ಅಣ್ಣಾವ್ರ ಮಕ್ಕಳ ನಡುವೆ ಆಸ್ತಿಗಾಗಿ ಅಂದು ನಡೆದಿದ್ದೇನು..? ಶಿವಣ್ಣ ಕೊಟ್ಟ ಉತ್ತರ ಇಲ್ಲಿದೆ!
ಚಿತ್ರರಂಗದಲ್ಲಿ ಡಾ.ರಾಜ್ಕುಮಾರ್ ಫ್ಯಾಮಿಲಿಯನ್ನು ದೊಡ್ಮನೆ ಎಂದೇ ಕರೆಯುತ್ತಾರೆ. ಅಣ್ಣಾವ್ರ ಮಕ್ಕಳನ್ನು ದೊಡ್ಮನೆ ಕುಡಿ ಎಂದೇ ಗೌರವಿಸುತ್ತಾರೆ. ಅಣ್ಣಾವ್ರ ಸಿನಿಮಾಗಳು, ಅಣ್ಣಾವ್ರ ನಡೆ-ನುಡಿ ಎಲ್ಲವೂ ಮಾದರಿಯೇ ಆಗಿತ್ತು. ಒಂದೊಂದು ಸಿನಿಮಾ ಮೂಲಕವೂ ಅದೆಷ್ಟೋ ಜನರ ಬದುಕು ಬದಲಾಗಿದೆ.
ಆಗಲೂ ಈಗಲೂ ಅಣ್ಣಾವ್ರ ಸಿನಿಮಾಗೆಳೆಂದರೆ ಅಚ್ಚುಮೆಚ್ಚು. ಅಷ್ಟೇ ಅಲ್ಲ ಈಗಲೂ ಅವರು ಹಾಕಿ ಕೊಟ್ಟಿರುವ ದಾರಿಯಲ್ಲಿಯೇ ಹಲವರು ನಡೆಯುತ್ತಿದ್ದಾರೆ. ಇಷ್ಟೆಲ್ಲಾ ಹೇಳುವುದಕ್ಕೆ ಕಾರಣ ಅಣ್ಣಾವ್ರ ಮಕ್ಕಳ ನಡುವಿನ ಆಸ್ತಿ ವಿಚಾರ. ಸ್ಟಾರ್ ಗಳೆಂದರೆ ಒಂದಷ್ಟು ಗಾಸಿಪ್ಗಳು ಅವರ ಸುತ್ತಮುತ್ತ ಸುಳಿದಾಡುತ್ತಲೇ ಇರುತ್ತವೆ.
ಗೊತ್ತಿಲ್ಲದ ವಿಚಾರಗಳು, ಕೇಳದೆ ಇರುವ ವಿಚಾರಗಳನ್ನು ಏನೋ ನಾವೂ ನೋಡಿಯೇ ಬಿಟ್ಟೆವು ಎಂಬಂತೆ ಸುದ್ದಿ ಹಬ್ಬಿಸಿ ಬಿಡುತ್ತಾರೆ. ದತ್ಯವೋ, ಸುಳ್ಳೋ ಬೇಡದೆ ಇದ್ದರು ಬಿರುಗಾಳಿಯಂತೆ ಹಬ್ಬಿ ಬಿಡುತ್ತದೆ. ಅಂಥದ್ದೆ ಸಾಲಿಗೆ ಸೇರುವುದು ಅಣ್ಣಾವ್ರ ಮಕ್ಕಳು ಮತ್ತು ಆಸ್ತಿ ಮತ್ತು ಮನಸ್ತಾಪ. ಇದಕ್ಕೆಲ್ಲಾ ಉತ್ತರ ಇಲ್ಲಿದೆ.

