ಬಿಗ್ ಬಾಸ್ ಸ್ಫರ್ಧಿಗೆ ಆಘಾತ, ಸದ್ದಿಲ್ಲದೇ ಖ್ಯಾತ ನಟಿಯ ಜೊತೆ ನಿಶ್ಚಿತಾರ್ಥ ಮಾಡಿಕೊಂಡ ಮಾಜಿ ಗಂಡ
ಮದುವೆ ಬದುಕಿನ ಮಹತ್ವದ ಹಂತ. ಇಲ್ಲಿ ಎರಡು ಜೀವಗಳು ಜೀವನದಲ್ಲಿ ಎಷ್ಟೇ ಕಷ್ಟ ಬಂದರೂ ಕುಗ್ಗದೇ ಜೀವನಪೂರ್ತಿ, ಒಬ್ಬರಿಗೊಬ್ಬರು ಬೆನ್ನೆಲುಬಾಗಿ ಜೊತೆಯಾಗಿ ಇರಬೇಕಾದಂತಹ ಒಂದು ಬಂಧನ. ಆದರೆ ಕೆಲವೊಮ್ಮೆ ಸಂದರ್ಭ ಮತ್ತು ಪರಿಸ್ಥಿತಿ ಕೈಮೀರಿ ಹೋಗಿರುತ್ತವೆ. ಆಗ ವಿಚ್ಛೇದನ ಪಡೆಯದೇ ಬೇರೆ ದಾರಿಯೇ ಇಲ್ಲ ಎಂಬ ಭಾವನೆ ಬರುತ್ತೆ. ನಿರೀಕ್ಷೆಯಂತೆ ಸಂಬಂಧ ಕೂಡ ಮುರಿದು ಬೀಳುತ್ತೆ.
ಹೀಗೆ ದಾಂಪತ್ಯ ಅಂತ್ಯವಾದಾಗ ಸಾಮಾನ್ಯವಾಗಿ ಅನೇಕರು ಮತ್ತೊಂದು ಮದುವೆಯಾಗುವ ಮನಸು ಮಾಡುವುದಿಲ್ಲ. ಅಯ್ಯೋ ಒಮ್ಮೆ ಅನುಭವಿಸಿದ್ದೇ ಸಾಕು ಎನ್ನುವ ತೀರ್ಮಾನಕ್ಕೆ ಬರುತ್ತಾರೆ. ಇನ್ನು ಕೆಲವರು ಅಳೆದು ತೂಗಿ ಹೊಸ ಭರವಸೆಯ ಜೊತೆ ಹೊಸ ಬದುಕಿಗೆ ಇನ್ನೊಮ್ಮೆ ಮುನ್ನುಡಿ ಬರೆಯಲು ಅಣಿಯಾಗುತ್ತಾರೆ. ಇದಕ್ಕೆ ಹಿಂದಿ ಕಿರುತೆರೆಯ ಸುರಸುಂದರಾಂಗ ನಂದೀಶ್ ಸಂಧು ಸದ್ಯದ ಉದಾಹರಣೆ.

ಹೌದು. ನಂದೀಶ್ ಸಂಧು. . ''ಫಿರ್ ಸುಬಹ್ ಹೋಗಿ''.. ''ಕಸ್ತೂರಿ'' .. ಖ್ಯಾತಿಯ ಕಿರುತೆರೆಯ ನಾಯಕ. ''ಉತ್ತರನ್'' ಧಾರಾವಾಹಿ ಮೂಲಕ ಹಲವು ಚೆಲುವೆಯರ ನಿದ್ದೆ ಕದ್ದವರು ಇವರು. ಆದರೆ.. ಇದೇ ''ಉತ್ತರನ್'' ಧಾರಾವಾಹಿಯ ಸಮಯದಲ್ಲಿ ನಂದೀಶ್ ಸಂಧು ಧಾರಾವಾಹಿಯಲ್ಲಿ ಆಕ್ಟ್ ಮಾಡುತ್ತಿದ್ದ ರಶ್ಮಿ ದೇಸಾಯಿ ಅವರಿಗೆ ಮನ ಸೋತಿದ್ದರು. ಆ ನಂತರ 2012ರಲ್ಲಿ ಮದುವೆ ಕೂಡ ಆದರು.
ಆದರೆ ದುರಾದೃಷ್ಟ. ಈ ಸಂಬಂಧ ಕೇವಲ ನಾಲ್ಕು ವರ್ಷಕ್ಕೆ ಅಂದರೆ 2016ರಲ್ಲಿ ಮುರಿದು ಬಿತ್ತು. ವಿಚ್ಛೇದನದ ಬಳಿಕ ''ಬಿಗ್ ಬಾಸ್-13''ನೇ ಸೀಸನ್ನಲ್ಲಿ ರಶ್ಮಿ ಭಾಗವಹಿಸಿದ್ದರು. ಮೂರನೇ ರನ್ನರ್ ಅಪ್ ಕೂಡ ಆಗಿ ಹೊರ ಹೊಮ್ಮಿದ್ದರು. ಆ ನಂತರ ಗಂಡನಿಂದ ದೂರವಾದ ದಿನ ಮನೆಯಿಲ್ಲದೆ ಬೀದಿ ಬದಿ ತನ್ನ ಕಾರನ್ನು ನಿಲ್ಲಿಸಿ ಅದರಲ್ಲೇ ಮಲಗಿದ್ದಾಗಿ ಸಂದರ್ಶನವೊಂದರಲ್ಲಿ ಹೇಳಿದ್ದರು.

