ಶಶಿಕುಮಾರ್ ಬದುಕಿನಲ್ಲೇ ಬಿರುಗಾಳಿ ಎಬ್ಬಿಸಿತ್ತು ಆ ದುರ್ಘಟನೆ!
Recommended Video
ತೆರೆ ಮೇಲೆ ಕಾಣಿಸಿಕೊಳ್ಳುವ ಒಬ್ಬ ನಟನಿಗೆ ಮುಖ್ಯವಾಗಿ ಬೇಕಾಗಿರುವುದು ಆತನ ಮುಖ. ದೈಹಿಕವಾಗಿ ನೋಡಲು ಚೆನ್ನಾಗಿದ್ದು, ಜೊತೆಗೆ ಪ್ರತಿಭೆ ಇದ್ದರೆ ಆ ನಟ ಪ್ರೇಕ್ಷಕರ ಮೆಚ್ಚುಗೆ ಪಡೆಯುತ್ತಾನೆ.
ಆ ರೀತಿ ತನ್ನ ಸೌಂದರ್ಯ ಮೂಲಕ ದೊಡ್ಡ ಅಭಿಮಾನಿಗಳ ಬಳಗ ಹೊಂದಿದ್ದ ನಟ, ಇದ್ದಕ್ಕಿದ್ದ ಹಾಗೆ ತನ್ನ ಅಂದವನ್ನೇ ಕಳೆದುಕೊಂಡರೆ ಹೇಗಾಗಬೇಕು ಊಹಿಸಿ. ಈ ರೀತಿಯ ಪರಿಸ್ಥಿತಿ ಬಂದಿದ್ದು ನಟ ಶಶಿ ಕುಮಾರ್ ಜೀವನದಲ್ಲಿ.
ಶಶಿ ಕುಮಾರ್ ಕನ್ನಡದ ಚೆಂದದ ನಟ. ಆದರೆ, ಒಂದು ಅಪಘಾತದಲ್ಲಿ ಅವರ ಮುಖಕ್ಕೆ ಬಲವಾದ ಪೆಟ್ಟು ಬೀಳುತ್ತದೆ. ಸಾವು ಬದುಕಿನ ನಡುವೆ ಹೋರಾಡಿ ಅವರು ಗೆದ್ದು ಬರುತ್ತಾರೆ.
ಆ ಒಂದು ಅಪಘಾತ ಶಶಿ ಕುಮಾರ್ ಬದುಕಿನಲ್ಲಿ ಬಿರುಗಾಳಿಯಂತೆ ಬರುತ್ತದೆ. ಆ ಘಟನೆಯನ್ನು 'ವೀಕೆಂಡ್ ವಿತ್ ರಮೇಶ್' ಕಾರ್ಯಕ್ರಮದಲ್ಲಿ ಅವರು ಸಂಪೂರ್ಣವಾಗಿ ವಿವರಿಸಿದ್ದಾರೆ...

1998 ಜುಲೈ 31 ನಡೆದ ಘಟನೆ
ಆ ಸಮಯಕ್ಕೆ ಶಶಿಕುಮಾರ್ ದೊಡ್ಡ ಸ್ಟಾರ್ ಆಗಿದ್ದರು. ಬರೀ ಏಳೆಂಟು ವರ್ಷದಲ್ಲಿ 75 ಸಿನಿಮಾಗಳನ್ನು ಮಾಡಿದ್ದರು. ಅವರ ಸಾಕಷ್ಟು ಸಿನಿಮಾಗಳು ಸೂಪರ್ ಹಿಟ್ ಆಗಿದ್ದವು. ಕನ್ನಡದಲ್ಲಿ ಸಿಕ್ಕಾಪಟ್ಟೆ ಬ್ಯುಸಿ ಇರುವ ನಟರಲ್ಲಿ ಪ್ರಮುಖರಾಗಿದ್ದರು. ಹೀಗೆ ಎಲ್ಲ ಚೆನ್ನಾಗಿದೆ ಎನ್ನುವ ಹೊತ್ತಲ್ಲೇ, 1998 ಜುಲೈ 31 ರಂದು ಒಂದು ದುರ್ಘಟನೆ ನಡೆದೆ ಹೋಯಿತು.

ಐಸ್ ಕ್ರೀಮ್ ತರಲು ಹೋಗಿ ಅಪಘಾತ
ಶಶಿಕುಮಾರ್ ಆಗ ಆರ್ ಟಿ ನಗರದ ಒಂದು ಬಾಡಿಗೆ ಮನೆಯಲ್ಲಿ ವಾಸ ಮಾಡುತ್ತಿದ್ದರು. 'ಬಾರೋ ನನ್ನ ಮುದ್ದಿನ ಕೃಷ್ಣ' ಎಂಬ ಸಿನಿಮಾದ ಶೂಟಿಂಗ್ ಮುಗಿಸಿ ಬರುತ್ತಿದ್ದ ಅವರಿಗೆ, ಮಗಳು ಐಶ್ವರ್ಯ ಫೋನ್ ಮಾಡಿ ಐಸ್ ಕ್ರೀಮ್ ತರಲು ಹೇಳಿದರಂತೆ. ಹೀಗಾಗಿ ತಮ್ಮ ಮಾರುತಿ ಕಾರ್ ನಲ್ಲಿ ಶಿವಾನಂದ ಸರ್ಕಲ್ ಬಳಿ ಹೋಗುತ್ತಿದ್ದಾಗ ದೊಡ್ಡ ಅಪಘಾತ ಆಯ್ತು. ಅಲ್ಲೇ ಇದ್ದ ಆಟೋ ಡ್ರೈವರ್ ಗಳು ಕೂಡಲೇ ಅವರನ್ನು ಆಸ್ಪತ್ರೆಗೆ ಸೇರಿಸಿದರಂತೆ.

