Jenugoodu & Manasella Neene: ಸ್ಟಾರ್ ಸುವರ್ಣದಲ್ಲಿ ಜೇನುಗೂಡು - ಮನಸೆಲ್ಲಾ ನೀನೆ ಧಾರಾವಾಹಿ ಮಹಾಸಂಗಮ
ಒಬ್ಬರನ್ನು ಕಂಡರೆ ಇನ್ನೊಬ್ಬರಿಗೆ ಆಗುವುದೇ ಇಲ್ಲ. ಎದುರು ಬದುರು ಬಂದರೆ ಮುಗೀತು ಆಕೆ ಮೂಗು ಮುರಿಯುತ್ತಾಳೆ. ಈತ ತನ್ನ ಕೈಯನ್ನು ಸ್ಯಾನಿಟೈಸ್ ಮಾಡಿಕೊಳ್ಳುತ್ತಾನೆ. ಆಕಾಶ ಭೂಮಿ ಹೇಗೆ ಒಂದಾಗೋದಕ್ಕೆ ಸಾಧ್ಯವಿಲ್ಲವೋ, ದಿಯಾ-ಶಶಾಂಕ್ ಒಂದಾಗೋದು ಅಷ್ಟೇ ಕಷ್ಟ ಇದೆ. ಆದರೆ ಮನೆಯವರು ಒಗ್ಗಟ್ಟು ಇದೆಯಲ್ಲ ಅದು ಈ ಎಲ್ಲವನ್ನೂ ಉಲ್ಟಾ ಮಾಡಿ ನಿಂತಿದೆ. ಇದೇ ಅಲ್ವಾ ʻಜೇನುಗೂಡಿʼಗಿರುವ ತಾಕತ್ತು.
ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಜೇನುಗೂಡು ಧಾರಾವಾಹಿ ದಿನದಿಂದ ದಿನಕ್ಕೆ ತನ್ನ ಪ್ರೇಕ್ಷಕರ ಬಳಗವನ್ನು ಹೆಚ್ಚಿಸಿಕೊಳ್ಳುತ್ತಿದೆ. ಧಾರಾವಾಹಿಯಲ್ಲೂ ದಿನೇ ದಿನೆ ಹೊಸ ಹೊಸ ಟ್ವಿಸ್ಟ್ಗಳು ಸಿಗುತ್ತಿವೆ. ಅಷ್ಟೇ ಅಲ್ಲ ಈ ಧಾರಾವಾಹಿಯಲ್ಲಿ ಸಿಕ್ಕಾಪಟ್ಟೆ ಮನರಂಜನೆ ನೀಡುವುದು ಅಂದರೆ ಅದು ದಿಯಾ ಮತ್ತು ಶಶಾಂಕ್ನ ಕೋಳಿ ಜಗಳ.

ರಾಗಾ-ಆದಿ ದಯೆಯಿಂದ ನಡೆಯಿತು ಶಶಾಂಕ್-ದಿಯಾ ನಿಶ್ಚಿತಾರ್ಥ
ನಾವಿಬ್ಬರೂ ಒಬ್ಬರಿಗೊಬ್ಬರು ಒಳ್ಳೆ ಜೋಡಿ ಅಲ್ಲ ಅನ್ನೋದನ್ನು ದಿಯಾ ಹಾಗೂ ಶಶಾಂಕ್ ಆಗಾಗ ಹೇಳಿಕೊಳ್ಳುತ್ತಿದ್ದರು. ನಿನ್ನನ್ನು ಮದುವೆಯಾದರೆ ನನ್ನ ಬದುಕು ನರಕದ ಕೂಪಕ್ಕೆ ತಳ್ಳಿಕೊಂಡಂತೆ ಅನ್ನೋದು ಇಬ್ಬರ ಜಗಳದಲ್ಲಿ ಸಾಮಾನ್ಯವಾಗಿ ಬರುವ ವಾದ. ಆದರೆ ಈ ಇಬ್ಬರು ಕುಟುಂಬದವರ ಮಾತಿಗೆ ಕಟ್ಟು ಬಿದ್ದು ಮದುವೆಯೆಂಬ ಸೂತ್ರಕ್ಕೆ ಕೊರಳೊಡ್ಡಲು ಅಸ್ತು ಎಂದಿದ್ದಾರೆ. ಇನ್ನು ನಿಶ್ಚಿತಾರ್ಥವಾಗಿಲ್ಲ ಎಂದು ಸಮಾಧಾನ ಮಾಡಿಕೊಂಡಿದ್ದ ಶಶಾಂಕ್ ಮುಂದೆ ಆ ದಿನವೂ ಬಂದೇ ಬಿಟ್ಟಿದೆ. ಮಹಾಸಂಗಮದಲ್ಲಿ ಇಂದು (ಏಪ್ರಿಲ್ 06) ಅವರಿಬ್ಬರ ನಿಶ್ಚಿತಾರ್ಥ ಅದ್ದೂರಿಯಾಗಿ ನಡೆಯುತ್ತಿದೆ.
ʻಮನಸ್ಸೆಲ್ಲಾ ನೀನೆʼ ಎನ್ನುತ್ತಿರುವ ಆದಿ ಮತ್ತು ರಾಗಾ ಸದ್ಯ ಈ ಎರಡು ಜೋಡಿಗೆ ಸಂಗಮವಾಗಿ ನಿಂತಿದ್ದಾರೆ. ರಾಗಾ ಮತ್ತು ಆದಿ ಮನೆಗೆ ಬಂದ ಕೂಡಲೇ ಇಬ್ಬರ ದಿಕ್ಕುಗಳು ಒಂದೊಂದು ಕಡೆ ಇದೆ ಎಂದು ಗೊತ್ತಾಗಿ ಒಂದೇ ದಿಕ್ಕಿನೆಡೆಗೆ ಸಂಚರಿಸುವಂತೆ ಮಾಡಲು ಯತ್ನಿಸುತ್ತಿದ್ದಾರೆ. ಈ ದ್ವೇಷ ಬಿಟ್ಟು ಇಬ್ಬರ ಮನಸ್ಸಲ್ಲೂ ಪ್ರೀತಿ ಮೊಳೆಕೆಯೊಡೆಯುವಂತೆ ಮಾಡಲು ಪಣತೊಟ್ಟಿದ್ದಾರೆ. ಅದರ ಮೊದಲ ಹೆಜ್ಜೆಯೇ ಈ ನಿಶ್ಚಿತಾರ್ಥ.

