ಹಲವು ರೋಚಕ ತಿರುವು ಪಡೆದ 'ಅಮೃತಧಾರೆ'ಗೆ ಆಘಾತ, ಗೌತಮ್ ಮತ್ತು ಭೂಮಿಕಾಗೆ ಶಾಕ್
ಪ್ರತಿಯೊಂದು ಕ್ಷೇತ್ರದಲ್ಲಿಯೂ ಸ್ಫರ್ಧೆ ಇದ್ದೇ ಇರುತ್ತೆ. ಕಿರುತೆರೆ ಕೂಡ ಇದರಿಂದ ಹೊರತಾಗಿಲ್ಲ. ಪ್ರತಿ ವಾರ ಇಲ್ಲಿಯೂ ಕೂಡ ಹಾವು ಏಣಿಯ ಆಟ ನಡೆಯುತ್ತಲೇ ಇರುತ್ತೆ. ಈ ವಾರ ಮೇಲೆ ಇರುವ ಧಾರಾವಾಹಿ ಮುಂದಿನ ವಾರ ಪ್ರೇಕ್ಷಕರ ಅವಕೃಪೆಗೆ ಪಾತ್ರವಾದರೆ, ನಿರಾಸೆ ಮಾಡಿದ ಧಾರಾವಾಹಿಯಲ್ಲಿ ಏಕಾಏಕಿ ಬದಲಾವಣೆಯಾಗುತ್ತೆ. ಪ್ರತಿ ವಾರ ಹೀಗೆ ಇರುತ್ತೆ ಎಂದು ಹೇಳಲು ಸಾಧ್ಯ ಇಲ್ಲ.
ಈ ಧಾರಾವಾಹಿಯೇ ಮೊದಲ ಸ್ಥಾನ ಬರಬಹುದು ಎಂದು ನಿಖರವಾಗಿ ಹೇಳಲು ಆಗುವುದಿಲ್ಲ. ಹಿಂದೆಯೆಲ್ಲ ಪ್ರೇಕ್ಷಕರಿಂದ ಕಡೆಗಣಿಸಲಾದ ಧಾರಾವಾಹಿ ಕೆಲವೊಮ್ಮೆ ಅಚ್ಚರಿ ಎಂಬಂತೆ ಅದೇ ಪ್ರೇಕ್ಷಕರ ಹೃದಯವನ್ನು ಗೆಲ್ಲುತ್ತೆ. ಮೊದಲನೇ ಸ್ಥಾನವನ್ನು ಕೂಡ ಅಲಂಕರಿಸುತ್ತೆ.

ಇನ್ನೂ ಕೆಲ ಒಮ್ಮೆ ಜನರ ಹೃದಯವನ್ನು ಗೆಲ್ಲಲು ಟಿಆರ್ಪಿ ಹಾವು ಏಣಿ ಆಟದಲ್ಲಿ ಮೊದಲ ಸ್ಥಾನ ಪಡೆಯಲು ನಾನಾ ಕಸರತ್ತು ಮಾಡಿದರು ಕೂಡ ಪ್ರಯತ್ನಕ್ಕೆ ಫಲ ಸಿಗುವುದಿಲ್ಲ. ಜನ ಆಶೀರ್ವಾದ ಮಾಡುವುದಿಲ್ಲ. ಮೊದಲ ಸ್ಥಾನ ಸಿಗುವುದೇ ಇಲ್ಲ. ಉದಾಹರಣೆಗೆ ''ಅಮೃತಧಾರೆ''.
ಹೌದು, ಎಲ್ಲರಿಗೆ ಗೊತ್ತಿರುವಂತೆ ''ಅಮೃತಧಾರೆ'' ಧಾರಾವಾಹಿ ಸದ್ಯ ಹತ್ತು ಹಲವು ತಿರುವುಗಳಿಂದ ಕೂಡಿದೆ. ಕಥೆ ಐದು ವರ್ಷ ಮುಂದೆ ಹೋಗಿದೆ. ಒಂದು ಕಡೆ ಮನದರಸಿ ಭೂಮಿಕಾಳನ್ನು ಹುಡುಕುತ್ತಾ ಗೌತಮ್ ಓಡಾಡುತ್ತಿದ್ದರೆ.. ಮತ್ತೊಂದು ಕಡೆ ಆಸ್ತಿಯೆಲ್ಲಾ ತಮ್ಮದೇ ಎಂದು ಸಂಭ್ರಮದ ಅಲೆಯಲ್ಲಿದ್ದ ಜೈದೇವ್ ಮತ್ತು ಶಕುಂತಲಾಗೆ ಸದ್ಯ ನಿಂತ ನೆಲ ಕುಸಿದಂತೆ ಆಗಿದೆ. ₹600 ಕೋಟಿ ಸಾಲ ಮರುಪಾವತಿ ಮಾಡಬೇಕೆನ್ನುವ ಸುದ್ದಿ ಬರಸಿಡಿಲಿನಂತೆ ಬಡೆದಿದೆ.
ಇನ್ನೂ ಎಲ್ಲರೂ ಕಾತುರದಿಂದ ಕಾಯುತ್ತಿದ್ದ ಅಮೃತ ಘಳಿಗೆ ಕೂಡ ಸದ್ಯ ಬಂದಿದೆ. ಕಳೆದ ಕೆಲ ದಿನಗಳಿಂದ ಗೌತಮ್ ಮತ್ತು ಭೂಮಿಕಾ ಮುಖಾಮುಖಿಯಾದಂತೆ ಪ್ರೋಮೋವನ್ನು ಕೂಡ ತೋರಿಸಲಾಗಿದೆ. ಭೂಮಿಕಾ ಉತ್ತರಕ್ಕೆ ಒಂದು ದೊಡ್ಡ ವರ್ಗ ಕಾಯುತ್ತಲಿದೆ.
ಈ ಉತ್ತರಕ್ಕೆ ಸಿಕ್ಕ ರೆಸ್ಫಾನ್ಸ್ ಹೇಗಿದೆ ಎನ್ನುವುದಕ್ಕೆ ಉತ್ತರ ಮುಂದಿನ ವಾರ ಗೊತ್ತಾಗಲಿದೆಯಾದರೂ ಈ ಧಾರಾವಾಹಿಯಲ್ಲಿನ ತಿರುವುಗಳನ್ನು ನೋಡಿದ ಕಿರುತೆರೆಯ ಅನೇಕರು ಈ ವಾರ ''ಅಮೃತಧಾರೆ'' ಎಲ್ಲ ಧಾರಾವಾಹಿಯನ್ನು ಹಿಂದಿಕ್ಕುತ್ತೆ ಎಂದು ಲೆಕ್ಕಾಚಾರ ಹಾಕಿದ್ದರು.