ಕೇವಲ 30 ಕಿಲೋ ಮೀಟರ್ ವೇಗದಲ್ಲಿ ಬರುತ್ತಿದ್ದರು
ರಾತ್ರಿ 9 - 10 ಗಂಟೆ ಸಮಯ ಆಗಿತ್ತಂತೆ. ಕೇವಲ 30 ಕಿಲೋ ಮೀಟರ್ ವೇಗದಲ್ಲಿ ಶಶಿಕುಮಾರ್ ಬರುತ್ತಿದ್ದರು. ಸಣ್ಣದಾಗಿ ಮಳೆ ಬೀಳುತ್ತಿತ್ತು. ಕಾರ್ ಎದುರಿನಿಂದ ಅವರ ಕಣ್ಣಿಗೆ ಲೈಟ್ ಬಿತ್ತು. ಕಣ್ಣು ಬಿಡಲು ಆಗದೆ, ಮುಂದೆ ಇನ್ನೊಂದು ಗಾಡಿ ಬರುತ್ತದೆ ಎಂದು ಸ್ಟೈರಿಂಗ್ ಬಲಕ್ಕೆ ತಿರುಗಿಸಿದರು. ಅಷ್ಟೇ... ಆಮೇಲೆ ಕಣ್ಣು ಬಿಟ್ಟು ನೋಡಿದರೆ, ಅವರು ಆಸ್ಪತ್ರೆಯಲ್ಲಿ ಇದ್ದರಂತೆ.

8 ಗಂಟೆ ಸತತ ಶಸ್ತ್ರ ಚಿಕಿತ್ಸೆ
ಆ ದೊಡ್ಡ ಅಪಘಾತದಿಂದ ಶಶಿಕುಮಾರ್ ಮುಖಕ್ಕೆ ದೊಡ್ಡ ಪೆಟ್ಟು ಬಿದ್ದಿತ್ತು. ಮುಖ ತುಂಬ ರಕ್ತವಾಗಿತ್ತು. ಅವರಿಗೆ 8 ಗಂಟೆ ಸತತ ಶಸ್ತ್ರ ಚಿಕಿತ್ಸೆ ಮಾಡಲಾಗಿತ್ತು. ಡಾಕ್ಟರ್ ಜಲಾನಿ ಎಂಬುವವರು ಶಶಿಕುಮಾರ್ ರಿಗೆ ಮರುಜೀವ ನೀಡಿದರು. ಆದರೂ ಅಪಘಾತದ ತೀವ್ರತೆಗೆ ಶಶಿಕುಮಾರ್ ಮುಖ ನೋಡಲು ಆಗದೆ ಇರುವ ಹಾಗೆ ಆಯ್ತು. ಅಲ್ಲಿಂದ ಶಶಿ ಬದುಕಿನಲ್ಲಿ ಬಿರುಗಾಳಿ ಬಂತು.

10 ಸಾವಿರ ರೂಪಾಯಿಗಾಗಿ ಕೈ ಚಾಚಿದೆ
ಅಪಘಾತದ ನಂತರ ಸಿನಿಮಾ ಅವಕಾಶಗಳು ಸಹ ಕಡಿಮೆ ಆದವು. ಅಪಘಾತದ ಬಳಿಕ ಶಶಿಕುಮಾರ್ ಗೆ ಡ್ಯಾನ್ಸ್ ಮಾಡಲು, ಆಕ್ಟ್ ಮಾಡಲು ಆಗಲ್ಲ ಎನ್ನುವ ಸುದ್ದಿಗಳು ಹಬ್ಬಿದವು. ಇದರಿಂದ ಸಿನಿಮಾಗಳು ಕೈ ತಪ್ಪಿದ್ದವು. ಹಣ ಇಲ್ಲದೆ ಸ್ನೇಹಿತರಿಗೆ ಕೇವಲ 10 ಸಾವಿರಕ್ಕಾಗಿ ಕೈ ಚಾಚಿದರು. ಆದರೆ, ಯಾರು ಕೂಡ ಅವರ ಸಹಾಯಕ್ಕೆ ಬರಲಿಲ್ಲ ಎಂದು ನೋವು ಹಂಚಿಕೊಂಡರು ಶಶಿ.

ಮನೆಯಲ್ಲಿ ಒಂದು ಕನ್ನಡಿಯೂ ಇರಲಿಲ್ಲ
ಶಶಿಕುಮಾರ್ ಆ ವೇಳೆ ಡಿಪ್ರೆಶನ್ ಹೋದರಂತೆ. ಅವರು ತಮ್ಮ ಮುಖ ನೋಡಿಕೊಳ್ಳಬಾರದು ಎಂದು ಮನೆಯಲ್ಲಿ ಒಂದು ಕನ್ನಡಿಯೂ ಇರಲಿಲ್ಲವಂತೆ. ಕಣ್ಣೀಗೆ ಬಟ್ಟೆ ಕಟ್ಟಿಕೊಂಡು ಇರುತ್ತಿದ್ದರಂತೆ. ಈ ರೀತಿ ಇದ್ದ ಶಶಿಕುಮಾರ್ ಕ್ರಮೇಣ ಚೇತರಿಸಿಕೊಂಡರು. ತಮ್ಮ ನೋವನ್ನು ಮರೆತು, ಮತ್ತೆ ಸಿನಿಮಾದಲ್ಲಿ ನಟಿಸಲು ಶುರು ಮಾಡಿದರು. ಶಶಿ ಬದುಕಿನಲ್ಲಿ ಹೊಸ ಬೆಳಕು ಮೂಡಲು ವರ್ಷಗಳೇ ಬೇಕಾಯಿತು.


Click it and Unblock the Notifications