ದಿಯಾ-ಶಶಾಂಕ ನಡುವಿನ ಅಗ್ರಿಮೆಂಟ್
ಶಶಾಂಕ್ ತುಂಬಾ ಬ್ರಿಲಿಯಂಟ್.. ದಿಯಾ ಡಿಗ್ರಿಯಲ್ಲೇ ಡುಮ್ಕಿ. ಆದರೂ ಎರಡು ಕುಟುಂಬಸ್ಥರು ದಿಯಾ ಮತ್ತು ಶಶಾಂಕ್ ಮದುವೆ ಮಾಡಲು ಹೊರಟಿದ್ದಾರೆ. ಹೇಗಾದರೂ ಮಾಡಿ ದಿಯಾ ಕಡೆಯಿಂದಲೇ ಮದುವೆ ಬೇಡ ಅಂತ ಹೇಳಿಸುವುದಕ್ಕೆ ಶಶಾಂಕ್ ಇನ್ನಿಲ್ಲದ ಪ್ರಯತ್ನಗಳನ್ನು ಮಾಡಿದ್ದಾನೆ. ತಂಗಿ ಕಡೆಯಿಂದ ಮದುವೆ ಇಷ್ಟವಿಲ್ಲ ಎಂಬುದನ್ನು ನೀನೆ ಹೇಳು ಎಂಬುದಾಗಿಯೂ ಹೇಳಿಸಿದ್ದ. ಆದರೆ ದಿಯಾ ಇನ್ನೇನನ್ನೋ ಅರ್ಥ ಮಾಡಿಕೊಂಡು ದಾದಾ ಮುಂದೆ ಮನಸ್ಸಾರೆ ಒಪ್ಪಿದ್ದೀನಿ ಅಂತ ಹೇಳಿಯೇ ಬಿಟ್ಟಳು. ಇದು ಮನೆಯವರಿಗೇನೋ ಖುಷಿ ಕೊಟ್ಟಿದೆ. ಆದರೆ ಈ ಇಬ್ಬರ ಕಿತಾಪತಿಗಳು ನಿಂತಿಲ್ಲ. ಶಶಾಂಕ್ಗೆ ಸೈಂಟಿಸ್ಟ್ ಅವಾರ್ಡ್ ಬಂದಿರುವುದನ್ನೇ ನೆಪವಾಗಿಟ್ಟುಕೊಂಡು, ಶುಭ ಹಾರೈಸುವುದಕ್ಕೆ ಅಂತ ಕರೆದು, ಅಗ್ರಿಮೆಂಟ್ ಪೇಪರ್ಗೆ ಸಹಿ ಹಾಕಿಸಿಕೊಂಡಿದ್ದಾಳೆ. ಶಶಾಂಕ್ಗೆ ಬೇಕಾಗಿದ್ದಿದ್ದು ಅದೇ ಆಗಿದ್ದರಿಂದ ಸಹಿ ಏನೋ ಹಾಕಿದ್ದಾನೆ. ಅದೇ ಖುಷಿಯಲ್ಲಿ ತೇಲುತ್ತಿದ್ದಾನೆ.

