ಕುತಂತ್ರ, ಬಡತನ, ಗಂಡನಿಂದ ಮೋಸ; ಕಿರುತೆರೆಯಲ್ಲಿ 'ಶಾರದೆ'ಯ ಬದುಕು ಆರಂಭ.. ದಿವ್ಯಾ ಸುರೇಶ್ ಎಂಟ್ರಿ
ನಾನಾ ನಮೂನೆಯ ಧಾರಾವಾಹಿಗಳ ಮೂಲಕ ಕಿರುತೆರೆ ವೀಕ್ಷಕರ ಮನ ಸೆಳೆಯುತ್ತಿರುವ ವಾಹಿನಿಗಳ ಪೈಕಿ ಸ್ಟಾರ್ ಸುವರ್ಣ ವಾಹಿನಿಯೂ ಒಂದು. 'ಆಸೆ', 'ನಿನ್ನ ಜೊತೆ ನನ್ನ ಕಥೆ', 'ನೀನಾದೆ ನಾ', 'ಉಧೋ ಉಧೋ ಶ್ರೀ ರೇಣುಕಾ ಯಲ್ಲಮ್ಮ', 'ಎಡೆಯೂರು ಶ್ರೀ ಸಿದ್ಧಲಿಂಗೇಶ್ವರ', 'ಶ್ರೀದೇವಿ ಮಹಾತ್ಮೆ', 'ಗೌರಿಶಂಕರ', 'ಅವನು ಮತ್ತು ಶ್ರಾವಣಿ' ಧಾರಾವಾಹಿಗಳು ನಿಮ್ಮ ನೆಚ್ಚಿನ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿದೆ.
ಇದರ ಬೆನ್ನಲ್ಲೇ 'ಪ್ರೀತಿಗಾಗಿ', 'ಅನುಪಮ' ಎಂಬ ಡಬ್ಬಿಂಗ್ ಧಾರಾವಾಹಿಗಳು ಪ್ರತಿ ಮಧ್ಯಾಹ್ನ ಪ್ರಸಾರವಾಗುತ್ತಿದ್ದು ಕಿರುತೆರೆ ವೀಕ್ಷಕರಿಗೆ ಸಖತ್ ಮನರಂಜನೆ ನೀಡುತ್ತಿದೆ. ಧಾರಾವಾಹಿಗಳ ಹೊರತಾಗಿ 'ಸುವರ್ಣ ಸಂಕಲ್ಪ', 'ಸುವರ್ಣ ಗೃಹಮಂತ್ರಿ', 'ಬೊಂಬಾಟ್ ಭೋಜನ' ಶೋಗಳು ಪ್ರಸಾರವಾಗುತ್ತಿದ್ದು, ಅವುಗಳು ಕೂಡಾ ಕಿರುತೆರೆ ವೀಕ್ಷಕರನ್ನು ರಂಜಿಸುತ್ತಿವೆ. ಇದೆಲ್ಲದರ ನಡುವೆ ನಿಮ್ಮ ನೆಚ್ಚಿನ ಸ್ಟಾರ್ ಸುವರ್ಣ ವಾಹಿನಿಗೆ ಇದೀಗ 'ಶಾರದೆ'ಯ ಆಗಮನವಾಗಲಿದೆ.

ಹೌದು, ಸ್ಟಾರ್ ಸುವರ್ಣದಲ್ಲಿ 'ಶಾರದೆ' ಹೆಸರಿನ ಧಾರಾವಾಹಿಯು ಶುರುವಾಗಲಿದೆ. ಇದೇ ಮಾರ್ಚ್ 17ರಿಂದ ಪ್ರಸಾರವಾಗುವ ಈ ಧಾರಾವಾಹಿಯು ಅಮ್ಮ ಮಗಳ ನಡುವಿನ ಭಾಂದವ್ಯದ ಕುರಿತಾಗಿದೆ ಎಂಬುದು ಪ್ರೋಮೋ ನೋಡಿದ ಕೂಡಲೇ ತಿಳಿಯುತ್ತದೆ. ಕಥಾನಾಯಕಿ ಶಾರದಾ ಶ್ರೀಮಂತ ಕುಟುಂಬದಲ್ಲಿ ಜನಿಸಿರುತ್ತಾಳೆ. ಆದರೆ ಯಾರೋ ಮಾಡಿದ ಕುತಂತ್ರದಿಂದ ಬಡತನದಲ್ಲಿ ಬೆಳೆಯುವಂತೆ ಆಗುತ್ತದೆ. ಕಟ್ಟಿಕೊಂಡ ಗಂಡ ಆಕೆಗೆ ಮೋಸ ಮಾಡುತ್ತಾನೆ, ಮಾತ್ರವಲ್ಲ ಬೇರೆಯವಳನ್ನು ಮದುವೆಯೂ ಮಾಡಿಕೊಂಡಿರುತ್ತಾನೆ. ತನ್ನ ಬದುಕಿನಲ್ಲಿ ಅದೆಷ್ಟೇ ನೋವಿದ್ದರೂ, ಎಲ್ಲವನ್ನೂ ನುಂಗಿ ತನ್ನ ಮಗಳಿಗಾಗಿ ಜೀವನ ನಡೆಸುತ್ತಿರುತ್ತಾಳೆ ಶಾರದಾ.