ಆದರೆ ಆ ಲೆಕ್ಕಾಚಾರವೆಲ್ಲಾ ಸದ್ಯ ತಲೆ ಕೆಳಗಾಗಿದೆ. ಎಷ್ಟೇ ಸರ್ಕಸ್ ಮಾಡಿದರು ಕೂಡ ಅಮೃತಧಾರೆ ಮೊದಲಿನಂತೆ ಪ್ರೇಕ್ಷಕರನ್ನು ಸೆಳೆಯುವಲ್ಲಿ ವಿಫಲವಾಗುತ್ತಿದೆ ಎನ್ನುವುದು ಕೂಡ ಮತ್ತೊಮ್ಮೆ ಸಾಬೀತಾಗಿದೆ. ಇದಕ್ಕೆ ಕೈಗನ್ನಡಿ ಎಂಬಂತೆ ಈ ವಾರ ಕೂಡ ''ಅಮೃತಧಾರೆ'' ಟಿಆರ್ಪಿ ಗಗನಕ್ಕೇರಲಿಲ್ಲ. ಹಾಗಂಥ ಪಾತಾಳಕ್ಕೆ ಕೂಡ ಕುಸಿದಿಲ್ಲ. ಬದಲಿಗೆ ನಿಂತಲ್ಲಿಯೇ ನಿಂತಿದೆ ''ಅಮೃತಧಾರೆ'' ಧಾರಾವಾಹಿ.
ಹೌದು, 36ನೇ ವಾರದ ಟೆಲಿವಿಷನ್ ರೇಟಿಂಗ್ ಡೇಟಾ ಹೊರಬಿದ್ದಿದೆ. ಎಂದಿನಂತೆ ಈ ವಾರ ಕೂಡ ''ಕರ್ಣ'' 9.5 ಟಿವಿಆರ್ ಪಡೆಯುವ ಮೂಲಕ ಮೊದಲ ಸ್ಥಾನ ಪಡೆದಿದೆ. ಇನ್ನು ಎರಡನೇ ಸ್ಥಾನದಲ್ಲಿ 9.2 ಟಿವಿಆರ್ ಪಡೆಯುವ ಮೂಲಕ '' ಅಣ್ಣಯ್ಯ'' ಧಾರಾವಾಹಿ ಇದ್ದು ಮೂರನೇ ಸ್ಥಾನ ''ಲಕ್ಷ್ಮೀ ನಿವಾಸ'' ಇದೆ. ಈ ಧಾರಾವಾಹಿ 8.4 ಟಿವಿಆರ್ ಪಡೆದಿದೆ.
ಇನ್ನೂ ''ಅಮೃತಧಾರೆ'' ಧಾರಾವಾಹಿ ಎಂದಿನಂತೆ ನಾಲ್ಕನೇ ಸ್ಥಾನಕ್ಕೆ ತೃಪ್ತಿ ಪಟ್ಟಿದೆ. ಛಾಯಾ ಸಿಂಗ್ ಮತ್ತು ರಾಜೇಶ್ ನಟರಂಗ ಅಭಿನಯದ ಈ ಧಾರಾವಾಹಿಗೆ 8.1 ಟಿವಿಆರ್ ಸಿಕ್ಕಿದೆ. ಈ ಹಿನ್ನೆಲೆ ಭೂಮಿಕಾಳನ್ನು ಮನೆ ಹೊರಗಡೆ ಕಳುಹಿಸುವ ಪ್ಲ್ಯಾನ್ ಉಲ್ಟಾ ಆಯ್ತಾ ? ಪ್ರೇಕ್ಷಕರಿಗೆ ''ಅಮೃತಧಾರೆ''ಯಲ್ಲಿನ ಟ್ವಿಸ್ಟ್ & ಟರ್ನ್ಗಳು ಇಷ್ಟವಾಗುತ್ತಿಲ್ವಾ ? ಎಂಬ ಚರ್ಚೆ ಸದ್ಯ ಕಿರುತೆರೆಯಲ್ಲಿ ಶುರುವಾಗಿದೆ. ಇನ್ನುಳಿದಂತೆ ''ಕರ್ಣ'' ಬರುವ ಮುನ್ನ ಮೊದಲ ಸ್ಥಾನದಲ್ಲಿದ್ದ ''ನಾ ನಿನ್ನ ಬಿಡಲಾರೆ'' ಧಾರಾವಾಹಿ ಸೀದಾ ಐದನೇ ಸ್ಥಾನಕ್ಕೆ ಕುಸಿದಿದೆ.


Click it and Unblock the Notifications