ಮುಂದುವರೆದು ವಿಚ್ಚೇದನದ ಸಮಯದಲ್ಲಿ 3 ರಿಂದ 3.5 ಕೋಟಿ ರೂಪಾಯಿ ಸಾಲದಲ್ಲಿ ಸಿಕ್ಕಿಕೊಂಡಿದ್ದೆ ಎಂದು ಹೇಳಿದ್ದ ರಶ್ಮಿ ದೇಸಾಯಿ ಆಗ ನನ್ನ ಕೈಯಲ್ಲಿ ಕೆಲಸವಿರಲಿಲ್ಲ, ತಿನ್ನೋಕೆ ಊಟ ಇರಲಿಲ್ಲ ಎಂದು ಹೇಳಿದ್ದರು. ನಾಲ್ಕು ದಿನ ನನ್ನ ಔಡಿ 6 ಕಾರಿನಲ್ಲಿ ಮಲಗಿದ್ದೆ ಎಂದು ಹೇಳಿದ್ದರು. ಈ ಮೂಲಕ ಟ್ರೋಲಿಗರಿಗೆ ಆಹಾರವೂ ಆಗಿದ್ದರು.
ಹೀಗೆ ವಿಚ್ಚೇದನದ ನಂತರ ಬೇರೆ ಬೇರೆ ದಾರಿಯಲ್ಲಿ ರಶ್ಮಿ ದೇಸಾಯಿ ಮತ್ತು ನಂದೀಶ್ ಸಂಧು ನಡೆಯತೊಡಗಿದರು. ಆದರೆ ಈಗ ಈ ಪ್ರಯಾಣದಲ್ಲಿ ನಂದೀಶ್ ಸಂಧು ಅವರಿಗೆ ಹೊಸ ಸಂಗಾತಿ ಸಿಕ್ಕಿದ್ದಾರೆ. ''ಭಾಗ್ಯಲಕ್ಷ್ಮಿ''.. ''ರಿಶ್ತೋ ಕಾ ಮಂಝಾ''.. ''ತೇರಿ ಮೇರಿ ಇಕ್ ಜಿಂದ್ರಿ''.. ''ನಾಗಿನ್ 6''.. ಧಾರಾವಾಹಿಗಳಲ್ಲಿ ಅಭಿನಯಿಸಿರುವ ಖ್ಯಾತ ನಟಿ ಕವಿತಾ ಬ್ಯಾನರ್ಜಿ ಅವರ ಜೊತೆ ಪ್ರೀತಿಯಲ್ಲಿ ಬಿದ್ದಿದ್ದಾರೆ.
ಇಷ್ಟೇ ಅಲ್ಲ ಸದ್ದಿಲ್ಲದೇ ನಿಶ್ಚಿತಾರ್ಥವನ್ನು ಮಾಡಿಕೊಂಡು ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಎಂಗೇಜ್ಮೆಂಟ್ನ ಫೋಟೊವನ್ನು ಕೂಡ ಹಂಚಿಕೊಂಡಿದ್ದಾರೆ. ಈ ಮೂಲಕ ತಮ್ಮ ಮಾಜಿ ಪತ್ನಿ ರಶ್ಮಿ ದೇಸಾಯಿಗೆ ಶಾಕ್ ನೀಡಿದ್ದಾರೆ.
ಯಾಕೆಂದರೆ ವಿಚ್ಛೇದನದ ನಂತರ ರಶ್ಮಿ ದೇಸಾಯಿ ತಮ್ಮ ಮಾಜಿ ಗಂಡನ ಜೀವನ ಶೈಲಿಯ ಕುರಿತು ಮಾತನಾಡಿದ್ದರು. ಹಲವು ಮಹಿಳೆಯರ ಜೊತೆ ಸಂಬಂಧ ಇದೆ ಎಂದು ಆರೋಪ ಮಾಡಿದ್ದರು. ಮಾನಸಿಕ ಮತ್ತು ದೈಹಿಕ ಕಿರುಕುಳ ನೀಡಿದ್ದಾನೆ ಎಂದು ಕೂಡ ನಂದೀಶ್ ಸಂಧು ಅವರ ಮೇಲೆ ರಶ್ಮಿ ದೇಸಾಯಿ ಬಾಂಬ್ ಎಸೆದಿದ್ದರು.

ಆದರೆ ಈಗ ಇಷ್ಟೆಲ್ಲಾ ಆರೋಪ ಮಾಡಿದ ನಂತರವೂ ಕೂಡ ನಂದೀಶ್ ಸಂಧು ತಮ್ಮ ಬದುಕಿನಲ್ಲಿ ತುಂಬಾ ದೂರ ಸಾಗಿದ್ದಾರೆ. ಎರಡನೇ ಮದುವೆಗೆ ಸಿದ್ಧರಾಗಿದ್ದಾರೆ. ಸದ್ಯ ನಂದೀಶ್ ಸಂಧು ಮತ್ತು ಕವಿತಾ ಅವರಿಗೆ ಹಲವರು ಶುಭಾಶಯ ಕೋರುತ್ತಿದ್ದಾರೆ. ರಶ್ಮಿ ದೇಸಾಯಿ ಅವರಿಗೆ ಸಹಾನುಭೂತಿ ಮದ್ದನ್ನು ನೀಡುತ್ತಿದ್ದಾರೆ.


Click it and Unblock the Notifications











