Shrirasthu Shubhamasthu: ದತ್ತ ತಾತನ ಬಳಿ ಪ್ರೀತಿ ವಿಷಯ ಹೇಳಿದ ಮಾಧವ್: ಶಾರ್ವರಿ ಗತಿ ಏನು..?
'ಶ್ರೀರಸ್ತು ಶುಭಮಸ್ತು' ಧಾರಾವಾಹಿಯಲ್ಲಿ ತುಳಸಿ ಹಾಗೂ ಮಾಧವ್ ವಿಚಾರ ಪೇಪರ್ನಲ್ಲಿ ಬಂದಿರುವುದು ತುಳಸಿ ಮನೆಯವರಿಗಿಂತಲೂ ಬೇರೆಯವರಿಗೆ ಸಮಸ್ಯೆಯನ್ನು ಉಂಟು ಮಾಡಿದೆ. ಆದರೆ, ಮಾಧವ್ ಸಮನ್ವಿತಾ ಅವರಿಗೆ ಕೊಟ್ಟ ಸಂದರ್ಶನ ಎಲ್ಲರನ್ನು ಗಪ್-ಚುಪ್ ಎನ್ನುವಂತೆ ಮಾಡಿದ್ದು, ದತ್ತ ತಾತನಿಗೆ ಮಾಧವ್ ಮೇಲಿನ ಗೌರವವೂ ಹೆಚ್ಚಾಗಿಸಿದೆ.
ಇನ್ನು ತುಳಸಿಯ ತಪ್ಪೇನು ಇಲ್ಲ ಎಂಬುದು ಈ ಸಂದರ್ಶನವನ್ನು ನೋಡಿ ಸಮರ್ಥ್ ಅರ್ಥ ಮಾಡಿಕೊಂಡಿದ್ದಾನೆ. ಹಾಗಾಗಿ ತಾಯಿಯ ಬ್ಯಾಂಕ್ ಅಕೌಂಟ್ ಅನ್ನು ಕೂಡ ತಾನೇ ತೆರೆಯುವುದಾಗಿ ಹೇಳಿದ್ದಾನೆ.
ದತ್ತ ತಾತನಿಗೆ ಮಾಧವ್ ಹಾಗೂ ತುಳಸಿ ಮದುವೆಯಾಗುತ್ತಿರುವಂತೆ ಕನಸು ಬಿದ್ದಿದೆ. ಇದು ದತ್ತ ತಾತನಿಗೆ ಬಹಳ ಗಾಬರಿಯನ್ನು ತಂದಿದೆ. ಈ ಕನಸು ಎಷ್ಟು ಸರಿ. ಇಂತಹ ಕನಸು ತನಗೇಕೆ ಬಿತ್ತು ಎಂದು ಯೋಚಿಸಿದ್ದಾನೆ.

ಮಾಧವ್ ಹುಡುಕಿ ಹೊರಟ ತಾತ
ಜ್ಯೋತಿಷಿಗಳು ಒಮ್ಮೆ ದತ್ತ ತಾತನಿಗೆ ಕನ್ಯಾದಾನ ಮಾಡುವ ಯೋಗವಿದೆ ಎಂದು ಹೇಳಿದ್ದನ್ನು ನೆನಪು ಮಾಡಿಕೊಂಡಿದ್ದಾರೆ. ಸೀದಾ ಮಾಧವ್ನನ್ನು ಭೇಟಿ ಮಾಡಲು ದತ್ತ ತಾತ ಹೊರಟಿದ್ದಾನೆ. ಮಾಧವ್ ಕೆಫೆಯಲ್ಲಿ ಇಲ್ಲದ ಕಾರಣ, ಹುಡುಕಿಕೊಂಡು ಸೀದಾ ಮನೆಗೆ ಹೋಗಿದ್ದಾನೆ. ಮಾಧವ್ ಮನೆಯನ್ನು ನೋಡಿ ಅಚ್ಚರಿಗೊಂಡಿದ್ದಾನೆ.
ದತ್ತ ತಾತನನ್ನು ನೋಡಿ ಶಾರ್ವರಿ ಶಾಕ್
ಮಾಧವ್ ಮನೆಗೆ ದತ್ತ ತಾತ ಹೋದಾಗ ಅಲ್ಲಿ ಪೂಜೆ ನಡೆಯುತ್ತಿರುವುದನ್ನು ಗಮನಿಸಿದ್ದಾನೆ. ಇದೇ ವೇಳೆಗೆ ದತ್ತ ತಾತನನ್ನು ಶಾರ್ವರಿ ನೋಡಿದ್ದಾಳೆ. ಅಯ್ಯೋ ಈ ತಾತ ಇಲ್ಲಿಗೆ ಯಾಕೆ ಬಂದರು ಎನ್ನುವಷ್ಟರಲ್ಲಿ ಅವರು ತುಳಸಿಯ ಮಾವ ಎಂದು ಪೂರ್ಣಿಮಾ ಹೇಳುತ್ತಾಳೆ. ಈಗ ದತ್ತ ತಾತನ ಕೈಗೆ ಸಿಕ್ಕಿ ಬಿದ್ದರೆ, ಮಾನ ಮರ್ಯಾದೆ ಮೂರು ಕಾಸಿಗೆ ಹರಾಜಿಗೆ ಹಾಕುತ್ತಾರೆ ಎಂದು ಮುಖ ಮರೆ ಮಾಚಿಕೊಳ್ಳಲು ಯತ್ನಿಸುತ್ತಾಳೆ. ಅಂದು ತುಳಸಿಯ ಬಗ್ಗೆ ತಿಳಿದುಕೊಳ್ಳುವ ಸಲುವಾಗಿ ಶಾರ್ವರಿ ಅವರ ಮನೆಗೆ ಹೋಗಿ ಮಕ್ಕಳ ಕಳ್ಳಿ ಎನಿಸಿಕೊಂಡು ವಾಪಸ್ ಬಂದಿರುತ್ತಾಳೆ. ಈಗ ದತ್ತ ತಾತ ಇವಳನ್ನು ನೋಡಿದರೆ, ಈ ಮನೆಯಲ್ಲಿ ಇಷ್ಟು ವರ್ಷದಿಂದ ಕಾಪಾಡಿಕೊಂಡು ಬಂದ ನಂಬಿಕೆ ಹಾಳಾಗುತ್ತದೆ ಎಂದು ಆತಂಕಗೊಂಡಿದ್ದಾಳೆ.

