಜನಾ ವಾಹಿನಿಗಳಲ್ಲಿ ಪ್ರಸಾರವಾಗುವ ಧಾರಾವಾಹಿಗಳು ಮಹಿಳೆಯರ ಮನ ಗೆಲ್ಲುತ್ತಿವೆ. ಗಂಟೆಗಳ ಕಾಲ ಮನೆಗಳಲ್ಲಿ ಹೆಣ್ಣುಮಕ್ಕಳು ಧಾರಾವಾಹಿಗಳನ್ನು ವೀಕ್ಷಿಸುತ್ತಾ ಕೂರುತ್ತಾರೆ. ಮಹಿಳೆಯರಿಗೆ ಮನೆಹಾಳ ಬುದ್ಧಿ ಕಲಿಸೋದು ಧಾರಾವಾಹಿಗಳು ಎಂದು ಹಾವೇರಿ ಜಿಲ್ಲೆಯ ಎಸ್ಪಿ ಯಶೋಧಾ ಹೇಳಿದ್ದಾರೆ.
ಹಾವೇರಿ ಶ್ರೀ ಹುಕ್ಕೇರಿ ಮಠದ ಜಾತ್ರಾ ಮಹೋತ್ಸವ ಬಹಳ ಅದ್ಧೂರಿಯಾಗಿ ನೆರವೇರಿದೆ. ಸಾಕಷ್ಟು ಸಾಂಸ್ಕೃತಿಕ ಕಾರ್ಯಕ್ರಮಗಳು ನೆರೆದ ಜನರನ್ನು ರಂಜಿಸಿದೆ. ಕಾರ್ಯಕ್ರಮದಲ್ಲಿ ಸಾಕಷ್ಟು ಗಣ್ಯರು ಭಾಗಿ ಆಗಿದ್ದರು. ಹಾವೇರಿ ಎಸ್ಪಿ ಯಶೋಧಾ ಅವರು ಕೂಡ ಭಾಗಿ ಆಗಿ ವೇದಿಕೆಯಲ್ಲಿ ಮಾತನಾಡಿದ್ದಾರೆ. ಮನೆಗಳಲ್ಲಿ ಹೆಣ್ಣುಮಕ್ಕಳು ಧಾರಾವಾಹಿಗಳಿಗೆ ಅಡಿಕ್ಟ್ ಆಗಿರುವ ಬಗ್ಗೆ ಅವರು ಬೇಸರ ವ್ಯಕ್ತಪಡಿಸಿದ್ದಾರೆ.

ಸಾಕಷ್ಟು ಹೆಣ್ಣು ಮಕ್ಕಳು ನಿಮ್ಮ ನೆಚ್ಚಿನ ಧಾರಾವಾಹಿಗಳನ್ನು ಬಿಟ್ಟು ಈ ಕಾರ್ಯಕ್ರಮದಲ್ಲಿ ಭಾಗಿ ಆಗಿದ್ದೀರಾ. ಈ ಜಾತ್ರೆಯ ಮಹತ್ವ ಏನು ಎನ್ನುವುದು ಗೊತ್ತಾಗುತ್ತದೆ. ಧಾರಾವಾಹಿಗಳನ್ನು ನೋಡಬೇಡಿ ಎಂದು ಹೇಳಲ್ಲ. ಈ ಕಾರ್ಯಕ್ರಮದಲ್ಲಿ ಆ ವಿಚಾರ ಬೇಡ. ಆದರೂ ನಾನು ಯಾವುದೇ ಕಾರ್ಯಕ್ರಮಕ್ಕೆ ಹೋದರೂ ಪೊಲೀಸ್ ಅಧಿಕಾರಿ ಎನ್ನುವುದು ನೆನಪಾಗುತ್ತದೆ. ಧಾರಾವಾಹಿಯವರು ನನ್ನ ಬಗ್ಗೆ ಬೇಸರಗೊಂಡರೂ ಪರವಾಗಿಲ್ಲ. ಮಹಿಳೆಯರು ಧಾರಾವಾಹಿಗಳಿಗೆ ಎಷ್ಟು ಅಡಿಕ್ಟ್ ಆಗಿದ್ದೀರಾ ಅಂದ್ರೆ, ಹಿಂದಿನ ಬಾಗಿಲಿನಿಂದ ಕಳ್ಳ ಬಂದು ಕಳ್ಳತನ ಮಾಡಿಕೊಂಡು ಹೋದ್ರು ಗೊತ್ತಾಗಲ್ಲ. ಇಂತಹ ಉದಾಹರಣೆಗಳು ಸಾಕಷ್ಟಿವೆ ಎಂದು ಎಸ್ಪಿ ಯಶೋಧಾ ಹೇಳಿರುವುದು ವೈರಲ್ ಆಗ್ತಿದೆ.