ನಾಯಕ ಸಿದ್ಧಾರ್ಥ್ ತುಂಬು ಕುಟುಂಬದಲ್ಲಿ ಬೆಳೆದವನು. ಮನೆಯವರ ಪ್ರೀತಿಯಲ್ಲಿ ಬೆಳೆದಿರುವ ಈತ ತನಗೆ ಕೊಂಚವೂ ಇಷ್ಟವಿಲ್ಲದಿದ್ದರೂ, ಅತ್ತೆ ಮಗಳು ಜ್ಯೋತಿಕಾಳ ಜೊತೆ ಮದುವೆಯಾಗಲು ತಯಾರಾಗಿರುತ್ತಾನೆ. ಅದೇ ಮನೆಗೆ ಮನೆಕೆಲಸದವಳಾಗಿ ಬರುವ ಶಾರದಾಳ ಬದುಕಲ್ಲಿ ಮುಂದೆ ಏನೆಲ್ಲಾ ತಿರುವುಗಳು ಆಗುತ್ತದೆ? ಶಾರದೆಗೆ ತನ್ನ ಜನ್ಮರಹಸ್ಯದ ಬಗ್ಗೆ ತಿಳಿಯುತ್ತಾ? ಒಬ್ಬಂಟಿಯಾಗಿ ಬದುಕುತ್ತಿರೋ ಶಾರದೆಯ ಬಾಳಲ್ಲಿ ಬೆಳಕಾಗಿ ಯಾರಾದರೂ ಬರುತ್ತಾರಾ? ಸಿದ್ದಾರ್ಥ್ ಮತ್ತು ಶಾರದಾ ಜೊತೆಯಾಗಬಹುದಾ? ಎಂಬುದೇ ಶಾರದಾ ಧಾರಾವಾಹಿಯ ಕಥಾಹಂದರ.
ನಾಯಕಿ ಶಾರದಾಳಾಗಿ ಚೈತ್ರ ಸಕ್ಕರಿ ನಟಿಸುತ್ತಿದ್ದು ಕನ್ನಡ ಕಿರುತೆರೆಯಲ್ಲಿ ಇದು ಆಕೆಯ ಎರಡನೇ ಧಾರಾವಾಹಿ. ಈ ಹಿಂದೆ ಉದಯ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ನಯನತಾರಾ' ಧಾರಾವಾಹಿಯಲ್ಲಿ ನಯನಾ ಆಗಿ ನಟಿಸಿ ಸೈ ಎನಿಸಿಕೊಂಡಿದ್ದ ಈಕೆ ನಂತರ ಕಾಣಿಸಿಕೊಂಡಿದ್ದು ಪರಭಾಷೆಯ ಕಿರುತೆರೆಯಲ್ಲಿ. ಇದೀಗ ವರ್ಷಗಳ ನಂತರ ಶಾರದೆಯಾಗಿ ಕಿರುತೆರೆಗೆ ಮರಳಿರುವ ಚೈತ್ರಾ ಸಕ್ಕರಿ ಮತ್ತೊಮ್ಮೆ ತಮ್ಮ ನಟನೆಯ ಮೂಲಕ ವೀಕ್ಷಕರ ಮನ ಸೆಳೆಯಲಿದ್ದಾರೆ.

