Shri Renuka Yellamma: ನೀಲಕಂಠನ ಸಹಾಯಕ್ಕೆ ಬರ್ತಾನ ಶಿವ? ರೇಣುಕೆ ಮತ್ತು ಯಲ್ಲಮ್ಮನ ಸ್ನೇಹ ಉಳಿಯುತ್ತಾ?
ರೇಣುಕೆ ಅರಮನೆಯಲ್ಲಿ ಬೆಳೆದ ಮಗು. ಯಲ್ಲಮ್ಮ ಹಳ್ಳಿಯಲ್ಲಿ ಬೆಳೆದ ಹುಡುಗಿ. ಆದರೆ, ರೇಣುಕೆಗೆ ಅರಮನೆ ಬೇಸರವಾಗಿತ್ತು. ಬೇರೆ ಬದುಕನ್ನು ನೋಡುವ ಬಯಕೆಯಾಗಿತ್ತು. ಏನನ್ನೋ ಹುಡುಕಿ ಹೊರಟವಳಿಗೆ ಹಳ್ಳಿಯಲ್ಲಿ ಯಲ್ಲಮ್ಮ ಸಿಕ್ಕಿದಳು. ಯಲ್ಲಮ್ಮನಿಗೂ - ರೇಣುಕೆಗೂ ಅಂದಿನಿಂದ ಸ್ನೇಹ ಬೆಳೆಯಿತು. ಕಷ್ಟದಲ್ಲಿದ್ದ ರೇಣುಕೆಯನ್ನು ಯಲ್ಲಮ್ಮ ತನ್ನ ಹಳ್ಳಿಯ ಮನೆಗೆ ಕರೆತಂದಳು, ಸತ್ಕರಿಸಿದಳು. ಈಗ ತಂದೆಯ ಸಂಕಷ್ಟಕ್ಕೆ ಅದೇ ಕಾರಣವಾಗಿದೆ.
ರೇಣುಕೆ ತಾನೂ ಅರಮನೆಯ ಮಹಾರಾಣಿ ಎಂದು ಹೇಳಿಕೊಂಡಳು. ಆದರೆ, ಯಲ್ಲಮ್ಮನಿಗೆ ಅದರ ಹಿಂದೆ ಸತ್ಯ ಇದೆ ಅನಿಸಲೇ ಇಲ್ಲ. ನಗುವೊಂದೇ ಕಂಡಿತ್ತು. ಯಲ್ಲಮ್ಮನನ್ನು ಹೆಚ್ಚು ನಂಬಿಸಲು ಪ್ರಯತ್ನ ಪಡದೆ, ಹಳ್ಳಿಯ ಜೀವನವನ್ನು, ರಾತ್ರಿಯ ಚಂದ್ರನನ್ನು ಆನಂದಿಸಿದಳು ರೇಣುಕೆ. ಮನೆಯಿಂದ ಹೊರಡುವ ಸಮಯ ಬಂದಾಗ ಯಲ್ಲಮ್ಮನಿಗೆ ತನ್ನ ಕೊರಳಲ್ಲಿದ್ದ ಹಾರವನ್ನು ಕೊಟ್ಟು ಬಂದಳು. ಈಗ ಉಡುಗೊರೆಯಾಗಿ ಸಿಕ್ಕ ಹಾರ, ಕಳ್ಳತವಾಗಿದೆ ಎಂದು ಹಬ್ಬಿದೆ.

ಅರಮನೆಯಲ್ಲಿ ಕೆಲಸ ಕಳೆದುಕೊಂಡ ನೀಲಕಂಠ
ರೇಣುಕೆ ತನ್ನ ಕೊರಳಲ್ಲಿದ್ದ ಪದಕವನ್ನು ಯಲ್ಲಮ್ಮನಿಗೆ ಉಡುಗೊರೆಯಾಗಿ ನೀಡಿ ಹೋದಳು. ಯಲ್ಲಮ್ಮ ಆ ಪದಕವನ್ನು ಯಾರಿಗೂ ಗೊತ್ತಾಗದಂತೆ ಬಚ್ಚಿಟ್ಟಿದ್ದಳು. ಆದರೆ, ಯಲ್ಲಮ್ಮನ ಮನೆಗೆ ಬಂದ ಕಳ್ಳ ಅದನ್ನು ಕದ್ದಿದ್ದ. ಮಾರಲು ಹೋಗಿ ಸಿಕ್ಕಿಬಿದ್ದಿದ್ದ. ಬಳಿಕ ಅರಮನೆಯಲ್ಲಿ ಚರ್ಚೆಗೆ ಬಂತು. ಅಲ್ಲಿ ನೀಲಕಂಠನ ಮನೆಯಲ್ಲಿ ಸಿಕ್ಕಿದ್ದು ಎಂದುಬಿಟ್ಟ. ಈಗ ನೀಲಕಂಠ ಏನು ಹೇಳಬೇಕು ಎಂದು ತಿಳಿಯದೆ, ಕಳ್ಳತನವನ್ನೇ ಒಪ್ಪಿಕೊಂಡ. ಮಾಡದ ತಪ್ಪಿಗೆ ಯಾಕೆ ಗುರಿಯಾದ ಎಂಬುದೇ ತಿಳಿಯಲಿಲ್ಲ.