ಹಾವು-ಮುಂಗುಸಿ ನಡುವೆ ಪ್ರೀತಿ
ಹಾವು ಮುಂಗುಸಿ ಒಂದಾಗಿರೋದನ್ನು ಎಲ್ಲಾದರೂ ನೋಡುವುದಕ್ಕೆ ಸಾಧ್ಯನಾ..? ದಿಯಾ ಮತ್ತು ಶಶಾಂಕ್ ವಿಚಾರದಲ್ಲೂ ಅದೇ. ಮನೆಯವರ ಬಲವಂತಕ್ಕೆ ನಿಶ್ಚಿತಾರ್ಥವನ್ನು ಖುಷಿಯಿಂದಲೇ ಮಾಡಿಕೊಂಡಿದ್ದಾರೆ. ಮನೆಯವರ ಮುಂದೆ ಸಂಬಂಧ ಗಟ್ಟಿಯಾಗಲು ಬದಲಾಯಿಸಿದ ಉಂಗುರವನ್ನು, ಕೋಣೆಗೆ ಬಂದು ಸಂಬಂಧ ಮುರಿದುಕೊಳ್ಳಲು ಬದಲಾಯಿಸಿದ್ದಾರೆ. ಇದು ಕೇವಲ ನಿಶ್ಚಿತಾರ್ಥ, ಮದುವೆಯಲ್ಲ ಅನ್ನೋ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಅಗ್ರಿಮೆಂಟ್ ಮಾಡಿಕೊಂಡ ವಿಚಾರವನ್ನು ಇಬ್ಬರು ನೆನಪಿಸಿಕೊಂಡಿದ್ದಾರೆ. ಇದು ರಾಗಾ ಮತ್ತು ಆದಿ ಕಿವಿಗೆ ಬಿದ್ದಿದೆ. ಹೇಗಾದರೂ ಮಾಡಿ ಇಬ್ಬರಲ್ಲೂ ಪ್ರೀತಿ ಹುಟ್ಟಿಸಲೇಬೇಕೆಂಬ ಹಠ ತೊಟ್ಟಿದ್ದಾರೆ. ಮೂಲಂಗಿ ಮಾದವ್ವ ಏಲಿಯನ್ ಒಂದಾದರೆ ಹೇಗಿರುತ್ತೆ ಅಂತ ನೋಡುವ ಕುತೂಹಲವೂ ಪ್ರೇಕ್ಷಕರಿಗೆ ಇದೆ.

ಎರಡು ಧಾರಾವಾಹಿಗಳ ಮಹಾಸಂಗಮ
ಸ್ಟಾರ್ ಸುವರ್ಣದಲ್ಲಿ ಎರಡು ಧಾರಾವಾಹಿಗಳ ಮಹಾಸಂಗಮವಾಗಿದೆ. ಈ ಪೂರ್ತಿ ವಾರ 'ಮನಸೆಲ್ಲಾ ನೀನೆ' ಮತ್ತು 'ಜೇನುಗೂಡು' ಧಾರಾವಾಹಿಗಳ ಕಥೆ ಮತ್ತು ಪಾತ್ರಗಳು ಒಂದಾಗುತ್ತಿವೆ. ' 'ಮನಸೆಲ್ಲಾ ನೀನೆ' ಧಾರಾವಾಹಿಯ ರಾಗ ಮತ್ತು ಆದಿಗೆ 'ಜೋನುಗೂಡಿನ' ಶಶಾಂಕ್ ಮತ್ತು ದಿಯಾ ಮಾಡಿಕೊಂಡಿರುವ ಸೀಕ್ರೇಟ್ ಆಗ್ರೀಮೆಂಟ್ ಬಗ್ಗೆ ಸತ್ಯ ತಿಳಿಯುತ್ತೆ. ಈಗ ಎದುರಾಗಿರುವ ಈ ದೊಡ್ಡ ಸವಾಲಿಗೆ ಆದಿ - ರಾಗ ಪರಿಹಾರ ಹುಡುಕುತ್ತಾರಾ? ಶಶಾಂಕ್ ಮತ್ತು ದಿಯಾ ನಡುವೆ ಪ್ರೀತಿ ಚಿಗುರಲು ಕಾರಣವಾಗುತ್ತಾರಾ? ಅನ್ನೋದು 'ಮಹಾಸಂಗಮ'ದಲ್ಲಿ ರಾತ್ರಿ 9.30 ರಿಂದ 10.30ರವರೆಗೆ ಒಂದು ಗಂಟೆಗಳ ಕಾಲ ಉತ್ತರ ಸಿಗಲಿದೆ.


Click it and Unblock the Notifications