ಇನ್ನು ನಾಯಕ ಸಿದ್ಧಾರ್ಥನಾಗಿ ಸೂರಜ್ ಹೊಳಲು ಅಭಿನಯಿಸುತ್ತಿದ್ದಾರೆ. ಈ ಹಿಂದೆ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ಜಾನಕಿ ಸಂಸಾರ' ಧಾರಾವಾಹಿಯಲ್ಲಿ ನಾಯಕ ರಾಘವ್ ಆಗಿ ಸೂರಜ್ ನಟಿಸಿದ್ದರು. 'ಕುಲವಧು', 'ಯಾರೇ ನೀ ಮೋಹಿನಿ', 'ಪುಟ್ಟಕ್ಕನ ಮಕ್ಕಳು', 'ಗೃಹಪ್ರವೇಶ' ಧಾರಾವಾಹಿಗಳಲ್ಲಿ ನಟಿಸಿರುವ ಸೂರಜ್ ಹೊಳಲು ಸಣ್ಣ ಬ್ರೇಕ್ ನ ನಂತರ ಸಿದ್ಧಾರ್ಥ್ ಕಿರುತೆರೆಗೆ ಮರಳುತ್ತಿದ್ದಾರೆ.
ಇನ್ನು ನಾಯಕನ ಅತ್ತೆ ಮಗಳು ಜ್ಯೋತಿಕಾ ಆಗಿ ನಟಿಸುವ ಮೂಲಕ ಮತ್ತೆ ವೀಕ್ಷಕರನ್ನು ರಂಜಿಸಲು ಬರುತ್ತಿರುವ ಈಕೆಯ ಹೆಸರು ದಿವ್ಯಾ ಸುರೇಶ್. ವರ್ಷಗಳ ಹಿಂದೆ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ತ್ರಿಪುರ ಸುಂದರಿ' ಧಾರಾವಾಹಿಯಲ್ಲಿ ಆಮ್ರಪಾಲಿಯಾಗಿ ಈಕೆ ನಟಿಸಿದ್ದರು. ಇದಕ್ಕಿಂತಲೂ ಮೊದಲು ಬಿಗ್ ಬಾಸ್ ಸ್ಪರ್ಧಿಯಾಗಿ ಜನಪ್ರಿಯತೆ ಗಿಟ್ಟಿಸಿಕೊಂಡಿರುವ ದಿವ್ಯಾ ಸುರೇಶ್ 'ನನ್ ಹೆಂಡ್ತಿ ಎಂಬಿಬಿಎಸ್', 'ಪ್ರೇಮಲೋಕ' ಧಾರಾವಾಹಿಗಳಲ್ಲಿ ಅಭಿನಯಿಸಿದ್ದರು.
ಉಳಿದಂತೆ ರವಿ ಭಟ್, ಸ್ವಾತಿ, ಅನಂತವೇಲು, ಅಂಬುಜಾ, ರಾಜೇಶ್ ಧ್ರುವ ಸೇರಿದಂತೆ ಇನ್ನು ಅನೇಕರು ಅಭಿನಯಿಸುತ್ತಿದ್ದಾರೆ. ಅಂದ ಹಾಗೇ 'ಶಾರದಾ' ಧಾರಾವಾಹಿಯು ಪುರಾಣಿಕ್ ಪ್ರೊಡಕ್ಷನ್ಸ್ ಸಂಸ್ಥೆಯಡಿ ನಿರ್ಮಾಣವಾಗುತ್ತಿದೆ. ಕಿರುತೆರೆ, ಹಿರಿತೆರೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿರುವ ಸುನೀಲ್ ಪುರಾಣಿಕ್ ಹಾಗೂ ಸಾಗರ್ ಪುರಾಣಿಕ್ ರವರು ಈ ಧಾರಾವಾಹಿಯನ್ನು ನಿರ್ಮಿಸುತ್ತಿದ್ದಾರೆ. ಧರಣಿ ಜಿ ರಮೇಶ್ ನಿರ್ದೇಶಿಸುತ್ತಿದ್ದಾರೆ. ಖ್ಯಾತ ಸಂಗೀತ ನಿರ್ದೇಶಕ ಕಾರ್ತಿಕ್ ಶರ್ಮ 'ಶಾರದೆ' ಧಾರಾವಾಹಿಗೆ ಸಂಗೀತವನ್ನು ಸಂಯೋಜಿಸಿದ್ದಾರೆ. ನಿರ್ದೇಶಕ ಪವನ್ ಒಡೆಯರ್ ಬರೆದಿರುವ ಸಾಹಿತ್ಯಕ್ಕೆ ಗಾಯಕ ಸಿದ್ಧಾರ್ಥ ಬೆಳ್ಮಣ್ಣು ಶೀರ್ಷಿಕೆ ಗೀತೆಯನ್ನು ಹಾಡಿದ್ದಾರೆ.


Click it and Unblock the Notifications