ಅಪ್ಪು ಗೈರಿನ ಬೇಸರ
ಶಿವಣ್ಣನಿಗೆ ಇನ್ನೆರಡು ದಿನ ಕಳೆದರೆ 60ರ ವಸಂತ. ಅಣ್ಣಾವ್ರ ಮೊದಲ ಕುಡಿಯ ಹುಟ್ಟುಹಬ್ಬ ಆಚರಿಸಲು ಎಲ್ಲರೂ ಕಾಯುತ್ತಿದ್ದಾರೆ. ಅಭಿಮಾನಿಗಳಿಗೆ ಜುಲೈ 12 ಆನಂದ, ಸಂತಸದ ದಿನ. ಇದರ ಜೊತೆಗೆ ಮುಂಚಿತವಾಗಿಯೇ ಜೀ ಕನ್ನಡದ ಡಿಕೆಡಿ ವೇದಿಕೆಯಲ್ಲಿ ಅದ್ಧೂರಿ ಸೆಲೆಬ್ರೇಷನ್ ಮಾಡಲಾಗಿದೆ. ಶಿವರಾಜೋತ್ಸವದ ಅಂಗವಾಗಿ ಡಾನ್ಸ್ ಮೂಲಕ ಸ್ಪರ್ಧಿಗಳು ಶುಭ ಹಾರೈಸಿದ್ದಾರೆ. ಅಷ್ಟೇ ಅಲ್ಲ ಶಿವಣ್ಣನಿಗಾಗಿ ಡಿಕೆಡಿ ವೇದಿಕೆಗೆ ರಾಘಣ್ಣ ಕೂಡ ಎಂಟ್ರಿ ಕೊಟ್ಟಿದ್ದಾರೆ. ಆದರೆ ಅಲ್ಲಿ ಅಪ್ಪು ಗೈರು ಎಲ್ಲರನ್ನು ಬೇಸರಕ್ಕೆ ದೂಡಿದೆ. ಈ ಬೇಸರ ಮರೆಸಲು ರಾಘಣ್ಣ ಪುನೀತ್ ರಾಜ್ಕುಮಾರ್ ಅವರನ್ನು ಕರೆತಂದಿದ್ದಾರೆ. ಸಣ್ಣ ಪದಕದ ರೂಪದಲ್ಲಿ ಅಪ್ಪುರನ್ನು ಕರೆತಂದು ಶಿವಣ್ಣನ ವಾಸ್ಕೋಟಿಗೂ ಹಾಕಿದ್ದಾರೆ. ಈ ಮೂಲಕ ಅಣ್ಣಾವ್ರ ಮೂರು ಕುಡಿಗಳನ್ನು ಕಣ್ತುಂಬಿಕೊಳ್ಳುವಂತೆ ಆಗಿದೆ.
ಡಿಕೆಡಿ ವೇದಿಕೆಯಲ್ಲಿ ಪೂರ್ಣಿಮಾ, ಲಕ್ಷ್ಮೀ ನೆನಪು
ಇದು ಶಿವರಾಜೋತ್ಸವದ ಸಂಚಿಕೆ. ಈ ಸಂಚಿಕೆಯನ್ನು ಶಿವಣ್ಣನಿಗಾಗಿ ಅರ್ಪಿಸಿದ್ದಾರೆ. ಶಿವಣ್ಣನ ಸಿನಿಮಾ ಹಾಡಿಗೆ ನೃತ್ಯ ಮಾಡುತ್ತಿದ್ದಾರೆ. ಈ ಮಧ್ಯೆ ಅಣ್ಣ ತಂಗಿಯರ ಈ ಬಂಧ ಹಾಡಿಗೆ ಗಗನ ಮತ್ತು ಕಿರಣ್ ಅದ್ಭುತವಾಗಿ ಕುಣಿದಿದ್ದಾರೆ. ಡಾನ್ಸ್ ನಡುವೆ ಶಿವಣ್ಣ, ಲಕ್ಷ್ಮೀ, ಪೂರ್ಣಿಮಾ ಜೊತೆಗಿನ ಫೋಟೋ ಹಾಕಿದ್ದಾರೆ. ಈ ಫೋಟೊ ನೂರು ನೆನಪುಗಳನ್ನು ತಿಳಿಸಿದೆ. ಪೂರ್ಣಿಮಾ ಹಾಗೂ ಲಕ್ಷ್ಮೀ ಜೊತೆಗಿನ ಬಾಂಧವ್ಯ, ಬಾಲ್ಯದ ನೆನಪುಗಳನ್ನು ಶಿವಣ್ಣ ಮೆಲುಕು ಹಾಕಿದ್ದಾರೆ.