ಮಾತು ಮುಂದುವರೆಸಿರುವ ಎಸ್ಪಿ ಯಶೋಧಾ "ಮಕ್ಕಳಿಗೆ ಓದುವಂತೆ ಹೇಳಿ ಕೂರಿಸುವುದು. ನೀವು ಧಾರಾವಾಹಿ ನೋಡುವುದು, ಮಕ್ಕಳಿಗೆ ಓದಿನ ಬಗ್ಗೆ ಗಮನ ಹೇಗೆ ಹರಿಯುತ್ತದೆ. ನೀವು ವಚನ ಅಥವಾ ಕಾದಂಬರಿ ಪುಸ್ತಕ ಹಿಡ್ಕೊಂಡು ಮಕ್ಕಳ ಜೊತೆ ಓದುತ್ತಾ ಕೂತ್ಕೊಳಿ. ನೀವು ಪಾಠ ಮಾಡುವ ಅವಕಶ್ಯಕತೆ ಇಲ್ಲ. ನಿಮ್ಮನ್ನು ನೋಡಿ ಮಕ್ಕಳು ಕಲಿಯುತ್ತಾರೆ. ನಿಮ್ಮ ಮಕ್ಕಳು ಬದುಕು ಉಜ್ವಲ ಆಗಬೇಕು ಅಂದ್ರೆ ಈ ರೀತಿ ಮಾಡಿ ಎಂದು ಸಲಹೆ ನೀಡಿದ್ದಾರೆ.
ಎಲ್ಲಾ ಮಕ್ಕಳು ಫಸ್ಟ್ ರ್ಯಾಂಕ್ ಬರಬೇಕು ಅಂದ್ರೆ, ಸಾಧ್ಯವಿಲ್ಲ. ಇಂಗ್ಲೀಷ್ ಮಾಧ್ಯಮ ಶಾಲೆಯಲ್ಲಿ ಓದಿದ ಮಾತ್ರಕ್ಕೆ ಏನೋ ಸಾಧಿಸಿಬಿಡ್ತಾರೆ ಎನ್ನುವುದು ತಪ್ಪು. ಕನ್ನಡ ಮಾಧ್ಯಮ ಶಾಲೆಯಲ್ಲೇ ಓದಿ ಸಾಧನೆ ಮಾಡಲು ಸಾಧ್ಯವಿದೆ. ಅದನ್ನು ಹೇಳಿ. ನಾನು ಇತ್ತೀಚೆಗೆ ನನ್ನ ಮಗಳ ಶಾಲೆಯಲ್ಲಿ ಪೇರೆಂಟ್ಸ್ ಮೀಟಿಂಗ್ಗೆ ಹೋಗಿದ್ದೆ. ಅಲ್ಲಿ ಪೇರೆಂಟ್ಸ್ ಹೋಗಿ ಶಿಕ್ಷಕರಿಗೆ ಕೇಳುವ ಪ್ರಶ್ನೆಗಳನ್ನು ಕೇಳಿ ನನಗೆ ಶಾಕ್ ಆಯಿತು ಎಂದಿದ್ದಾರೆ. ಮಕ್ಕಳಿಗೆ ಮೊದಲು ಸಂಸ್ಕಾರ ಕಲಿಸಿ, ಸಮಾಜದಲ್ಲಿ ಬದುಕುವುದನ್ನು ಕಲಿಸಿ, ಓದು ಒಂದೇ ಎಲ್ಲವೂ ಅಲ್ಲ ಎಂದು ಎಸ್ಪಿ ಯಶೋಧಾ ವಿವರಿಸಿದ್ದಾರೆ.
ಎಸ್ಪಿ ಯಶೋಧಾ ಹೇಳಿಕೆಯನ್ನು ಸಾಕಷ್ಟು ಜನ ಸ್ವಾಗತಿಸಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಈ ಬಗ್ಗೆ ಪರ ವಿರೋಧ ಚರ್ಚೆ ನಡೀತಿದೆ. ಒಂದ್ಕಾಲದಲ್ಲಿ ಟಿವಿ ಇರಲಿಲ್ಲ. ಬಳಿಕ ಟಿವಿ ಬಂದರೂ ಇಷ್ಟು ಚಾನಲ್ಗಳ ಭರಾಟೆ ಇರಲಿಲ್ಲ. ಆದರೆ ಈಗ ನೂರಾರು ಚಾನಲ್ಗಳು, ಸಾವಿರಾರು ಕಾರ್ಯಕ್ರಮಗಳು ಪ್ರಸಾರವಾಗುತ್ತವೆ. ಮಹಿಳೆಯರು ಧಾರಾವಾಹಿಗಳನ್ನು ನೋಡುವುದರಲ್ಲೇ ಸಾಕಷ್ಟು ಸಮಯ ಕಳೆಯುತ್ತಿದ್ದಾರೆ. ಒಂದು ದಿನ ಧಾರಾವಾಹಿ ನೋಡಲು ಸಾಧ್ಯವಾಗದಿದ್ದರೆ ಏನೋ ಕಳೆದುಕೊಂಡಂತೆ ಭಾವಿಸುತ್ತಿದ್ದಾರೆ. ಇದೇ ವಿಚಾರದ ಬಗ್ಗೆ ಎಸ್ಪಿ ಯಶೋಧಾ ಮಾತನಾಡಿದ್ದಾರೆ.


Click it and Unblock the Notifications