ಶಿವನಲ್ಲಿ ಬೇಡುತ್ತಿದ್ದಾಳೆ ರೇಣುಕೆ
ರೇಣುಕೆ ಅರಮನೆಯಲ್ಲಿಯೇ ಮಾತನಾಡಲು ಪ್ರಯತ್ನ ಪಟ್ಟಳು. ನೀಲಕಂಠನದ್ದು ಏನು ತಪ್ಪಿಲ್ಲ ಎಂದು ಹೇಳಲು ಯತ್ನಿಸಿದಳು. ಆದರೆ ಮಹಾರಾಣಿ ರೇಣುಕೆಯನ್ನು ತಡೆದಳು. "ಇದೊಂದು ಕಳ್ಳತನದ ಆರೋಪ. ಮಾತನಾಡುವ ಹಾಗಿಲ್ಲ" ಎಂದಳು. ರೇಣುಕೆಯ ಮನಸ್ಸು ವಿಲ ವಿಲ ಒದ್ದಾಡಿತು. ಈಗ ಶಿವನಲ್ಲಿ ಬೇಡಿಕೊಳ್ಳುತ್ತಿದ್ದಾಳೆ. ಯಲ್ಲಮ್ಮನ ತಂದೆಯನ್ನು ಪಾರು ಮಾಡು ಎಂದು ಕೇಳಿಕೊಂಡಿದ್ದಾಳೆ.

ನೀಲಕಂಠನಿಗೇಕೆ ಈ ಪರೀಕ್ಷೆ..?
ನೀಲಕಂಠನ ಮಗಳು ಯಲ್ಲಮ್ಮ ಶಿವನ ಮೂರ್ತಿಯನ್ನು ಮಾಡಿ, ತಾನೇ ಪೂಜೆ ಮಾಡುತ್ತಾಳೆ. ಅರಮನೆಯಲ್ಲಿ ಕೆಲಸ ಕಳೆದುಕೊಂಡಿದ್ದಾನೆ. ಆದರೆ ಮನೆಯವರಿಗೆ ಹೇಳುವ ಧೈರ್ಯವಿಲ್ಲ. ಯಾಕಂದ್ರೆ ಮಗಳು ಮತ್ತು ಹೆಂಡತಿ ತನ್ನನ್ನೇ ನಂಬಿಕೊಂಡು ಜೀವನ ಮಾಡುತ್ತಿರುವುದು ತಿಳಿದಿದೆ. ಹೀಗಾಗಿ ಮನೆಯಲ್ಲಿ ಹೇಗೆ ಹೇಳುವುದು..? ಏನು ಮಾಡುವುದು ಎಂದು ತಿಳಿಯದೆ ಒದ್ದಾಡುತ್ತಿದ್ದಾನೆ. ಶಿವನಲ್ಲಿ ನನಗೇಕೆ ಈ ರೀತಿಯ ಶಿಕ್ಷೆ ಎಂದು ಪ್ರಶ್ನಿಸಿಕೊಳ್ಳುತ್ತಿದ್ದಾನೆ.

ಆ ಮುಗ್ಧ ಸ್ನೇಹವನ್ನು ಶಿವನೇ ಕಾಪಾಡಬೇಕು
ಯಲ್ಲಮ್ಮನಿಗೆ ರೇಣುಕೆ ಒಬ್ಬಳು ಯುವರಾಣಿ ಎಂಬುದನ್ನೇ ನಂಬುವುದಕ್ಕೆ ಆಗಿಲ್ಲ. ಅವಳನ್ನು ಒಬ್ಬ ಒಳ್ಳೆ ಸ್ನೇಹಿತೆ ಎಂದೇ ನಂಬಿದ್ದಾಳೆ. ಆದರೆ, ಆ ಸ್ನೇಹವೇ ನಮ್ಮ ಜೀವನಕ್ಕೆ ಮುಳ್ಳಾಗಿದೆ ಎಂದು ಗೊತ್ತಾದರೆ ಅರಗಿಸಿಕೊಳ್ಳುವ, ಸ್ವೀಕರಿಸುವ ಶಕ್ತಿ ಯಲ್ಲಮ್ಮನಿಗೆ ಇಲ್ಲ. ರೇಣುಕೆಗೂ ಭಯವಿರುವುದು ಅದೇ. ಯಲ್ಲಮ್ಮನಿಗೆ ತನ್ನಿಂದ ತಂದೆಯ ಕೆಲಸ ಹೋಯ್ತು ಎಂದು ಗೊತ್ತಾದರೆ ಅವಳು ಏನು ಹೇಳಬಹುದು ಎಂಬ ಆತಂಕದಲ್ಲಿದ್ದಾಳೆ. ಹೀಗಾಗಿ ಶಿವನ ಬಳಿ ಮನವಿ ಇಟ್ಟಿದ್ದಾಳೆ. ಈ ಕಡೆ ನೀಲಕಂಠ ಕೂಡ ಶಿವನ ಬಳಿ ಬೇಡಿಕೊಂಡಿದ್ದಾನೆ. ಶಿವ ಯಾರ ಬೇಡಿಕೆಗೆ ಒಲಿಯುತ್ತಾನೋ ನೋಡಬೇಕಿದೆ.


Click it and Unblock the Notifications