ರಾಘಣ್ಣ ನೆನಪಿಸಿದ ಆ ಘಟನೆ ಯಾರಿಗೂ ಗೊತ್ತಿರಲಿಲ್ಲ
ಕಲಾವಿದರೆಂದರೆ ಮೈಮೇಲೆ ಗಾಯಗಳಾಗುವುದು ಸಹಜ. ಯಾಕೆಂದರೆ ಡ್ಯಾನ್ಸ್, ಫೈಟ್ ಅಂತ ಯಾವಾಗಲೂ ದೇಹಕ್ಕೆ ಪೆಟ್ಟು ಮಾಡಿಕೊಳ್ಳುವುದು ಮಾಮೂಲಿ. ಅದರಂತೆ ಶಿವಣ್ಣನ ಎಡಗೈ ಮೇಲೂ ಆಗಿನ ಮಾರ್ಕ್ ಒಂದಿದೆ. ಅದನ್ನು ನೋಡಿದವರಿಗೆ ಕೇಳುವ ಕುತೂಹಲವಿದ್ದರೂ, ಕೇಳುವುದಕ್ಕೆ ಹೋಗಿರಲಿಲ್ಲ ಸಾಕಷ್ಟು ಜನ. ಇದೀಗ ರಾಘಣ್ಣ ಆ ವಿಚಾರವನ್ನು ತಿಳಿಸಿದ್ದಾರೆ. ರಾಘಣ್ಣ ಮತ್ತು ಶಿವಣ್ಣ ಒಟ್ಟಿಗೆ ನಟಿಸಿದ್ದ ಸಿನಿಮಾವೊಂದರಲ್ಲಿ ಆದ ಪೆಟ್ಟು ಅದು. ಹೊಲಿಗೆ ಹಾಕಿಸಲಾಗಿದೆ. ಆದರೆ ಈಗಲೂ ಮಾರ್ಕ್ ಹಾಗೆಯೇ ಇದೆ.
ಅಣ್ಣಾವ್ರ ಮಕ್ಕಳು ದೂರು ದೂರ ಇರುವುದೇಕೆ?
ಈ ವಿಚಾರ ಸಾಕಷ್ಟು ವರ್ಷಗಳಿಂದ, ಸಾಕಷ್ಟು ಜನರ ತಲೆ ಕೊರೆಯುತ್ತಿದೆ. ಯಾಕೆಂದ್ರೆ ಅಣ್ಣಾವ್ರ ಮೂರು ಮಕ್ಕಳು ಒಂದೇ ಮನೆಯಲ್ಲಿ ಇಲ್ಲ. ಅದಕ್ಕೂ ಆಸ್ತಿಗೂ ತಾಳೆ ಹಾಕಿರೋ ವಾಟ್ಸಾಪ್ ಯೂನಿವರ್ಸಿಟಿಯ ಪಿಹೆಚ್ಡಿ ಪ್ರೊಫೆಸರ್ಗಳು ಅಣ್ಣಾವ್ರ ಮಕ್ಕಳ ನಡುವೆ ಆಸ್ತಿ ವಿಚಾರಕ್ಕೆ ಜಗಳ ಆಗಿದೆ ಎಂದು ಹಬ್ಬಿಸಿದರು. ಅದು ಈಗಲೂ ಸತ್ಯವೇನೋ ಎಂಬಂತೆ ಎಲ್ಲರ ಮನದಲ್ಲೂ ತುಂಬಿದೆ. ಅಣ್ಣಾವ್ರು ಆಸ್ತಿಗೇನು ಕಡಿಮೆಯಿಲ್ಲ. ಹಾಗಂತ ಮಕ್ಕಳಿಗೂ ಅಷ್ಟೇ ಆಸ್ತಿ ಇದೆ. ಈ ವಿಚಾರ ಮಕ್ಕಳಿಗೂ ಬೇಸರ ತರಿಸಿದೆ. ಶಿವಣ್ಣ ಈ ಬಗ್ಗೆ ಡಿಕೆಡಿಯಲ್ಲಿ ಮಾತನಾಡಿದ್ದು, ನಮ್ಮ ಮೂರು ಜನರ ನಡುವೆ ಆಸ್ತಿ ವಿಚಾರಕ್ಕೆ ಜಗಳವಾಗಿಲ್ಲ. ನಮಗೆ ಆಸ್ತಿ ವಿಚಾರದಲ್ಲಿ ಜಗಳ ಮಾಡಬೇಕು ಎಂದು ಯಾವತ್ತು ಅನ್ನಿಸಲೇ ಇಲ್ಲ. ಯಾರು ಯಾರೋ ಈ ರೀತಿ ಸುದ್ದಿ ಹಬ್ಬಿಸಿದರು ಎಂದು ಹೇಳುವಾಗ ಶಿವಣ್ಣನ ಮನಸ್ಸಲ್ಲೂ ಆ ಬಗ್ಗೆ ಇದ್ದ ಬೇಸರ ಎದ್ದು ಕಾಣುತ್ತಿತ್ತು.


Click it and Unblock the Notifications