ಲಾಭದ ಹಣ ತಂದು ಕೊಟ್ಟ ನಂದಿನಿ
ಇನ್ನು ಸಂಧ್ಯಾ, ತಾತನ ಬಳಿ ಇದ್ದ ಹತ್ತು ಲಕ್ಷ ರೂಪಾಯಿ ಅನ್ನು ಕದ್ದು ತಂದಿದ್ದಾಳೆ. ಅದರಲ್ಲಿ ಮೂರು ಲಕ್ಷ ರೂಪಾಯಿ ಅನ್ನು ನಂದಿನಿಗೆ ಕೊಟ್ಟು ಬಿಸಿನೆಸ್ಗೆ ಹೂಡಿಕೆ ಮಾಡಲು ಹೇಳಿದ್ದಾಳೆ. ಒಂದು ವಾರದಲ್ಲಿ ಹಣ ಡಬಲ್ ಆಗುತ್ತೆ ಎಂದಿದ್ದ ನಂದಿನಿ ಈಗ ಫೋನ್ ಕಾಲ್ಗೂ ಸಿಗುತ್ತಿಲ್ಲ ಎಂದು ಸಂಧ್ಯಾ ಗಾಬರಿಯಾಗಿದ್ದಳು. ಅಷ್ಟರಲ್ಲಿ ನಂದಿನಿಯೇ ಮನೆಗೆ ಬಂದು ಸಂಧ್ಯಾ ಕೈಗೆ ಮೂರುವರೆ ಲಕ್ಷ ಕೊಡುತ್ತಾಳೆ. ನಿನಗೆ ಐವತ್ತು ಸಾವಿರ ಲಾಭ ಬಂದಿದೆ ಎಂದು ಹೇಳುತ್ತಾಳೆ. ಇದನ್ನು ಜುಗ್ಗ ಮಾವ ನೋಡಿದ್ದು, ಮುಂದೆ ಏನಾಗುತ್ತೋ ಗೊತ್ತಿಲ್ಲ.
ಪ್ರೀತಿ ಬಗ್ಗೆ ಸತ್ಯ ಹೇಳಿದ ಮಾಧವ್
ಮಾಧವ್, ದತ್ತ ತಾತನಿಗೆ ಮಹೇಶ್ನನ್ನು ಪರಿಚಯ ಮಾಡಿಸಿಕೊಡುತ್ತಾರೆ. ಬಳಿಕ ರೂಮಿಗೆ ಕರೆದುಕೊಂಡು ಹೋಗುತ್ತಾನೆ. ಅಲ್ಲಿ ದತ್ತ ತಾತ, ಮಾಧವ್ನನ್ನು ನೇರವಾಗಿ ಪ್ರಶ್ನೆ ಮಾಡುತ್ತಾರೆ. ನಿನ್ನೆ ನಾನು ನಿನ್ನ ಸಂದರ್ಶನವನ್ನೂ ನೋಡಿದೆ. ಜೊತೆಗೆ ಆಫ್ ಲೈನ್ನಲ್ಲಿ ತುಳಸಿ ಬಗ್ಗೆ ಹೇಳಿದ್ದನ್ನೂ ಕೇಳಿದೀನಿ. ಪ್ರಾಮಾಣಿಕವಾಗಿ ನನ್ನ ಬಳಿ ಹೇಳು ನಿನಗೆ ತುಳಸಿ ಮೇಲೆ ಕೇವಲ ಸ್ನೇಹ ಭಾವ ಇದೆಯಾ ಅಥವಾ ಇನ್ನೇನಾದರೂ ಮನಸ್ಸಿನಲ್ಲಿದೆಯಾ ಎಂದು ಕೇಳುತ್ತಾನೆ. ಆಗ ಮಾಧವ್ ಸತ್ಯ ಮುಚ್ಚಿಡಲಾಗದೇ, ನನಗೆ ಅವರ ಮೇಲೆ ಪ್ರೀತಿ ಇದೆ ಎಂದು ಹೇಳಿ ಬಿಡುತ್ತಾನೆ. ಈಗ ಮುಂದಿನ ಕಥೆ ಹೇಗೆ ಸಾಗುತ್ತದೆ ಎಂಬ ಕುತೂಹಲವೂ ಇದೆ.


Click it and Unblock the Notifications











